Sunday, May 11, 2014

ಕನ್ನಡ, ಕಲಿಕಾ ಮಾಧ್ಯಮ, ಭಾಷಾಭಿಮಾನ: ಕೆಲವು ಟಿಪ್ಪಣಿಗಳು

ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಸುಪ್ರೀಮ್  ಕೋರ್ಟಿನ ಸಂವಿಧಾನ ಪೀಠ ನೀಡಿದ ಮಹತ್ವದ ತೀರ್ಪಿನ ಕುರಿತಾದ ಸುದ್ದಿ ಪ್ರಕಟವಾದ ಮೇಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಮ್ಮ ಹಲವಾರು ಸಾಹಿತಿಗಳ, ಶಿಕ್ಷಣ ತಜ್ಞರ, ಭಾಷಾ ಸಂಘಟನೆಗಳ ಸದಸ್ಯರ ವಲಯದಲ್ಲಿ ಸಾಕಷ್ಟು ಸಂಚಲನೆಯನ್ನೇ ಉಂಟುಮಾಡಿದೆ. 

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಲಿಕಾ ಮಾಧ್ಯಮವನ್ನಾಗಿ ಮಾತೃಭಾಷೆಯನ್ನು ಕಡ್ಡಾಯಗೊಳಿಸುವ ಕುರಿತು ಕರ್ನಾಟಕ ಸರ್ಕಾರ ಇಪ್ಪತ್ತು ವರುಷಗಳಷ್ಟು ಹಿಂದೆ ಆದೇಶ ಹೊರಡಿಸಿದ್ದು, ಆ ಆದೇಶವನ್ನು ಪ್ರಶ್ನಿಸಿ ಕೆಲವು  ಖಾಸಗಿ ಶಾಲೆಗಳು ಮತ್ತು ಪೋಷಕರ ಸಂಘಟನೆಗಳು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು. ಅಲ್ಲಿಂದ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನಂತರದಲ್ಲಿ ಸಂವಿಧಾನ ಪೀಠಕ್ಕೆ ವರ್ಗವಾಗಿ, ಇದೀಗ ಸಂವಿಧಾನ ಪೀಠದ ತೀರ್ಪು ಹೊರಬಿದ್ದಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಈ ವಿಚಾರ ಸದ್ಯಕ್ಕೆ ಒಂದು ರೀತಿಯ ಅಂತ್ಯ ಕಂಡಿದೆ ಎನ್ನಬಹುದೇನೋ.

ಈ ಸುದ್ದಿಗೆ ಜನರ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಇತ್ತು. ಮೊದಲು ಎದುರಾದ ನನ್ನ ಹೆಂಡತಿಗೆ ಕೋರ್ಟಿನ ತೀರ್ಪಿನ ವಿಷಯ ತಿಳಿಸಿ, ಅವಳ ಅಭಿಪ್ರಾಯವೇನೆಂದು ಕೇಳಿದೆ. 'ತೀರ್ಪು ಸರಿಯಾಗಿಯೇ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಭಿಮಾನಕ್ಕಾಗಿ ಭಾಷೆಯನ್ನು ಆರಿಸಿಕೊಂಡು ಆ ಕಾರಣದಿಂದಲೇ ಉಳಿದವರಿಗಿಂತ ಹಿಂದಾಗಬೇಕಿಲ್ಲ. ಹೀಗಾಗಿ ಆಯ್ಕೆಯ ಸ್ವಾತಂತ್ರ್ಯ ಪೋಷಕರಿಗೇ ಬಿಡುವುದು ಸರಿ' ಎನ್ನುವುದು ಅವಳ ಅಭಿಪ್ರಾಯವಾಗಿತ್ತು.

ಮೇಲುನೋಟಕ್ಕೆ ಬಹುಶಃ ಇದು ಬಹಳ ಜನರ, ಮುಖ್ಯವಾಗಿ ಪೋಷಕರುಗಳ, ಅಭಿಪ್ರಾಯವೂ ಆಗಿರಬಹುದು. ಆದರೂ ಈ ವಿಚಾರ ಮತ್ತೆ ಮತ್ತೆ ಮನಸ್ಸಿನಲ್ಲಿ ಸುಳಿಯುತ್ತಿತ್ತು. ಕಲಿಕಾ ಮಾಧ್ಯಮದ ಪ್ರಶ್ನೆ ಸರಳವಾದ ಪ್ರಶ್ನೆಯಲ್ಲವೆಂಬುದೇನೋ ಈ ಹಿಂದೆಯೂ ನನ್ನ ಅರಿವಿಗೆ ಬಂದಿತ್ತು. ಇದರಲ್ಲಿರುವ ವಿವಿಧ ಆಯಾಮಗಳೇನು ಎನ್ನುವುದರ ಬಗೆಗೆ ನಾನು ಇನ್ನಷ್ಟು ಸ್ಪಷ್ಟತೆ ಪಡೆಯಬೇಕಾಗಿತ್ತು.

