Monday, October 16, 2023

ಇಸ್ರೇಲ್‌-ಪ್ಯಾಲೆಸ್ಟೈನ್: ನಿಲ್ಲದ ಹಿಂಸೆ

ಕಳೆದ ವಾರವಿಡೀ ಸುದ್ದಿಯಲ್ಲಿದ್ದು ಇನ್ನೂ ಸಹ ಯಾವುದೇ ತಾರ್ಕಿಕ ಅಂತ್ಯದ ಸಾಧ್ಯತೆ ಕಾಣಿಸುತ್ತಿಲ್ಲದ ಇಸ್ರೇಲ್‌-ಪ್ಯಾಲೆಸ್ಟೈನ್ ಬಿಕ್ಕಟ್ಟು ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಸುಧೀಂದ್ರ ಬುಧ್ಯ ಅವರು ಪ್ರಜಾವಾಣಿಯಲ್ಲಿ ಬರೆದ “ಇಸ್ರೇಲ್ ಯುದ್ಧ ಅನಿರೀಕ್ಷಿತವೇ?” ಎಂಬ ಲೇಖನವು ಸಧ್ಯದ ಈ ಘರ್ಷಣೆಯ ಹಿನ್ನೆಲೆಯ ಹಲವು ವಿವರಗಳನ್ನು ಒದಗಿಸುತ್ತದೆ.

ಜಗತ್ತಿನ ಹಲವು ರಾಜಕೀಯ ಸಮಸ್ಯೆಗಳಂತೆಯೇ ಇಸ್ರೇಲ್‌-ಪ್ಯಾಲೆಸ್ಟೈನ್ ಸಮಸ್ಯೆಗೂ ಒಂದು ಐತಿಹಾಸಿಕ ಹಿನ್ನೆಲೆಯಿದ್ದು, ಎಲ್ಲ ಸಮಸ್ಯೆಗಳಿಗಿರುವಂತೇ ಈ ಸಮಸ್ಯೆಗೂ ಹಲವು ಮುಖಗಳಿವೆ. ಇದನ್ನು ಕೇವಲ ಒಂದು ಭಯೋತ್ಪಾದನೆಯ ಘಟನೆಯಾಗಿ ಮತ್ತದರ ವಿರುದ್ಧದ ಸಮರವಾಗಿ ನೋಡಲು ಸಾಧ್ಯವಿಲ್ಲ.

ಬಹಳಷ್ಟು ಸಮಯ ನಾವು ಒಂದು ಗುಂಪಿನ ದೃಷ್ಟಿಕೋನದಿಂದಲೇ ಐತಿಹಾಸಿಕವಾದ, ದಶಕಗಳ, ಶತಮಾನಗಳ ಕಾಲದಿಂದ ಪರಿಹಾರವಾಗದೇ ಉಳಿದಿರುವ ಸಮಸ್ಯೆಗಳನ್ನು ನೋಡುತ್ತಿರುತ್ತೇವೆ. ಮತ್ತು ಶಕ್ತಿವಂತ ಗುಂಪುಗಳ ಹಿಡಿತದಲ್ಲಿರುವ ಮಾಧ್ಯಮಗಳು ಸಹ ಒಂದು ವಸ್ತುನಿಷ್ಟ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ನೆರವಾಗುವುದಿಲ್ಲ. ಹೀಗಾಗೆ ಸಮಸ್ಯೆಯ ವಿವಿಧ ಮುಖಗಳನ್ನು ಗ್ರಹಿಸಲು ನಮ್ಮ ಆಕರಗಳೂ ಭಿನ್ನವಾಗಿರಬೇಕಾಗುತ್ತದೆ. ಕೇವಲ ಪತ್ರಾಗಾರಗಳೂ, ಪತ್ರಿಕಾವರದಿಗಳೂ ಸಹ ಸಮಸ್ಯೆಯ ಎಲ್ಲ ಮಗ್ಗಲುಗಳನ್ನು ಎಲ್ಲ ಕಾಲದಲ್ಲೂ ನೀಡಲು ಸಾಧ್ಯವಾಗದೆ ಇರಬಹುದು. ಬಹಳಷ್ಟು ಸಮಯ ಸಾಹಿತ್ಯ ಸಹ ನಮ್ಮ ಸುತ್ತಲ ಪ್ರಪಂಚವನ್ನು ನೋಡಲು ಮತ್ತು ಗ್ರಹಿಸಲು ಅತ್ಯಂತ ಸಹಕಾರಿ.

