Sunday, May 18, 2014

ಕರ್ಮ: ಕನ್ನಡದಲ್ಲೊಂದು ಹೊಸ ಕಾದಂಬರಿ



ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ ಓದಿಸಿಕೊಂಡುಹೋಯಿತು.

ಪುಸ್ತಕದ ಹೆಸರು ಮತ್ತು ಮುಖಪುಟ ಅನಂತಮೂರ್ತಿಯವರ ಬಹುಮುಖ್ಯ ಕಾದಂಬರಿ 'ಸಂಸ್ಕಾರ'ವನ್ನು ನೆನಪಿಗೆ ತರುತ್ತವೆ. ಪುಸ್ತಕದ ಪ್ರಥಮ ಪ್ರತಿಯನ್ನು ಎಸ್. ಎಲ್. ಭೈರಪ್ಪನವರು ಓದಿ ಮೆಚ್ಚಿರುವ ವಿಷಯವನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾರೆಮುನ್ನುಡಿಯಲ್ಲಿ ಲೇಖಕರು ಕಥೆಯ ಸಂಕ್ಷಿಪ್ತ ಪರಿಚಯವನ್ನು ಹೀಗೆ ಕಾಣಿಸುತ್ತಾರೆ: ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನವೇ 'ಕರ್ಮ'.

'ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸ್ಸಾಯಿತು' ಎಂದೂ ಲೇಖಕರು ಮುನ್ನುಡಿಯಲ್ಲಿ ಬರೆಯುತ್ತಾರೆ. ಇದೆಲ್ಲವೂ ಆರಂಭದಲ್ಲಿಯೇ ಕೃತಿಯಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದವು.

ಕಾದಂಬರಿ ಪ್ರಕಾರ ನನ್ನ ಮೆಚ್ಚಿನ ಸಾಹಿತ್ಯ ಪ್ರಕಾರ. ಯಾವುದೇ ಉತ್ತಮ ಕಾದಂಬರಿ ಓದುವಾಗಲೂ ಇನ್ನೊಂದೇ ಪ್ರಪಂಚದ ಪ್ರವೇಶ ಮಾಡುವ ಅನುಭವ ಆಗುತ್ತದೆ. ಇಂತಹದೊಂದು ಪ್ರಪಂಚದಲ್ಲಿ ಪ್ರತಿಭಾವಂತ ಲೇಖಕ ಅಥವಾ ಲೇಖಕಿ ಜೀವನದಲ್ಲಿ ಹೊರನೋಟಕ್ಕೆ ಕಾಣುವ ಸತ್ಯಕ್ಕೂ ಹಾಗೂ ನಿಜಕ್ಕೂ ಇರುವ ದ್ವಂದ್ವಗಳನ್ನು ಶೋಧಿಸುವುದು ಸಾಧ್ಯವಿರುತ್ತದೆ.  'ಕರ್ಮ'ದ ಕೇಂದ್ರ ಪಾತ್ರವಾಗಿರುವವರು ನಗರದವರಾದ್ದರಿಂದ ಆರಂಭದಿಂದಲೇ ಬಹಳಷ್ಟು ವಿವರಗಳು ಪರಿಚಿತವಾದ ಸಂಗತಿಗಳೆನಿಸುತ್ತವೆ. ಏಕರೂಪಿ ನಾಗರಿಕತೆಯು ಸಾಂಸ್ಕೃತಿಕ ವಿಶಿಷ್ಟತೆಗಳನ್ನೆಲ್ಲ ಬುಡಮೇಲು ಮಾಡುತ್ತಾ ತಂದು ಹೇರುತ್ತಿರುವ ಒಂದು ನಿರ್ದಿಷ್ಟ ಜೀವನಕ್ರಮ ನಗರದ  ಬಹುಪಾಲು ಜನರ ಜೀವನ ಕ್ರಮ ಆಗಿರುವುದರಿಂದ ವಿವರಗಳು  ಬಹುಶಃ ಬಹಳ ಮಂದಿ ಓದುಗರಿಗೆ ಅರಿವಿರುವ ಸಂಗತಿಗಳಾಗುತ್ತವೆ. ಸುರೇಂದ್ರ ಹಾಗೂ ಆತನ ಅಂತರ್ಜಾತೀಯ ವಧು ನೇಹಾ ಇವರ ದೈನಿಕ ಜೀವನದ ವಿವರಗಳು ಸಹ ಸಹಜವಾಗಿ ಮೂಡಿಬರುತ್ತವೆ. ಎಸ್. ಎಲ್. ಭೈರಪ್ಪನವರಂತಹ ನುರಿತ ಲೇಖಕರಿಂದ "ನಿಮ್ಮ ಕಾದಂಬರಿಯಲ್ಲಿ ಬೆಂಗಳೂರು ವಲಯದ ಮುಂದುವರೆದ ಜೀವನ ಪಧ್ಧತಿ ನೈಜವಾಗಿ ಮೂಡಿಬಂದಿದೆ. ನಿಮ್ಮ ಗ್ರಹಿಕೆಯಿಂದ ಕಥನ ಉತ್ಪ್ರೇಕ್ಷೆಯಿಂದ ಹೊರತಾಗಿದೆ" ಎಂದು ಹೊಗಳಿಸಿಕೊಂಡ ಹೆಗ್ಗಳಿಕೆಯೂ ಲೇಖಕರಿಗಿದೆ.

