Thursday, January 06, 2022

ಹೊಲದ ಮಣ್ಣಲಿ ನೇಗಿಲ ಗೆರೆಗಳು


ಭಾರತದ ಹನ್ನೊಂದನೇ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಶ್ರೀಯುತ ಹೆಚ್ ಡಿ ದೇವೇಗೌಡ ಅವರ ವೈಯಕ್ತಿಕ ಬದುಕು ಮತ್ತು ಅವರ ಸುದೀರ್ಘ ರಾಜಕೀಯ ಜೀವನದ ವಿವರಗಳನ್ನು ಒಳಗೊಂಡ ಪುಸ್ತಕ ಶ್ರೀ ಸುಗತ ಶ್ರೀನಿವಾಸ ರಾಜು ಅವರ 'Furrows In A Field' (ಹೊಲದ ಮಣ್ಣಲಿ ನೇಗಿಲ ಗೆರೆಗಳು). ೨೦೨೧ರ ಕೊನೆಯಲ್ಲಿ ಪ್ರಕಟವಾದ ಈ ಪುಸ್ತಕ ನಾನು ಓದಿದ ವರ್ಷದ ಅತ್ಯುತ್ತಮ ಪುಸ್ತಕಗಳಲ್ಲೊಂದು. ಇಪ್ಪತ್ತೆರಡು ಅಧ್ಯಾಯಗಳಲ್ಲಿ ದೇವೇಗೌಡರ ಜೀವನದ ಹಲವಾರು ಆಯಾಮಗಳನ್ನು ಪರಿಚಯಿಸುವ ಈ ಪುಸ್ತಕವು ತನ್ನಉಪ ಶೀರ್ಷಿಕೆ (An unexplored life of H D Devegouda)ಗೆ ಖಂಡಿತ ನ್ಯಾಯ ಒದಗಿಸಿದೆ. ಶೋಧಿಸಿ, ಅಧ್ಯಯನ ಮಾಡಿ ಒದಗಿಸಿರುವ ಹಲವಾರು ಮಾಹಿತಿಗಳು ದೇವೇಗೌಡರ ಬಗ್ಗೆ ಮತ್ತು ಅವರ ರಾಜಕೀಯದ ಬಗ್ಗೆ ಅರಿವಿರುವ ನನ್ನಂತಹ ಕನ್ನಡಿಗರಿಗೂ ಆಶ್ಚರ್ಯ ಮತ್ತು ಅಭಿಮಾನ ತರುವ ಅವರ ಬಗೆಗಿನ ಅನೇಕ ಸಂಗತಿಗಳ ಪರಿಚಯ ಮಾಡಿಸುತ್ತವೆ.

ಪ್ರಧಾನಿಯಾಗುವ ಮುಂಚಿನ ಮತ್ತು ಆನಂತರದ ಎರಡು ಭಾಗಗಳಾಗಿ ವಿಂಗಡಿಸಿದ ಪುಸ್ತಕದ ಒಂದೊಂದು ಅಧ್ಯಾಯವೂ ಸ್ವಾರಸ್ಯಕರವಾಗಿದೆ. ಆರು ನೂರು ಪುಟಗಳ ಪುಸ್ತಕವಾದರೂ ಸುಗತ ಅವರ ಬರವಣಿಗೆಯ ಶೈಲಿ ಉದ್ದಕ್ಕೂ ಓದುವ ಕುತೂಹಲವನ್ನು ಹಿಡಿದಿಡುತ್ತದೆ. ಮಾಹಿತಿಗಳನ್ನು ಕಲೆ ಹಾಕಿ, ಸಂಬಂಧಪಟ್ಟವರಲ್ಲಿ ದೃಢೀಕರಿಸಿ, ಕೇವಲ ಪತ್ರಿಕಾ ವರದಿಯೆನಿಸದಂತೆ ವಿವರಗಳನ್ನು ಪ್ರಸ್ತಾಪಿಸುವ ರೀತಿ ಇಷ್ಟವಾಗುತ್ತದೆ. ಸ್ವಭಾವತಃ ಪ್ರಚಾರ ಪ್ರಿಯರಲ್ಲದ ದೇವೇಗೌಡರ ಬಗೆಗೆ ಮಾಧ್ಯಮ ವಲಯ ಮತ್ತುಪತ್ರಿಕಾ ವಲಯಗಳು ಅಗತ್ಯ ಪ್ರಮಾಣದ ವರದಿ ಮಾಡಲಿಲ್ಲವೆಂದು ಈ ಪುಸ್ತಕ ಓದುವಾಗ ಸ್ಪಷ್ಟವಾಗುತ್ತದೆ. 'ನಡೆದದ್ದು ಭಾರತ, ಬರೆದದ್ದು ರಾಮಾಯಣ' ಎನ್ನುವಂತೆ ಮಾಧ್ಯಮದವರು ನಡೆದುಕೊಂಡಿದ್ದರಿಂದ ಕೆಲವು ನಾಯಕರಿಗೆ ಅನ್ಯಾಯವಾಗಿದೆ. ಇನ್ನು ಕೆಲವರಿಗೆ ಲಾಭವೂ.

ಪುಸ್ತಕದ ಮೊದಲ ಭಾಗದಲ್ಲಿ ದೇವೇಗೌಡರ ಬಾಲ್ಯ, ಆರಂಭದ ರಾಜಕೀಯ, ಕರ್ನಾಟಕ ಶಾಸನ ಸಭೆಯ ಅವರ ಅನುಭವಗಳು, ಎಪ್ಪತ್ತರ ದಶಕದಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರ ಉತ್ತಮ ಕಾರ್ಯನಿರ್ವಹಣೆ, ಹಲವು ಬಾರಿ ಅರ್ಹತೆಯಿದ್ದೂ ಕೈ ತಪ್ಪಿದ ಮುಖ್ಯಮಂತ್ರಿ ಪದವಿ, ಕಡೆಗೂ ೧೯೯೪ರಲ್ಲಿ ಮುಖ್ಯಮಂತ್ರಿಯಾದದ್ದು, ಕರ್ನಾಟಕದ ಜೀವನದಿಗಳಾದ ಕಾವೇರಿ ಮತ್ತು ಕೃಷ್ಣಾ ನದಿಗಳ ನೀರಿನ ಸೂಕ್ತ ಬಳಕೆಗೆ ಅವರು ರಾಜಕೀಯ ಜೀವನದುದ್ದಕ್ಕೂ ಅವಿರತ ಶ್ರಮಿಸಿ ಕೈಗೊಂಡ ಕ್ರಮಗಳು - ಹೀಗೆ ಪ್ರಧಾನಿ ಆಗುವವರೆಗೂ ಅವರು ಸಾಗಿ ಬಂದ ದಾರಿಯ ಚಿತ್ರ ಇದೆ.

ರಾಜಕೀಯವಾಗಿ ಹಳೆ ಮೈಸೂರು ಪ್ರಾಂತ್ಯಕ್ಕೇ ಸೇರಿದ ಚಿಕ್ಕಮಗಳೂರು ಭಾಗದ ಮಲೆನಾಡಿನ ಗ್ರಾಮೀಣ ಪರಿಸರದಿಂದ ಬಂದವನಾಗಿ ನನಗೆ ದೇವೇಗೌಡರ ಗ್ರಾಮೀಣ-ಸಣ್ಣಪಟ್ಟಣದ ಮತ್ತು ಕೃಷಿ ಕುಟುಂಬದ ಹಿನ್ನೆಲೆಯ ಬಗ್ಗೆ ಓದುವಾಗ ನಮ್ಮ ಭಾಗದಲ್ಲಿ ಇದ್ದಂಥದೇ ಜೀವನ ಕ್ರಮದಂತೆ ಅನಿಸಿತು. ಅವರ ಆರಂಭದ ರಾಜಕೀಯ ಚಟುವಟಿಕೆಯ ಬಗೆಗೆ ಓದುವಾಗಲೂ ನಾನು ಬಾಲ್ಯದಲ್ಲಿ ಕಂಡಿದ್ದ ಕೇಳಿದ್ದ ಅನೇಕ ಸಂಗತಿಗಳನೆನಪು ಬಂತು. ದೇವೇಗೌಡರಿಗಿಂತ ಹತ್ತು-ಹನ್ನೆರಡು ವರ್ಷಗಳಷ್ಟು ಹಿರಿಯರಿದ್ದ ನನ್ನ ಅಜ್ಜ ಸಹ ರಾಜಕೀಯದಲ್ಲಿದ್ದರು. ಅವರೂ ಸಹ ಮೂಲದಲ್ಲಿ ಕಾಂಗ್ರೆಸ್ಸಿಗರಾಗಿದ್ದು ನಂತರದಲ್ಲಿ ವಿರೋಧ ಪಕ್ಷದಲ್ಲಿದ್ದವರು. ಹೆಚ್ಚೇನೂ ಶಾಲಾ ಶಿಕ್ಷಣ ಪಡೆದಿರದಿದ್ದರೂ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ತಾಲೂಕು ಬೋರ್ಡ್ ಸದಸ್ಯರಾಗಿ ಸಕ್ರಿಯರಾಗಿ ಇರುತ್ತಿದ್ದುದನ್ನು ಬಾಲ್ಯದ ವರ್ಷಗಳಲ್ಲಿ ಹತ್ತಿರದಿಂದ ಕಂಡಿದ್ದೆ. ನನ್ನದು ಪ್ರಭಾವಿಸಲ್ಪಡುವ ವಯಸ್ಸಾದ್ದರಿಂದ ರಾಜಕೀಯ ನಾಯಕರ ಬಗೆಗೆ ಒಂದು ಬಗೆಯ ಕೌತುಕದ ಗೌರವ ಮೂಡಿತ್ತು. ನನ್ನಜ್ಜನ ಮುಂದಾಳತ್ವ, ಮುತ್ಸದ್ದಿತನ, ಸಮಯೋಚಿತ ಕಾಠಿಣ್ಯ ಎಲ್ಲವೂ ಅಭಿಮಾನಕ್ಕೆ ಯೋಗ್ಯ ಸಂಗತಿಗಳೆನಿಸುತ್ತಿದ್ದವು. ರಾಜಕೀಯದ ಬಗ್ಗೆ ರಾಜಕೀಯ ನಾಯಕರ ಬಗ್ಗೆ ಕುತೂಹಲವೂ ಉಂಟಾಗುತ್ತಿತ್ತು. ಆ ಕುತೂಹಲ ಇಂದಿಗೂ ಇದೆ. ದೇವೇಗೌಡರು ಆರಂಭದ ದಿನಗಳಲ್ಲೇ ವ್ಯಕ್ತಪಡಿಸುತ್ತಿದ್ದ ನಾಯಕತ್ವದ ಗುಣ, ಧೈರ್ಯ, ಛಲ, ಗಳಿಸುತ್ತಿದ್ದ ಜನಪ್ರಿಯತೆ ಈ ಎಲ್ಲದರ ಬಗೆಗೆ ಓದುವಾಗ ಹೆಚ್ಚಿನ ಆರ್ಥಿಕ ಸಾಮಾಜಿಕ ಹಿನ್ನೆಲೆಯಿಲ್ಲದೆಯೂ ಅವರು ಕೇವಲ ತಮ್ಮ ಇಚ್ಛಾಶಕ್ತಿ ಮತ್ತು ಶ್ರಮವನ್ನು ನಂಬಿ ಮುಂದುವರೆದದ್ದು ಇದೆಲ್ಲದರ ಪರಿಚಯ ಆಯಿತು.

