Tuesday, February 04, 2014

ಮುಸ್ಸಂಜೆಯ ಕಥಾ ಪ್ರಸಂಗ

ಬಾಲ್ಯದ ದಿನಗಳು ಮನಸ್ಸಿನಲ್ಲಿ ಮೂಡಿಸುವ ಪರಿಣಾಮ ಯಾವಾಗಲೂ  ತೀಕ್ಷ್ಣವಾಗಿರುತ್ತದೆ . ಮುಂದೊಮ್ಮೆ ನೆನೆವಾಗ ಹಳೆಯ ಘಟನಾವಳಿಗಳು ಹೊಸದೇ ಒಂದು ರೂಪದಲ್ಲಿ ಕಾಣಿಸಬಹುದು.  ಬಾಲ್ಯಕಾಲದ ಅನುಭವಗಳನ್ನು ಕತೆಯಾಗಿಸುವ ಗುಟ್ಟಾದ  ಆಸೆ ಹಲವರಲ್ಲಿರುವುದೂ ಸಹಜ. ಆದರೆ ಅಂತಹದೊಂದು  ಪ್ರಯತ್ನಕ್ಕೆ ಸೂಕ್ಷ್ಮ ಸಂವೇದನೆಯ ಬರವಣಿಗೆ ಅತ್ಯಗತ್ಯ.  

ಇಂತಹದ್ದೊಂದು ಕೃತಿ ಲಂಕೇಶರ "ಮುಸ್ಸಂಜೆಯ ಕಥಾ ಪ್ರಸಂಗ". ಅವರೇ ಮುನ್ನುಡಿಯಲ್ಲಿ  ಹೇಳಿರುವಂತೆ ತಮ್ಮ ಮೊದಲ ಇಪ್ಪತ್ತು ವರುಷಗಳ ಬಹುಪಾಲನ್ನು ತಮ್ಮ ಹಳ್ಳಿಯಲ್ಲಿ ಕಳೆದದ್ದರಿಂದ ಅಲ್ಲಿ ತಮಗಾದ ಅನುಭವಗಳ ಹಿನ್ನೆಲೆಯಲ್ಲಿ  ಈ ಕೃತಿ ರಚಿತವಾಗಿದೆ.

ಮೂವತ್ತೈದು ವರುಷಗಳ ಹಿಂದೆ ಪ್ರಕಟವಾಗಿರುವ ಈ ಕೃತಿಯಲ್ಲಿ ಬರುವ ಪ್ರಸಂಗಗಳು ನಡೆಯುವುದು ಅದಕ್ಕೂ ಮೂವತ್ತೈದು ವರುಷಗಳ ಹಿಂದೆ ಎನ್ನುವುದನ್ನು ನಾವು ಗಮನಿಸಬೇಕು. ಹೀಗಿದ್ದರೂ ಇಂದಿಗೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ  ಕೃತಿಯಿದು.    

ಹಳ್ಳಿಯಲ್ಲಿ ನಡೆವ ತಮಾಷೆಯ ಘಟನೆಗಳ ಆಳದ ಜಾತೀಯತೆ, ಹುಂಬತನ ಮತ್ತು ವಿಷಾದಕರ ವಂಚನೆಯಿಂದ ಹಳ್ಳಿಯೇ ವಿನಾಶದ ಅಂಚಿಗೆ ಸಾಗುವ ಕತೆಯಿದೆಂದು ಸರಳವಾಗಿ ಹೇಳುವಾಗಲೇ, ಕತೆಯು ಕಟ್ಟಿಕೊಡುವ ರಂಗವ್ವ, ಸಾವಂತ್ರಿ, ಮಂಜ ಮೊದಲಾದ ಕೆಲವು ಅತ್ಯಂತ ಜೀವಂತಿಕೆಯ ಪಾತ್ರಗಳನ್ನೂ ಪ್ರಸ್ತಾಪಿಸಲೇಬೇಕು .   

ಜಗತ್ತನ್ನು, ಬದುಕನ್ನು ಒಬ್ಬ ಪ್ರತಿಭಾವಂತ ಸಾಹಿತಿಯ ಕಣ್ಣುಗಳಿಂದ ನೋಡುವ ಖುಷಿಯೇ ಸಾಹಿತ್ಯದ ಓದಿನ ಮುಖ್ಯ ಆಕರ್ಷಣೆ.  ಅಸಾಮಾನ್ಯ ಸೂಕ್ಷ್ಮತೆ, ಚಾಣಾಕ್ಷತೆ, ಜೀವಂತಿಕೆ, ಸಂವಹನ ಕುಶಲತೆ, ಎಲ್ಲವೂ ಇರುವ ಸಾಹಿತಿಗಳು ಜಗತ್ತನ್ನು ನೋಡುವ ರೀತಿಯೇ ವಿಶಿಷ್ಟ.   

