Saturday, July 29, 2017

ಆತ್ಮ ನಿರೀಕ್ಷಣೆಯ ಸಮಯ

ಮೊನ್ನೆ ತಾನೇ ಹುದ್ದೆಯಿಂದ ನಿವೃತ್ತರಾದ ನಮ್ಮ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಒಂದೆರಡು ವಿಚಾರಗಳು ದೇಶದ ನಾಗರಿಕರನ್ನು ಆತ್ಮ ನಿರೀಕ್ಷಣೆಗೆ ಹಚ್ಚುವಂತಿದ್ದವು. ಅವರ ಮಾತುಗಳು ಹೀಗೆ ಸಾಗಿದ್ದವು-

"ಭಾರತದ ಆತ್ಮ ಇರುವುದೇ ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ. ಭಾರತವು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದರಲ್ಲಿ   ಹಲವು ವಿಚಾರಗಳ ಇತಿಹಾಸ, ತತ್ತ್ವಶಾಸ್ತ್ರ, ಬೌದ್ಧಿಕತೆ, ಕೈಗಾರಿಕಾ ಕುಶಲಕಲೆ, ನವೋನ್ವೇಷಣೆ ಮತ್ತು ಅನುಭವಗಳು ಸಮ್ಮಿಳಿತವಾಗಿವೆ. ನಮ್ಮ ಸಮಾಜದ ಬಹುತ್ವ ನಿರ್ಮಾಣವಾಗಿರುವುದು  ಶತಮಾನಗಳ ಕಾಲದ ಹಲವಾರು ವಿಚಾರಗಳ ಸಮ್ಮಿತಗೊಂಡಿರುವದರಿಂದ. ಸಂಸ್ಕೃತಿ, ಮತ ಮತ್ತು ಭಾಷೆಗಳ ವೈವಿಧ್ಯತೆಗಳೇ ಭಾರತವನ್ನು ವಿಶೇಷವಾಗಿಸುವ ಅಂಶಗಳು. ಶತಮಾನಗಳ ಕಾಲ ಇದು ನಮ್ಮ ಸಮಷ್ಟಿ ಪ್ರಜ್ಞೆಯ ಭಾಗವಾಗಿರುವಂತಹದ್ದು. ನಮ್ಮ ಸಾರ್ವಜನಿಕ ಸಂವಾದದಲ್ಲಿ ಹಲವಾರು ಭಿನ್ನ ಎಳೆಗಳಿವೆ. ನಾವು ವಾದಿಸಬಹುದು. ಒಪ್ಪಬಹುದು, ಒಪ್ಪದೇ ಇರಬಹುದು. ಆದರೆ ಈ ವಿವಿಧ ಅಭಿಪ್ರಾಯಗಳ ಇರುವಿಕೆಯನ್ನು ನಾವು ಅಲ್ಲಗಳೆಯಲಾಗದು. ಹಾಗೇನಾದರೂ ಮಾಡಿದರೆ ನಮ್ಮ ಆಲೋಚನಾ ರೀತಿಯ ಒಂದು ಮೂಲಭೂತ ಗುಣವೇ ಕರಗಿಹೋಗುವುದು."

"ಕರುಣೆ ಮತ್ತು ಅನುಕಂಪ ನಮ್ಮ ನಾಗರಿಕತೆಯ ನಿಜವಾದ ಅಡಿಗಲ್ಲು. ಆದರೆ ನಿತ್ಯವೂ ನಮ್ಮ ಸುತ್ತ ಮುತ್ತ ಹಿಂಸೆ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ.  ಈ ಹಿಂಸೆಯ ಕೇಂದ್ರದಲ್ಲಿರುವುದು ನಮ್ಮಲ್ಲಿರುವ ಅಂಧಃಕಾರ, ಭಯ ಮತ್ತು ಅಪನಂಬಿಕೆ. ನಾವು ನಮ್ಮ ಸಾರ್ವಜನಿಕ ವಿಚಾರ ವಿನಿಮಯವನ್ನು ಎಲ್ಲ ಬಗೆಯ ಹಿಂಸೆಯಿಂದ ಮುಕ್ತಗೊಳಿಸಬೇಕು. ಅಹಿಂಸಾತ್ಮಕ ಸಮಾಜದಲ್ಲಿ ಮಾತ್ರ ಎಲ್ಲ ವರ್ಗದ ಜನರ ಒಳಗೊಳ್ಳುವಿಕೆ ಸಾಧ್ಯ. ಅದರಲ್ಲೂ ಅಂಚಿನಲ್ಲಿರುವವರನ್ನು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿರುವವರನ್ನು ಒಳಗೊಳ್ಳಬೇಕು. ಅಹಿಂಸೆಯ ಶಕ್ತಿಯನ್ನು ಮರಳಿ ಸ್ಥಾಪಿಸುವ ಮೂಲಕವೇ ಅನುಕಂಪ ಮತ್ತು ಕಾಳಜಿಯನ್ನುಳ್ಳ ಸಮಾಜವನ್ನು ಕಟ್ಟಬೇಕು."

