Saturday, May 28, 2016

ಇಂಟರ್ನೆಟ್ ಯುಗದಲ್ಲಿ ಪುಸ್ತಕ ಪ್ರೀತಿ

ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ
ಅವು ಇಣುಕುತ್ತವೆ,
ದಿಟ್ಟಿಸುತ್ತವೆ ಎಷ್ಟೋ ಆಸೆಯಿಂದ.
ಈಗ ತಿಂಗಳಾನುಗಟ್ಟಲೆ ಭೇಟಿಯಾಗುವುದಿಲ್ಲ ನಾವು
ಅವುಗಳ ಜೊತೆ ಉತ್ಕಟತೆಯಲಿ
ಕಳೆದ ಸಂಜೆಗಳೀಗ
ಕಂಪ್ಯೂಟರಿನ ಪರದೆಯ ಮುಂದೆ ಸರಿಯುತ್ತಿವೆ.
ಖ್ಯಾತ ಹಿಂದಿ ಕವಿ ಗುಲ್ಜಾರ್ ರ ಕವಿತೆಯೊಂದರ ಕನ್ನಡ ಅನುವಾದವಾದ  'ಪುಸ್ತಕಗಳು' ಕವಿತೆಯ ಸಾಲುಗಳಿವು. ಲೇಖಕಿ ಸಂಧ್ಯಾರಾಣಿ ಯವರ ಅನುವಾದ ಗುಲ್ಜಾರ್ ರ ಸಾಲುಗಳ ಸೂಕ್ಷ್ಮ ಸಂವೇದನೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದೆ .

ಹೊಸ ಕಾಲಮಾನದ ಹೊಸ ತಂತ್ರಜ್ಞಾನ  ಸಾಧ್ಯವಾಗಿಸಿರುವ  ಸಾಧನಗಳ ನಡುವೆ ಹಿನ್ನಡೆಗೆ ಸರಿಯುತ್ತಿರುವ ತಮ್ಮ ಭಾವ ಪ್ರಪಂಚದ ಭಾಗವೊಂದನ್ನು ನೆನೆದು ಕವಿ ಪಡುತ್ತಿರುವ ವಿಷಾದವಷ್ಟೇ ಇದಲ್ಲ. ಪುಸ್ತಕದ ಓದು ನೀಡುವ ಮುದವನ್ನು ಎಂದಾದರೂ ಅನುಭವಿಸಿರುವ ಎಲ್ಲರ ಮನದ  ಭಾವವೂ ಈ ಸಾಲುಗಳಲ್ಲಿದೆ.

ಹೀಗಾದದ್ದಾದರೂ ಹೇಗೆ?

ಕಳೆದೆರಡು ದಶಕಗಳಲ್ಲಿ ತಂತ್ರಜ್ಞಾನ ತಂದೊಡ್ಡಿರುವ ಬದಲಾವಣೆಗಳು ಅಚ್ಚರಿಗೊಳಿಸುತ್ತವೆ.  ಬೆರಳೆಣಿಕೆಯ ಟೆಲಿವಿಷನ್ ಚಾನೆಲುಗಳು , ಮನೆಗೊಂದೇ ಟೆಲಿಫೋನು ಇದ್ದ ದಿನಗಳಲ್ಲಿ  ಪುಸ್ತಕವೊಂದರಲ್ಲಿ ಮುಳುಗಿ ಹೋಗುವುದು ಸುಲಭದ ಮಾತಾಗಿತ್ತು. ಅದೇ ಇಂದಿನ ಕಾಲದಲ್ಲಿ ಮೊಬೈಲು, ಯೂಟ್ಯೂಬು, ನೂರಾರು ಟೆಲಿವಿಷನ್ ಚಾನಲುಗಳು, ೩ಡಿ  ಸಿನಿಮಾ, ಕಂಪ್ಯೂಟರ್ ಗೇಮುಗಳು ಇತ್ಯಾದಿಗಳಲ್ಲಿ ಪುಸ್ತಕಗಳೆಲ್ಲೋ  ಮರೆಯಾಗಿವೆ. 'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.