ಲಂಕೇಶರೇ  ಹೇಳಿಕೊಂಡಿರುವಂತೆ "ಒಂದು ಬಗೆಯ ಲಹರಿಯಲ್ಲಿ ಲಂಗುಲಗಾಮಿಲ್ಲದೇ ಓಡುವ ವೃತ್ತಾಂತ" ಇದಾಗಿದ್ದರೂ, ಅಂದಿನ ಬಹಳಷ್ಟು ಹಳ್ಳಿಗಳಲ್ಲಿ ಪ್ರಾಯಶಃ ಕಾಣಬಹುದಾಗಿದ್ದ  ಜಾತೀಯತೆ, ಸಣ್ಣತನ, ಗುರಿರಾಹಿತ್ಯ,  ಅಸಂಸ್ಕೃತಿ, ಕ್ರೌರ್ಯ, ಬೋಳೇತನ  ಇವೆಲ್ಲದರ ಚಿತ್ರಣ ಕೃತಿಯಲ್ಲಿದೆ.  ಶಿವಮೊಗ್ಗೆಯ ಕಡೆಯ ಆಗಿನ ಹಳ್ಳಿಯ ನುಡಿಕಟ್ಟಿನಲ್ಲಿ ಸಾಗುವ ಕತೆ ಎಲ್ಲ ಜೀವಂತಿಕೆಯ ಆಳದಲ್ಲಿ, ಎಲ್ಲ ಮೌಲ್ಯಗಳ ಆಳದಲ್ಲಿ  ಮುಖ್ಯ ಯಾವುವೆಂಬುದನ್ನು ಸೂಕ್ಷ್ಮವಾಗಿ ಮನಗಾಣಿಸುತ್ತದೆ.  

ಕತೆಯ ಕುತೂಹಲದ ಜತೆಗೇ ಅಲ್ಲಲ್ಲಿ ನಮಗೆ ಮೊದಲೇ ಅಸ್ಪಷ್ಟವಾಗಿ ಅರಿವಿರಬಹುದಾದ ಜೀವನದ  ವಾಸ್ತವಗಳ ಅಭಿವ್ಯಕ್ತಿ ಪರಿಣಾಮಕಾರಿಯಾಗಿ ಬರುತ್ತದೆ.   

ದುರಂತದ ನೆರಳಿನಲ್ಲಿರುವ ಊರಿನ ಶ್ರೀಮಂತ ಶ್ರೇಷ್ಠಿಗೆ ಶಾಸ್ತ್ರಿ ಹೇಳುವ ಮಾತು  ನೋಡಿ (ಪು.೫೪) - "... ಸುಖ, ಸಂಪತ್ತು ನಮ್ಮ ಬೇರನ್ನ ಅಲುಗಿಸಿ ಅನಾಥರನ್ನಾಗಿ ಮಾಡೋ ಹಾಗೆ ಯಾವುದೂ ಮಾಡೋಲ್ಲ, ಜನರನ್ನು ತೊರೆದ ಮನುಷ್ಯ ಉಳಿಯೋಲ್ಲ; ಅವನ ಸಂಪತ್ತು ಅವನನ್ನು ಉಳಿಸೋಲ್ಲ" 

ಪಕ್ಕದ ಮನೆಯ ನಂದ್ಯಪ್ಪನ ಸಂಸಾರ ಇದ್ದುದರಲ್ಲಿಯೇ ಸಂತೃಪ್ತರಾಗಿ ಇರುವುದನ್ನು ಕಂಡು, ಅದಾಗಲೇ ತನಗಿಂತ ಕೆಳ ಜಾತಿಯ ಮಂಜನ ಪ್ರೇಮದಲ್ಲಿ ಬಿದ್ದಿದ್ದ ಸಾವಂತ್ರಿ ಹೀಗೆ ಅಂದುಕೊಳ್ಳುತ್ತಾಳೆ (ಪು. ೧೧೮-೧೧೯) - "... ದಕ್ಕಿದ್ದನ್ನು ಅನುಭವಿಸುವುದು ಕೆಲವರ ಪಾಲಿಗಾದರೆ, ಇನ್ನು ಕೆಲವರು ಈ ಬದುಕಿನಿಂದ ದಕ್ಕಿಸಿಕೊಂಡು ಜೀವ ಉಳಿಸಿಕೊಳ್ಳಬೇಕಾಗುತ್ತದೆ". 