ಮಾಜಿ ರಾಷ್ಟ್ರಪತಿಯವರ ಈ ಮಾತುಗಳನ್ನು ಕೇಳುವಾಗ ದೇಶದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಬಿ ಆರ್. ಅಂಬೇಡ್ಕರ್ ಅವರ  ಭಾಷಣವೊಂದು ನೆನಪಿಗೆ ಬಂತು.

೧೯೪೮ರಲ್ಲಿ ಸಂವಿಧಾನ ರಚನಾ ಸಭೆಯ ಎದುರು ನೂತನ ಸಂವಿಧಾನದ ಪ್ರತಿಯನ್ನು ಮಂಡಿಸಿ ಮಾತನಾಡುತ್ತ ಡಾ. ಬಿ ಆರ್. ಅಂಬೇಡ್ಕರ್ ಅವರು ಮುನ್ನೆಚ್ಚರಿಕೆ ರೂಪದಲ್ಲಿ ಹೇಳಿದ ಮಾತುಗಳಿವು -

"ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಆಸಕ್ತಿ ಇರುವ ಎಲ್ಲರಿಗೆ ಜಾನ್ ಸ್ಟುವರ್ಟ್ ಮಿಲ್ ನೀಡಿರುವ ಎಚ್ಚರಿಕೆ ನೆನಪಿನಲ್ಲಿರಬೇಕು. ಅದೇನೆಂದರೆ- ಎಷ್ಟೇ ಶ್ರೇಷ್ಟ ವ್ಯಕ್ತಿಯಾಗಿದ್ದರೂ ನಮ್ಮ ಸ್ವಾತಂತ್ರ್ಯವನ್ನು  ಆ ವ್ಯಕ್ತಿಯ ಪಾದಗಳ ಮುಂದೊಯ್ದು  ಇಡಬಾರದು, ಅಥವಾ ದೇಶದಲ್ಲಿ ಕಟ್ಟಿ ಬೆಳೆಸಿರುವ ಸಂಸ್ಥೆಗಳ ರೂಪವನ್ನೇ ಬದಲಿಸುವ ಶಕ್ತಿಯನ್ನು ಅವರಿಗೆ ಕೊಡಬಾರದು. ದೇಶಕ್ಕೆ ಸೇವೆ ಸಲ್ಲಿಸಿರುವವರಿಗೆ ಕೃತಜ್ಞತೆ ತೋರುವುದು ತಪ್ಪಲ್ಲವಾದರೂ ಕೃತಜ್ಞತೆಗೆ ಮಿತಿಗಳಿವೆ. ಈ ಎಚ್ಚರಿಕೆ ಬೇರಾವುದೇ ದೇಶಕ್ಕಿಂತ ಹೆಚ್ಚು ಅಗತ್ಯವಾಗಿರುವುದು ಭಾರತಕ್ಕೆ. ಏಕೆಂದರೆ ಬೇರಾವುದೇ ದೇಶಕ್ಕಿಂತ ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ನಡೆಯುತ್ತದೆ. ಧರ್ಮದ ವಿಚಾರದಲ್ಲಿ ಭಕ್ತಿಯು ಮುಕ್ತಿಗೆ ಮಾರ್ಗವಾಗಿರಬಹುದು. ಆದರೆ ರಾಜಕಾರಣದಲ್ಲಿ  ಭಕ್ತಿಯು ದಮನಕ್ಕೆ ಮತ್ತು ಸರ್ವಾಧಿಕಾರಕ್ಕೆ ದಾರಿಯಾಗುವುದು ಖಂಡಿತ. "

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಅಂದಿನ ನಮ್ಮ ರಾಷ್ಟ್ರ ನಾಯಕರು ಸ್ವತಂತ್ರ ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸಹಬಾಳ್ವೆ, ಸ್ವಾವಲಂಬನೆ, ಸ್ವಾಭಿಮಾನಗಳು ಮುಖ್ಯ ಗುಣಗಳಾಗಬೇಕೆಂದು ಬಯಸಿದ್ದರು.