ಇಂತಹ ನಗರಸಮಾಜದ ಜೀವನಕ್ರಮದವರು ತಾವು ಹಿಂದೆ ಬಿಟ್ಟು ಬಂದಿರುವ ತಮ್ಮ ಮೂಲದ ದೇಸೀ ಸಂಸ್ಕೃತಿಯೊಡನೆ ಮತ್ತೆ ಮುಖಾಮುಖಿಯಾಗುವಾಗ ಉಂಟಾಗುವ ತಾಕಲಾಟವೆ ಕಾದಂಬರಿಯ ಕೇಂದ್ರ ವಸ್ತು. ತನ್ನ ತಂದೆಯ ಸಾವಿನ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಹಿಂದಿರುಗುವ ಸುರೇಂದ್ರ ಅನುಭವಿಸುವ ಪರಕೀಯತೆ, ಗೊಂದಲ, ತೊಳಲಾಟ, ಸ್ಥಿತ್ಯಂತರ ಇವೆಲ್ಲವುಗಳ ವಿವರ ಸಾವಿನ ನಂತರದ ಶ್ರಾಧ್ಧ ಕಾರ್ಯಗಳ ವಿವರಗಳ ಹಿನ್ನೆಲೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿವೆ.

'ಕರ್ಮ'ವನ್ನು ಓದುವಾಗ ನನಗೆ ಈ ಹಿಂದೆ ಓದಿದ್ದ ಎರಡು ಪ್ರಮುಖ ಕಾದಂಬರಿಗಳು ನೆನಪಿಗೆ ಬಂದವು. ಒಂದು, ಯು. ಆರ್. ಅನಂತಮೂರ್ತಿಯವರು ಬರೆದ 'ಸಂಸ್ಕಾರ'. ಇನ್ನೊಂದು, ಎಸ್. ಎಲ್. ಭೈರಪ್ಪನವರು ಬರೆದ 'ತಬ್ಬಲಿಯು ನೀನಾದೆ ಮಗನೆ'. ಕಥಾ ವಸ್ತುವಿನಲ್ಲಿ ಒಂದು ಬಗೆಯ ಸಾಮ್ಯತೆ ಇರುವುದರಿಂದ ಈ ಎರಡು ಕಾದಂಬರಿಗಳ ಹಿನ್ನೆಲೆಯೊಂದಿಗೆ  'ಕರ್ಮ' ಕಾದಂಬರಿಯ  ಮೂಲದ್ರವ್ಯದ ಪರಿಗಣನೆ ಮಾಡುವುದು ಸಹಕಾರಿಯಾಗಬಹುದು.

