Monday, September 18, 2023

ಸ್ಟ್ರೇನ್ಜ್ ಬರ್ಡನ್ಸ್ - ರಾಹುಲ್ ಗಾಂಧಿಯವರ ಪರಿಸ್ಥಿತಿ ಮತ್ತು ಅವರ ರಾಜಕೀಯ

ರಾಹುಲ್ ಗಾಂಧಿ ಕುರಿತಾದ 'Strange Burdens' (ಸ್ಟ್ರೇನ್ಜ್ ಬರ್ಡನ್ಸ್)  ಕೃತಿಯ ಬೆಂಗಳೂರು ಬಿಡುಗಡೆ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದ ವರದಿ ಇಂದಿನ ಪ್ರಜಾವಾಣಿಯಲ್ಲಿದೆ. 

ಈ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಮೊದಲಿಗೆ ಲೇಖಕ ಶ್ರೀನಿವಾಸರಾಜು ಅವರು ಪುಸ್ತಕದ ಕುರಿತು ತಮ್ಮ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಓದಿದರು.  ನಂತರ ಸಭೆಯ ವೇದಿಕೆಯಲ್ಲಿದ್ದ ಅತಿಥಿಗಳು ಪುಸ್ತಕದ ಬಗ್ಗೆ ಮಾತನಾಡಿದರು. ಚಿಂತಕ ಪ್ರೊ ಜಿ ಎನ್ ದೇವಿ, ಮನೋಶಾಸ್ತ್ರದ ಇತಿಹಾಸ ತಜ್ಞ ಸಂಜೀವ್ ಜೈನ್, ನಟಿ ಪದ್ಮಾವತಿ ರಾವ್ ಎಲ್ಲರೂ ಪುಸ್ತಕದಲ್ಲಿ ರಾಹುಲ್ ಗಾಂಧಿಯ ಬಗೆಗೆ ಪ್ರಸ್ತಾಪವಾಗಿರುವ ಗುಣಾತ್ಮಕ ಅಂಶಗಳ ಬಗೆಗೇ ಹೆಚ್ಚು ಮಾತನಾಡಿದರು.  ಲೇಖಕರೇ ಪುಸ್ತಕದ ಪರಿಚಯದ ಅಧ್ಯಾಯದಲ್ಲಿ ಹೇಳಿರುವಂತೆ ಇದು ಮೂಲಭೂತವಾಗಿ ರಾಹುಲ್ ಗಾಂಧಿಯವರ ಸಧ್ಯದ ಪರಿಸ್ಥಿತಿ ಮತ್ತು ರಾಜಕೀಯವಾಗಿ ಅವರ ಪ್ರಸ್ತುತತೆಯ ಕುರಿತ ಒಂದು ಶೋಧನೆ. ಒಂದು ಒಳನೋಟ.

ಆಂಗ್ಲಪ್ರೇಮಿ ಉದಾರವಾದಿಗಳು ಕಾಂಗ್ರೆಸ್ಸಿನ ಹೊಸ ಸಮರ್ಥಕರಾಗಿದ್ದು, ಇವರಾಗಲಿ ರಾಹುಲ್ ಗಾಂಧಿಯವರಾಗಲಿ ಸಾಂಸ್ಕೃತಿಕ ರಾಷ್ಟ್ರವಾದವನ್ನು ಅರ್ಥ ಮಾಡಿಕೊಳ್ಳಲು ಸೋಲುವುದರ ಬಗ್ಗೆ, ಹಾಗೂ ಜನರ ಭಾಷೆಯಲ್ಲಿ ಸಂವಾದಿಸದೆ ಪಶ್ಚಿಮದ ಪ್ರಜಾಪ್ರಭುತ್ವದ ಭಾಷೆಯನ್ನು ಬಳಸುವುದು ಭಾರತಕ್ಕೆ ಹೊಂದಾಣಿಕೆಯಾಗದಿರುವ ಬಗ್ಗೆ ಪ್ರಸ್ತಾಪವಿದೆ.

ರಾಜಕೀಯದಲ್ಲಿ ಆದರ್ಶವಾದ ಮತ್ತು ಸರಳತನ ಸಾಕಾಗುವುದಿಲ್ಲವೆನ್ನುವುದನ್ನು ಹೀಗೆ ವಿವರಿಸುತ್ತಾರೆ - "ವಿನಯವಂತ, ಕರುಣಾಳು, ಉದಾರಿ, ಕ್ಷಮಾಶೀಲ, ವಿಧೇಯ, ಅಪ್ಪಟ, ಪ್ರೀತಿವಂತ, ಕಾಳಜಿವಂತ, ನೈತಿಕವಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲು ರಾಹುಲ್ ಬಯಸುತ್ತಾರೆ. ಬಹುಶಃ ಅವರು ಈ ಎಲ್ಲವೂ ಆಗಿರಬಹುದು, ಆದರೆ ಈ ಯಾವ ಗುಣವೂ ಅಧಿಕಾರ ಮತ್ತು ರಾಜಕೀಯದಲ್ಲಿ ಅನ್ವಯ ಆಗುವಂತಹವಲ್ಲ"

ದೇವಿಯವರು ಮಾತನಾಡುತ್ತಾ "ರಾಹುಲ್ ಅವರಲ್ಲಿನ ಮಾನವ ಪ್ರೀತಿ, ಬಡವರ ಬಗೆಗಿನ ಕಾಳಜಿ, ಕೋಮುವಾದಕ್ಕೆ ವಿರುದ್ಧವಾದ ಜಾತ್ಯತೀತ ನಿಲುವು, ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವ ಪ್ರಯತ್ನ, ಅಧ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ" ಇವೆಲ್ಲವನ್ನೂ ಪುಸ್ತಕದಲ್ಲಿ ಚಿತ್ರಿಸಲಾಗಿದೆಯೆಂದು ಹೇಳಿದರು. 

