Monday, August 28, 2023

ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅಸ್ತ್ರವಾಗುವುದೇ ಹೊಸ ಶಿಕ್ಷಣ ನೀತಿ

"ಚಂದ್ರಯಾನದ ಸಂಭ್ರಮದಲ್ಲಿ ಮುಳುಗಿದ್ದರೂ ನಮ್ಮ ಸುತ್ತಲಿನ ನೆಲದ ವಾಸ್ತವಗಳನ್ನು ಗಮನಿಸಿದಾಗ, ನಮ್ಮ ಸಮಾಜ ಈ ಹೊತ್ತಿನಲ್ಲೂ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆಯಿಂದ ಬಹುದೂರ ಇರುವುದು ಢಾಳಾಗಿ ಗೋಚರಿಸುತ್ತದೆ." ಪ್ರಜಾವಾಣಿಯಲ್ಲಿ 'ಶಿಕ್ಷಣ ನೀತಿ– ವೈಚಾರಿಕತೆಯೇ ಬುನಾದಿಯಾಗಲಿ' ಎಂಬ ಲೇಖನದಲ್ಲಿ  ಈ ಸಾಲುಗಳನ್ನು ಓದುವಾಗ ವಿಷಾದ, ನಿರಾಶೆ, ಹತಾಶೆ ಎಲ್ಲ ಏಕ ಕಾಲಕ್ಕೆ ಅವರಿಸಿದವು.  ಈ ಪುಟ್ಟ ಲೇಖನದಲ್ಲಿರುವ ತುರ್ತು ಸಂದೇಶ ಅಧಿಕಾರದಲ್ಲಿರುವವರಿಗೆ ತಲುಪಲಿ ಎಂದು ಆಶಿಸೋಣ. ನಮ್ಮ ಸಮಾಜದಲ್ಲಿರುವ ಅದೆಷ್ಟೋ ಅನಿಷ್ಟಗಳಿಗೆ ಮೂಲ ವೈಚಾರಿಕ-ವೈಜ್ಞಾನಿಕ ಚಿಂತನೆಯ ಕೊರತೆಯೇ ಆಗಿದೆ. 

"ವಿಜ್ಞಾನ ಜಗತ್ತು ತನ್ನ ಮೇರು ಶಿಖರವನ್ನು ತಲುಪಿರುವ ಹೊತ್ತಿನಲ್ಲಿ, ನಮ್ಮ ಶಾಲೆಯ ಅಂಗಳದಲ್ಲೇ ಯಾವುದೋ ಕಾಲದ ಮೌಡ್ಯ ಮತ್ತು ಅಂಧ ಅನುಸರಣೆಯ ಮಾದರಿಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಂಚಿತರನ್ನಾಗಿ ಮಾಡುವ ಅಪಾಯ ನಮ್ಮೆದುರಿನಲ್ಲಿದೆ." ಇದನ್ನು ಓದುವಾಗ ಹತ್ತು ವರ್ಷಗಳ ಹಿಂದೆ ನಡೆದ ಘಟನೆಗಳು ನೆನಪಾದವು. 

ನರೇಂದ್ರ ಧಾಬೋಲ್ಕರ್ ಎಂಬ ಮೂಢನಂಬಿಕೆ ವಿರೋಧಿ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಹತ್ಯೆಗೀಡಾಗಿದ್ದರು.  ಅದಾಗಿ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು "ಮೂಢನಂಬಿಕೆಗಳು ಹಾಗೂ ಬ್ಲ್ಯಾಕ್ ಮ್ಯಾಜಿಕ್ ನಿಷೇಧ" ಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಹ 'ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ' ಯೊಂದರ ಬಗ್ಗೆ ಯೋಚಿಸಿತ್ತು. ಮಸೂದೆಯ ಕರಡಿನ ಪ್ರತಿ ಪ್ರಕಟವಾಗುತ್ತಿದ್ದಂತೆ ಒಂದು ರಾಜಕೀಯ ಪಕ್ಷದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಕಾರಣಿಗಳಲ್ಲಿ ಸಾಮಾನ್ಯ ಗುಣ ಎಂಬಂತೆ ತೋರುವ ಮೂಢನಂಬಿಕೆಗೆ ಹೊರತಾದವರಂತೆ ಕಂಡುಬರುತ್ತಿದ್ದ ಸಿದ್ದರಾಮಯ್ಯನವರಿಗೂ  ಮಸೂದೆಯನ್ನು ಕಾನೂನಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ ಎಂದು ನನ್ನ ನೆನಪು. 

ಇದೀಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಕಾರ್ಯಕ್ರಮವೊಂದರಲ್ಲಿ 'ಮಕ್ಕಳು ವಿಜ್ಞಾನ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಬೆಳೆಯಬೇಕು' ಎಂದು ಹೇಳಿರುವುದು ಹೊಸದಾದ 'ರಾಜ್ಯ ಶಿಕ್ಷಣ ನೀತಿ'ಯೊಂದರ ಮೂಲಕ ಮೌಢ್ಯದ ವಿರುದ್ಧ ಒಂದಿಷ್ಟು ಹೋರಾಟವನ್ನು ಸಾಧ್ಯವಾಗಿಸಬಹುದೆಂಬ ಭರವಸೆಯನ್ನು  ಮೂಡಿಸುತ್ತದೆ. 

No comments :