Sunday, June 29, 2014

ಅಮೃತ ಬಳ್ಳಿಯ ಕಷಾಯ

"ಅನಿಸುತಿದೆ ಯಾಕೋ ಇಂದು ... "

ಜನಪ್ರಿಯ ಕನ್ನಡ ಚಲನ ಚಿತ್ರ "ಮುಂಗಾರು ಮಳೆ" ಯ ಗೀತೆಯ ಈ ಸಾಲಿನ ಪರಿಚಯವಿರದವರು ಯಾರಿದ್ದಾರೆ. ಈ ಗೀತೆಯ ರಚನಕಾರರಾಗಿ ಒಮ್ಮೆಗೇ ಎಲ್ಲರ ಮನ್ನಣೆಗೆ ಪಾತ್ರರಾದವರು  ಜಯಂತ ಕಾಯ್ಕಿಣಿಯವರು. ಅದಕ್ಕೂ ಮೊದಲು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದಲೂ  ಕವಿಯಾಗಿ, ಕತೆಗಾರರಾಗಿ ಅವರು ಉತ್ಕೃಷ್ಟ ಸಾಹಿತ್ಯದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದರೂ ಯಾಕೋ ಹೆಚ್ಚು ಚರ್ಚೆಗೆ  ಒಳಗಾಗಿರಲಿಲ್ಲ. ನನಗಂತೂ ಅವರು ಮೊದಲು ಪರಿಚಯವಾದದ್ದು, ಇಷ್ಟವಾದದ್ದು ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕತೆಗಾರರಾಗಿಯೇ. ಜಯಂತರದ್ದೊಂದು ಸಣ್ಣ ಕತೆಗಳ ಸಂಕಲನ "ಅಮೃತ ಬಳ್ಳಿಯ ಕಷಾಯ"  ಕೃತಿಯನ್ನು ಮೊನ್ನೆ ಓದಿದೆ. ಅದು ಅವರು ತೊಂಬತ್ತರ ದಶಕದಲ್ಲಿ ಬರೆದ ಕತೆಗಳ ಸಂಗ್ರಹ. ಓದಿ ಮುಗಿಸಿದಾಗ ಈ ವಿಶಿಷ್ಟ ಕತೆಗಾರನ ಪ್ರತಿಭೆಯ ಬಗ್ಗೆ ಅಚ್ಚರಿಯೆನಿಸಿತು. ಅವರ ಕತೆಗಳ  ಪ್ರಪಂಚ ಮೊದಲಿಗೆ ಪರಿಚಯವಾದದ್ದರ ನೆನಪು ಮರುಕಳಿಸಿತು.

ಇದು ನನ್ನಂತಹ ಬಹಳ ಮಂದಿ ಕನ್ನಡಿಗರ ಅನುಭವವೂ  ಇರಬಹುದು. ಬಹಳ ವರ್ಷಗಳ ಹಿಂದೆ, ಆಗಿನ್ನೂ ಪುಸ್ತಕ, ಪತ್ರಿಕೆಗಳನ್ನು ಓದುವುದನ್ನು ಆರಂಭಿಸಿದ ದಿನಗಳು. ಮನೆಯಲ್ಲಿ ನಿಯಮಿತವಾಗಿ ತರಿಸುತ್ತಿದ್ದ ವಾರಪತ್ರಿಕೆಗಳೆಂದರೆ ಸುಧಾ ಮತ್ತು ಪ್ರಜಾಮತ. ಸುಧಾದಲ್ಲಿ ಸರಣಿಯ ರೂಪದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ  ಕಾರ್ಟೂನ್ ಸರಣಿಗಳು ನಮಗೆಲ್ಲ ಮುದ್ರಣ ಲೋಕದೊಂದಿಗಿನ ಮೊದಲ ಕೊಂಡಿಗಳು. ಅಲ್ಲಿಂದ ಆರಂಭಿಸಿ ನಂತರ ಮಕ್ಕಳ ಕತೆಗಳು, ಪದಬಂಧ, ಹೀಗೇ ಒಂದೊಂದಾಗಿ ನಮ್ಮ ಆಸಕ್ತಿಯ ವಸ್ತುಗಳು ವಿಸ್ತಾರವಾಗುತ್ತಿದ್ದವು. ಅಲ್ಲಿಂದ ಮುಂದೆ ಸಣ್ಣ ಕತೆಗಳು, ಧಾರಾವಾಹಿಗಳು ಪತ್ರಿಕೆಗಳಲ್ಲಿ ನಮ್ಮ ಓದಿನ ಭಾಗವಾದವು. ಪ್ರಕಟವಾಗುತ್ತಿದ್ದ ಸಣ್ಣ ಕತೆಗಳು, ಕಾದಂಬರಿ ಸರಣಿಗಳು ಜನಪ್ರಿಯ ಸಾಹಿತ್ಯದ ಮಾದರಿಯವು. ಇಂದಿನ ಟಿವಿ ಸೀರಿಯಲ್ಲುಗಳಂತೆ ಹೆಚ್ಚಾಗಿ ಕೌಟುಂಬಿಕ ವಸ್ತುಗಳನ್ನು ಆಧರಿಸಿದಂತವು ಮತ್ತು ಕೆಲವೊಮ್ಮೆ ಈ  ಕಾದಂಬರಿ ಸರಣಿಗಳು ರಸವೆಲ್ಲ ಮುಗಿದ ಮೇಲೂ ಜಗಿಯುತ್ತಲೇ ಹೋಗುವ ಚೂಯಿಂಗ್ ಗಮ್ಮಿನಂತೆ ನಿರಂತರ ಸಶೇಷವಾಗಿ ಇರುತ್ತಿದ್ದವು. 