ಇಸ್ರೇಲ್ ವಿಷಯದಲ್ಲೂ ಅಷ್ಟೇ. ವಿಲಿಯಂ ಶೈರರ್ ಬರೆದ “ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಕ್” ಕೃತಿಯು ಜರ್ಮನ್ ನಾಝಿಗಳಿಂದ ಯಹೂದಿಗಳು ಅನುಭವಿಸುವ ಸಂಕಟವನ್ನು ತೆರೆದಿಡುತ್ತದೆ. ಹಾಗೆಯೇ “ಸೋಫಿ’ಸ್ ಚಾಯ್ಸ್”ನಂತಹ ಜನಪ್ರಿಯ ಕಾದಂಬರಿಗಳು ಸಹ. ಇಂತಹ ಯಹೂದಿಗಳಿಗೆ ತಮ್ಮದೇ ಆದ ಒಂದು ತಾಯ್ನಾಡನ್ನು ಸೃಷ್ಟಿಸಿ ಕೊಡಲು ವಿಶ್ವದ ಶಕ್ತಿಯುತ ರಾಷ್ಟ್ರಗಳು ಪ್ರಯತ್ನಿಸಿದ್ದು ಆ ನಂತರದಲ್ಲಿ ಇಸ್ರೇಲಿಗರು ಅಲ್ಲಿನ ಮೂಲ ನಿವಾಸಿಗಳಾಗಿದ್ದ ಪ್ಯಾಲೆಸ್ಟೈನಿಯರನ್ನು ಮೂಲೆಗುಂಪಾಗಿಸಿ ತಮ್ಮ ನೆಲೆಗಟ್ಟನ್ನು ವಿಸ್ತರಿಸಿದ್ದು ಸಾಹಿತ್ಯ ಕೃತಿಗಳಲ್ಲಿ ಓದುವಾಗ ಹಲವು ಮಾನವಿಕ ಅಂಶಗಳನ್ನು ತೆರೆದಿಡುತ್ತದೆ. ತಿರಸ್ಕಾರ, ಅಪಮಾನ, ಪೂರ್ವಾಗ್ರಹಗಳನ್ನು ಖುದ್ದಾಗೆ ಅನುಭವಿಸಿದ್ದ ಇಸ್ರೇಲಿಯರು ನಂತರದಲ್ಲಿ ಪ್ಯಾಲೆಸ್ಟೈನಿಯರ ಕುರಿತು ಅಷ್ಟೇ ಅಸಹಿಷ್ಣುಗಳಾಗುವುದನ್ನು ಇತಿಹಾಸದ ವ್ಯಂಗ್ಯ ಎನ್ನಬೇಕೋ ವಿಪರ್ಯಾಸ ಎನ್ನಬೇಕೋ.

ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಪಶ್ಚಿಮ ಏಶಿಯಾದಲ್ಲಿ ಘಟಿಸಿರುವ ವಿದ್ಯಮಾನಗಳ ಹಿನ್ನೆಲೆಯಲ್ಲೂ ಹಲವು ಕೃತಿಗಳು ಬಂದಿವೆ. “ಮೈನರ್ ಡೀಟೇಲ್” ಎಂಬ ಕಾದಂಬರಿಯು 1948 ರ ಯುದ್ಧದಲ್ಲಿ ಸುಮಾರು ಏಳು ಲಕ್ಷ ಪ್ಯಾಲೆಸ್ಟೈನಿಯನ್ನರು ತಮ್ಮ ಮನೆಗಳನ್ನು ತೊರೆಯಬೇಕಾದ ಸಂದರ್ಭದ ಹಿನ್ನೆಲೆ ಹೊಂದಿದೆ. ಹಾಗೆ್ಯೇ, ಅರಬ್ ರಾಷ್ಟ್ರೀಯತೆ, ಇಸ್ಲಾಮಿಕ್ ಭಯೋತ್ಪಾದನೆ, ಇಸ್ರೇಲ್-ಪ್ಯಾಲೆಸ್ಟೈನ್ ಮಧ್ಯದ ದ್ವೇಷ ಉಲ್ಬಣಿಸಲು ಮೂಲವಾದ 1967ರ ಯುದ್ಧದ ಬಗ್ಗೆ “ದಿ ಸಿಕ್ಸ್ ಡೇ ವಾರ್” ಎಂಬ ಕಾದಂಬರಿಯಲ್ಲಿ ಓದಬಹುದು.

ಮತ್ತೊಂದು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ವಿಷಮ ಪರಿಸ್ಥಿತಿಗಳು ತಲೆದೋರಿದಾಗ ಸಮಾಧಾನದ ಪರಿಹಾರಗಳಿಗೆ ಪ್ರಯತ್ನಿಸದೆ ಜನರಲ್ಲಿ ಇನ್ನಷ್ಟು ದ್ವೇಷವನ್ನು ಬಿತ್ತಿ ಹಿಂಸೆಗೆ ಪ್ರಚೋದಿಸುವ ನಾಯಕರುಗಳು. ಇಂತಹವರು ಸೃಷ್ಟಿಸುವ ಅವಾಂತರಗಳಿಗೆ ಇತಿಹಾಸವೇ ಸಾಕ್ಷಿ. ತಮ್ಮ ಅಧಿಕಾರದ ಆಕಾಂಕ್ಷೆಗಾಗಿ ಸಾರ್ವಜನಿಕ ಸಂಸ್ಥೆಗಳನ್ನು ಹಾಳುಗೆಡವಿ, ಬಹುತ್ವ, ಸಾರ್ವಜನಿಕ ಸಂವಾದ, ಆಳವಾದ ವಿಚಾರ, ಇತರರ ಹಕ್ಕುಗಳ ಗೌರವ ಎಲ್ಲವನ್ನೂ ಬದಿಗೊತ್ತಿ ಸಮಸ್ಯೆಗಳನ್ನು ಉಲ್ಬಣಿಸುವ ಇಂತಹವರ ಬಗ್ಗೆ ಎಚ್ಚರ ಅಗತ್ಯ. ಈಗ ಇಸ್ರೇಲ್ನಲ್ಲಿ ಸಹ. ಇದಕ್ಕಾಗಿ ವಿಶ್ವದ ಪ್ರಭಾವಿ ದೇಶಗಳ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಇಂತಹ ಮಧ್ಯಪ್ರವೇಶ ಸಹ ಅಗತ್ಯ ಸಂದರ್ಭಗಳಲ್ಲಿ, ಅಗತ್ಯವಿದ್ದಷ್ಟು ಮಾತ್ರ ಇರಬೇಕಾಗುತ್ತದೆ.

No comments :