ಅವರು ಶಾಸಕರಾಗಿ ಶಾಸನ ಸಭೆಯಲ್ಲಿ ಕಳೆದ ದಿನಗಳನ್ನು ಸುಗತ ಅವರು ಚೆನ್ನಾಗಿ ವಿವರಿಸಿದ್ದಾರೆ. ಶಾಸಕನಾಗಿ ತಮ್ಮ ಮೊದಲನೇ ಅವಧಿಯಲ್ಲೇ ಸದನದ ಕಲಾಪಗಳಲ್ಲಿ ನಿಯಮಿತವಾಗಿ ಪಾಲುಗೊಳ್ಳುತ್ತಿದ್ದ ರೀತಿ, ಕಾವೇರಿ ನೀರಿನ ಬಳಕೆಯ ಸಂಬಂಧ ಮಾತನಾಡಿದ್ದು, ಸಭೆಯಲ್ಲಿ ಮಾತನಾಡುವ ಮುನ್ನ ಕೈಗೊಳ್ಳುತ್ತಿದ್ದ ಅಧ್ಯಯನ, ಸಭೆಯ ಕಾರ್ಯ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದದ್ದು, ಇವೆಲ್ಲವೂ ಅವರ ಮುಂದಿನ ದೀರ್ಘ ರಾಜಕೀಯ ಜೀವನದಲ್ಲಿ ಉಪಯುಕ್ತವಾಗಿವೆ. ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕಾದ ಅಗತ್ಯ ಇರುವುದರಿಂದ, ನಾಯಕರಾದವರು ಈ ವ್ಯವಸ್ಥೆಯ ಕೆಲವು ರೀತಿರಿವಾಜುಗಳನ್ನು ಕಲಿಯುವುದು ಅನಿವಾರ್ಯ. ಹಾಗೆ ಮಾಡದೇ ಇದ್ದಾಗ ಏನಾಗುತ್ತದೆ ಎನ್ನುವುದನ್ನೂ ನಾವು ನೋಡಿದ್ದೇವೆ. ದೇವೇಗೌಡರು ತಮ್ಮ ಮೊದಲಿನ ದಿನಗಳಿಂದ ಸದನದಲ್ಲಿ ಚರ್ಚಿಸಬೇಕಾದ ಸಂಗತಿಗಳ ಬಗೆಗೆ ಪುಸ್ತಕಗಳನ್ನು ಓದುತ್ತಿದ್ದುದು, ಟಿಪ್ಪಣಿ ಮಾಡಿಕೊಳ್ಳುತ್ತಿದ್ದುದು, ಅಗತ್ಯವಿದ್ದಾಗ ಸಂಬಂಧಪಟ್ಟ ನಾಯಕರುಗಳಿಗೆ ಪತ್ರಗಳನ್ನು ಬರೆಯುತ್ತಿದ್ದುದು ಈ ಎಲ್ಲದರ ಬಗ್ಗೆ ಪುಸ್ತಕದಲ್ಲಿ ಇದೆ.

ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ಶಾಸನಸಭೆಯಲ್ಲಿ ನಡೆಸುತ್ತಿದ್ದ ಚರ್ಚೆಗಳು ಇಂದಿಗೂ ದಂತಕತೆಯಂತೆ ಜನಮನದಲ್ಲಿ ಉಳಿದಿವೆ. ಸ್ಪಷ್ಟ ಬಹುಮತದ ಅಧಿಕಾರವಿದ್ದರೂ ಆಳುವ ಪಕ್ಷದವರು ವಿರೋಧ ಪಕ್ಷದವರಲ್ಲಿ ಹೊಂದಿದ್ದ ಗೌರವ, ಜನತಂತ್ರದಲ್ಲಿ ಇಡುತ್ತಿದ್ದ ನಂಬಿಕೆಯನ್ನು ನಾವು ಗಮನಿಸಲೇಬೇಕು. ರಾಜಕೀಯ ವಿರೋಧ ಬೇರೆ ವೈಯಕ್ತಿಕ ವಿಶ್ವಾಸ ಬೇರೆ ಎಂದು ನಂಬುತ್ತಿದ್ದ ಕಾಲ. ಇದರ ಮಹತ್ವವನ್ನು ಇಂದು ಎಷ್ಟು ಒತ್ತಿ ಹೇಳಿದರೂ ಕಡಿಮೆಯೇ. ರಾಜಕೀಯ ವಿರೋಧವು ಆಡಳಿತ ಪಕ್ಷದವರ ದ್ವೇಷದ ವಸ್ತುವಾಗುವುದು ಜನತಂತ್ರ ವ್ಯವಸ್ಥೆಯನ್ನೇ ಅಪಾಯಕ್ಕೆ ಸಿಲುಕಿಸುವುದು. ಜನತಂತ್ರವೆಂದರೆ ಬರೀ ಬಹುಮತದ ಆಡಳಿತವಷ್ಟೇ ಅಲ್ಲ. ಬಹುಮತ ಪಡೆದವರು ಏನು ಬೇಕಾದರೂ ಮಾಡಬಹುದೆಂದೂ ಅಲ್ಲ. ಇಲ್ಲಿ ಪಾಲಿಸಲೇಬೇಕಾದ ಕೆಲವು ಮೌಲ್ಯಗಳಿರುತ್ತವೆ. ಮತ್ತು ಆ ಮೌಲ್ಯಗಳು ಕಾನೂನಿನಿಂದಾಗಲೀ, ಒತ್ತಾಯದಿಂದಾಗಲೀ ರೂಢಿಸಲಾಗದಂತಹವು. ಜನತಂತ್ರವೆಂದರೆ ವಿಚಾರಗಳ ಕಾಳಗವೇ ಹೊರತು ವ್ಯಕ್ತಿಗಳ ಕಾಳಗವಲ್ಲಎಂದು ಸ್ಪಷ್ಟವಾಗಿ ನಂಬುವುದು ಅಂತಹ ಒಂದು ಮೌಲ್ಯ. ಅರಸು-ದೇವೇಗೌಡ ಪ್ರತಿನಿಧಿಸುವುದು ಅದೇ ಮೌಲ್ಯವನ್ನು.

ಇನ್ನು ಪುಸ್ತಕದ ಎರಡನೇ ಭಾಗದಲ್ಲಿ ಅವರು ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭ ಮತ್ತು ಅದಕ್ಕೆ ಕಾರಣವಾದ ರಾಜಕೀಯ ಅನಿವಾರ್ಯತೆಗಳು, ಅನಿರೀಕ್ಷಿತವಾಗಿ ಎದುರಾದ ಪರೀಕ್ಷೆ ಮತ್ತು ಅವಕಾಶವನ್ನು ಅವರು ಎದುರುಗೊಂಡದ್ದು, ರಾಷ್ಟ್ರದ ಆಡಳಿತ ಯಂತ್ರ ನಡೆಸಲು ಅವರು ರೂಪಿಸಿದ ದಕ್ಷ ಅಧಿಕಾರಿಗಳ ಪಡೆ, ಹಿಂದಿನ ವರ್ಷಗಳಲ್ಲಿ ನಾಯಕರುಗಳಿಗೆ ಸವಾಲಾಗಿದ್ದ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಆಡಳಿತಕ್ಕೆ ಸಂಬಂಧಪಟ್ಟಂತೆ ಅವರು ತೆಗೆದುಕೊಂಡ ಚುರುಕಾದ ತೀರ್ಮಾನಗಳು, ಸದ್ದುಗದ್ದಲವಿಲ್ಲದೆ ಅಧಿಕಾರದ ಅಹಂ ಇಲ್ಲದೆ ಸಂಬಂಧಪಟ್ಟವರೊಡನೆ ಮಾತಾಡಿ ಮನವೊಲಿಸಿ ಮುನ್ನಡೆಯುತ್ತಿದ್ದ ರೀತಿ, ಸದಾ ಜನರ ಹತ್ತಿರಕ್ಕೆ ಹೋಗಿ ಸ್ಪಂದಿಸುತ್ತಿದ್ದ ರೀತಿ - ಇದೆಲ್ಲವೂ ಓದುತ್ತಿದ್ದರೆ ಜನತಂತ್ರವೆಂದರೆ ಹೀಗಿರಬೇಕು ಎಂದು ಅನಿಸದೇ ಇರದು.

ಪ್ರಧಾನಿಯಾಗಿ ಅವರು ತಮ್ಮ ಭದ್ರತೆಯ ಹೊಣೆ ಹೊತ್ತಿದ್ದ ವಿಶೇಷ ಭದ್ರತಾ ದಳ (Special Protection Group) ದ ಜೊತೆ ನಡೆದುಕೊಳ್ಳುತ್ತಿದ್ದದ್ದು, ಜೀವನದುದ್ದಕ್ಕೂ ಜನರ ಮಧ್ಯೆಯೇ ಇದ್ದ ರಾಜಕಾರಣಿಯಾಗಿ ಈಗ ಭದ್ರತೆಯ ಕಾರಣದಿಂದ ಹೊಸ ಬಗೆಯ ಪ್ರಯಾಣದ ವ್ಯವಸ್ಥೆಗೆ ಹೊಂದಿಕೊಳ್ಳಲು ಪೇಚಾಡಿದ್ದು ಅವರ ಸರಳತೆ ಮತ್ತು ಜನಾನುರಾಗಿ ವ್ಯಕ್ತಿತ್ವದ ಪರಿಚಯ ಮಾಡಿಸುತ್ತದೆ. ಕಾಶ್ಮೀರದಲ್ಲಿ ಪ್ರವಾಸದಲ್ಲಿದ್ದಾಗ ತೆರೆದ ಜೀಪಿನಲ್ಲಿ ಭಯವಿಲ್ಲದೆ ಪ್ರಯಾಣಿಸಿದ್ದು ಇದೆಲ್ಲವೂ ಪುಸ್ತಕದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ದಾಖಲಾಗಿವೆ. ಕೆಲವು ನಾಯಕರು ಇರುವುದೇ ಹಾಗೆ. ಅಜಾತಶತ್ರುಗಳು. ಭದ್ರತೆಯ ವಿಶೇಷ ಕ್ರಮಗಳು ಅವರಿಗೆ ತಮ್ಮನ್ನು ತಮ್ಮ ಜನರಿಂದ ದೂರವಿರಿಸುವ ಸಂಕೋಲೆಗಳು ಅನಿಸುತ್ತವೆ. 