'ಸಂಸ್ಕಾರ' ಕಾದಂಬರಿಯನ್ನು ಓದಿ ಬಹಳ ವರ್ಷಗಳೇ ಆಗಿದ್ದರೂ (ಗಿರೀಶ್ ಕಾರ್ನಾಡ ಅದ್ಭುತವಾಗಿ ಅಭಿನಯಿಸಿರುವ ಇದೇ ಕಾದಂಬರಿಯ ಆಧಾರಿತ ಚಲನ ಚಿತ್ರವನ್ನು ಇತ್ತೀಚೆಗೆ ನೋಡಿದೆ) ನನಗೆ ಇಂದಿಗೂ ನೆನಪಿರುವುದೆಂದರೆ ಕಾದಂಬರಿಯ ಕೇಂದ್ರ ಪಾತ್ರಧಾರಿ ಪ್ರಾಣೇಶಾಚಾರ್ಯರು ಧರ್ಮ ಸೂಕ್ಷ್ಮಗಳಿಂದಾಗಿ ವೈಯಕ್ತಿಕ ಜೀವನದಲ್ಲಿ ಅನುಭವಿಸಬೇಕಾಗಿ ಬರುವ ತಲ್ಲಣದ ಚಿತ್ರಣಇಲ್ಲಿ ಪ್ರಾಣೇಶಾಚಾರ್ಯರಿಗೆ ತಾವು ನಂಬುವ ಧರ್ಮಕ್ಕೂ ಮತ್ತು ತಮಗೂ ಇರುವ ಸಂಬಂಧವು  ಸಮಾಜದ ನಿರೀಕ್ಷೆಗಳಿಗನುಗುಣವಾಗಿ ನಿರ್ಧಾರವಾಗುವುದು. ಹಾಗೆಯೇ ವ್ಯಕ್ತಿ ಸ್ವಾತಂತ್ರ್ಯದ ಪರಿವೆಯೇ ಇಲ್ಲದ ಇತರರು ಅವರಲ್ಲಿ ಸೃಷ್ಟಿಸುವ ಅಸಹಾಯಕತೆಯ ಚಿತ್ರಣವೂ  ಧರ್ಮದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತದೆ.

ಇನ್ನು ಎಸ್. ಎಲ್. ಭೈರಪ್ಪನವರ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯಲ್ಲಿ ವಿದೇಶಿ ಮಹಿಳೆ ಹಿಲ್ಡ ಮತ್ತು ದೇವಾಲಯದ ಅರ್ಚಕ ವೆಂಕಟರಮಣ ಇವರಲ್ಲಿ ಗೋವಿನ ಬಗೆಗೆ ಪರಸ್ಪರರಲ್ಲಿರುವ ವಿರುದ್ಧದ ದೃಷ್ಟಿಕೋನದ ಕಾರಣದಿಂದ ವಾಗ್ಯುದ್ಧವೇ  ನಡೆಯುತ್ತದೆ. ಆಗ ವೆಂಕಟರಮಣ ಪಾಶ್ಚಾತ್ಯ ಜೀವನಕ್ರಮ, ನಂಬಿಕೆ, ಶ್ರದ್ಧೆ, ಜೀವನಧ್ಯೇಯ ಇವೆಲ್ಲದರ ಪ್ರಶ್ನೆ ಮಾಡುತ್ತಾನೆ. ಕಾದಂಬರಿಯ ಅಂತ್ಯದಲ್ಲಿ ಶ್ರಧ್ಧೆ, ನಂಬಿಕೆಗಳ ಮಹತ್ವವನ್ನು ಎತ್ತಿ ಹಿಡಿಯುವಂತೆ ಹಿಂದೆ ಗೋಹತ್ಯೆಗೆ ಮುಂದಾಗಿದ್ದ ಹಿಲ್ಡಳಿಗೆ ಆವಳ ತಪ್ಪಿಗೆ ಶಿಕ್ಷೆಯೇನೋ  ಎಂಬಂತೆ ಆಕೆಯ ಪುಟ್ಟ ಮಗುವಿಗೆ ಹಸುವಿನ ಕೆಚ್ಚಲಿನ ಹಾಲೇ ಬೇಕಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.