ಇಂಟರ್ನೆಟ್ಟಿನಲ್ಲಿ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಓದುವುದಕ್ಕೂ, ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.  ಪುಸ್ತಕಗಳ ಪರ ಮತ್ತು ಇಂಟರ್ನೆಟ್ಟಿನ ವಿರುದ್ಧ ಮಾತಾಡುವುದು ಕೆಲವರಿಗೆ ಬರಿಯ ನಾಸ್ಟಾಲ್ಜಿಯ ಅನಿಸಲೂಬಹುದು. ಹಿಂದೆಂದೋ ಲಂಕೇಶ್ ಪತ್ರಿಕೆಯಲ್ಲಿ ಓದಿದ್ದ ಚಂದ್ರಶೇಖರ ಆಲೂರರ ಲಲಿತ ಪ್ರಬಂಧ (ಇದು ಇಂಟರ್ನೆಟ್, ಬ್ಲಾಗಿಂಗ್  ಇತ್ಯಾದಿ ಬರುವುದಕ್ಕೂ ಮೊದಲು) ನೆನಪಿಗೆ ಬರುತ್ತದೆ. "ತುರುಬ ನೆನೆಯುವ ಜಮಾನದ ಜನ" ಎಂದೇನೋ ಅದರ ಶೀರ್ಷಿಕೆ ಇತ್ತೆಂದು ನೆನಪು. ಪ್ರತಿಯೊಂದು ತಲೆಮಾರಿನವರು ತಮ್ಮ ಅನುಭವಗಳು, ತಮ್ಮ ಕಾಲದ ರೀತಿಗಳು ಶ್ರೇಷ್ಟ ಎಂದು ಭಾವಿಸುವುದರ ಬಗ್ಗೆ ಅವರು ಬರೆದಿದ್ದರು. ಈ ಬಗೆಯ ಯೋಚನೆಗೆ ಸುಪ್ತವಾಗಿ ನಮ್ಮಲ್ಲಿರುವ ಸ್ವಮೋಹವೇ ಕಾರಣವಿರಬಹುದೇನೋ ಎಂದೂ ಅವರು ಬರೆದಿದ್ದರು.

ಮಧ್ಯವಯಸ್ಕನ ನಾಸ್ಟಾಲ್ಜಿಯವು ಹೊಸ ತಲೆಮಾರಿನ  ಅಭಿರುಚಿಗಳ ತುಲನೆಯಲ್ಲಿ ತೊಡಕಾಗಬಾರದೆಂಬ  ಎಚ್ಚರಿಕೆಯಿಂದಲೇ ಓದಿನ ಮೇಲೆ ಇಂಟರ್ನೆಟ್ಟಿನ ಪರಿಣಾಮವನ್ನು ಗಮನಿಸುವ ಪ್ರಯತ್ನಕ್ಕೆ ತೊಡಗುತ್ತಿದ್ದೇನೆ.

ಇಂಟರ್ನೆಟ್ ಎಂದರೆ ಲೋಕದ ವಿಚಾರವೆಲ್ಲವನ್ನೂ ಲಾಳಿಕೆಯೊಂದರಲ್ಲಿ ಹಿಡಿದು ನೇರ ಮಿದುಳಿಗೆ ರವಾನಿಸುವ ವ್ಯವಸ್ಥೆ.  ಇಲ್ಲಿ ಓದುವುದೆಂದರೆ ಓದುವುದಕ್ಕಿಂತ ಪರದೆಯ ಮೇಲೆ ವೇಗವಾಗಿ ಮೂಡುವ ಮಾಹಿತಿಯ ಝರಿಯನ್ನು ಅನುಸರಿಸುವುದಷ್ಟೇ. ಅದಕ್ಕೇ ಇಲ್ಲಿ ರೀಡಿಂಗ್ ಎಂಬ ಶಬ್ದಕ್ಕೆ ಪರ್ಯಾಯವಾಗಿ ಬ್ರೌಸಿಂಗ್, ಸ್ಕಿಮ್ಮಿಂಗ್ ಇತ್ಯಾದಿ ಪದಗಳ ಬಳಕೆ ಮಾಡುವುದು ಸಾಮಾನ್ಯ. ಇಲ್ಲಿ ತಕ್ಷಣದಲ್ಲಿ, ಸುಲಭದಲ್ಲಿ  ಮಾಹಿತಿ ಲಭ್ಯವಾಗಿಸುವ ಸೌಲಭ್ಯಕ್ಕೆ ಪ್ರಾಧಾನ್ಯತೆ.