ಯೋಚಿಸುತ್ತಾ ಹೋದಂತೆ ಸಮಸ್ಯೆಯ ಜಟಿಲತೆ ಅರಿವಿಗೆ ಬರತೊಡಗಿತು. ನಾಡಿಗೆ ಸಮಾಜಕ್ಕೆಸಂಬಂಧಪಡುವ ಯಾವ ಸಮಸ್ಯೆಯೂ ಸರಳವಾಗಿರುವುದಿಲ್ಲ ಎನ್ನುವ ಸತ್ಯ ನಾವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ  ಸಂಗತಿ. ಸುಪ್ರೀಂ ಕೋರ್ಟ್ ಆದೇಶದ ನಂತರದ ಈ ಕೆಲದಿನಗಳಲ್ಲಿ ಪತ್ರಿಕೆಗಳಲ್ಲಿ ಕಂಡು ಬರುತ್ತಿರುವ ಪ್ರತಿರೋಧ ನೋಡಿದರೆ ಕಲಿಕಾ ಮಾಧ್ಯಮದ ವಿಚಾರ ಒಂದು ನೇರ ಪರಿಹಾರವುಳ್ಳ ಸರಳ ಸಮಸ್ಯೆಯೇನೋ ಎಂಬ ಧಾಟಿಯಲ್ಲಿ ಪ್ರತಿಕ್ರಿಯೆಗಳು ಇರುವಂತೆ ತೋರುತ್ತದೆ.

ಕಲಿಕಾ ಮಾಧ್ಯಮದ ವಿಚಾರಕ್ಕೆ ತಳಕು ಹಾಕಿಕೊಂಡಂತೆ ಇತರ ಅನೇಕ ವಿಚಾರಗಳೂ ಇವೆ. ಒಂದೊಂದಾಗಿ ಪರಿಗಣಿಸಿದರೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗಬಹುದು. ಇಂತಹ ವಿಚಾರಗಳು ಪ್ರತಿಯೊಬ್ಬರಿಗೂ ತಮ್ಮದೇ ವೈಯಕ್ತಿಕ ದೃಷ್ಟಿಕೋನಕ್ಕೆ ಅನುಸಾರವಾಗಿ ಗೋಚರವಾಗುವಂತಹವು. ನಮ್ಮ ನಿರ್ದಿಷ್ಟ ಹಿನ್ನೆಲೆ, ಸನ್ನಿವೇಶ, ಉದ್ದೇಶ ಇವುಗಳಿಗೆ ಅನುಸಾರವಾಗಿಯೇ ನಮ್ಮ ಅಭಿಪ್ರಾಯಗಳು ಇರುವುದೂ ಸಹಜ.