ಇದೇ ಕಾಲಘಟ್ಟದಲ್ಲಿ ಉದಯವಾಣಿ ಸಮೂಹದಿಂದ ತುಷಾರ ಮಾಸ ಪತ್ರಿಕೆ ಪ್ರಕಟವಾಗಲು ಶುರುವಾಯಿತು. ತುಷಾರದ ಬರಹಗಳು ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿದ್ದ ನಮ್ಮ ಅರಿವಿಗೆ ನಿಲುಕುತ್ತಿದ್ದದ್ದು ಅಷ್ಟಕ್ಕಷ್ಟೇ. ಆದರೂ ಗಂಭೀರವಾದದ್ದೇನೋ ಇದರಲ್ಲಿದೆಯೆಂಬ ಕುತೂಹಲ ತುಷಾರ ಪತ್ರಿಕೆಯತ್ತ ಆಕರ್ಷಿಸುತ್ತಿತ್ತು. ತುಷಾರದಲ್ಲಿ ಪ್ರಕಟವಾಗುತ್ತಿದ್ದ ಸಣ್ಣಕತೆಗಳು ನಿಜಕ್ಕೂ ವಿಶಿಷ್ಟವಾಗಿರುತ್ತಿದ್ದವು. ಈ ಕತೆಗಳು ರಮ್ಯ ರಮಣೀಯವಾಗೇನೂ ಇರದಿರುತ್ತಿದ್ದರೂ ಅದೇಕೋ ಮನಸ್ಸಿಗೆ ತಟ್ಟುತ್ತಿದ್ದವು. ಆ ಕಾಲದಲ್ಲಿ ಓದಿದ ಈಶ್ವರಯ್ಯ ಅವರು ಬರೆದಿದ್ದ "ಓಡಿ ಹೋದವನು" ಎಂಬ ಕತೆ ಇಂದಿಗೂ ಅಸ್ಪಷ್ಟವಾಗಿ ನೆನಪಿದೆ. ಇಷ್ಟವಾಗುತ್ತಿದ್ದ ತುಷಾರದ ಇನ್ನೊಬ್ಬ ಲೇಖಕರೆಂದರೆ ಎಮ್. ವ್ಯಾಸ ಅವರು. ಅವರ ಕತೆಗಳ ಶೀರ್ಷಿಕೆಗಳು ಯಾವಾಗಲೂ ಎರಡಕ್ಷರದಲ್ಲಿರುತ್ತಿದ್ದದ್ದು ವಿಶೇಷ. ಅವರ ಬರವಣಿಗೆಯ ಶೈಲಿಯೂ ಬಹಳ ವಿಶಿಷ್ಟ.