ತನ್ನ ನೆರೆಮನೆಯ ಹುಡುಗಿ ಶಿವಿಯ ಅಕಾಲಿಕ ಮರಣದಿಂದ ಸಾವಂತ್ರಿ  ತೀವ್ರ ಆಘಾತಕ್ಕೊಳಗಾಗುವ ಸನ್ನಿವೇಶ (ಪು. ೨೬೦) - "ನಾವು ಬಲ್ಲ ಯಾವುದೇ ವ್ಯಕ್ತಿ ಸತ್ತಾಗ ಜೀವಿಸುವ ನಮ್ಮನ್ನು ಪಾಪ ಪ್ರಜ್ಞೆ ಬೆನ್ನು ಹತ್ತುತ್ತದೆ; ನಮ್ಮ ಸಂತೋಷ, ತುಂಟತನ, ಸಣ್ಣ ಪುಟ್ಟ ತಪ್ಪುಗಳು ಎಲ್ಲದರೊಂದಿಗೆ ಬದುಕುವುದೇ ಸಣ್ಣತನವೆನ್ನಿಸುತ್ತದೆ; ಸಾವಿನ ಅಂಚಿನಲ್ಲಿಯೇ ಸಾಗುವ ಬದುಕಿನಲ್ಲಿ ಸುಖವೆನ್ನುವುದು ಎಂಥ ನಂಬಲಸಾಧ್ಯವಾದ ಸಾಧನ ಅನ್ನಿಸುತ್ತದೆ; ಸತ್ತ ವ್ಯಕ್ತಿಯ ಬದುಕಿಗೆ ಹಿತ ತರಲು ಸಾಧ್ಯವಿದ್ದೂ ನಮ್ಮ ಕರ್ತವ್ಯದಲ್ಲಿ ಚ್ಯುತಿಯಾಯಿತೋ ಅನ್ನಿಸುತ್ತದೆ". 

ಕತೆಯ ಹರಿವನ್ನನುಸರಿಸಿ ಪ್ರೇಮದ ಬಗ್ಗೆ ಲೇಖಕರು ತಮಾಷೆಯಾಗಿ ನೀಡುವ ಕೆಲವು ವ್ಯಾಖ್ಯಾನಗಳು ಹೀಗಿವೆ-
(ಪು. ೩೧೦) - "ಪ್ರೇಮವೆನ್ನುವುದು ಈ ಜಗತ್ತಿನಲ್ಲಿ ಮಹತ್ತರ ತ್ಯಾಗಗಳಿಗೆ ಕಾರಣವಾಗಿರುವಂತೆಯೇ ಹಾಸ್ಯಾಸ್ಪದ ತಪ್ಪುಗಳಿಗೂ ದಡ್ಡತನಗಳಿಗೂ ಕಾರಣವಾಗಿದೆ; ಈ ಲೋಕಕ್ಕೆ ಬೇಡವಾದ ಆದರ್ಶವಾದಿಗಳಿಗೂ ಕಾರಣವಾಗಿದೆ."
(ಪು. ೩೨೬) - "ರಾವಣನಿಂದ ಹಿಡಿದು ಇಕ್ಬಾಲ್ ಸಾಹೇಬನವರೆಗೆ ಎಲ್ಲ ಪ್ರೇಮಿಗಳೂ ಪೆದ್ದರೇ- ಹೆತ್ತವರ ಹಾಗೆ, ಋಷಿಗಳ ಹಾಗೆ, ಪ್ರಕೃತಿಯ ಹಾಗೆ."
(ಪು. ೩೭೩) - "ಪ್ರೇಮ ಕೆಲವರಿಗೆ ಮಾತ್ರ ಬದಲಾಗದ, ಚಲಿಸದ ನಕ್ಷತ್ರವಾಗಿಯೂ ದಾರಿಕಾರರಿಗೆ ಮಾರ್ಗದರ್ಶಿಯಾಗಿಯೂ ಕಾಣಿಸಿದರೆ ಮತ್ತೆ ಕೆಲವರಿಗೆ ಅನ್ನ  ಬಟ್ಟೆಯಂತೆ ಕೇವಲ ಬೇಕಾದ ವಸ್ತುವಾಗಿ ಕಾಣುತ್ತದೆ; ಬದಲಾಗುವುದು ಮಾತ್ರವಲ್ಲ, ಪ್ರೇಮಿಸಿದ ವ್ಯಕ್ತಿಯ ಬಗ್ಗೆ ತಾತ್ಸಾರವನ್ನೂ ಹುಟ್ಟಿಸುತ್ತದೆ". 