ಒಂದು ಪುಸ್ತಕದ ಓದು ನಮ್ಮಿಂದ ನಿರೀಕ್ಷಿಸುವುದೇ ಬೇರೆ. ಇಲ್ಲಿ ಓದಿದ್ದರ ಗ್ರಹಣ, ಮನನ, ಪ್ರತಿಫಲನ  ಎಲ್ಲವೂ ಅಗತ್ಯ. ಇದೊಂದು ಜೀವಂತ ವ್ಯಕ್ತಿಯೊಡನೆ ಸಂವಾದಿಸಿದಂತೆ.  ಸರಿಯಾಗಿ  ಪರಿಚಯವಾಗಲು, ಅರ್ಥವಾಗಲು  ಜೊತೆಯಲ್ಲಿ ಉತ್ಕಟತೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.  ಪ್ರತಿಯೊಂದು ಉತ್ತಮ ಪುಸ್ತಕವೂ ನಮ್ಮ ಬಗ್ಗೆಯೇ ಒಂದಿಷ್ಟು ತಿಳಿದುಕೊಳ್ಳುವ ಅವಕಾಶವಾಗಿರುತ್ತದೆ. ಕೃತಿಕಾರರ ಯೋಚನೆ, ಭಾವನೆ, ಕಾಳಜಿಗಳು ಅವರನ್ನು ನಮಗೆ ಪರಿಚಯಿಸುವುದರೊಂದಿಗೆ ಅವರೊಂದಿಗೆ ನಾವು ಒಪ್ಪುವ ಅಥವಾ ಒಪ್ಪದಿರುವ ಕ್ರಿಯೆಯಲ್ಲಿ ನಮಗೇ ನಮ್ಮ ಪರಿಚಯವೂ ಸಾಧ್ಯವಾಗುತ್ತದೆ.

ಇಂಟರ್ನೆಟ್ ಓದಿನ ಇನ್ನೊಂದು ತೊಡಕೆಂದರೆ ಅದು ಒದಗಿಸುವ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಇತ್ಯಾದಿ ಸಮೂಹ ಮಾಧ್ಯಮಗಳು. ಇಷ್ಟೊಂದು ಆಯ್ಕೆಗಳು ಕಣ್ಣ ಮುಂದಿರುವಾಗ ತಲ್ಲೀನತೆಯಿಂದ ಏನನ್ನೂ ಓದಿ ಮುಗಿಸುವುದು ಸುಲಭವಲ್ಲ.  ಹಾಗೆಯೇ ಓದುತ್ತಿರುವ ಲೇಖನ/ಕೃತಿಗೆ ಸಂಬಂಧಿಸಿದ ಇತರ ಹತ್ತು ಹಲವು ಮಾಹಿತಿಗಳೂ ಬೆರಳ ತುದಿಯಲ್ಲೇ ಲಭ್ಯವಿರುವುದೂ ಅನುಕೂಲದಂತೇ  ಅನಾನುಕೂಲವೂ ಆಗಿಬಿಡಲು ಸಾಧ್ಯ. ಯಾವುದೋ ಮಾಹಿತಿಯನ್ನು ಹುಡುಕಲು ಹೊರಟು ಕೊಂಡಿಯಿಂದ ಕೊಂಡಿಗೆ ಹಾರುತ್ತಾ, ಹುಡುಕಲು ಹೊರಟ ವಿಚಾರವನ್ನೇ ಮರೆಯುವ ಸಾಧ್ಯತೆಯೂ ಇದ್ದೇ  ಇರುತ್ತದೆ.

