Saturday, July 28, 2012

ಶಿಕಾರಿ - ಸಂಕೀರ್ಣ ಕನ್ನಡ ಕಾದಂಬರಿ

ಸುಮಾರು ಮುವ್ವತ್ತು  ವರುಷಗಳ ಹಿಂದೆ ಒಮ್ಮೆ ಓದಿದ್ದ ಯಶವಂತ ಚಿತ್ತಾಲರ 'ಶಿಕಾರಿ' ಕಾದಂಬರಿಯನ್ನು ಇದೀಗ ಮತ್ತೆ ಓದಿ ಮುಗಿಸಿದೆ. ಮೊದಲ ಸಲ ಈ ಕಾದಂಬರಿ ಓದುವಾಗ ಬಹುಶಃ ಹೈಸ್ಕೂಲಿನಲ್ಲಿ ಇದ್ದಿರಬೇಕು. ನನಗೆ ನೆನಪಿರುವಂತೆ ಓದಿ ಆದ ಮೇಲೆ ಹಲವಾರು ದಿನ ವಾರಗಳವರೆಗೆ ಕಥಾನಾಯಕ ನಾಗಪ್ಪನೇ  ಆವಾಹನೆಯಾದಂತೆ ಕನಿಷ್ಟ ನಿಷ್ಟುರಗಳಿಗೂ  ಅವಮಾನಗಳಿಗೂ ಮನೋವೈಜ್ಞಾನಿಕ ಕಾರಣಗಳನ್ನೇ ಆರೋಪಿಸುತ್ತ, ಅದಕ್ಕೆ ಕಾರಣವಾದವರನ್ನೆಲ್ಲ ನಾಗಪ್ಪನದೇ ವಿಶಿಷ್ಟ ಶೈಲಿಯಲ್ಲಿ ಮನದಲ್ಲೇ ಬೈದುಕೊಂಡು ಓಡಾಡಿದ್ದೂ ಉಂಟು.

ಈಗನಿಸುವುದೆಂದರೆ, ಇಂಥದೊಂದು ಅಪರೂಪದ ಅದ್ಭುತವಾದ ಕಾದಂಬರಿಯ ಸಂಪೂರ್ಣ ರುಚಿ ಸಿಗಬೇಕಂದರೆ ಸ್ವಲ್ಪ ಮಟ್ಟಿನ  ಅನುಭವ, ಅಧ್ಯಯನ, ಅಭಿರುಚಿ ಬೇಕು. ಈ ಕಾದಂಬರಿ ಅಂತಲೇ ಅಲ್ಲ, ಯಾವುದೇ ಉತ್ತಮ ಕೃತಿಯ ಓದಿಗೆ ಆಸ್ವಾದನೆಗೆ ಸ್ವಲ್ಪ ಮಟ್ಟಿನ ಶ್ರಮ ಬೇಕಾಗುತ್ತದೆ. ಇಲ್ಲವಾದಲ್ಲಿ ಕೃತಿಯ ಸಂಕೀರ್ಣತೆಗಳು ಸೂಕ್ಷ್ಮಗಳು ದಕ್ಕದೇ ಹೋಗಬಹುದು. ಅದೇ ಸಮಯದಲ್ಲಿ ಇದೇ ಶ್ರಮದ ಕಾರಣಕ್ಕಾಗಿಯೇ ಇಂಥ ಕೃತಿಗಳು ತರುವ ಅನುಭವ, ತಾಕುವ ಬಗೆಯೇ ಭಿನ್ನ. ವಿಷಾದದ ಸಂಗತಿಯೆಂದರೆ ಕನ್ನಡದ ಇಂತಹ ಉತ್ತಮ ಕೃತಿಗಳು ಬಹಳ ಮಟ್ಟಿಗೆ ನಮ್ಮ ಸಾಹಿತ್ಯ ವಲಯದಲ್ಲಿ ಎಲೆ ಮರೆಯ ಕಾಯಿಗಳಾಗಿಯೇ ಉಳಿದುಬಿಟ್ಟಿರುವುದು.

ಪಾಶ್ಚಾತ್ಯರಲ್ಲಿ ಜನಪ್ರಿಯವಾದ ಮನೋವಿಶ್ಲೇಷಣೆಯ ಒಂದು ನಮೂನೆ ಶಿಕಾರಿಯ ಕಥಾ ಹಂದರದಲ್ಲಿ ಕಾಣಸಿಗುತ್ತದೆ. ಅದೇನೆಂದರೆ ವ್ಯಕ್ತಿಯ ಸದ್ಯದ ಪ್ರವೃತ್ತಿಗಳ ಕಾರಣವನ್ನು ಅವರ ಬಾಲ್ಯದ ಅನುಭವಗಳು ಮತ್ತು ತನ್ಮೂಲಕ ರೂಪಿತವಾದ ಅವರ ವ್ಯಕ್ತಿತ್ವದಲ್ಲಿ ಹುಡುಕುವುದು. ನಾಗಪ್ಪನೂ ತನ್ನ ಬಾಲ್ಯ ಕಾಲದ ಅನುಭವಗಳಿಂದ ರೂಪಿತವಾದ ವ್ಯಕ್ತಿತ್ವದಲ್ಲಿ ಸಿಲುಕಿಕೊಂಡು ಆ ಕಾರಣಕ್ಕಾಗಿಯೇ ಹತಾಶೆ ನೋವಿಗೆ ತುತ್ತಾದವನು ತನ್ನ ವೃತ್ತಿ ಜೀವನದಲ್ಲಿ ಆಕಸ್ಮಿಕವಾಗಿ ಬಂದೊದಗುವ ಸವಾಲಿನಿಂದ ಎಚ್ಚರಗೊಂಡು  ತನ್ನ ಆಳದ ವ್ಯಕ್ತಿತ್ವವನ್ನು ಸ್ವಯಂ ಪರೀಕ್ಷೆಗೆ ಒಡ್ಡಿ ಹೊಸದೊಂದು  ವ್ಯಕ್ತಿತ್ವವನ್ನು ಪಡೆಯಲು ನಿರ್ಧರಿಸಿ ಅದರಲ್ಲಿ ಯಶಸ್ವಿಯಾಗುವುದೇ ಕಥೆಯ ಮುಖ್ಯ ಸಾರ.