ಇದೇ ಕಾಲಘಟ್ಟದಲ್ಲಿ ತುಷಾರ ಪತ್ರಿಕೆಯಲ್ಲಿ ಯುವ ಕತೆಗಾರರಾಗಿ  ಜಯಂತ ಕಾಯ್ಕಿಣಿಯವರೂ ಪರಿಚಯಗೊಂಡರು. ಅವರ ಮೊದಲ ಕತೆಗಳು ಅಷ್ಟಾಗಿ ನೆನಪಿಲ್ಲವಾದರೂ ನೆನಪಿರುವ ಒಂದು ವಿಚಾರವೆಂದರೆ ಅವರ ಕತೆಗಳು ಯಾವಾಗಲೂ  ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ಜೀವನ ವಿವರಗಳ ಕುರಿತೇ ಇರುತ್ತಿದ್ದವು. ಅಂದಿನ ದಿನಗಳಲ್ಲಿ ಸುಧಾ, ಪ್ರಜಾಮತದಂತಹ ಪತ್ರಿಕೆಗಳ ಕತೆಗಳ ಕಾದಂಬರಿಗಳ ನಾಯಕ ನಾಯಕಿಯರು ಸಮಾಜದ ಉಚ್ಛ ಸ್ತರದವರೇ ಆಗಿರುತ್ತಿದ್ದರು. ಈ ತುಷಾರದ ಕತೆಗಳ ಅದರಲ್ಲೂ ಜಯಂತರ ಕತೆಗಳ ಪಾತ್ರಗಳು ಮಾತ್ರ ಎಲ್ಲ ತಳುಕು ಬಳುಕು, ಹಣ ಅಂತಸ್ತಿನ ಹೊರಗೇ ಇರುತ್ತಿದ್ದವು. ನನ್ನ ಬಹಳ ಹಿಂದಿನ ಓದಿನ ಅಸ್ಪಷ್ಟ ನೆನಪುಗಳ ಆಧಾರದಲ್ಲೇ ಹೇಳಬಹುದಾದರೆ ವ್ಯಾಸರ ಕತೆಗಳಲ್ಲಿ ವ್ಯಕ್ತಿಯ ಆಳದ ಮನೋ ಪ್ರಪಂಚದ ಶೋಧ ಹೆಚ್ಚಾಗಿ ಇರುತ್ತಿತ್ತು. ಅದರಿಂದಲೇ ಶೀರ್ಷಿಕೆಗಳೂ ಹೆಚ್ಚಾಗಿ ವ್ಯಕ್ತಿ ವಿಶೇಷಣಗಳಾಗಿ ಇರುತ್ತಿದ್ದವು. ಕರ್ತ, ಗ್ರಸ್ತ, ವ್ಯಸ್ತ ಹೀಗೇ. ವ್ಯಾಸರ ಕತೆಗಳಲ್ಲಿ ದಕ್ಷಿಣ ಕನ್ನಡ ಪ್ರಾಂತ್ಯದ ಹಿನ್ನೆಲೆಯಿದ್ದರೆ  ಜಯಂತರ ಮೊದಲ ಕತೆಗಳೆಲ್ಲ ಉತ್ತರ ಕನ್ನಡ ಪ್ರಾಂತ್ಯದ ಹಿನ್ನೆಲೆಯವು.

ತುಷಾರದ ಓದಿನಿಂದ ಆರಂಭಿಸಿ ನಂತರದ ವರ್ಷಗಳಲ್ಲಿ ಹಲವು ಪತ್ರಿಕೆಗಳು, ವಿಶೇಷಾಂಕಗಳಲ್ಲಿ ಪ್ರಕಟವಾಗುತ್ತಿದ್ದ ಜಯಂತರ ಹಲವಾರು ಕತೆಗಳನ್ನು ಓದಿದ್ದೇನೆ. ಕಡೆಯಲ್ಲಿ ಯಾವುದೋ ಅನಿರೀಕ್ಷಿತ ತಿರುವೋ ಅಥವಾ ಚಕಿತಗೊಳಿಸುವ  ಘಟನೆಯೋ ಇನ್ನೇನನ್ನೋ ಬಳಸಿ ಆಕರ್ಷಿಸುವಂತಹ ಕತೆಗಳ ಮಾದರಿ ಜಯಂತರದ್ದು ಮೊದಲಿಂದ ಆಗಿರುತ್ತಿರಲಿಲ್ಲ. ಆದರೂ ಈ ಕತೆಗಳನ್ನು ಓದಬೇಕೆಂದು ನನಗೆ ಅನಿಸುತ್ತಿದ್ದದ್ದು ಯಾಕೆ ಎಂದು ಇಷ್ಟೊಂದು ವರ್ಷಗಳ ನಂತರ ಯೋಚಿಸಿದರೆ ಮುಖ್ಯವಾಗಿ ನೆನಪಾಗುವುದು ಅವರು ತಮ್ಮ ಎಲ್ಲ ಕತೆಗಳಲ್ಲೂ ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ನಮ್ಮದೇ ಸುತ್ತಲಿನ ಜೀವನದ ತುಣುಕು ಚಿತ್ರಗಳನ್ನು ಕಟ್ಟಿ ಕೊಡುವ ವಿಶಿಷ್ಟ ಶೈಲಿ.