ಪುಸ್ತಕದ ಎರಡನೆಯ ಭಾಗದಲ್ಲಿ ನನಗೆ ಬಹಳ ಇಷ್ಟವಾದ ಅಧ್ಯಾಯ How Many ‘Brutuses’, Sir? (ಎಷ್ಟು ಮಂದಿ 'ಬ್ರೂಟಸ್' ರು, ಸರ್?). ಕಾಂಗ್ರೆಸ್ ಪಕ್ಷವು ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಸಮರ್ಥನೆಯನ್ನು ವಾಪಸ್ ಪಡೆಯಲು ನಿರ್ಧರಿಸಿ ಇನ್ನೇನು ಸರ್ಕಾರ ಪತನವಾಗುವುದಕ್ಕೆ 'ವಿಶ್ವಾಸ ಮತ'ವೆಂಬ ಔಪಚಾರಿಕತೆಯೊಂದೇ ಉಳಿದಿದ್ದಾಗಲೂ ದೇವೇಗೌಡರ ಗಮನಕ್ಕೆ ಬರದಂತೆ ಅವರ ಗೌರವಕ್ಕೆ ಧಕ್ಕೆಯಾಗುವಂತಹ ರಾಜಕೀಯ ನಡೆಸಿದ್ದ ಅವರದೇ ಗುಂಪಿನ ಕೆಲವರ ಬಗ್ಗೆ ವಿವರಿಸಲು ಗೌಡರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಚಂದ್ರನ್ ಅವರು ಬಳಸಿದ ವಾಕ್ಯ ಇದು. ಈ ಅಧ್ಯಾಯ ಅತ್ಯಂತ ಕುತೂಹಲಕರವಾಗಿದೆ. ಶೇಕ್ಸ್ ಪಿಯರನ 'ಜೂಲಿಯಸ್ ಸೀಸರ್ ' ನಾಟಕದ ಪ್ರತಿಮೆಯನ್ನು ಬಳಸಿ, ದೇವೇಗೌಡರ ರಾಜಕೀಯ ಜೀವನದ ಅತ್ಯಂತ ಪ್ರಮುಖ ಸಂಸತ್ ಕಲಾಪ ದ ಬಗ್ಗೆ ಸುಗತ ಬರೆದಿರುವುದು ಈ ಪುಸ್ತಕದ ಓದನ್ನು ಜೀವನ ಚರಿತ್ರೆಯ ರೂಢಿಗತ ಸಾಹಿತ್ಯ ಪ್ರಕಾರವನ್ನು ಮೀರಿ ದುರಂತ ನಾಟಕವೊಂದರ ಅಂತಃಸ್ಪರ್ಶಿ ಅನುಭವದತ್ತ ಒಯ್ಯುವಂತೆ ಮಾಡಿದೆ.

'ಜೂಲಿಯಸ್ ಸೀಸರ್' ನಾಟಕದ ವಸ್ತು ಸಹ ರಾಜಕೀಯಕ್ಕೆ, ಜನತಂತ್ರಕ್ಕೆ ಸಂಬಂಧಪಡುವುದರಿಂದ ಅದರ ಪ್ರಸ್ತಾಪ ಔಚಿತ್ಯಪೂರ್ಣವಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಒಂದು ಪರಿಣಾಮಕಾರಿ ಪ್ರಯೋಗವಾದ ದೇವೇಗೌಡರ ಸರ್ಕಾರ ಇತ್ತೀಚಿನ ಭಾರತದ ರಾಜಕೀಯದಲ್ಲಿ ಒಂದು ಮಹತ್ವದ ಘಟನೆಯೇ. ಆಡಳಿತದಲ್ಲಿದ್ದ ಅಲ್ಪ ಕಾಲದಲ್ಲಿ ಪರಿಣಾಮಕಾರಿಯಾಗಿ, ಮುತ್ಸದ್ದಿತನದಿಂದ ಮುಂದುವರಿಯುತ್ತಿದ್ದಾಗಲೇ ಒಂದು ಗಂಭೀರವಾದ ಯಾವುದೇ ಕಾರಣವಿಲ್ಲದೇ ಅವರ ಸರ್ಕಾರವನ್ನು ಪತನಗೊಳಿಸಿದ್ದು ಸ್ವಾಭಾವಿಕವಾಗಿಯೇ ದೇವೇಗೌಡರನ್ನು ಮತ್ತು ಅವರ ಆಡಳಿತವನ್ನು ಒಪ್ಪುತ್ತಿದ್ದ ಇತರ ಹಲವು ರಾಜಕಾರಣಿಗಳನ್ನೂ ಅಸಮಾಧಾನಗೊಳಿಸಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದವರಿಗೆ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಳ್ಳುವ ಅಗತ್ಯವಿತ್ತು. ಅಲ್ಲೂ ಕೆಲ ಪ್ರಮುಖ ನಾಯಕರುಗಳಿಗೆ ಈ ನಿರ್ಧಾರದ ಬಗ್ಗೆ ಒಪ್ಪಿಗೆಯಿರಲಿಲ್ಲ. ಅವರಾರೂ ಅಂದಿನ ಸಭೆಯಲ್ಲಿ ತುಟಿ ಬಿಚ್ಚಲಿಲ್ಲ. ಒಟ್ಟಿನಲ್ಲಿ ಶೇಕ್ಸ್ ಪಿಯರ್ ನಾಟಕದ ರೋಮ್ ನ ಸೆನೆಟ್ ಹಾಲ್ ನಂತಹ ವಾತಾವರಣ ಎರಡು ಸಾವಿರ ವರ್ಷಗಳ ನಂತರ ನಮ್ಮ ಪಾರ್ಲಿಮೆಂಟ್ ಭವನದಲ್ಲೂ ಸೃಷ್ಟಿಯಾಗಿದ್ದು ರಾಜಕೀಯದಲ್ಲಿ ಆಸಕ್ತಿ ಉಳ್ಳವರ ತೀವ್ರ ಆಸಕ್ತಿಯನ್ನು ಕೆರಳಿಸಿತ್ತು. ವಾದ, ಪ್ರತಿವಾದಗಳು ಅಲ್ಲಿ ನಡೆದಿದ್ದವು. ಇದೀಗ ಸುಮಾರು ಇಪ್ಪತ್ತೈದು ವರ್ಷಗಳ ನಂತರ ಆ ಕಲಾಪದ ರೋಚಕ ಸನ್ನಿವೇಶವನ್ನು ಸಚಿತ್ರವಾಗಿ ಸಾಧಾರವಾಗಿ ಸುಗತ ಸೃಷ್ಷ್ಟಿಸಿಕೊಟ್ಟಿದ್ದಾರೆ.

'ಜೂಲಿಯಸ್ ಸೀಸರ್' ನಾಟಕದ ಹೃದಯವಿರುವುದೇ ಅಂಕ ೩, ದೃಶ್ಯ ೨ ರಲ್ಲಿ. ಸರ್ವಾಧಿಕಾರಿ ಧೋರಣೆಯುಳ್ಳವನು ಎಂಬ ಕಾರಣಕ್ಕೆ ಬ್ರೂಟಸ್ ನಿಂದ ಹತ್ಯೆಯಾಗಿರುವ ತನ್ನ ಪ್ರಿಯ ಗೆಳೆಯ ಮತ್ತು ನಾಯಕ ಸೀಸರ ನನ್ನು ವಹಿಸಿಕೊಂಡು ಮಾರ್ಕ್ ಆಂಟನಿ ಮಾಡುವ ಅದ್ಭುತ ಭಾಷಣ ಇದೇ ದೃಶ್ಯದಲ್ಲಿ ಬರುತ್ತದೆ. ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ ತಮ್ಮ ಮೇಲೆ ಬಳಕೆ ಮಾಡಿದ ಹಿಂದಿ ಪದವೊಂದರ ಚತುರ ಪುನರುಚ್ಚಾರಣೆಯ ಮೂಲಕ ಎದಿರೇಟು ನೀಡಿದ ದೇವೇಗೌಡರ ಭಾಷಣವನ್ನು ಮಾರ್ಕ್ ಆಂಟನಿಯ ಭಾಷಣಕ್ಕೆ ಹೋಲಿಸುತ್ತಾ ರಾಜಕೀಯದಾಟದಲ್ಲಿ ವರ್ಷಗಟ್ಟಲೆ ಸಕ್ರಿಯವಾಗಿದ್ದು ತಂತ್ರಗಾರಿಕೆ, ಸ್ಪರ್ಧೆ, ಮನವೊಲಿಕೆ, ಸೋಲು, ನಿಷ್ಠೆ, ವಂಚನೆ ಎಲ್ಲದನ್ನೂ ಕಂಡಿರುವ ರಾಜಕಾರಣಿಗೆ ಮಾತುಗಳು ಸರಾಗವಾಗಿ ಬರುವ ಬಗ್ಗೆ ಸುಗತ ಬರೆಯುತ್ತಾರೆ. ಗೌಡರ ಅಂದಿನ ಭಾಷಣ ನೆನಪಿನಲ್ಲುಳಿಯುವಂತೆ ಇತ್ತು. ಇನ್ನೂ ಹೆಚ್ಚಿನ ವಿವರಗಳಿಗೆ ಪುಸ್ತಕವನ್ನೇ ಓದಿ.

ದೇವೇಗೌಡರು ನೀರಾವರಿ ಯಲ್ಲಿ ಹೊಂದಿರುವ ಅಪಾರ ಅನುಭವ ಮತ್ತು ಅವರು ಅಧ್ಯಯನಗಳಿಂದ ಪ್ರಪಂಚದ ವಿವಿಧ ದೇಶಗಳ ನೀರು ಹಂಚಿಕೆ ವಿಷಯದ ಬಗ್ಗೆ ಗಳಿಸಿರುವ ಜ್ಞಾನ ಇದರ ಕುರಿತು ಸುಗತ ಅವರು ಈ ಪುಸ್ತಕದ ಎರಡೂ ಭಾಗಗಳಲ್ಲಿ ಒಂದೊಂದು ಅಧ್ಯಾಯದಲ್ಲಿ ವಿವರವಾಗಿ ಬರೆದಿದ್ದಾರೆ. ಕರ್ನಾಟಕದಲ್ಲಿ ಕಾವೇರಿ ಮತ್ತು ಕೃಷ್ಣಾ ನೀರಿನ ಯೋಜನೆಗಳ ಬಗ್ಗೆ ನಾವು ಕನ್ನಡಿಗರಿ ಗೆ ಅಷ್ಟಿಷ್ಟಾದರೂ ಅರಿವಿದೆ. ಇನ್ನೂ ತಿಳಿಯಲು ಈ ಪುಸ್ತಕವನ್ನೇ ಓದಬೇಕು. ತಮ್ಮ ಮೊದಲನೇ ಶಾಸಕತ್ವದ ಅವಧಿಯಲ್ಲೇ ಅವರು ಹಾರಂಗಿ ಜಲಾಶಯದ ಬಗ್ಗೆ ಶಾಸನ ಸಭೆಯಲ್ಲಿ ಮಾತನಾಡಿದ್ದರು. 'ಬಾಯಾರುವ ಮುನ್ನವೇ ಬಾವಿ ತೋಡುವ' ವಿವೇಕವು ರೈತನ ಮಗನಾದ ಅವರಿಗೆ ಸಹಜವಾಗಿ ಬಂದಿರಬೇಕು. ಹಾಗೆಯೇ ತಾವು ಮುಖ್ಯಮಂತ್ರಿಯಾದೊಡನೆ ಕೃಷ್ಣಾ ನದಿ ನೀರಿನ ಬಳಕೆಯ ವಿಚಾರದಲ್ಲಿ ತೀವ್ರ ಆಸಕ್ತಿ ತಳೆದು ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಮರುಚಾಲಿಸಿದ್ದು ಅವರ ಆಡಳಿತ ದಕ್ಷತೆಗೆ ಸಾಕ್ಷಿಗಳು. ಇತ್ತೀಚೆಗೆ ಬೆಂಗಳೂರಿನ 'ಬುಕ್ ವರ್ಮ್' ಪುಸ್ತಕದಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಗತ ಅವರು Furrows In A Field ಪುಸ್ತಕದ ಕುರಿತು ನಾಗರೀಕ ಹಕ್ಕುಗಳ ವಕೀಲ ಶ್ರೀ ಬಿ ಟಿ ವೆಂಕಟೇಶ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ನೀರಾವರಿ ಗೆ ಸಂಬಂಧಪಟ್ಟಂತೆ ಗೌಡರ ಸಾಧನೆಗಳ ವಿಚಾರವಾಗಿ ಮಾತನಾಡಿದರು. ನರ್ಮದಾ ಮತ್ತು ಗಂಗಾ ನದಿ ನೀರಿನ ಬಳಕೆಯ ವಿಚಾರವಾಗಿ ಅವರು ತೆಗೆದುಕೊಂಡ ದೂರದೃಷ್ಟಿಯ ತೀರ್ಮಾನಗಳ ಬಗ್ಗೆ ತಿಳಿಸಿಕೊಟ್ಟರು.