ಜವಾಹರಲಾಲ್ ನೆಹರೂ  ಧರ್ಮಗಳು ಹೇಗೆ ಮನಸ್ಸುಗಳನ್ನು ಬಂಧನದಲ್ಲಿಡಬಹುದೆಂಬ ಬಗ್ಗೆ ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆಯುತ್ತಾರೆ-

"ಸದಾ ಹಿಮ್ಮ್ಮುಖವಾಗಿ ನೋಡುತ್ತಾ, ತಮ್ಮಿಂದ ಕಳಚಿಹೋಗುತ್ತಿರುವುದನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುವ ಹಿಂದೂಗಳು ಮತ್ತು ಮುಸ್ಲಿಮರು ಶೋಚನೀಯವಾಗಿ ಕಾಣುತ್ತಾರೆ. ಹಿಂದಿನದೆಲ್ಲವನ್ನೂ ತಿರಸ್ಕರಿಸುವುದಾಗಲಿ ಅವಹೇಳನ ಮಾಡುವುದಾಗಲಿ ನನ್ನ ಇಚ್ಛೆಯಲ್ಲ. ಏಕೆಂದರೆ ಅತ್ಯಂತ ಸುಂದರವಾದದ್ದೂ  ನಮ್ಮ ಗತಕಾಲದಲ್ಲಿ ಇದೆ. ಅದು  ಭವಿಷ್ಯದಲ್ಲೂ ಉಳಿಯುತ್ತದೆ. ಆದರೆ ಈ ಜನರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಸುಂದರವಾದದ್ದನ್ನಲ್ಲ.  ಬದಲಿಗೆ, ಅನುಪಯುಕ್ತವಾದದ್ದು. ಮತ್ತು ಬಹಳಷ್ಟು ಸಲ ಹಾನಿಕಾರವಾದದ್ದೂ. "

ಹಿಂದೂ ರಾಷ್ಟ್ರವಾದಿ ನಾಯಕರುಗಳಿಗೆ ಧರ್ಮಕ್ಕಿಂತ ಮಿಗಿಲಾದ ಅದರ್ಶಗಳೇ ಕಾಣಲಿಲ್ಲ. ಧರ್ಮವನ್ನು ರಾಜಕೀಯದಿಂದ ಹೊರಗೆ ಇಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಶ್ಯಕ. ಧರ್ಮದ ಹೆಸರಲ್ಲಿ ಧ್ರುವೀಕರಣಗೊಳಿಸದೆ ಕೇವಲ ಕ್ಷಮತೆ, ಚಾರಿತ್ರ್ಯ, ಸಾಧನೆಗಳ ಬಲದಲ್ಲಿ ಗೆಲ್ಲುವ ವಿಶ್ವಾಸ ನಮ್ಮ ಮಹಾನ್ ನಾಯಕರುಗಳಿಗಿಲ್ಲ. ಇದೆಲ್ಲ ಬಗೆಹರಿಯುವ ಸೂಚನೆಗಳೇ ಕಾಣುತ್ತಿಲ್ಲ.

ವಿವಿಧ ಬಗೆಯ ಧಾರ್ಮಿಕ ಸಂಘಟನೆಗಳು ನೀಡುವ ಅಘೋಷಿತ ಕಾನೂನು ಬಾಹಿರ ಅಧಿಕಾರ ಇವು  ಕೆಲವರಿಗೆ ಆಕರ್ಷಣೆಯಾಗಿವೆ. ಕೆಲವು ಕಡೆ ನಿರುದ್ಯೋಗಿಗಳು, ಅಂಚಿನಲ್ಲಿರುವವರು, ಎಲ್ಲರೊಂದಿಗೆ ಒಂದಾಗಲಾಗದೇ ಒಂದು ಬಗೆಯ ಪರಕೀಯ ಭಾವನೆಯಲ್ಲಿ ನರಳುವವರು, ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ರಾಜಕೀಯ ಗುಂಪುಗಳಲ್ಲಿ ಸೇರುವುದು ಕಾಣಬರುತ್ತಿದೆ. ಗಲಭೆ, ದೊಂಬಿ, ಗುಂಪು ದಾಳಿ ಇಂತವನ್ನೆಲ್ಲ ನಡೆಸುವವರು ಇವರೇ.

ಇನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಪರಿಗಣಿಸಲ್ಪಡುವ ಮಾಧ್ಯಮ ಕ್ಷೇತ್ರ ಅದರಲ್ಲೂ ಮುಖ್ಯವಾಗಿ ಟೆಲಿವಿಜನ್ ಮಾಧ್ಯಮವು  ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ  ಆಳುವ ಪಕ್ಷದ ಗುಣಗಾನದಲ್ಲೇ  ತೊಡಗುತ್ತಿರುವ ಬೆಳವಣಿಗೆ  ಆರೋಗ್ಯಕರವಾದದ್ದಲ್ಲ. ಜಾರ್ಜ್ ಆರ್ವೆಲ್ ನ 'ಅನಿಮಲ್ ಫಾರ್ಮ್'ನಲ್ಲಿ ಬಂಡಾಯಕ್ಕೆ ಸಿದ್ದವಾದ ಪ್ರಾಣಿಗಳೆಲ್ಲ ಸೇರಿ ಫಾರಂನ ಯಜಮಾನರ ವಿರುದ್ಧ ಕೂಗಲು ಹುಟ್ಟು ಹಾಕುವ ಸ್ಲೋಗನ್ "ಫೋರ್ ಲೆಗ್ಸ್ ಗುಡ್ ಟೂ ಲೆಗ್ಸ್ ಬ್ಯಾಡ್"ನಂತೆ ಇಂದಿನ ಚರ್ಚೆಗಳಲ್ಲೂ ಅಷ್ಟೇ ಸಿದ್ದ ಸ್ಲೋಗನ್ ಗಳದ್ದೇ ರಾಜ್ಯ. 

ಗುಂಪು ಕಟ್ಟಿಕೊಂಡು ಅಮಾಯಕರ ಹತ್ಯೆ ಮಾಡುತ್ತಿರುವವರನ್ನು, ಅವರ ಬೆನ್ನಿಗೆ ನಿಲ್ಲುವವರನ್ನು ನೋಡುತ್ತಿರುವ ಈ ದಿನಗಳಲ್ಲಿ  ಹೌದು 'ಟೂ ಲೆಗ್ಸ್ ಬ್ಯಾಡ್'.

ಸಾಮಾಜಿಕ  ಮಾಧ್ಯಮಗಳು ಬಂದ  ಮೇಲಂತೂ ನಾಗರಿಕ ಸಂವಾದವೇ ಮರೆಯಾಗುತ್ತಿದೆ. ಸುಳ್ಳುಸುದ್ದಿಗಳನ್ನು ಹರಡಲು  ಇಂತಹ ಮಾಧ್ಯಮಗಳ ಬಳಕೆಯಾಗುತ್ತಿದೆ.  ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ ಪೂರ್ವಾಗ್ರಹಗಳಿಲ್ಲದೆ, ಹೊಸ ದೃಷ್ಟಿಯಿಂದ ವಿಚಾರ ಮಾಡುವ ಸಾಧ್ಯತೆಯಿದ್ದ ನಮ್ಮ ಹೊಸ ತಲೆಮಾರಿನವರು ಸಹ ನಮ್ಮ ರಾಜಕೀಯ, ಸಾಮಾಜಿಕ ಸಮಸ್ಯೆಗಳ ಹಿನ್ನೆಲೆ, ಜಟಿಲತೆಗಳನ್ನು ಅರಿಯುವ ಗೋಜಿಗೆ ಹೋಗದೆ  ರಾಜಕೀಯ ದಾಳಗಳಾಗುತ್ತಿರುವುದು. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯ ಅಭಿಮತವು ದಬ್ಬಾಳಿಕೆಗೆ ಬಳಸಲ್ಪಡಬಾರದೆಂಬ ಅರಿವು, ಮಾನವೀಯತೆ, ನ್ಯಾಯವಂತಿಕೆ ಇವೆಲ್ಲವನ್ನೂ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ.

ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಯವಾದ ಸೂಚನೆ  ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಖಚಿತ ಎಚ್ಚರಿಕೆ ಇವೆರಡನ್ನೂ ಗಂಭೀರವಾಗಿ  ಪರಿಗಣಿಸುವ  ಅಗತ್ಯ ಇಂದು ಖಂಡಿತವಾಗಿಯೂ ಇದೆ.

No comments :