ಕಲ್ಪನೆಗೂ ನಿಲುಕದ ವೇಗದಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿ ಮತ್ತು ಜ್ಞಾನದ ಶೋಧನೆ ಮತ್ತು ಬಳಕೆಗೆ ಇಂಟರ್ನೆಟ್ ಒಂದೇ ಉಳಿದಿರುವ ಮಾರ್ಗ ಎಂದು ಹೇಳುವವರು ಇದ್ದರೂ ಅದೇ ಪರಮ ಸತ್ಯವೂ ಅಲ್ಲ. ಇಂಟರ್ನೆಟ್ ನ  ವಿಶಾಲ ನಭದಲ್ಲಿ ಹರಿದಾಡುತ್ತಿರುವುದೆಲ್ಲ ಮಥಿಸಿ ತಂದ ನವನೀತವೇನಲ್ಲ.  ಯಾವುದೇ ವಿಮರ್ಶೆಗೆ ಸಂಶೋಧನೆಗೆ ಒಳಪಡದ ಗಾಳಿ ಮಾತುಗಳೂ, ಹಸಿ ಸುಳ್ಳುಗಳೂ ಇಲ್ಲಿವೆ. ಅಪಕ್ವವಾದ, ಬಾಲಿಶವಾದ ವಿಚಾರಗಳಿಗೂ ಕೆಲವೊಮ್ಮೆ ಇದು ವೇದಿಕೆ. ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಟ್ವಿಟರ್ ಇದಕ್ಕೊಂದು ಉದಾಹರಣೆ. ದಶಕಗಳ ಕಾಲ ಅಧ್ಯಯನ, ಸಂಶೋಧನೆ, ವಿಚಾರ ವಿಮರ್ಶೆಯ ಹಿನ್ನೆಲೆ ಇರುವವರಿಗೂ ಇಲ್ಲಿ ಕೆಲವೊಮ್ಮೆ ಕಾಸಿನ ಕಿಮ್ಮತ್ತೂ ಸಿಗದೇ ಹೋಗುವುದುಂಟು. ಯಾವುದೇ ಓದಿನ, ವಿಚಾರವಂತಿಕೆಯ ಅಪವಾದವೂ ಇಲ್ಲದ ಘೋಷಣಾ ಜೀವಿಗಳಿಗೂ ದೊಡ್ಡದೊಂದು ಧ್ವನಿವರ್ಧಕ ಇಲ್ಲಿ ಲಭ್ಯವಿರುವುದೂ ಒಂದು ವಿಪರ್ಯಾಸ.

ಇದೆಲ್ಲ ನೋಡಿದರೆ ನಾವಿಂದು ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ ಇಣುಕುತ್ತಿರುವ, ನಾವು ಮರೆತಿರುವ ಪುಸ್ತಕಗಳತ್ತ ಮತ್ತೆ ಹೋಗುವ ಅಗತ್ಯ ಕಾಣುತ್ತಿದೆ.  ಇಂಟರ್ನೆಟ್ ನಲ್ಲಿ ಧಾರಾಳ ಲಭ್ಯವಿರುವ ಒಂದಕ್ಕೊಂದು ಸಂಬಂಧವೇ ಇರದಂತೆ ಹರಿದಾಡುತ್ತಿರುವ ಮಾಹಿತಿಯ ಬಿಡಿ ತುಂಡುಗಳಿಂದ ಹೆಚ್ಚಿನ ಲಾಭವಿಲ್ಲ. ಎಲ್ಲ ಕಾಲದ ಮಾನವ ಅಭಿವ್ಯಕ್ತಿಯ ಮುಖ್ಯ ದಾಖಲೆಯಾಗಿರುವ ಸಾಹಿತ್ಯವು ಮತ್ತೆ ನಮಗೆ ಹತ್ತಿರವಾಗಬೇಕಾದ ತುರ್ತು ಅಗತ್ಯ ಇದೆ. ಎಲ್ಲ ಉತ್ತರಗಳನ್ನೂ ತನ್ನಲ್ಲಿಟ್ಟುಕೊಂಡಿರುವ ಇಂಟರ್ನೆಟ್ ನ ಜೊತೆಗೇ ಪುಟ ಪುಟದಲ್ಲೂ ಪ್ರಶ್ನೆಗಳನ್ನು ಮೂಡಿಸುತ್ತ ಜಿಜ್ಞಾಸೆಗೆ ಹಚ್ಚುವ ಪುಸ್ತಕಗಳೂ ನಮಗೆ ಬೇಕು.