ಇದೇ ಸಭೆಯಲ್ಲಿ ಬಿ ಟಿ ವೆಂಕಟೇಶ ಅವರು ಹೇಳಿದ 'ದೇವೇಗೌಡರ ಆತ್ಮಚರಿತ್ರೆ ಎಂದರೆ ಪ್ರಜಾಪ್ರಭುತ್ವದ ಆಚರಣೆಯೇ ಆಗಿದೆ. ಅವರ ಆಡಳಿತದ ವೈಖರಿಯೂ ಪ್ರಜಾಪ್ರಭುತ್ವವನ್ನೇ ಉಸಿರಾಡಿತ್ತು' ಎಂಬ ಮಾತು ಇಷ್ಟವಾಯಿತು. ನಾನು ಈ ಬರಹದಲ್ಲಿ ಈ ಹಿಂದೆಯೇ ವಿವರಿಸಿದಂತೆ ಪ್ರಜಾಪ್ರಭುತ್ವದ ಲಿಖಿತ ಹಾಗೂ ಅಲಿಖಿತ ಸಂಪ್ರದಾಯಗಳು ಮತ್ತು ವಿವೇಚನೆಗಳ ಬಗ್ಗೆ ದೇವೇಗೌಡರು ತಮ್ಮ ಶಾಸಕತ್ವದ ಮೊದಲ ದಿನಗಳಿಂದಲೂ ಯಾವಾಗಲೂ ಅತ್ಯಂತ ಗೌರವ ಜಾಗೃತಿಯಿಂದ ನಡೆದುಕೊಂಡವರು.

'ಮಾತಿಗಿಂತ ಕೃತಿ ಲೇಸು' ಎಂದು ನಂಬುವ ದೇವೇಗೌಡರು ಪ್ರಚಾರದ ಹಿಂದೆ ಬಿದ್ದವರೇ ಅಲ್ಲ. ಹೀಗಾಗಿಯೇ ಇಂತಹ ನಾಯಕರುಗಳ ಸಾಧನೆಗಳನ್ನು ಪರಿಚಯಿಸಲು Furrows In A Field ನಂತಹ ಕೃತಿಗಳು ಮುಖ್ಯವಾಗುತ್ತವೆ. ಸಂಶೋಧನಾ ಅಧ್ಯಯನದ ಮಾದರಿಯಲ್ಲಿ ಕರ್ನಾಟಕದ ಒಂದು ಕಾಲಘಟ್ಟದ ರಾಜಕೀಯದ ಪರಿಚಯವೂ ಇಲ್ಲಿರುವುದರಿಂದ ಆ ನಿಟ್ಟಿನಲ್ಲಿಯೂ ಇದೊಂದು ಮುಖ್ಯವಾದ ದಾಖಲೆಯಾಗಿದೆ.

Sunday, April 25, 2021

ದಿ ಪ್ಲೇಗ್ - ಆಲ್ಬರ್ಟ್ ಕಮೂ ಕಾದಂಬರಿ

೧೯೪೦ ರ ದಶಕದಲ್ಲಿ ಆಲ್ಬರ್ಟ್  ಕಮೂ ಬರೆದ 'ದಿ ಪ್ಲೇಗ್' ಕಾದಂಬರಿಯು ಕಳೆದ ಒಂದು ವರ್ಷದ ಅವಧಿಯಲ್ಲಿ ಕೋವಿಡ್ ಮಹಾ ಮಾರಿಯ ಹಿನ್ನೆಲೆಯಲ್ಲಿ ಅನೇಕ ಲೇಖನಗಳಲ್ಲಿ ಚರ್ಚೆಗೆ ಬಂದಿರುವುದನ್ನು ನೋಡಿದ್ದೇನೆ. 

ಅಲ್ಜಿರಿಯಾ ದೇಶದ ಒಂದು ನಗರವಾದ ಓರಾನ್ ಎಂಬುದು ಈ ಕಾದಂಬರಿಯ ಕೇಂದ್ರ ಸ್ಥಳ.  ಆರಂಭದಲ್ಲಿ ಇಲ್ಲಿನ ಜನ ತಮ್ಮ ತಮ್ಮ  ವೃತ್ತಿ ವ್ಯವಹಾರಗಳಲ್ಲಿ ತೊಡಗಿಕೊಂಡು ಪ್ರಕೃತಿಯೊಡನೆ ಅಷ್ಟೇನೂ ಸಂಪರ್ಕ ಇರದವರಂತೆ ತಮ್ಮ  ಪಾಡಿಗೆ ಇರುತ್ತಾರೆ.  

ಕಾದಂಬರಿಯ ನಿರೂಪಕ ಮತ್ತು ಕೇಂದ್ರ ಪಾತ್ರವಾದ ಡಾಕ್ಟರ್ ರಿಯೂ ಒಂದು ದಿನ ಒಂದು ಸತ್ತ ಇಲಿಯನ್ನು ನೋಡುತ್ತಾನೆ. ಸ್ವಲ್ಪ ಸಮಯದಲ್ಲೇ ಮತ್ತೊಂದು. ಮಗದೊಂದು.  ಹೀಗೆ  ಓರಾನ್ ನಲ್ಲಿ ಒಂದಾದ ಮೇಲೆ ಒಂದರಂತೆ ಇಲಿಗಳು  ಚರಂಡಿಗಳಿಂದ  ಹೊರಬಂದು ಬೀದಿಗಳಲ್ಲಿ ಸಾಯುತ್ತವೆ. ಮೊದಲಿಗೆ ಈ ವಿದ್ಯಮಾನದ ಪ್ರಾಮುಖ್ಯತೆ ಅಲ್ಲಿನ ಜನರಿಗೆ ಅರ್ಥವಾಗುವುದಿಲ್ಲ. ಮುಂದೆ ಕೆಲವು ವಾರಗಳಲ್ಲಿ ಜ್ವರದೊಂದಿಗೆ ಬರುವ ನಿಗೂಢವಾದ ಖಾಯಿಲೆಯಿಂದ ಜನರು ಸಾಯತೊಡಗುತ್ತಾರೆ.  ರೋಗದ ಲಕ್ಷಣಗಳೂ ಭೀಕರವಾಗಿರುತ್ತವೆ. 

ಡಾಕ್ಟರ್  ರಿಯೂ ಮತ್ತು ಓರಾನಿನ ಇತರ ಡಾಕ್ಟರುಗಳು ಇದು ಪ್ಲೇಗ್ ಎಂದು ಗುರುತಿಸುತ್ತಾರೆ. ಮುನಿಸಿಪಲ್ ಅಧಿಕಾರಿಗಳು, ಸಾರ್ವಜನಿಕ ಅರೋಗ್ಯ ಇಲಾಖೆ, ವೃತ್ತ ಪತ್ರಿಕೆಗಳು, ರೇಡಿಯೋ ಹೀಗೆ ಎಲ್ಲರೂ ಪ್ಲೇಗ್ ರೋಗಕ್ಕೆ  ಸಂಬಂಧಪಟ್ಟಂತೆ ರೋಗಿಗಳ ಶುಶ್ರೂಷೆ, ಜನ ಜಾಗೃತಿ, ನೈರ್ಮಲ್ಯ ಇತ್ಯಾದಿ ಕೆಲಸಗಳಲ್ಲಿ ತೊಡಗುತ್ತಾರೆ. 

ಹೀಗೆ  ಆರಂಭವಾಗುವ ಕಾದಂಬರಿಯಲ್ಲಿ ಅಲ್ಬರ್ಟ್ ಕಮೂ ಸಮಾಜದ ವಿವಿಧ ಸ್ತರಗಳ ಜನರು  ಇಂತಹದೊಂದು ಅನಿರೀಕ್ಷಿತ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಬಗೆಯನ್ನು ತನ್ನ ಪ್ರತಿಭೆಯನ್ನು ಬಳಸಿ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಪಾತ್ರಗಳ ವೈಯಕ್ತಿಕ ಜೀವನದ ವಿವರಗಳಿಗಿಂತಲೂ ಪ್ಲೇಗ್ ಮಾರಿಗೆ  ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ವಿವರಣೆಯೇ ಹೆಚ್ಚಾಗಿ ಇದೆ. 

ಡಾಕ್ಟರ್ ರಿಯೂ ನ ಪಾತ್ರವನ್ನು ಲಂಕೇಶ್ ತಮ್ಮ ಒಂದು ಲೇಖನದಲ್ಲಿ ಹೀಗೆ ವಿವರಿಸಿದ್ದರು-

"ದೇವರ ಬಗ್ಗೆ ಅತೀ ಗೌರವವಿಲ್ಲದ, ಮನುಷ್ಯ ಬದುಕಿನಿಂದ ಅತೀ ಅಪೇಕ್ಷೆ ಇಲ್ಲದ, ಸಾವಿನ ಬಗ್ಗೆ ಅತೀ ಆತುರವಿಲ್ಲದ, ಕರುಣೆ, ಪ್ರೀತಿ ತುಂಬಿದ ಈ ಡಾಕ್ಟರ ಪಾತ್ರವನ್ನು ಸೃಷ್ಟಿಸುವ ಮೂಲಕ, ಅಲ್ಜೀರಿಯದ ಆ ಪ್ಲೇಗ್ ಬಡಿದ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ ಸಾಹಿತಿ ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲಿಸಿದ್ದಾನೆ."