ಇದೀಗ "ಅಮೃತ ಬಳ್ಳಿಯ ಕಷಾಯ" ಸಂಕಲನವನ್ನು ಓದುವಾಗ ಮತ್ತೊಮ್ಮೆ ಈ ಕತೆಗಾರನ ಮಾಂತ್ರಿಕ ಸ್ಪರ್ಶದ ಬಗೆಗೆ ಅಚ್ಚರಿಗೊಂಡಿದ್ದೇನೆ. ಸರಳವಾದ ಗದ್ಯದಲ್ಲಿ, ಆಡುಭಾಷೆಯ ನುಡಿಕಟ್ಟುಗಳಲ್ಲಿ, ಬೆರಗುಗೊಳಿಸುವಷ್ಟು ಸಮಂಜಸವಾದ ರೂಪಕಗಳಲ್ಲಿ ಅವರ ಕತೆಗಳು ಸೃಷ್ಟಿಯಾಗುತ್ತವೆ. ಏರಿಳಿತ, ತಿರುವು ಕಂದರಗಳಿಲ್ಲದೆ ಸಾಮಾನ್ಯ ಸನ್ನಿವೇಶಗಳ ಮೂಲಕ ಪಾತ್ರಗಳು ಶಕ್ತವಾಗಿ ರೂಪುಗೊಳ್ಳುತ್ತವೆ. ಈ ಸಂಕಲನದ ಮೊದಲ ಕತೆ "ಹಾಲಿನ ಮೀಸೆ"ಯಲ್ಲಿ ಬರುವ ಮನೆಗೆಲಸದ ಹುಡುಗ ಪುಂಡು (ಪುಂಡಲೀಕ ) ನಿಂದ ಹಿಡಿದು ಕೊನೆಯ ಕತೆ "ಅಮೃತ ಬಳ್ಳಿಯ ಕಷಾಯ"ದ ಫೋಟೋ ಫ್ರೇಮ್ ಅಂಗಡಿ ಗಂಗಾಧರನವರೆಗೂ ಪ್ರತಿ ಕತೆಯ ಪಾತ್ರಗಳೂ ನೆನಪಿನಲ್ಲುಳಿಯುವಂತವು. ಹಾಗೆಯೇ ಮೊದಲ ಕತೆಯಿಂದಲೇ ಗಮನಕ್ಕೆ ಬರುವ ಇನ್ನೊಂದು ಅಂಶವೆಂದರೆ ಚಿಕ್ಕ ಚಿಕ್ಕ ವಿವರಗಳ ಮೂಲಕ ಕತೆಯ ವಸ್ತು, ಆವರಣಗಳನ್ನು ಸಮರ್ಥವಾಗಿ ಕಟ್ಟುವ ಪರಿ. ಹೌದಲ್ಲ, ಇಂತಹದ್ದೆಲ್ಲ ನಾವು ಗಮನಿಸುವುದೇ ಇಲ್ಲವಲ್ಲ ಎಂದನಿಸುವಂತೆ ವಾಸ್ತವವನ್ನು ಬಿಡಿಸಿಡುವ ಅವರ ಕಲೆಗಾರಿಕೆ.