ಪುಸ್ತಕವನ್ನು ಪ್ರೀತಿಸುವವರು ಸಂಗ್ರಹಿಸುವವರು ಹಲವರು ಇದ್ದಾರೆ. ಬಹುಪಾಲು ಸಾಹಿತಿಗಳು ಈ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ.  ನನಗೆ ತಿಳಿದಂತೆ ಈಚಿನ ಕನ್ನಡದ ಮುಖ್ಯ ಕತೆಗಾರ, ಕಾದಂಬರಿಕಾರರಾಗಿರುವ ವಿವೇಕ್ ಶಾನಭಾಗ್ ಅವರಲ್ಲೊಬ್ಬರು. ಅವರು ಏಳು ವರ್ಷಗಳ ಕಾಲ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ಹೊರತಂದ ವಿಶಿಷ್ಟ ಕನ್ನಡ ತ್ರೈಮಾಸಿಕ ಪತ್ರಿಕೆ 'ದೇಶ ಕಾಲ'ದ ಆರಂಭದ ದಿನಗಳಲ್ಲಿ ಚಂದಾ ಹಣ ತಲುಪಿಸುವುದಕ್ಕಾಗಿ ನಾನೊಮ್ಮೆ ಅವರ ಮನೆಗೆ ಹೋಗಿದ್ದೆ. ಗೋಡೆಯುದ್ದಕ್ಕೂ ಕಪಾಟುಗಳಲ್ಲಿ ಜೋಡಿಸಿಟ್ಟಿದ್ದ ಅವರ ಅಪಾರ ಪುಸ್ತಕ ಸಂಗ್ರಹ ನೋಡಿ ದಂಗಾಗಿದ್ದು ನನಗಿನ್ನೂ ನೆನಪಿದೆ. ಕೆಲ ತಿಂಗಳುಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿವೇಕ್ ಅವರು 'ದೇಶ ಕಾಲ' ಪತ್ರಿಕೆ ಹೊರತರುವಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಂದು ಪುಸ್ತಕ ಅಥವಾ ಪತ್ರಿಕೆಗೆ ಅದರ ವಿನ್ಯಾಸ, ಅದು ಅಚ್ಚಾಗುವ ಕಾಗದ, ಕೈಯಲ್ಲಿ ಹಿಡಿಯುವ ಅನುಭವ, ಅದರ ವಾಸನೆ, ಸ್ಪರ್ಶ ಎಲ್ಲವೂ ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಿದರು. ನಿಜಕ್ಕೂ ದೇಶ ಕಾಲ ಆ ಎಲ್ಲ ದೃಷ್ಟಿಯಿಂದ ಅದ್ಭುತವಾದ ಪತ್ರಿಕೆಯಾಗಿತ್ತು. ಅದೇ ಸಂದರ್ಭದಲ್ಲಿ ವಿವೇಕ್ ತಮ್ಮ ಮಾತುಗಳಲ್ಲಿ ಕೀರಂ ನಾಗರಾಜರ ಪ್ರಸ್ತಾಪ ಮಾಡಿದರು. ಪುಸ್ತಕದೊಂದಿಗೆ ಕೀರಂ ಅವರು ಹೊಂದಿರುತ್ತಿದ್ದ ಸಂಬಂಧ, ಅದರಲ್ಲಿ ಅವರು ಟಿಪ್ಪಣಿ ಮಾಡುತ್ತಿದ್ದದ್ದು, ಪುಸ್ತಕವೆಂದರೆ ಜೀವ ಇರುವ ವಸ್ತು ಎನ್ನುವ ರೀತಿಯ ಒಡನಾಟ ಇರುತ್ತಿದ್ದದ್ದು ಇದೆಲ್ಲವನ್ನೂ ಅವರು ಹೇಳಿದರು .