೧. ಕಲಿಕಾ ಮಾಧ್ಯಮವಾಗಿ ಮಾತೃಭಾಷೆ
ನಾನು ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದದ್ದು ನನ್ನ ಮಾತೃಭಾಷೆಯಾದ  ಕನ್ನಡದ ಮಾಧ್ಯಮದಲ್ಲಿ. ಆ ಕಾಲಕ್ಕೆ ಕಲಿಕಾ ಮಾಧ್ಯಮ ಈಗಿನಂತೆ ಚರ್ಚೆಯ ವಿಷಯವೇ ಆಗಿರಲಿಲ್ಲ. ಪುಟ್ಟ ಹಳ್ಳಿಯ ಏಕ ಶಿಕ್ಷಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ 'ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು' ಎಂದು ಗುಂಪಿನಲ್ಲಿ ಹಾಡುತ್ತಾ ಹತ್ತರವರೆಗೆ ಎಣಿಸಲು ಕಲಿತದ್ದು 'ಶಿಕ್ಷೆ' ಎನಿಸುವುದು ಸಾಧ್ಯವೇ ಇರಲಿಲ್ಲ. ಏಳನೇ ತರಗತಿಯವರೆಗೂ ವಿಜ್ಞಾನ, ಗಣಿತ, ಸಮಾಜ  ಶಾಸ್ತ್ರ  ಈ ಎಲ್ಲ ವಿಷಯಗಳ ಪರಿಚಯವಾದದ್ದೂ ಕನ್ನಡದಲ್ಲೇ.  ನಮಗೆ ಆಗಲೇ ತಿಳಿದಿರುವಂತಹದರ ಬಗ್ಗೆ ಇನ್ನಷ್ಟು ಅರಿವನ್ನು ಪೇರಿಸುತ್ತ ಹೋಗುವುದೇ ನಾವು ಯಾವುದೇ ವಿಷಯವನ್ನು ಕಲಿಯುವ ಮಾರ್ಗ ಆಗಿರುವುದರಿಂದ ಇದು ನಮ್ಮದೇ  ಭಾಷೆಯಲ್ಲಿ ಹೆಚ್ಚು ಸರಾಗ. ಕಿರಿಯ ತರಗತಿಗಳಲ್ಲಿ ನಮ್ಮ ನಿತ್ಯದ ಭಾಷೆಯಲ್ಲದ ಇಂಗ್ಲಿಷ್ ನಂತಹ ಭಾಷೆಯಲ್ಲಿ ಬೋಧಿಸುವ ವಿಷಯಗಳು ಬಹುಪಾಲು ಗ್ರಹಿಕೆಯ ಹೊರಗೇ ಉಳಿದು ಪರೀಕ್ಷಾ ದೃಷ್ಟಿಯಿಂದ ಕೇವಲ ನೆನಪಿನ ಶಕ್ತಿಯಿಂದ ಪುನರುಚ್ಛರಿಸುವ 'ಗಿಳಿಪಾಠ' ಗಳಾಗುವ ಸಾಧ್ಯತೆಯಿರುತ್ತದೆ.

ಅಲ್ಲದೆ, ನಮ್ಮ ಆಲೋಚನೆ, ಅಭಿವ್ಯಕ್ತಿ ಗಳು ಸಾಧ್ಯವಾಗುವುದೇ ಒಂದು ಭಾಷೆಯ ಆಧಾರದಿಂದ. ನಮ್ಮದಲ್ಲದ ಭಾಷೆಯಲ್ಲಿ ಬೋಧಿಸುವುದರಿಂದ ಅಲ್ಲಿ ಭಾಷೆ ಕೇವಲ ಮಾಹಿತಿ ವರ್ಗಾವಣೆಯ ಸಾಧನವಾಗುತ್ತದೆ. ಹೀಗೆ ಮಾಡುವುದರಿಂದ ಭಾಷೆಯ ಮೂಲಭೂತ ಸತ್ತ್ವದಿಂದಲೇ ನಾವು ವಂಚಿತರಾದಂತೆ. ಭಾಷೆಯೊಂದರ ಅಪರಿಮಿತ ಸಾಧ್ಯತೆಗಳು, ಅದು ತೆರೆದು ತೋರಬಹುದಾದ ದೊಡ್ಡದೊಂದು ಒಳ ಪ್ರಪಂಚ ಇವೆಲ್ಲವೂ ನಮಗೆ ಮುಖ್ಯವಾಗಲೇಬೇಕಾಗುತ್ತದೆ.  ಕೇವಲ ಮಾಹಿತಿ ಸಂವಹನೆಯ ಮಾಧ್ಯಮವಾಗಿ ಭಾಷೆಯೊಂದಿಗೆ ನಮ್ಮ ಸಂಬಂಧವಾಗುವುದಾದರೆ ಜರ್ಮನ್ ತತ್ತ್ವಜ್ಞಾನಿ ಹೇಡೆಗರ್ ಹೇಳಿದಂತೆ "ಭಾಷೆಯೇ ಮನುಷ್ಯನನ್ನು ಮಾತಾಡಿದಂತೆ" ಆಗುತ್ತದೆ.

ಹೀಗೆ ನಮ್ಮದೇ ಭಾಷೆಯೊಡನೆ ನೋಡುವ, ಆಲೋಚಿಸುವ, ಅರ್ಥ ಮಾಡಿಕೊಳ್ಳುವ ಸಂಬಂಧ ನಮಗೆ ಸಾಧ್ಯವಾದರೆ ಮುಂದೆ ಇಂಗ್ಲಿಷ್ನಂತಹ ಬೇರೊಂದು ಭಾಷೆಯಲ್ಲೂ  ಉತ್ತಮವಾದದ್ದರ ಪ್ರಯೋಜನ ಪಡೆಯುವುದೂ ಸಾಧ್ಯವಾಗುತ್ತದೆ.

