Monday, August 21, 2023

'ವೇದ ಸುಳ್ಳಾದರೂ...?'

'ಗಾದೆಗೆ ಬೇಕಲ್ಲವೇ ಕಾಲನ ತಗಾದೆ' ಎಂಬ ಹೆಸರಿನಲ್ಲಿ ಯೋಗಾನಂದ ಅವರು ಬರೆದ ಲೇಖನ ವಿಚಾರಕ್ಕೆ ಹಚ್ಚುವಂತಿದೆ. ಇದನ್ನು ಓದುವಾಗ ಕೆಲ ವಾರಗಳ ಹಿಂದೆ ವಾಣಿ ಪೆರಿಯೋಡಿಯವರು 'ಪುರುಷ ಪ್ರಧಾನ ವ್ಯವಸ್ಥೆಯ ಸಮರ್ಥನೆಯ ಗಾದೆಗಳ ಬಗ್ಗೆ' ಬರೆದಿದ್ದು ನೆನಪಾಯಿತು. 

ಯಾವುದೇ ಒಂದು ಭಾಷೆಯಾಗಲಿ ಅಥವಾ ಭಾಷೆಯಲ್ಲಿ ಇರುವ ಗಾದೆಗಳಾಗಲಿ ಬರೀ ಪದಗಳಲ್ಲ. ಅದಕ್ಕೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಪ್ರತಿಯೊಬ್ಬರೂ  ಪದಗಳಿಂದಲೇ ಅವರವರ ಪ್ರಪಂಚವನ್ನು ಪರಿಭಾವಿಸುವುದರಿಂದ ಭಾಷೆಯ ಮತ್ತು ಅದರ ಸಾಧ್ಯತೆಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಾದ ಅಗತ್ಯ ಇದೆ. 

ಬಹಳ ವರ್ಷಗಳ ಹಿಂದೆ ಲಂಕೇಶ್ ಅವರು 'ಸಾಕ್ಷಿ' ಪತ್ರಿಕೆಯಲ್ಲಿ 'ಅಸ್ವಸ್ಥತೆ - ಸಾಹಿತ್ಯ' ಎಂಬ  ತಮ್ಮ ಲೇಖನದಲ್ಲಿ ಭಾಷೆಯ ಶಕ್ತಿಯ ಬಗ್ಗೆ ಬರೆಯುತ್ತ 'ಯಾವ ಭಾಷೆಯೂ ಬಾಗಿಲಿಗೆ ಹೊಡೆದ ಮೊಳೆಯಂತೆ ಸ್ಥಿರವಲ್ಲ' ಎಂದು ಬರೆದಿದ್ದರು. ಯಾವುದೇ ಭಾಷೆಗೆ ಭೂತದ ಆಧಾರವಿರುವಂತೇ ವರ್ತಮಾನದಲ್ಲಿ ಕಾವ್ಯದ ಮತ್ತು ಕ್ರಿಯಾತ್ಮಕ ಕೆಲಸಗಳ ಅಭಿಷೇಕವಾಗದಿದ್ದರೆ ಭಾಷೆ ಸಾಯುತ್ತದೆ ಎಂದೂ ಬರೆದಿದ್ದರು. 

ಯೋಗಾನಂದ ಅವರು ಬರೆದಿರುವಂತೆ ಗಾದೆಗಳನ್ನು 'ಆಧಾರಯುಕ್ತವೂ ಸಂಕ್ಷಿಪ್ತವೂ ಆದ  ವಿವೇಕದ ಗುಳಿಗೆಗಳು' ಎಂದು ಪರಿಗಣಿಸುತ್ತಲೇ ಕೆಲವು ಗಾದೆಗಳಲ್ಲಿ ಇರುವ ಸಮಸ್ಯಾತ್ಮಕ ಅಂಶಗಳ ಪರಿಷ್ಕರಣೆ ಅಗತ್ಯವಿದೆ.  ಅವರು ಹೇಳುವಂತೆ ಇಂದು ಬಳಕೆಯಲ್ಲಿಲ್ಲದ, ವಿನಾಕಾರಣ ಒಂದು ಜಾತಿ, ಧರ್ಮ, ಪಂಥ, ಪಂಗಡ, ವರ್ಗವನ್ನು ಕೀಳಾಗಿ ಕಾಣುವಂತಹ ಪದಗಳಿದ್ದರೆ ಅವನ್ನು ನಿಘಂಟಿನಿಂದ, ಗಾದೆಗಳಿಂದ ತೆಗೆಯುವ, ಮತ್ತು ಬಳಕೆಯಿಂದ ಕೈಬಿಡುವ  ಅಗತ್ಯ ಇದೆ. ಹಾಗೆಯೇ ವಾಣಿಯವರು ಬರೆದಿರುವಂತೆ ಪುರುಷ  ಪ್ರಾಧಾನ್ಯತೆಯ ಸಮರ್ಥನೆಯ ಗಾದೆಗಳೂ ಬಳಕೆಗೆ ಯೋಗ್ಯವಾದವಲ್ಲ ಎನ್ನುವುದನ್ನು ನೆನಪಿಡಬೇಕು. 

No comments :