'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರು ಕಪಾಟುಗಳ ಬೀಗ ತೆಗೆದು ಹಿಂದೆಂದೋ ಓದಿ, ಅಥವಾ ಓದದೆಯೇ ಪೇರಿಸಿಟ್ಟಿರುವ ಕತೆ, ಕಾವ್ಯ, ಕಾದಂಬರಿ, ಆತ್ಮ ಚರಿತ್ರೆ ಇತ್ಯಾದಿ ಪುಸ್ತಕಗಳೊಡನೆ ಮತ್ತೊಮ್ಮೆ ಉತ್ಕಟತೆಯಲ್ಲಿ ಸಮಯ ಕಳೆಯುವ ಪ್ರಯತ್ನ ಮಾಡಬೇಕಿದೆ. ಕಾರಂತ, ಕುವೆಂಪು, ಅನಂತ ಮೂರ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ ಹೀಗೇ ಈ ನಾಡಿನ ಪ್ರತಿಭಾವಂತ ಮಹನೀಯರ ವೈಚಾರಿಕತೆ, ಜೀವನ ದೃಷ್ಟಿ, ನೈತಿಕ ಪ್ರಜ್ಞೆ ಮತ್ತೊಮ್ಮೆ ನಮ್ಮ ಸಮೂಹ ಪ್ರಜ್ಞೆಯೊಳಗೆ ಸೇರಬೇಕಾಗಿದೆ. ಅವರ ಕೃತಿಗಳು, ಕಾದಂಬರಿಗಳು ಗತಕಾಲದ ಕತೆ ಹೇಳುವವಾದರೂ, ಅಲ್ಲಿನ ಪಾತ್ರಗಳ ಸಮಸ್ಯೆಗಳು ನಮ್ಮ ಸಮಸ್ಯೆಗಳಾಗಿರದಿದ್ದರೂ, ಅಂದಿನ ಜೀವನದ ಸ್ಮೃತಿಯನ್ನು ಕಾಯ್ದಿಡುವುದು, ಅದರಿಂದ ಕಲಿಯುವುದು ಎಲ್ಲವೂ ಮುಖ್ಯ. ನಿತ್ಯಜೀವನದಲ್ಲಿ ನಾವು ಕಾಣುವುದು ಜನರ ಮೇಲ್ನೋಟ ಮಾತ್ರ. ಅದೇ ಒಂದು ಕತೆ ಅಥವಾ ಕಾದಂಬರಿಯಲ್ಲಿ ಜನರ ಮನಸ್ಸು, ಆಲೋಚನೆಗಳು, ಪ್ರಚೋದನೆಗಳು ಎಲ್ಲವನ್ನೂ ಕಾಣಲು ಸಾಧ್ಯವಿದೆ. ಎಲ್ಲ ಕಾಲದ ಜನರ ಎಲ್ಲ ಅನುಭವಗಳೂ ಸಹ ಮನುಷ್ಯರಾಗಿರುವುದೆಂದರೆ ಏನು ಎಂಬುದನ್ನು ಅರಿಯಲು ಸಹಾಯ ಮಾಡುತ್ತವೆ. ಹಲವು ಪ್ರತಿಭೆಗಳ ವರ್ಷಗಳ ಪ್ರಯತ್ನದ ಫಲವಾದ ಸಾಹಿತ್ಯ ಕೃತಿಗಳು ಜೀವನದ ಸೌಂದರ್ಯವನ್ನು ಸಂಭ್ರಮಿಸುವುದನ್ನು   ಕಲಿಸಲೂ ಶಕ್ತವಾಗಿರುತ್ತವೆ.

ಇಂಟರ್ನೆಟ್ ನ ಎಕ್ಸ್ ಪ್ರೆಸ್ ವೇ ನಲ್ಲಿ ವೇಗದಲ್ಲಿ  ನಿರರ್ಥಕವಾಗಿ ಜಾರುತ್ತ ಸಾಗುತ್ತಿರುವ ನಾವು, ಪುಸ್ತಕದ ದಟ್ಟ ಅರಣ್ಯದಲ್ಲೂ ಹೊಕ್ಕು ನೀರವದಲ್ಲಿ ಮೌನದಲ್ಲಿ ಅಚ್ಚರಿಯ ದೃಶ್ಯಗಳನ್ನು ನೋಡಬೇಕಿದೆ. 

No comments :