ಉಳಿದಂತೆ, ಆಧುನಿಕ ಜೀವನದ ಅತಿಗಳಿಗೆ ದೇವರ ಶಿಕ್ಷೆ ಈ ಪ್ಲೇಗ್ ರೂಪದಲ್ಲಿ ಬಂದಿದೆ ಎಂದು ಭಾವಿಸುವ ಕ್ರಿಶ್ಚಿಯನ್ ಅರ್ಚಕ ಪ್ಯಾನೆಲೂ, ಪತ್ರಿಕಾ ವರದಿಯೊಂದನ್ನು ಮಾಡಲು ಬಂದು ಪ್ಲೇಗ್ ಕಾರಣದಿಂದ ಓರಾನ್  ನಗರದಲ್ಲಿ ಸಿಕ್ಕಿಕೊಳ್ಳುವ ಪತ್ರಕರ್ತ ರಾಂಬೇ , ಪ್ಲೇಗ್ ನೊಂದಿಗೆ ಹೋರಾಡುವುದಕ್ಕೆ ಡಾಕ್ಟರ್ ರಿಯೂ ಜೊತೆ ಕೈ ಜೋಡಿಸುವುದು ತನ್ನ ಕರ್ತವ್ಯವೆಂದು ತಿಳಿಯುವ  ಟರೂ, ಪ್ಲೇಗ್ ರೋಗ ತಂದೊಡ್ಡಿದ ಸನ್ನಿವೇಶವನ್ನು ಬಳಸಿಕೊಂಡು ನ್ಯಾಯ ವ್ಯವಸ್ಥೆಯ ಕಣ್ಣು ತಪ್ಪಿಸಿ ಕಾಳದಂಧೆಯಲ್ಲಿ ತೊಡಗುವ ಕೊಟಾರ್ಟ್ ಇವರೆಲ್ಲ ಕಾದಂಬರಿಯ ಇತರ ಪಾತ್ರಗಳು. 

ಡಾಕ್ಟರ್ ರಿಯೂ ನಂತೆಯೇ ಕಾದಂಬರಿಯಲ್ಲಿ ಬಹಳ ಮುಖ್ಯ ಎಂದು ನನಗೆ ಅನಿಸಿದ ಇನ್ನೊಂದು ಪಾತ್ರ ಟರೂ ನದ್ದು. "ನಾವೆಲ್ಲರೂ ಪ್ಲೇಗ್ ಪೀಡಿತರೇ. ಯಾರೂ ಇದರಿಂದ ಹೊರತಲ್ಲ" ಎನ್ನುತ್ತಾ ತನ್ನದೇ  ಜೀವನದ ಹಿನ್ನೆಲೆಯಲ್ಲಿ  ನ್ಯಾಯ ವ್ಯವಸ್ಥೆ, ರಾಜಕೀಯ ವಿಚಾರ ಧಾರೆಗಳು, ತೀವ್ರಗಾಮಿ ಸಂಘಟನೆಗಳು ಇವೆಲ್ಲದರ ಬಗ್ಗೆ ವಿಶ್ಲೇಷಣಾತ್ಮಕವಾಗಿ ಟರೂ ವಿವರಿಸುವುದು ಯೋಚಿಸಬೇಕಾದ ವಿಚಾರಗಳು ಅನಿಸಿತು. ಆದ್ದರಿಂದ ಈ ಬರಹದಲ್ಲಿ ಟರೂ ನ ಪಾತ್ರದ ಬಗ್ಗೆ ಹೆಚ್ಚು ವಿವರ ನೀಡಲು ಪ್ರಯತ್ನಿಸಿದ್ದೇನೆ. ಈ ಭಾಗವನ್ನು ಓದುವಾಗ ನಮ್ಮ ಭಾರತದ ರಾಜಕೀಯಕ್ಕೆ ಸಂಬಂಧಪಡುವ ಮಾವೋವಾದಿ ಸಂಘಟನೆಯ ಹಿನ್ನೆಲೆಯ  ಒಂದೆರಡು ಕಾದಂಬರಿಗಳು ನೆನಪಿಗೆ ಬಂದವು. ನೀಲ್ ಮುಖರ್ಜಿ ಬರೆದ 'ದಿ ಲೈಫ್ ಆಫ್ ಅದರ್ಸ್' ಮತ್ತು ಜುಂಪಾ ಲಹರಿ ಬರೆದ 'ದಿ ಲೋಲ್ಯಾನ್ಡ್'. 

ಡಾಕ್ಟರ್ ರಿಯೂ ಮತ್ತು ಟರೂ ನಡುವೆ ನಡೆಯುವ ಒಂದು ಮಾತುಕತೆ ಕಾದಂಬರಿಯಲ್ಲಿ ಒಂದು ಆಸಕ್ತಿ ಕೆರಳಿಸುವ ಘಟನೆಯಾಗಿ ಬರುತ್ತದೆ. ಹಗಲಿರುಳೆನ್ನದೆ ಪ್ಲೇಗ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಳ್ಳುವ ಈ ಇಬ್ಬರು ಸ್ನೇಹಿತರು ತಮ್ಮ ಕೆಲಸದಿಂದ ಒಂದು ಪುಟ್ಟ ವಿರಾಮ ತೆಗೆದುಕೊಂಡು ಸಮುದ್ರದಲ್ಲಿ ಈಜಲು ಹೋಗುತ್ತಾರೆ. ಆ  ಸಂದರ್ಭದಲ್ಲಿ ಟರೂ ತನ್ನ ಚಿಕ್ಕಂದಿನ ದಿನಗಳ ಬಗ್ಗೆ, ತನ್ನನ್ನು ಪ್ರಭಾವಿಸಿದ ವ್ಯಕ್ತಿಗಳು, ವಿಷಯಗಳ ಬಗ್ಗೆ ರಿಯೂನೊಂದಿಗೆ ಹಂಚಿಕೊಳ್ಳುತ್ತಾನೆ. 

ನಮ್ಮನ್ನು ಅಮರಿಕೊಳ್ಳುವ ಇನ್ನೊಂದು ಬಗೆಯ 'ಪ್ಲೇಗ್' ಬಗ್ಗೆ ಟರೂ ಹೇಳುತ್ತಾನೆ. ಓರಾನ್  ನಗರದ ಬಗ್ಗೆ ಮತ್ತು ಇಲ್ಲಿನ ಪ್ಲೇಗ್ ಬಗ್ಗೆ ತಿಳಿಯುವುದಕ್ಕಿಂತ ಬಹಳ ಮೊದಲೇ ತಾನು ಅಂಥದೊಂದು ಇನ್ನೊಂದು ಬಗೆಯ ಪ್ಲೇಗಿಗೆ ತುತ್ತಾಗಿದ್ದರ ಬಗ್ಗೆ ಹೇಳುತ್ತಾನೆ. ಆ  ದೃಷ್ಟಿಯಿಂದ ತಾನೂ ಸಹ ಎಲ್ಲರಂತೆ ಒಬ್ಬನೆಂದೂ, ಕೆಲವು ಜನರು ಅಂಥದೊಂದು ಪ್ಲೇಗ್ ತಮಗೆ ಬಡಿದಿರುವುದನ್ನು ತಿಳಿದಿರುವುದಿಲ್ಲ ಅಥವಾ ತಿಳಿದಿದ್ದರೂ ಆ ಪ್ಲೇಗಿನ  ಸ್ಥಿತಿಯಲ್ಲೂ ಆನಂದದಿಂದ ಇರುತ್ತಾರೆ ಮತ್ತು ಇನ್ನೂ ಕೆಲವರಿಗೆ ತಮ್ಮ ಪ್ಲೇಗಿನ ಬಗ್ಗೆ ತಿಳಿದಿರುತ್ತದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆಂದೂ, ತಾನೂ ಸಹ ತನ್ನ ಪ್ಲೇಗಿನಿಂದ ತಪ್ಪಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. 

ಟರೂ ನ ತಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುತ್ತಾನೆ. ಟರೂ ಹದಿನೇಳು ವರ್ಷದವನಾಗಿದ್ದಾಗ ಅವನ ತಂದೆ ಒಂದು ದಿನ ಅವನನ್ನು ತನ್ನ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಸರ್ಕಿಟ್ ಕೋರ್ಟಿನಲ್ಲಿ ಅಂದು ಒಂದು ಮುಖ್ಯವಾದ ಕೇಸು ವಿಚಾರಣೆಗೆ ಬಂದಿರುತ್ತದೆ. ಟರೂನ ಪಾಲಿಗೆ ಅಂದಿನ ಆ ಕೋರ್ಟಿನ ಕಲಾಪದ ವೀಕ್ಷಣೆ ಅತ್ಯಂತ ಮಹತ್ವದ ತಿರುವಿಗೆ ಕಾರಣವಾಗುತ್ತದೆ. 

ಅಪರಾಧಿ ಸ್ಥಾನದಲ್ಲಿದ್ದ ಸುಮಾರು ಮುವ್ವತ್ತು ವರ್ಷ ವಯಸ್ಸಿನ ವ್ಯಕ್ತಿಯ ಚಿತ್ರ ಟರೂನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ. ಆ ವ್ಯಕ್ತಿಯು ಅಪರಾಧ ಮಾಡಿದ್ದರ ಬಗ್ಗೆ ಟರೂ ಗೆ ಅನುಮಾನ ಇರದಿದ್ದರೂ (ಯಾವ ಅಪರಾಧ ಅನ್ನುವುದು ಟರೂ ಗೆ ಅಷ್ಟು ಮುಖ್ಯ ಅನಿಸುವುದಿಲ್ಲ), ಯಾವುದೇ ಅಪರಾಧ ಆಗಿರಲಿ, ಆ ವ್ಯಕ್ತಿ ತಾನು ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಲು ಸಿದ್ಧನಿದ್ದದ್ದೂ, ತನ್ನ ಅಪರಾಧ ಮತ್ತು ತನಗೆ ಅದರಿಂದ ಆಗಬಹುದಾದ ಶಿಕ್ಷೆಯ ಬಗ್ಗೆ ಅವನಲ್ಲಿ ಭಯಭೀತಿ ಇದ್ದದ್ದೂ ಇದೆಲ್ಲವೂ ಟರೂ ನಿಗೆ ಕಣ್ಣಿಗೆ ಕಟ್ಟಿದಂತೆ ಉಳಿದುಬಿಡುತ್ತವೆ. ಎಲ್ಲರೂ ಆ ಅಪರಾಧಿಯ ಸಾವನ್ನು ಬಯಸುತ್ತಿದ್ದಾರೆಂದು ಅರಿವಿಗೆ ಬಂದು ಅಪರಾಧಿಯ ಬಗ್ಗೆ ಟರೂ ಗೆ ಇನ್ನಿಲ್ಲದ ಅನುಕಂಪ ಬಂದುಬಿಡುತ್ತದೆ. ಇಷ್ಟರಲ್ಲಿ ಟರೂ ನ ತಂದೆ  ಪ್ರಾಸಿಕ್ಯೂಟರ್ ಸ್ಥಾನದಲ್ಲಿ ನಿಂತು, ಸಮಾಜದ ದೃಷ್ಟಿಯಿಂದ ಅಪರಾಧಿಗೆ ಸಾವಿನ ಶಿಕ್ಷೆ ಆಗಲೇಬೇಕೆಂದು  ವಾದಿಸುತ್ತಾನೆ. ಅಪರಾಧಿಗೆ ಸಾವಿನ ಶಿಕ್ಷೆ(death penalty) ಆಗುತ್ತದೆ. ಟರೂ ಇದರಿಂದ ತೀರಾ ತಳಮಳಗೊಳ್ಳುತ್ತಾನೆ. ಅಲ್ಲದೆ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯಲ್ಲಿರುವ ಕಾರಣ ಟರೂ  ನ ತಂದೆ ಇಂತಹ ಶಿಕ್ಷೆಯ ಅನುಷ್ಟಾನವನ್ನು ವೀಕ್ಷಿಸುವ ಆಹ್ವಾನಿತರಲ್ಲಿ ಒಬ್ಬನಾಗಿರುವುದೂ ಟರೂ ನನ್ನ ವಿಚಲಿತಗೊಳಿಸುತ್ತದೆ. ಮನೆ ಬಿಟ್ಟು ಹೋಗಲು ಟರೂ ನಿರ್ಧರಿಸುತ್ತಾನೆ. 