"ಮಿಥುನ್ ನಂಬರ್ ಟೂ", "ಚಂದಿರನೇತಕೆ ಓಡುವನಮ್ಮ" ಮುಂತಾದ ಕತೆಗಳು  ಬಡತನ, ಬವಣೆ, ಹತಾಶೆಗಳಿಗೆ  ತೆರೆದುಕೊಂಡರೂ, ಅಂತಹ ಸನ್ನಿವೇಶಗಳಲ್ಲೂ, ಅಂತಹವರ ಬದುಕಿನಲ್ಲೂ ಕಾಣಬಹುದಾದ ಜೀವನ್ಮುಖಿ ಧೋರಣೆ, ಉತ್ಸಾಹ, ಆಶಾವಾದ ಇವುಗಳನ್ನು  ಬಿಂಬಿಸುತ್ತವೆ.

"ತನ್ಮಯಿಯ ಸೂಟಿ" ಕತೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದೂ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಡಿಗೆ, ಮಗುವಿನ ಪಾಲನೆ ಹೀಗೆ ಒಂದು ರೂಢಿಗತ ಜೀವನ ಶೈಲಿಯನ್ನು ಅನಿವಾರ್ಯವಾಗಿ ಒಪ್ಪಿಕೊಂಡಿರುವ ಕುಶೀಕಾಕಿಯ ಪಾತ್ರವಿದೆ. ಸೂಟಿಗೆ ಮುಂಬಯಿಯಿಂದ ಧಾರವಾಡಕ್ಕೆ ಬರುವ ತನ್ಮಯಿಯ ಕಾರಣದಿಂದ ತನ್ನ ಯೌವನದ ದಿನಗಳ ಉಲ್ಲಾಸವನ್ನು ನೆನಪು ಮಾಡಿಕೊಳ್ಳುವ ಕುಶೀಕಾಕಿ ತನ್ಮಯಿಗೆ ಬೈಸಿಕಲ್ ಕಲಿಸಿಕೊಡಲು ಮುಂದಾಗುವ ಸನ್ನಿವೇಶವಿದೆ. ಇದರ ನಡುವೆ ಸ್ವಲ್ಪ ಬಿಗು ಸ್ವಭಾವದ, ಗಂಡಿನ ದರ್ಪದ ಕಾಕಾನ ಪಾತ್ರ.

ಇನ್ನು "ಸಂತೆಯ ದಿನ" ಕತೆಯ ಪ್ಯಾರೇಲಾಲ, "ಅಮೃತ ಬಳ್ಳಿಯ ಕಷಾಯ"ದ ಮಾಯಿ ಇವರು ತಮ್ಮ ಅಂತಃಕರಣದಿಂದ ಸೆಳೆಯುತ್ತಾರೆ. ಯಾರೋ ಸಂಬಂಧವೇ ಪಡದವರು ಆಸ್ಪತ್ರೆ ಸೇರಿದಾಗ ಅವರ ಶುಶ್ರೂಷೆಗಾಗಿ ಓಡಾಡುತ್ತಾ, ಜೀವನದ ಇನ್ನೊಂದು ಮಾದರಿಯನ್ನು  ತೆರೆದಿಡುತ್ತಾರೆ. ಕೇಕೂ ಶುಕ್ಲಾ ತನ್ನ ಜರಾಕ್ಸ್ ಅಂಗಡಿಯ ಒಂದು ಮೂಲೆಯಲ್ಲಿ ಹಣ್ಣಿನಂಗಡಿ ನಡೆಸುವ ಸ್ನೇಹಿತ ಪ್ಯಾರೆಲಾಲನಿಗೆ ಸ್ವಂತದ ಖೋಲಿ ಮಾಡಿಕೊಳ್ಳುವಂತೆ ನೀಡುವ ಸಲಹೆಗೆ ಪ್ಯಾರೆಲಾಲನ ಉತ್ತರ ಅವನ ಬದುಕಿನ ಫಿಲಾಸಫಿಯನ್ನು ಹೇಗೆ ತೋರಿಸುತ್ತದೆ ನೋಡಿ- "ಈ ಜಗತ್ತೇ ನನ್ನದು ಅನ್ನುವ ಅಲೆಮಾರಿಗೆ ಹತ್ತಾರು ಸ್ಕ್ವೇರು ಫೂಟು ನೆಲವನ್ನು ಮಾತ್ರ ತನ್ನ ಮಾಲಕೀ ಹಕ್ಕು ಅನ್ನುವದು ಹೇಗೆ ಶಕ್ಯವಾದೀತು. ಈ ಜಗತ್ತಿಗೇ ಬಾಡಿಗೆಗೆ ಬಂದ ಜೀವ ಜಗತ್ತಿನ ತುಣುಕೊಂದನ್ನು ಕುತ್ತಿಗೆಗೆ ಕಟ್ಟಿಕೊಂಡು ಕಾಗದ ಪತ್ರ ಮಾಡಿ ಕುಣಿಯುವುದು ಎಂಥ ತಮಾಷೆ. ಛೇ , ಬಾಡಿಗೆ ಮನೆ, ಬಾಡಿಗೆ ವಿಳಾಸಗಳಲ್ಲಿ ಒಂದು ಬಗೆಯ ಹಾಯೆನಿಸುವ ಗುಣ ಇದೆ, ಈ ರೇಡಿಯೋದಂತೆ. ಎಷ್ಟೊಂದು ಹಾಡುಗಳು ಆಕಾಶದಿಂದ ಹಾರಿ ಬಂದು ಇದರ ಬಾಡಿಗೆ ರೆಂಬೆಯಲ್ಲಿ ಕೂತು ಹೋಗುತ್ತವೆ"