ಪುಸ್ತಕದಲ್ಲಿ ರಾಹುಲ್ ಗಾಂಧಿಯ ರಾಜಕೀಯ ಮತ್ತು ಇಂದಿನ ಭಾರತದ ಸನ್ನಿವೇಶದಲ್ಲಿ ಅಂತಹ ರಾಜಕೀಯದ ಅತಾರ್ಕಿಕತೆ ಮತ್ತು ವಿಫಲತೆಯನ್ನು ಲೇಖಕರು ವಿವರವಾಗಿ ಚಿತ್ರಿಸಿರುವಂತೆ ನನಗೆ ಅನಿಸಿತ್ತಾದ್ದರಿಂದ ರಾಹುಲ್ ರ ಒಳ್ಳೆಯತನ ಮತ್ತು ವ್ಯಕ್ತಿಗತ ಗುಣಗಳನ್ನೇ ಕುರಿತಾದ ಭಾಷಣಗಳು ಸ್ವಲ್ಪ ಆಶ್ಚರ್ಯ ಉಂಟು ಮಾಡಿದವು. 

'ಪರಿಚಯ' ಅಧ್ಯಾಯದ ಕಡೆಯಲ್ಲಿ ಲೇಖಕರು ಕೇವಿಯಟ್ಟೊಂದನ್ನು ದಾಖಲಿಸುತ್ತಾರೆ-  “ಪುಸ್ತಕದ ಪಾತ್ರಧಾರಿಯಾಗಿ ರಾಹುಲ್ ಗಾಂಧಿಯನ್ನು ಆರಿಸಿಕೊಳ್ಳುತ್ತಿರುವುದು  ಒಂದು ರಿಸ್ಕ್. ಆದರೆ ಬರಹಗಾರರು ಮತ್ತು ಲೇಖಕರು ಅಂತಹ ರಿಸ್ಕ್ ತೆಗೆದುಕೊಳ್ಳಬೇಕು. ಕೃತಿಯ ಪ್ರಧಾನ ಪಾತ್ರಧಾರಿ ರಾಹುಲ್ ಗಾಂಧಿಯವರು ವರ್ತಮಾನದ ಮತ್ತು ಸಕ್ರಿಯವಾದ ರಾಜಕಾರಣಿಯಾಗಿದ್ದಾರೆ  ಮತ್ತು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿರದ ಶಿಲ್ಪವಾಗಿದ್ದು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತಾರೆ.  ಅವರು  ಸಕ್ರಿಯವಾಗಿರುವ ಇಂದಿನ ಕಾಲಘಟ್ಟವೂ ನಿಮಿಷ ನಿಮಿಷವೂ ಬಣ್ಣ ಬದಲಾಯಿಸುವಂತಹದ್ದಾಗಿರುವುದರಿಂದ ಒಂದು ನಿರ್ದಿಷ್ಟವಾದ ವ್ಯಾಖ್ಯಾನ ಅಥವಾ ಟಿಪ್ಪಣಿಯನ್ನು ಮುಂದಿಡುವುದು ಕಷ್ಟ. ಹೀಗಿದ್ದೂ ಲೇಖಕನಾದವನು ತನ್ನ ವರ್ತಮಾನ ಕಾಲಕ್ಕೆ ಸ್ಪಂದಿಸುವುದನ್ನು ಮತ್ತು ತನ್ನ ಅನುಭವದ ಮೂಸೆಯಲ್ಲಿ ತನಗೆ ಕಾಣಿಸುವುದನ್ನು ನಮೂದಿಸುತ್ತ ಹೋಗಬೇಕೆನ್ನುವುದನ್ನು ನಿರೀಕ್ಷಿಸಲಾಗುತ್ತದೆ. ಲೇಖಕ ಭವಿಷ್ಯಕಾರನಲ್ಲವಾದ್ದರಿಂದ ರಾಹುಲ್ ಗಾಂಧಿಯ ಬಗ್ಗೆ ಅಧಿಕೃತ ಭವಿಷ್ಯವನ್ನೇನೂ ನುಡಿಯಲಾಗುವುದಿಲ್ಲ. ಮುಂದೆ ಬರಬಹುದಾದ ಕೃತಿಯೊಂದರ ಭಾಗವಾಗಿ ಅಥವಾ ಸಿದ್ಧತೆಯಾಗಿ ಇದನ್ನು ಪರಿಗಣಿಸಬಹುದು.” 

ಇಂದಿನ ಭಾರತದ ರಾಜಕೀಯ ಸಂದರ್ಭದಲ್ಲಿ ಓದಬೇಕಾದ ಪುಸ್ತಕ.  

No comments :