ಈ ರೀತಿ ತನ್ನ ಹದಿನೆಂಟನೇ ವಯಸ್ಸಿಗೇ ಟರೂ ಅನುಕೂಲಸ್ಥ ಕುಟುಂಬದಿಂದ ಬಂದವನಾದರೂ ಬಡತನಕ್ಕೆ ಈಡಾಗಬೇಕಾಗುತ್ತದೆ. ಸಾವಿನ ಶಿಕ್ಷೆ ಮತ್ತು ಅದರ ಅಮಾನವೀಯತೆಯ ಬಗ್ಗೆ ಟರೂ ನ ಆಸಕ್ತಿ ಹೆಚ್ಚಾಗುತ್ತದೆ. ತಾನು ವೀಕ್ಷಿಸಿದ್ದ ಕೋರ್ಟ್ ರೂಮ್ ಕಲಾಪ ಮತ್ತು ಸಾವಿನ ಶಿಕ್ಷೆಯ ಘಟನೆ ಅವನನ್ನು ರಾಜಕೀಯದತ್ತ ಸೆಳೆಯುತ್ತವೆ. ಇನ್ನೊಬ್ಬ ಮನುಷ್ಯನ ಹತ್ಯೆಯ ಆಧಾರದ  ಮೇಲೆ ರೂಪಿತವಾದ ಸಮಾಜವು ಟರೂ ನಿಗೆ ಒಪ್ಪಿಗೆಯಾಗುವುದಿಲ್ಲ. ಇಂತಹ ವ್ಯವಸ್ಥೆಯ ವಿರುದ್ಧವಿದ್ದ ರಾಜಕೀಯ ಶಕ್ತಿಗಳು ಟರೂ ಗೆ ಸಮ್ಮತವಾಗುತ್ತವೆ. 

ಅಂತಹ ರಾಜಕೀಯ ಶಕ್ತಿಗಳ ಜೊತೆ ಬಹಳ ಸಮಯ ಕಳೆಯುವ ಟರೂ ಯೂರೋಪಿನ ಹಲವು ದೇಶಗಳಲ್ಲಿ ಹೋರಾಟಗಳಲ್ಲಿ ಭಾಗಿಯಾಗುತ್ತಾನೆ. ತಾನು ಭಾಗಿಯಾಗಿರುವ ಗುಂಪುಗಳೂ ಕೆಲವೊಮ್ಮೆ ಸಾವಿನ ಶಿಕ್ಷೆ ವಿಧಿಸುವುದು ಟರೂ ಗೆ ಗೊತ್ತಿದ್ದರೂ, ಇಂತಹ ಕೆಲವು ಹತ್ಯೆಗಳು ಅಗತ್ಯವೆಂದೂ, ಯಾರೂ ಯಾರನ್ನೂ ಕೊಲ್ಲದಂತಹ ಒಂದು ಪ್ರಪಂಚವನ್ನು ಕಟ್ಟಲು ಇದು ಅನಿವಾರ್ಯ  ಎಂದು ಅವನಿಗೆ ಹೇಳಲಾಗುತ್ತದೆ. ಇದು ಒಂದು ಮಟ್ಟಿಗೆ ಸತ್ಯವೇ ಆಗಿದ್ದರೂ ಅಂತಹ ಸತ್ಯಗಳೊಂದಿಗೆ ಬದುಕುವುದು ಅವನಿಗೆ ಸಾದ್ಯವಾಗದೆಂಬುದೂ ಅವನ ಯೋಚನೆಯಾಗಿರುತ್ತದೆ. ಆದರೂ ಚಿಕ್ಕಂದಿನ ಆ ಕೋರ್ಟಿನ ಘಟನೆಯ ನೆನಪು ಅವನನ್ನು ಈ ಗುಂಪುಗಳೊಂದಿಗೆ ಮುಂದುವರೆಯುವಂತೆ ಮಾಡುತ್ತದೆ. ಮುಂದೆ ಒಂದು ದಿನ ಹಂಗರಿಯಲ್ಲಿ ತನ್ನ ಗುಂಪಿನವರಿಂದ ಒಂದು ಹತ್ಯೆಯ ಶಿಕ್ಷೆಯನ್ನು ವೀಕ್ಷಿಸುವವರೆಗೂ. ಅಂದು ಟರೂ ಗೆ ತಾನು ಹಿಂದೆ ಕೋರ್ಟಿನಲ್ಲಿ ಅಪರಾಧಿಯ ಶಿಕ್ಷೆಯನ್ನು ವೀಕ್ಷಿಸಿದಾಗ ಬಂದಿದ್ದಂತಹ ತೀವ್ರ ಭೀಕರತೆಯ ಭಾವನೆ ಬರುತ್ತದೆ. 

ಮೊದಲ ಬಾರಿಗೆ ಟರೂ ಗೆ ತಾನೂ ಸಹ 'ಪ್ಲೇಗ್'ಗೆ ಬಲಿಯಾದವನೆಂಬ ಸತ್ಯ ಹೊಳೆಯುತ್ತದೆ.  ಪರೋಕ್ಷವಾಗಿ ಸಾವಿರಾರು ಜನರ ಹತ್ಯೆಗೆ ತಾನೂ ಕಾರಣವಾದೆನೆಂದು ಅನಿಸತೊಡಗುತ್ತದೆ. ಒಂದು ಪ್ಲೇಗ್ ನ್ನು ಎದುರಿಸುವ ಸಲುವಾಗಿ  ಮತ್ತೆ ಹಿಂಸೆಯನ್ನೇ ಸಮರ್ಥಿಸುವ ವಿಚಾರಧಾರೆಯನ್ನು ಒಪ್ಪಿಕೊಳ್ಳುವ ಮೂಲಕ ತಾನೂ ಇನ್ನೊಂದು ಪ್ಲೇಗಿಗೆ ಗುರಿಯಾದೆನೆಂಬ ಪಾಪಪ್ರಜ್ಞೆ ಕಾಣಿಸಿಕೊಳ್ಳುತ್ತದೆ. ಅವನ ಗುಂಪಿನ ಇತರರಿಗೆ ಇಂತಹ ಯಾವುದೇ ಕಾಳಜಿ ಇದ್ದಂತೆ ಇವನಿಗೆ ಕಾಣುವುದಿಲ್ಲ. ಇದ್ದರೂ ಅದರ ವಿಷಯವಾಗಿ ಅವರು ಮಾತನಾಡಲು ಹೋಗುತ್ತಿರಲಿಲ್ಲ. ಟರೂ ಗೆ ಈ ವಿಚಾರ ಗಂಟಲಲ್ಲಿ ಸಿಕ್ಕಿಕೊಂಡಂತೆ ಕಾಡುತ್ತದೆ.  ಹೀಗಾಗಿ ಗುಂಪಿನ ಇತರರ ಜೊತೆ ಅವನಿಗೆ ಒಂದು  ಪರಕೀಯ ಭಾವನೆ ಉಂಟಾಗುತ್ತದೆ. ಮಹತ್ತರವಾದ ಗುರಿಯೊಂದರ ಸಾಧನೆಗೆ ಇದೆಲ್ಲ ಅನಿವಾರ್ಯವೆಂದು  ಅವನ ಗುಂಪಿನ ಇತರರು ಅವನಿಗೆ ಸಮಜಾಯಿಷಿ ನೀಡುತ್ತಾರೆ. ಆದರೆ ತನ್ನ ಗುಂಪಿನವರ ಹಿಂಸೆಯ ತರ್ಕವನ್ನು ಒಪ್ಪಿಕೊಂಡರೆ ಎದುರಾಳಿ ಗುಂಪಿನ ತರ್ಕವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅವನಿಗೆ ಅನಿಸುತ್ತದೆ. ಅಲ್ಲದೆ, ಒಂದು ಸಲ ಈ ಹಿಂಸೆಯ ಮಾರ್ಗವನ್ನು ಒಪ್ಪಿಕೊಂಡು, ಒಂದು ಹತ್ಯೆಯನ್ನು  ಅನುಮೋದಿಸಿದರೆ  ಮತ್ತೆ ನಿಲ್ಲಿಸಲು ಕಾರಣಗಳಿರುವುದಿಲ್ಲ ಎಂಬುದರ ಅರಿವೂ ಅವನಿಗಾಗುತ್ತದೆ. 

ಹೀಗೆ ಟರೂ ಗೆ ತನ್ನನ್ನೂ ಸೇರಿ ಎಲ್ಲರೂ ಪ್ಲೇಗ್ ಬಡಿದವರೇ ಆಗಿದ್ದೇವೆಂಬ ಅರಿವಿನಿಂದ ತನ್ನ ಬಗ್ಗೆಯೇ ನಾಚಿಕೆಯೂ ಆಗಿ ಮನಸ್ಸಿನ ಶಾಂತಿಯೇ ಕಳೆದು ಹೋಗುತ್ತದೆ. ಕಳೆದುಹೋದ ಮನಶ್ಶಾಂತಿಯನ್ನು ಹುಡುಕುತ್ತ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.  ಯಾರಿಗೇ ಆಗಲಿ ಮಾರಣಾಂತಿಕ ಶತ್ರುವಾಗದೇ ಇರಲು ನಿರ್ಧರಿಸುತ್ತಾನೆ. ಇತರರನ್ನು ನಾಶ ಮಾಡುವ ಮನಸ್ಥಿತಿಯ 'ಪ್ಲೇಗ್'ನ್ನು ಎದುರಿಸುವುದು ಮತ್ತು ಅದಕ್ಕೆ ಬಲಿಯಾಗದಿರುವುದು ಅವನ ಗುರಿಯಾಗುತ್ತದೆ.  ಶಾಂತಿಯಿಂದ ಇರಲು ಅದೊಂದೇ ಮಾರ್ಗವೆಂದು ಮನಗಾಣುತ್ತಾನೆ. ಹೀಗಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಇನ್ನೊಬ್ಬರನ್ನು ಸಾಯಿಸುವ ಅಥವಾ ಸಾಯಿಸಲು ಕಾರಣವಾಗುವ ಎಲ್ಲವನ್ನೂ  ನಿರಾಕರಿಸಲು ನಿರ್ಧರಿಸುತ್ತಾನೆ. 