'ಸಂಸ್ಕಾರ' ಕಾದಂಬರಿಯು ರೂಢಿಗತ ಪಧ್ಧತಿಯ ಕಠೋರತೆ, ಧರ್ಮದ ಹೆಸರಿನಲ್ಲಿ ನಡೆಯುವ ಗೋಸುಂಬೆತನದ ವರ್ತನೆಗಳು ಇತ್ಯಾದಿಗಳ ಪ್ರಶ್ನೆ ಮಾಡುತ್ತಾ ಹೊಸದೊಂದು ಪ್ರಜ್ಞೆಯ ಸಾಧ್ಯತೆಯತ್ತ ಬೆರಳು ಮಾಡಿದರೆ, 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯು ಪೂರ್ವ-ಪಶ್ಚಿಮಗಳ ವಿಭಿನ್ನ ಜೀವನ ಕ್ರಮ, ನಂಬಿಕೆಗಳ ಮುಖಾಮುಖಿಯನ್ನು ತುಂಬಾ ಸ್ವಾರಸ್ಯವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾದರೂ ಭಿನ್ನವಾದೊಂದು ಚಿಂತನೆಯ ಸಾಧ್ಯತೆಯನ್ನೇ ಅಸಾಧುವೆನ್ನುವಂತೆ ಭಾರತೀಯ ಶ್ರದ್ಧೆಯ ಶ್ರೇಷ್ಟತೆಯನ್ನು  ಪ್ರಶ್ನಾತೀತಗೊಳಿಸುವ ಪ್ರಯತ್ನ ಮಾಡುತ್ತದೆ.

'ಕರ್ಮ' ಸಹ ಭೈರಪ್ಪನವರ ಮಾರ್ಗದಲ್ಲಿ ಸಾಗುತ್ತದೆ. ಸಮಾಜದ ಆಧುನಿಕ ಕಾಲಘಟ್ಟದಲ್ಲಿ ರೂಢಿಗತ ಆಚರಣೆಗಳ, ನಂಬಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ, ಹೊಸತು-ಹಳತರ ಘರ್ಷಣೆಯ ಸಾಧ್ಯತೆಯನ್ನು ತೋರುತ್ತಲೇ ಕಾದಂಬರಿಯು ಕಡೆಯಲ್ಲಿ "ನಂಬಿಕೆ ಚಂಚಲ, ಶ್ರದ್ಧೆ ಅಚಲ" ಎಂಬ ಯಥಾಸ್ಥಿತಿ ವಾದಕ್ಕೆ ಶರಣಾಗುತ್ತದೆ. ಕಾದಂಬರಿಯ ಉದ್ದಕ್ಕೂ ಒಬ್ಬ ದುರ್ಬಲ ವ್ಯಕ್ತಿತ್ವದ, ಕೇವಲ ಹಣಗಳಿಕೆಯಷ್ಟೇ ಗುರಿಯಾಗಿರುವ, ಸಂಪ್ರದಾಯ ವಿರೋಧಿಯಾದ ವ್ಯಕ್ತಿಯಾಗಿ ವರ್ಣಿಸಲ್ಪಡುವ ಸುರೇಂದ್ರನನ್ನು ಕಾದಂಬರಿಯ ಕಡೆಯಲ್ಲಿ ಬರುವ ಒಂದು ವಿಚಿತ್ರ ತಿರುವಿನ ಮೂಲಕ ಒಬ್ಬ ಅಬ್ರಾಹ್ಮಣ ತಂದೆಯ ಪಾಪದ ಸಂತಾನವೆಂದು ಸಿಧ್ಧಪಡಿಸುವುದಂತೂ ತೀರಾ ಅನಿರೀಕ್ಷಿತ. ಆಧುನಿಕ ನಗರವಾಸಿ ಯುವಜನರು ಮತ್ತವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪಲ್ಲಟಗಳನ್ನು ದಟ್ಟ ವಿವರಗಳ ಮೂಲಕ ಆಕರ್ಷಕವಾಗಿ, ಕುತೂಹಲಕರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗುವ ಕೃತಿಯು ಕಡೆಯಲ್ಲಿ ಪ್ರಸ್ತುತ ಕಾಲಘಟ್ಟದ ವೈದೃಶ್ಯಗಳ ಮುಖಾಮುಖಿಯ ಪ್ರಶ್ನೆಯನ್ನು ವೈಚಾರಿಕವಾಗಿ ಎದುರಿಸದೆ ಜಾತಿ, ಸಂಸ್ಕಾರ ಎಂಬ ಅವೇ ಹಳೇ ಸವಕಲು ವಿವರಣೆಗಳ ಮೊರೆ ಹೋಗಿರುವುದು ನಿರಾಸೆ ಮೂಡಿಸಿತು.