"ಈ ಜಗತ್ತೇ ನನ್ನದು" ಎಂಬ ಭಾವನೆ ಈ ಕತೆಗಾರರದ್ದೂ ಇರಬೇಕು. ಆದ್ದರಿಂದಲೇ ಒಂದು  ಸೂಕ್ಷ್ಮ ವಿನೋದದ, ಆಪ್ತವಾದ ದನಿಯಲ್ಲಿ ಎಲ್ಲ ರೀತಿಯ ಜನರ ನಿತ್ಯದ ಗೋಳುಗಳ ಹೋರಾಟದ ಚಿತ್ರಣವನ್ನು ನೀಡಲೂ, ನಾವು ಕಂಡೂ ಕಾಣದಂತೆ ಉಳಿಯುವ  ಇನ್ನೊಂದು ಮಗ್ಗುಲಿನ ಪರಿಚಯ ಮಾಡಿಸಲೂ ಅವರಿಂದ ಸಾಧ್ಯವಾಗುತ್ತದೆ.

ಮನುಷ್ಯರಾಗಿ ಇರುವುದು ಎಂದರೆ ಏನು ಎಂಬ ಪ್ರಶ್ನೆ ಬೇರೆ ಬೇರೆ ಉತ್ತರಗಳನ್ನು ಪಡೆಯುವ ಸಾಧ್ಯತೆಯಿರುತ್ತದೆ. ಕೆಲವೇ  ಪುಟಗಳ ಕತೆಯಲ್ಲಿ ಜಯಂತ ಕಾಯ್ಕಿಣಿಯವರು ಒಂದು ಪುಟ್ಟ ಲೋಕವನ್ನೇ ಅಥವಾ ಲೋಕದ ಒಂದು ಪುಟ್ಟ ಚಿತ್ರವನ್ನೇ ತೆರೆದಿಡುತ್ತಾ ಅದರಲ್ಲಿ ಪಾತ್ರಗಳ ಭಾವನೆಗಳ, ಪ್ರೇರಣೆಗಳ, ಕಾತರಗಳ ಪರಿಚಯ ಮಾಡಿಸುವ ರೀತಿ ಇಷ್ಟವಾಗುತ್ತದೆ. ಜಯಂತರ ಪ್ಯಾರೆಲಾಲನಂತೆಯೇ ಈ ಹಿಂದೆ ಲಂಕೇಶರ ನೀಲು ಸಹ ಕೋಟ್ಯಂತರ ಜನರ ಆಳದ ಅಪೇಕ್ಷೆಗಳ ಬಗ್ಗೆ ಹೇಳಿದ್ದು ನೆನಪಿಗೆ ಬರುತ್ತಿದೆ-

ಸುಖಕ್ಕಾಗಿ ಕಾತರಿಸುವ ಕೋಟ್ಯಂತರ ಜನಕ್ಕೆ
ಹಣ ಬೇಕು, ನೆಲ ಬೇಕು
ಕೆಲವರಿಗೆ ಪ್ರೀತಿ
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.
-ನೀಲು

No comments :