ಎಲ್ಲ ಶ್ರೇಷ್ಟ ಕೃತಿಗಳಂತೆಯೇ ಶಿಕಾರಿ ಸಹ ಹಲವು ಮೂಲಭೂತ ಪ್ರಶ್ನೆಗಳನ್ನೆತ್ತಿ ಉತ್ತರಗಳನ್ನೂ ಒದಗಿಸುತ್ತದೆ. ಎಲ್ಲಿಯೂ ನೇರ ತತ್ತ್ವ ಬೋಧನೆಯ ಛಾಪು  ಕಾಣದಿದ್ದರೂ ನಾಗಪ್ಪನು ಆಗಿಂದಾಗ ತನ್ನದೇ ವಿಶಿಷ್ಟ ಶೈಲಿಯಲ್ಲಿ ಬರೆದುಕೊಳ್ಳುವ ಟಿಪ್ಪಣಿಗಳಲ್ಲಿ ವೈಚಾರಿಕ  ದೃಷ್ಟಿಕೋನಗಳು ಕಾಣಸಿಗುತ್ತವೆ.  ಅಧ್ಯಾಯ ಹನ್ನೆರಡರಲ್ಲಿ ಬರುವ ಟಿಪ್ಪಣಿ ಹದಿನಾಲ್ಕು ಹೀಗಿದೆ:  "ಮನುಷ್ಯನಿಗೆ, ತನ್ನ ಮನಸ್ಸಿನ ಆರೋಗ್ಯಕ್ಕೆ, ತನ್ಮೂಲಕ ಹುಟ್ಟುವ ಅವನ ಕ್ರಿಯೆಯ ಆರೋಗ್ಯಕ್ಕೆ ಈ ಕೇಂದ್ರದ ಸಂಪರ್ಕ ಅತ್ಯವಶ್ಯಕ. ಈ ಕೇಂದ್ರಕ್ಕೆ ಜೀವವಿಕಾಸದ ದೀರ್ಘಕಾಲದ ಇತಿಹಾಸದಲ್ಲಿ ಹುಟ್ಟಿಕೊಂಡ ಪ್ರವೃತ್ತಿ ಬಲವಿದೆ. ಹಗೆಯ ವಿರುದ್ಧ ಹೋರಾಡುವ, ಜೀವನ ರಕ್ಷಿಸಿಕೊಳ್ಳುವ ಪ್ರಾಣಿಗಳ ನೈಸರ್ಗಿಕ ಜಾಣತನದಂತೆಯೇ ಮನುಷ್ಯನಿಗೇ ವಿಶಿಷ್ಟವಾದ ಸೃಜನಶೀಲತೆ, ನೈತಿಕತೆ ಇವು ಕೂಡ ಈ ಕೆಂದ್ರದಲ್ಲೇ ಜನಿಸಿದವುಗಳು. ಮನುಷ್ಯನ ಸಾಮಾಜಿಕ ಜೀವನದಲ್ಲಿಯ ಇಂದಿನ ಅಧೋಗತಿಗೆ ಮುಖ್ಯ ಕಾರಣ ಇದೇ ಎಂದು ನನ್ನ ನಂಬಿಕೆ: ಈ ಸೃಷ್ಟಿಗೆ ಮೂಲವಾದ, ನೀತಿಗೆ ಮೂಲವಾದ ಈ ಪ್ರವೃತ್ತಿ ಬಲವಿದ್ದ ಮನಸ್ಸಿನ ಕೇಂದ್ರದ ಸಂಪರ್ಕ ಕಳೆದುಕೊಂಡದ್ದು. ಇಂದಿನ ರಾಜಕಾರಣ ಈ ದುರಂತಕ್ಕೆ ಒಳ್ಳೆಯ ದೃಷ್ಟಾಂತ: ರಾಜಕಾರಣದ ಭ್ರಷ್ಟಾಚಾರದ ಮೂಲ ಹುಡುಕಬೇಕಾದರೆ ಆಧುನಿಕ ಔದ್ಯೋಗೀಕರಣದಿಂದಾಗಿ  ಒದಗಿದ ಸೃಜನಶೀಲತೆಯ, ಆದ್ದರಿಂದಲೇ ನೈತಿಕತೆಯ ನಷ್ಟಕ್ಕೇ ಬರಬೇಕು."

ನನ್ನ ಮಟ್ಟಿಗಂತೂ ಶಿಕಾರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದು.

No comments :