ಪ್ಲೇಗ್ ಅನ್ನು ಒಂದು ಸಂಕೇತದಂತೆ ಬಳಸುತ್ತ ಮನುಷ್ಯರ ಮನಸ್ಸುಗಳಿಗೆ ತಗುಲುವ ಪ್ಲೇಗ್ ಬಗ್ಗೆ ಹೇಳುವ ಟರೂ,  ಓರಾನ್ ನ  ಪ್ಲೇಗ್  ಜೊತೆ ಅದನ್ನು ಹೋಲಿಕೆ ಮಾಡುತ್ತಾ ಹೀಗೆ ಹೇಳುತ್ತಾನೆ- "ಎಲ್ಲರೂ ಪ್ಲೇಗ್ ಬಡಿದವರೇ ಆಗಿರುವುದರಿಂದ ನಮ್ಮನ್ನು ನಾವೇ ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತಾ ಇನ್ನೊಬ್ಬರಿಗೆ ಅದನ್ನು ದಾಟಿಸುವುದನ್ನು ತಪ್ಪಿಸಬೇಕು. ಪ್ರಕೃತಿಯಲ್ಲಿ ಸಹಜವಾಗಿ ಬರುವುದೇ ರೋಗಾಣು. ಆರೋಗ್ಯ, ಶುದ್ಧತೆ, ಇವೆಲ್ಲಾ ಸತತ ಇಚ್ಛಾಶಕ್ತಿಯಿಂದ ಸಾಧಿಸಬೇಕಾದಂತಹವು.  ಒಳ್ಳೆಯ ಮನುಷ್ಯನಾದವನೆಂದರೆ ಬೇರೆ ಯಾರಿಗೂ ರೋಗವನ್ನು ದಾಟಿಸದವನು. ಬಹಳ ಏಕಾಗ್ರತೆಯಿರುವವರಿಂದ ಮಾತ್ರ ಇದು ಸಾಧ್ಯ.  ಪ್ಲೇಗ್ ಪೀಡಿತರಾಗಿ  ಇರುವುದು ಬಹಳ ತ್ರಾಸ ಉಂಟು  ಮಾಡುವಂತದ್ದು. ಆದರೆ ಪ್ಲೇಗನ್ನು ಬರಿಸಿಕೊಳ್ಳದೇ ಉಳಿಯಲು ಬಯಸುವುದು ಇನ್ನೂ ತ್ರಾಸದಾಯಕ. ಅದಕ್ಕೇ ಎಲ್ಲರೂ ಸುಸ್ತಾದಂತೆ ಕಾಣಿಸುವುದು. ಏಕೆಂದರೆ ಈಗ ಎಲ್ಲರೂ ಸ್ವಲ್ಪ ಪ್ಲೇಗ್ ಬಡಿದವರೇ.  ಪ್ಲೇಗ್ ನಿಂದ ಬಿಡುಗಡೆ ಬಯಸುವವರು ಇನ್ನೂ ಅತ್ಯಂತ ತ್ರಾಸಪಡುವವರು, ಏಕೆಂದರೆ ಆ ಬಿಡುಗಡೆ ಅವರಿಗೆ ಸಾವಿನೊಂದಿಗಷ್ಟೇ ಬರಬೇಕು."  

ತಾನು ಎಲ್ಲರನ್ನು ಎರಡು ಗುಂಪುಗಳಾಗಿ ನೋಡುವುದಾಗಿಯೂ, ಒಂದು ಗುಂಪಿನವರು ಕ್ರಿಮಿಗಳಾದರೆ, ಇನ್ನೊಂದು ಗುಂಪಿನವರು ಆ ಕ್ರಿಮಿಗಳಿಗೆ ಬಲಿಯಾಗುವವರೆಂದೂ, ಮತ್ತು ನಾವು ಸಾಧ್ಯವಾದಷ್ಟು ಮಟ್ಟಿಗೆ ಕ್ರಿಮಿಗಳ ಗುಂಪಿಗೆ ಸೇರಲು ನಿರಾಕರಿಸಬೇಕೆಂದು ಟರೂ ಹೇಳುತ್ತಾನೆ. ಮೂರನೆಯ ಇನ್ನೊಂದು ಗುಂಪು ಇರಬೇಕೆಂದೂ ಅದು ಜಾಢ್ಯವನ್ನು ನಿಜವಾಗಿ ಗುಣಪಡಿಸುವವರ ಗುಂಪೆಂದೂ ಆದರೆ ಅದು ಅತ್ಯಂತ ಕಷ್ಟದ ಕೆಲಸವಾಗಿರುವುದರಿಂದ ತಾನು ಎರಡನೇ ಗುಂಪಿನಲ್ಲಿ ಇರಲು ಬಯಸುವುದಾಗಿಯೂ  ಹೇಳುತ್ತಾನೆ.  ಎರಡನೇ ಗುಂಪಿನಲ್ಲಿದ್ದುಕೊಂಡು ಅಲ್ಲಿನವರಿಗೆ ಸಹಾಯ ಮಾಡುತ್ತಲೇ ಮೂರನೆಯ ಗುಂಪಿಗೆ ಹೋಗುವ ಮತ್ತು ಆ ಮೂಲಕ ಶಾಂತಿಯನ್ನು ಸಾಧಿಸುವ ಪ್ರಯತ್ನ ಮಾಡುವುದು ತನ್ನ ಗುರಿಯೆಂದು  ಟರೂ ತನ್ನ ಮಾತನ್ನು ನಿಲ್ಲಿಸುತ್ತಾನೆ. 

ಹೀಗೆ 'ದಿ ಪ್ಲೇಗ್' ಕಾದಂಬರಿಯು ಬಾಹ್ಯವಾಗಿ ತಗುಲಿಕೊಳ್ಳುವ ರೋಗವನ್ನು ಎದುರಿಸಲು  ನಾವು ಸಿದ್ಧವಾಗುವಂತೇ ಮೇಲೆ ವಿವರಿಸಿದ ದ್ವೇಷವೆಂಬ ಆ  ಇನ್ನೊಂದು ಪ್ಲೇಗ್ ನ್ನು ಎದುರಿಸಲು ಸಹ ನಾವು ಸಿದ್ಧವಾಗಬೇಕಾದ ಅಗತ್ಯವನ್ನು ಹೇಳುತ್ತದೆ. 

ಕಾದಂಬರಿಯ ಕಡೆಯಲ್ಲಿ ಓರಾನಿನ ಪ್ಲೇಗು ಸಂಪೂರ್ಣ ನಿಯಂತ್ರಣಕ್ಕೆ ಬಂದು ನಗರದಲ್ಲಿ ವಿಧಿಸಿದ್ದ ಮುಂಜಾಗ್ರತೆಯ ಅನೇಕ ನಿಷೇಧಗಳನ್ನು ತೆರವು ಮಾಡಲಾಗುತ್ತದೆ. ಜನರ ಸಂತಸದ ಕೂಗು ಕೇಕೆಗಳನ್ನು ಕೇಳಿಸಿಕೊಳ್ಳುವ ಡಾಕ್ಟರ್ ರಿಯೂ ನಿಗೆ ಈ ಬಗೆಯ ಸಂಭ್ರಮ ಹೆಚ್ಚು ಕಾಲದ್ದಲ್ಲ ಎಂಬ ವಿಚಾರ ನೆನಪಿಗೆ ಬರುತ್ತದೆ. ಪ್ಲೇಗ್ ನ ಕ್ರಿಮಿ ಸಂಪೂರ್ಣ ಸಾಯುವುದಿಲ್ಲ ಅಥವಾ ಮರೆಯಾಗುವುದಿಲ್ಲ. ಅದು ಪೀಠೋಪಕರಣಗಳಲ್ಲೋ, ಬಟ್ಟೆಗಳಲ್ಲೋ ತಟಸ್ಥವಾಗಿ ಉಳಿದು, ಕೋಣೆಗಳಲ್ಲೋ, ಅಡಿಮನೆಯಲ್ಲೋ, ಟ್ರಂಕಿನಲ್ಲೋ, ಕರವಸ್ತ್ರದಲ್ಲೋ, ಕಾಗದದಲ್ಲೋ ತಾಳ್ಮೆಯಿಂದ ಕಾದು, ಮನುಷ್ಯರ ಶಿಕ್ಷೆ ಮತ್ತು ಶಿಕ್ಷಣಕ್ಕಾಗಿ  ಒಂದು ದಿನ ತನ್ನ ಇಲಿಗಳನ್ನು ಅವರ ಮೋಜಿನ ನಗರಗಳಲ್ಲಿ  ಸಾಯಲು ಕಳಿಸಬಲ್ಲುದು ಎನ್ನುವುದು ಅವನಿಗೆ ತಿಳಿದಿರುತ್ತದೆ. ಉತ್ಸಾಹದಲ್ಲಿದ್ದ ಜನರಿಗೆ ಅದರ  ಪರಿವೆ ಇರುವುದಿಲ್ಲ.   


Thursday, April 09, 2020

ದಿ ಪೇಂಟೆಡ್ ವೈಲ್ - ಕಾಲೆರಾ ಕಾಲದ ಅಗ್ನಿಪರೀಕ್ಷೆ

ಕೊರೊನ ವೈರಸ್ ಜಗತ್ತಿನಾದ್ಯಂತ ಸೃಷ್ಟಿಸುತ್ತಿರುವ ತಲ್ಲಣದ ಈ ಸಮಯದಲ್ಲಿ ಬಹಳ ಹಿಂದೆ ಓದಿದ್ದ ಸಾಮರ್ಸೆಟ್ ಮೌಮ್ ನ 'ದಿ ಪೇಂಟೆಡ್ ವೈಲ್' ಕಾದಂಬರಿ ನೆನಪಾಗುತ್ತಿದೆ. ಅದಕ್ಕೊಂದು ಕಾರಣ ಇದೆ. ಈ ಕಾದಂಬರಿಯಲ್ಲೂ ಒಂದು ಮಾರಣಾಂತಿಕ ರೋಗವು ತುಂಬಾ ಮಹತ್ವದ್ದಾದ ಘಟನೆಯಾಗಿ ಬರುತ್ತದೆ. ಅಲ್ಲಿ ಅದು ವೈರಸ್ ಅಲ್ಲ ಕಾಲೆರಾ ಆಗಿ ಬರುತ್ತದೆ.

ಸಾಮರ್ಸೆಟ್ ಮೌಮ್ ತುಂಬಾ ಸರಳವಾದ ಆದರೆ ಅಷ್ಟೇ ಪರಿಣಾಮಕಾರಿ ಶೈಲಿಯಲ್ಲಿ ಕತೆ ಹೇಳುವ ಕಾದಂಬರಿಕಾರ. 'ದಿ ಪೇಂಟೆಡ್ ವೈಲ್' ಪ್ರಕಟವಾಗಿದ್ದು 1925 ರಲ್ಲಿ. ಬ್ರಿಟಿಷ್ ವಸಾಹತು ಶಾಹಿಯು ತನ್ನ ಉಚ್ಛ್ರಾಯ ಸ್ಥಿತಿಯನ್ನುಆಗಷ್ಟೇ  ದಾಟಿಯಾಗಿದ್ದ ಕಾಲ.

ಕಾದಂಬರಿಯ ಮುಖ್ಯ ಭೂಮಿಕೆ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಹಾಂಗ್ ಕಾಂಗ್. ಮೌಮ್ ನ ಕಾದಂಬರಿಗಳಲ್ಲಿ ಪಾತ್ರ ಚಿತ್ರಣ ಯಾವಾಗಲೂ ತುಂಬ ನಿಖರವಾಗಿರುತ್ತದೆ. ಇಲ್ಲೂ ಅಷ್ಟೇ. ಮೊದಲ ಪುಟಗಳಲ್ಲೇ ಮುಖ್ಯ ಪಾತ್ರಗಳ ಮುಖ್ಯ ಗುಣ ದೋಷಗಳೆಲ್ಲ ನಮ್ಮ ಅಳವಿಗೆ ಬಂದು ಬಿಡುತ್ತವೆ. ಈ ಕೃತಿಯ ಪುಟಗಳಲ್ಲಿ ಕಾಣಿಸುವ ಕೆಲವು ಬ್ರಿಟಿಷ್ ಪಾತ್ರಗಳು ಸ್ವಾರ್ಥದ, ಒಂದು ಬಗೆಯ ಕ್ರೌರ್ಯದ ಪ್ರಕೃತಿಯವರಾಗಿ ಈ  ಕೃತಿಯಲ್ಲಿ ಚಿತ್ರಿತವಾಗಿವೆ.