ಯಾವುದೇ ಕಾರಣದಿಂದ ಕನ್ನಡ ಕಲಿಕಾ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸಲು ಇಷ್ಟವಿಲ್ಲದ ಪೋಷಕರೂ ಆ ಮಕ್ಕಳಿಗೆ ಕನಿಷ್ಟ ಹತ್ತನೇ ತರಗತಿಯವರೆಗಾದರೂ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

೨. ಇಂಗ್ಲಿಷ್ ಮೀಡಿಯಮ್ ಬೇಡಿಕೆ ಏಕೆ?
ಮುಖ್ಯವಾದ ಕಾರಣ ಉದ್ಯೋಗದ ದೃಷ್ಟಿ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಕಳೆದ ಕೆಲ ದಶಕಗಳಲ್ಲಿ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣ, ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾದ  ಉದ್ಯೋಗಗಳ  ಸೃಷ್ಟಿ   ಹೆಚ್ಚಿದಂತೆಲ್ಲ  ಸಹಜವಾಗಿಯೇ ಎಲ್ಲರೂ  ಈ ಬಗೆಯ ಉದ್ಯೋಗಗಳನ್ನು ತಮ್ಮ ಮಕ್ಕಳೂ ಪಡೆಯಲೆಂಬ ಹಂಬಲವನ್ನು ಹೊಂದಲು ತೊಡಗಿದರು. ಹೀಗಾಗಿ  ಇಂಗ್ಲಿಷ್ ಮಾಧ್ಯಮದ ಬೇಡಿಕೆಯೂ ಇನ್ನಷ್ಟು ಅಧಿಕವಾಗತೊಡಗಿತು. ಪ್ರಾಥಮಿಕ  ಹಂತದಿಂದಲೇ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಪ್ರವೃತ್ತಿಯೂ ಹೆಚ್ಚಾಗತೊಡಗಿತು.

ವೈಯಕ್ತಿಕವಾಗಿ ಹೇಳುವುದಾದರೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದದ್ದು ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಳಿಸಲು ಅಥವಾ ನಿರ್ವಹಿಸಲು ನನಗೆ  ತೊಡಕಾಗಲಿಲ್ಲ. ತೊಂಬತ್ತರ ದಶಕದಿಂದ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯತೊಡಗಿದ ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶದ ಫಲಾನುಭವಿಗಳಾಗಿರುವ ನನ್ನಂತಹ ಇತರ ಹಲವಾರು ಕನ್ನಡಿಗರ ಅನುಭವವೂ ಬಹುಶಃ ಇದಕ್ಕಿಂತ ಭಿನ್ನವಾದದ್ದೇನೂ ಅಲ್ಲ. ಆರಂಭದ ಶಿಕ್ಷಣ ಮಾತೃಭಾಷೆಯಲ್ಲಿ ಪಡೆದದ್ದರಿಂದ  ಖಂಡಿತವಾಗಿ ಅನುಕೂಲವೇ ಆಗಿದೆ. ಏಕೆಂದರೆ ನನ್ನ ಮಟ್ಟಿಗೆ ಇಂಗ್ಲಿಷ್ ಭಾಷೆ ಕೇವಲ ಮಾರುಕಟ್ಟೆಯ ಭಾಷೆಯೂ , ತಂತ್ರಜ್ಞಾನದ ಸಾಧನ ರೂಪವೂ ಆಗದೇ ಉಳಿದಿದ್ದರೆ ಅದಕ್ಕೆ ಕಾರಣ ನನ್ನ ಆರಂಭದ ಶಿಕ್ಷಣ ನನ್ನದೇ ಭಾಷೆಯಲ್ಲಿದ್ದು  ನನ್ನ ಮನಸ್ಸನ್ನು ತೊಡಗಿಸಿಕೊಳ್ಳುವಂತಹದ್ದು ಆಗಿದ್ದದ್ದು ಹಾಗೂ ಭಾಷೆಯ ಸಾಧ್ಯತೆಗಳ ಅರಿವು ಚಿಕ್ಕಂದಿನಲ್ಲೇ ಲಭಿಸಿದ್ದು.