ಈಚೆಗೆ ಓದಿದ ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ 'ಮಾನವೀಯತೆ ಅಂತಾರಲ್ಲ - ಅದರ ಬಗ್ಯೆ' ಎಂಬ ಲೇಖನದಲ್ಲಿ ಓದಿದ ಸಾಲು ನೆನಪಾಗುತ್ತಿದೆ- "...ಜನ್ಮ, ಕರ್ಮ, ವರ್ಣ, ಜಾತಿಕಟ್ಟುಪಾಡು, ಸತ್ಯಕ್ಕೆ ಬಂದರೂ ಅದರೊಳಗೂ ಪಾರಮಾರ್ಥಿಕ ಸತ್ಯ, ಲೌಕಿಕ ಸತ್ಯ ಎಂದು ಸತ್ಯವನ್ನೂ ಇಬ್ಬಂದಿ ಮಾಡಿ ಒಡಲು ಪಡೆದ ಕೃತಿಗಳೇ ಇಲ್ಲಿ ಹೆಚ್ಚಾಗಿ ಸಮಾಜದ ಛಿದ್ರತೆಗೆ ಇವುಗಳ ಕಾಣಿಕೆಯೂ ಇದೆ."

'ಕರ್ಮ' ಕಾದಂಬರಿ ಇದಕ್ಕೆ ಹೊರತಾಗಬಹುದಿತ್ತು. ಅದರಲ್ಲೂ 'ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ' ಎಂಬ ಟೀಕೆಗೆ ಉತ್ತರ ರೂಪದಲ್ಲಿ ಕಾದಂಬರಿಯ ರಚನೆಗೆ ತೊಡಗಿದ ಈ ಪ್ರತಿಭಾವಂತ ಬರಹಗಾರ ಶ್ರಧ್ಧೆ, ಸಂಸ್ಕೃತಿಗಳ ವಿಚಾರವನ್ನು ಕಾದಂಬರಿಯ ಬಂಧದಲ್ಲೇ ಇನ್ನಷ್ಟು ವಿಚಾರಕ್ಕೆ ಹಚ್ಚಬಹುದಿತ್ತೇನೋ. "ಶ್ರದ್ಧಾ ಭಂಗವಾದರೆ ಸಂಸ್ಕೃತಿ ಉಳಿಯಲ್ಲ" ಎಂಬ ವೆಂಕಟೇಶ ಭಟ್ಟರ ಮಾತು ಮತ್ತು ಅದಕ್ಕೆ ಉತ್ತರವಾಗಿ "ಆಯಿತು, ಸಂಸ್ಕೃತಿ ಎಂದರೆ ಏನು ಎಂಬುದರ ಅಧ್ಯಯನ ಆಗಬೇಕು" ಎಂಬ ಅವರ ಮೊಮ್ಮಗ ಪುರುಷೋತ್ತಮನ ಮಾತು (ಪು. ೧೦೬-೧೦೭) ಇಂತಹದೊಂದು ಪ್ರಶ್ನೆಯ ವಿಶ್ಲೇಷಣೆಯ ಸುಳಿವು ಕಾಣಿಸುತ್ತದೆ. "ವೈದಿಕದ ಜತೆಗೇ ಜಾತ್ಯತೀತತೆ, ಸಮಾನತೆ, ಪ್ರಗತಿಪರತೆಗಳೂ ಶ್ರದ್ಧೆಯ ಭಾಗಗಳಾಗಬೇಕೆಂದು" ಪುರುಷೋತ್ತಮ ಹೇಳಬಹುದಿತ್ತೇನೋ. ಆತ ಹಾಗೇನಾದರೂ ಹೇಳಿದ್ದಲ್ಲಿ 'ಕರ್ಮ'ದಲ್ಲಿ 'ಸಂಸ್ಕೃತಿ' ಯ ವ್ಯಾಖ್ಯಾನ ಅರ್ಥಪೂರ್ಣವಾಗಿರುತ್ತಿತ್ತು.

No comments :