ಒಟ್ಟಾರೆ, ಹಲವಾರು ಸಾಮಾನ್ಯ ಮನುಷ್ಯರ ಕ್ರಿಯೆಗಳು, ಅನಿಸಿಕೆಗಳನ್ನು ದಾಖಲಿಸುತ್ತಾ ಒಂದು ಹಳ್ಳಿಯ ಅತಿಸಾಮಾನ್ಯವೆನಿಸುವ ವಿದ್ಯಮಾನಗಳನ್ನು ತಮಾಷೆಯಾಗಿ ಹೇಳುತ್ತಲೇ ಸಮಾಜದ ಕೆಲ ಮೂಲಭೂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ "ಮುಸ್ಸಂಜೆಯ ಕಥಾ ಪ್ರಸಂಗ" ಕೆಲವೆಡೆ ಪಾತ್ರಗಳು ತೆಗೆದುಕೊಳ್ಳುವ  ಅನಿರೀಕ್ಷಿತ ತೀರ್ಮಾನಗಳ ಮೂಲಕ ಬದಲಾವಣೆಯತ್ತಲೂ ಬೆರಳು ಮಾಡುತ್ತದೆ. ಉದಾಹರಣೆಗೆ, ರಂಗವ್ವ ತನ್ನ ಮಗಳು ಸಾವಂತ್ರಿ  ಬೇರೆ ಜಾತಿಯವನಾದ ಮಂಜನ ಜೊತೆ ಹೋದಾಗ ಊರವರ ಒತ್ತಡಕ್ಕೆ ಸಿಕ್ಕರೂ ಮಗಳ ನೆರವಿಗೆ ಬರುವ ತೀರ್ಮಾನ ತೆಗೆದುಕೊಳ್ಳುವುದು. 

ಮೂವತ್ತೈದು ವರುಷಗಳ ನಂತರದಲ್ಲಿ ಈ ಕತೆಯು ನಮಗೆ ಅಂದಿನ ಜನ ಬದುಕನ್ನು ಭಾವಿಸಿದ, ಜೀವಿಸಿದ ಬಗೆಯನ್ನು ಅರಿಯುವುದನ್ನು ಸಾಧ್ಯವಾಗಿಸುತ್ತದೆ. ಹಾಗೆಯೇ ಮನುಷ್ಯ ಜೀವಿಯ ಬದುಕಿನ ಸಣ್ಣತನ, ದೊಡ್ಡತನ, ದುಷ್ಟತನ, ಹುಂಬತನ, ಶ್ರೇಷ್ಟತನ  ಈ ಎಲ್ಲ ಸಾಧ್ಯತೆಗಳ ವಲಯವನ್ನೇ ತೆರೆದಿಡುತ್ತದೆ.    

ನಾನು ಮೆಚ್ಚುವ ಲೇಖಕರ ಒಂದೊಂದೇ ಪುಸ್ತಕವನ್ನು ಓದಿ ಮುಗಿಸುವಾಗಲೂ ಇನ್ನೂ ಓದಬೇಕಿರುವ ಪುಸ್ತಕಗಳ ಬಗೆಗೆ ಅವು ನೀಡಬಹುದಾದ ಹೊಸ ಕೌತುಕ, ನಿರಾಳತೆ, ಮುದ ಇವುಗಳ ಬಗೆಗೆ ನೆನೆದು ಕುತೂಹಲಭರಿತ ನಿರೀಕ್ಷೆಯ ಭಾವ ಮೂಡುತ್ತದೆ.  ನನ್ನದೇ ಕಪಾಟಿನಲ್ಲಿ, ಹಾಗೆಯೇ ಪುಸ್ತಕದ ಮಳಿಗೆಗಳಲ್ಲಿ ಕಾದಿರುವ ಕನ್ನಡದ ಹಾಗೂ ಇಂಗ್ಲಿಷಿನ ಹೊಸ ಹಾಗೂ ಹಳೆಯ ಪುಸ್ತಕಗಳ ಸಂಖ್ಯೆ ದೊಡ್ಡದಿದೆ.

ನಾನು ಈವರೆಗೆ ಓದಿರುವ, ಮೆಚ್ಚಿರುವ ಕೆಲವು ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ.  

2 comments :

Unknown said...

Namaskaara Srinath,
Very good review and I liked reading your blog and comments. Very nicely written. I feel like reading the books that are still waiting for me to pick up.
Thank you,
Arun Patil

Srinath Shiragalale said...

Thanks Arun!