೩. ಭಾಷಾಭಿಮಾನ
 ಐಟಿ-ಬಿಟಿ ಯವರಿಂದ ಕನ್ನಡದ ಅವನತಿಯಾಗುತ್ತಿದೆ, ಇಂತಹ ಕ್ಷೇತ್ರಗಳ ಆಕಾಂಕ್ಷಿಗಳಿಗಾಗಿಯೇ ಆಂಗ್ಲ ಮಾಧ್ಯಮದ ಶಾಲೆ­­ಗಳನ್ನು ತೆರೆದಿರುವ ಶಿಕ್ಷಣದ ವ್ಯಾಪಾರಸ್ಥರಿಂದ ಹಾನಿಯಾಗುತ್ತಿದೆ ಎಂದು ಭಾವೋದ್ವೇಗದಿಂದ ಮಾತನಾಡುವುದರಿಂದ ಕನ್ನಡಕ್ಕೆ ಲಾಭವಾಗುವ ಸಾಧ್ಯತೆಗಳು ಕಡಿಮೆ. ಇನ್ನೂ ಮೂಲಭೂತವಾಗಿ ಯೋಚಿಸುತ್ತ ಜಾಗತೀಕರಣ, ಬಂಡವಾಳಶಾಹಿಯಂತಹ ಬೆಳವಣಿಗೆಗಳನ್ನು ಟೀಕಿಸುತ್ತಾ ಕೂರುವುದರಿಂದಲೂ ಉಪಯೋಗವಿಲ್ಲ. ಟೀಕೆಗಳನ್ನು ಮಾಡುವ ಮೊದಲು ಇಂತಹ ಬೆಳವಣಿಗೆಗಳ ಹಿಂದಿನ ರಾಜಕೀಯ, ಆರ್ಥಿಕ ಸತ್ಯಗಳನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು.

ಯಾವುದೇ ಸಾಮಾಜಿಕ ಅಥವಾ ಆರ್ಥಿಕ ವ್ಯವಸ್ಥೆ ಸರ್ವರಿಗೂ ಸಲ್ಲುವುದು ಸಾಧ್ಯವಾಗದ ಮಾತು. ವ್ಯವಸ್ಥೆಯಲ್ಲಿರುವ ಉತ್ತಮ ಅಂಶಗಳ ಲಾಭ ಪಡೆಯುತ್ತಾ, ಉತ್ತಮವಲ್ಲದ ಅಂಶಗಳನ್ನು ಆಡಳಿತಾತ್ಮಕವಾಗಿ ನಿಭಾಯಿಸುವುದಷ್ಟೇ ನಾವು ಮಾಡಬಹುದಾದದ್ದು. ಐಟಿ-ಬಿಟಿ ಕ್ಷೇತ್ರವನ್ನು ಹಾಗೂ ಅದರಲ್ಲಿರುವವರನ್ನೂ ಸಾರಾಸಗಟಾಗಿ ಸಂಸ್ಕೃತಿ ಭ್ರಷ್ಟರೆಂದೂ ಭಾಷಾ ವಿರೋಧಿಗಳೆಂದೂ ಜರೆಯುವುದು ನ್ಯಾಯವಲ್ಲ.

ವಸಾಹತುಶಾಹಿಗೆ ಸಾಧನವಾಗಿ ಇಂಗ್ಲಿಷ್ ನಮ್ಮ ದೇಶಕ್ಕೆ ಕಾಲಿಟ್ಟು ದೇಶೀಯ ಸಂಸ್ಕೃತಿ ನಾಶಪಡಿಸಿತು ಎಂದು ಹೇಳುವಂತೆ ಐಟಿ-ಬಿಟಿ ಬಂದು ಕನ್ನಡವನ್ನು ನಾಶ ಮಾಡಿತೆಂದು ಹೇಳಲಾಗದು. ಐಟಿ-ಬಿಟಿ ಬಂದಿರುವುದು ನಮ್ಮ ಮತ್ತು ನಮ್ಮ ಸರ್ಕಾರಗಳ ಆಹ್ವಾನದಿಂದಲೇ. ಅದು ಹೇಗೆಯೇ ಪ್ರವೇಶಿಸಿದ್ದರೂ ಇಂಗ್ಲಿಷ್ ಭಾಷೆಯ ಸಂಪರ್ಕದಿಂದ ಕನ್ನಡ ಭಾಷೆಗೂ ಲಾಭವಾಗಿಲ್ಲ ಎಂದೂ  ಹೇಳಲಾಗದು. ಹಾಗೆಯೇ ಐಟಿ-ಬಿಟಿ ಕ್ಷೇತ್ರದಿಂದ ನಾಡಿಗೇನೂ ಲಾಭವೇ ಆಗಿಲ್ಲ ಎನ್ನುವುದೂ ಸತ್ಯವಲ್ಲ. ಆರ್ಥಿಕವಾಗಿ ಲಾಭದಾಯಕವಾದ ಈ ಉದ್ಯಮದಿಂದ ಭಾಷೆಯ ಮೇಲಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ನಿಯಂತ್ರಿಸುವುದರತ್ತ ನಾವು ಗಮನ ಹರಿಸುವುದು ಒಳಿತು.

ಆಧುನಿಕ ಕಾಲದ ಅಗತ್ಯಗಳಿಗೆ ಹೊಂದುವಂತೆ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಬದಲಾವಣೆಗಳನ್ನು ತರುವುದು, ಇಂಗ್ಲಿಷ್ ಬಗ್ಗೆ ಅನಗತ್ಯ ಹೆಮ್ಮೆ, ಕನ್ನಡದ ಬಗ್ಗೆ ನಿರಾಧಾರದ ಅಗೌರವ ಎರಡನ್ನೂ  ಹೋಗಲಾಡಿಸುವಂತೆ ಕನ್ನಡವನ್ನು, ಕನ್ನಡ ಶಾಲೆಗಳನ್ನು ಆಕರ್ಷಕವಾಗಿಸುವುದು  ಇವು ನಮ್ಮ ಸರ್ಕಾರ ಮಾಡಬಹುದಾದ ಹಾಗೂ ಕನ್ನಡವನ್ನು ಪ್ರೀತಿಸುವ ಎಲ್ಲರೂ ಮಾಡಬಹುದಾದ ಕೆಲಸಗಳು.

ಮತ್ತೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯಕ್ಕೆ ಬರುವುದಾದರೆ,- ಭಾಷೆಯ ಆಯ್ಕೆ, ಕಲಿಕಾ ಮಾಧ್ಯಮದ ಆಯ್ಕೆ ಇಂತಹ ವಿಚಾರಗಳಲ್ಲಿ ಕಾನೂನು, ಕಟ್ಟಳೆಯ ಮಾರ್ಗಕ್ಕಿಂತ ಜನರಲ್ಲಿ ಈ ವಿಚಾರದ ಸಾಧಕ-ಬಾಧಕಗಳ ಪರಿಚಯ ಮಾಡಿಕೊಡುವ ಮಾರ್ಗ ಒಳ್ಳೆಯದು.


1 comment :

ವಿನಯ್ ಮಾಧವ್ said...

ಕೋರ್ಟ್ ನಿರ್ಧಾರವನ್ನು ನೋಡಿದರೆ, ತೀರ್ಪಿನ ಹಿಂದೆ ಜಾಗತೀಕರಣದ ಪ್ರಭಾವ ಕಂಡು ಬರುತ್ತದೆ. ಆದರೆ, ಹೆಚ್ಚಿನ ಇಂಗ್ಲಿಷ್ ಮಾತನಾಡದ ದೇಶಗಳು, ಜಾಗತೀಕರಣದ ವಾತಾವರಣಕ್ಕೆ ಹೊಂದಿಕೊಂಡರೂ, ತಮ್ಮ ದೇಶದ ಭಾಷೆ, ಸಂಸ್ದೃತಿಗಳನ್ನು ಉಳಿಸಿಕೊಂಡಿವೆ.
ಕೋರ್ಟ್ ನಿರ್ಧಾರವನ್ನು ಒಪ್ಪಿಕೊಂಡಲ್ಲಿ, ಕನ್ನಡವೂ ಸೇರಿದಂತೆ, ಭಾರತದ ಎಲ್ಲಾ ಭಾಷೆಗಳನ್ನು, ಮುಂದಿನ ಪೀಳಿಗೆಗಳು ಸಂಸ್ಕೃತದಂತೆ ನೆನಪಿಸಿಕೊಳ್ಳಬೇಕಾಗುತ್ತದೆ.

ವಿನಯ್ ಮಾಧವ್