'ದಿ ಪೇಂಟೆಡ್ ವೈಲ್' ಕೃತಿಯಲ್ಲಿ ವಸಾಹತುಶಾಹಿಯ ರಾಜಕೀಯ ಪರಿಣಾಮಗಳಿಗಿಂತ ಅದರ ಸಾಮಾಜಿಕ ಆಯಾಮ ಹೆಚ್ಚು ಮುಖ್ಯವಾಗಿ ಪ್ರಕಟವಾಗುತ್ತದೆ. ಕಾದಂಬರಿಯ ನಾಯಕಿ ಕಿಟ್ಟಿ  ಲಂಡನ್ನಿನ ಬ್ರಿಟಿಷ್ ಮೇಲ್ಮಧ್ಯಮ ವರ್ಗದ ಪ್ರತಿನಿಧಿಯಾಗಿ ಕಂಡು ಬರುತ್ತಾಳೆ. ತೋರಿಕೆಯ  ವ್ಯಕ್ತಿತ್ವದ ತಾಯಿ ಮಿಸೆಸ್ ಗರ್ಸ್ಟಿನ್, ಕುಟುಂಬದವರಿಂದ ಮಾನಸಿಕವಾಗಿ ದೂರವೇ ಉಳಿಯುವ ವಕೀಲ  ತಂದೆ. ಮಾನಸಿಕವಾಗಿ ಅಷ್ಟೇನೂ ದೃಢ ವ್ಯಕ್ತಿತ್ವ  ಹೊಂದಿರದ ಕಿಟ್ಟಿ ತನ್ನ ತಂಗಿಗೆ ಮದುವೆ ಗೊತ್ತಾಗುತ್ತಿದ್ದಂತೆ ತನ್ನ ಏರುತ್ತಿರುವ ವಯಸ್ಸಿನ ಕಾರಣಕ್ಕೆ ಒತ್ತಡಕ್ಕೆ ಸಿಲುಕುತ್ತಾಳೆ. ಹಾಂಗ್ ಕಾಂಗ್ ನಲ್ಲಿ ಬ್ಯಾಕ್ಟೀರಿಯಾಲಜಿಸ್ಟ್ ಕೆಲಸದಲ್ಲಿರುವ ವಾಲ್ಟರ್ ಫೇನ್ ನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.

ಹಾಂಗ್ ಕಾಂಗ್ ನಲ್ಲೂ ಬ್ರಿಟಿಷ್ ಮಧ್ಯಮ ವರ್ಗದ ಸಮಾಜ ಅಷ್ಟೇನೂ ಭಿನ್ನವಾಗಿರುವುದಿಲ್ಲ. ಲಂಡನ್ನಿನ  ರೀತಿಯಲ್ಲೇ  ಪಾರ್ಟಿ ಗಳು, ಭೇಟಿಗಳು ಮುಂದುವರೆಯುತ್ತವೆ. ಸಾಮಾಜಿಕ ಶ್ರೇಣೀಕರಣದಲ್ಲಿ ಬ್ಯಾಕ್ಟಿರಿಯಾಲಜಿಸ್ಟರುಗಳ ಸ್ಥಾನ ತೀರಾ ಸಣ್ಣದೆಂದು ಕಿಟ್ಟಿಗೆ  ಅರಿವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ವಾಲ್ಟರ್ ತನ್ನ ವೃತ್ತಿ ಬದುಕಿನಲ್ಲಿ ಮುಳುಗಿ  ಆಕೆಗೆ ಹೆಚ್ಚು ಸಮಯ ನೀಡದೇ ಹೋಗುವುದೂ ಕಿಟ್ಟಿಗೆ ಬೇಸರ, ಏಕತಾನತೆ, ಅವಮಾನ ಎಲ್ಲ ಶುರುವಾಗಲು ಕಾರಣವಾಗುತ್ತದೆ. ಇಲ್ಲಿ ನನಗೆ ನೆನಪಾದದ್ದು ಗಸ್ತಾವ್ ಫ್ಲ್ಯಾಬೆ ಯ ಅದ್ಭುತ ಕಾದಂಬರಿ  'ಮದಾಮ್ ಬೋವರಿ' ಯ ಎಮ್ಮಾ. ಡಾಕ್ಟರ್ ಪತಿ
ಚಾರ್ಲ್ಸ್ ತನ್ನ ಕಡೆ ಗಮನ ಕೊಡುತ್ತಿಲ್ಲವೆಂದು ಪ್ರೀತಿಯ ಹುಡುಕಾಟದಲ್ಲಿ ಸಂಕಟವನ್ನು ತಂದುಕೊಳ್ಳುವ ಎಮ್ಮಾ ಇಂಗ್ಲಿಷ್ ಸಾಹಿತ್ಯದ ಮರೆಯಲಾಗದ ಒಂದು ಪಾತ್ರ.

ಎಮ್ಮಾಳಂತೆ ಕಿಟ್ಟಿ ಸಹ ವಿವಾಹದ ಆಚೆ ಖುಷಿಯನ್ನು ಹುಡುಕುತ್ತಾಳೆ. ಆಗ ಕಿಟ್ಟಿಗೆ ಪರಿಚಯವಾಗುವುದು ಚಾರ್ಲ್ಸ್ ಟೌನ್ಸೆಂಡ್. ಅಸಿಸ್ಟಂಟ್ ಕಲೋನಿಯಲ್ ಸೆಕ್ರೆಟರಿ ಹುದ್ದೆಯಲ್ಲಿರುವ ಚಾರ್ಲ್ಸ್ ನೋಡಲೂ ಸುಂದರನಾಗಿರುತ್ತಾನೆ. ಕಿಟ್ಟಿ ಅವನೊಂದಿಗೆ ಗೆಳೆತನ ಬೆಳೆಸುತ್ತಾಳೆ .  ಅವರಿಬ್ಬರೂ ಪ್ರೇಮಿಗಳಾಗುತ್ತಾರೆ. ಕೆಲವು ವಾರಗಳಾಗುತ್ತವೆ. ಇಷ್ಟರಲ್ಲಿ ಕಿಟ್ಟಿಗೆ ವಾಲ್ಟರ್ ಜೊತೆಯಿರುವುದು ಅಸಹನೀಯವಾಗತೊಡಗುತ್ತದೆ. ಚಾರ್ಲ್ಸ್ ನ ಉನ್ನತ ಹುದ್ದೆ ಹಾಗೆಯೇ ವಾಲ್ಟರ್ ನ ಸಾಮಾನ್ಯ ಬ್ಯಾಕ್ಟಿರಿಯಾಲಜಿಸ್ಟ್ ಹುದ್ದೆ ಆಕೆಯಲ್ಲಿ ವಾಲ್ಟರ್ ಬಗೆಯ ಉದಾಸೀನಕ್ಕೆ ಕಾರಣವಾಗುತ್ತದೆ. ಅವನಿಗೆ ಗೊತ್ತಾದರೂ ಗೊತ್ತಾಗಲಿ ಎಂಬ ಭಾವನೆ ಬರುತ್ತದೆ. ವಾಲ್ಟರ್ ಗೆ ಗೊತ್ತಾದರೆ ಅವನು ಡೈವೋರ್ಸ್ ಕೊಡುತ್ತಾನೆ. ಚಾರ್ಲ್ಸ್  ಸಹ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ತನ್ನನ್ನು ಮದುವೆಯಾಗುತ್ತಾನೆ ಎನ್ನುವುದು ಅವಳ ಲೆಕ್ಕಾಚಾರವಾಗಿರುತ್ತದೆ.

ಆದರೆ ಆಗುವುದೇ ಇನ್ನೊಂದು.  ಚಾರ್ಲ್ಸ್ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಅವಳನ್ನು ಮದುವೆಯಾಗಲು ಒಪ್ಪುವುದಾದರೆ ಮಾತ್ರ ತಾನು ಅವಳಿಗೆ ಡೈವೋರ್ಸ್ ಕೊಡಲು ಸಿದ್ಧವೆಂದು ವಾಲ್ಟರ್  ಕಿಟ್ಟಿಗೆ    ಹೇಳುತ್ತಾನೆ. ಆದರೆ ಚಾರ್ಲ್ಸ್ ಕಿಟ್ಟಿಗಾಗಿ ತಾನು ಗಾಸಿಪ್ ಗೆ ಒಳಗಾಗಿ ತನಗೆ ಲಭಿಸಲಿರುವ ಕಲೋನಿಯಲ್ ಸೆಕ್ರೆಟರಿ ಹುದ್ದೆಯನ್ನು ಕಳೆದುಕೊಳ್ಳಲು ಸಿದ್ದನಿರುವುದಿಲ್ಲ.

ಈ ನಡುವೆ ವಾಲ್ಟರ್ ಕಿಟ್ಟಿಯನ್ನು ಒಂದು ಅಗ್ನಿ ಪರೀಕ್ಷೆಗೆ ಒಡ್ಡುತ್ತಾನೆ. ಮೀ-ಟಾನ್ -ಫು ಎಂಬ ಚೀನಿ ಪ್ರಾಂತ್ಯ ವೊಂದರಲ್ಲಿ ಭಯಾನಕ ಕಾಲೆರಾ ಕಾಣಿಸಿಕೊಂಡಿರುತ್ತದೆ ಮತ್ತು ವಾಲ್ಟರ್ ಅಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿರುತ್ತಾನೆ. ಚಾರ್ಲ್ಸ್ ಅವಳನ್ನು ಮದುವೆಯಾಗಲು ಒಪ್ಪದೇ ಹೋದಾಗ ವಾಲ್ಟರ್  ಸಹ ಡೈವೋರ್ಸ್ ನೀಡದೆ  ಕಿಟ್ಟಿ ಸಹ ಅವನ ಜೊತೆ ಕಾಲೆರಾ ಪೀಡಿತ  ಪ್ರಾಂತ್ಯಕ್ಕೆ ಬರುವಂತೆ ಮಾಡುತ್ತಾನೆ.

ಸಾವಿನ ಕರಿ ನೆರಳಿನಲ್ಲಿ ಮುರಿದು ಹೋದ ಸಂಬಂಧದ ಅಸಹನೀಯತೆಯಲ್ಲಿ ದಿನಗಳು ಸಾಗುತ್ತವೆ. ವಾಲ್ಟರ್ ತನ್ನ ಕೆಲಸದಲ್ಲಿ ಹಗಲೂ ರಾತ್ರಿ ತೊಡಗಿಕೊಳ್ಳುತ್ತಾನೆ. ಕಿಟ್ಟಿ ಬೇಸರದಲ್ಲಿ ದಿನ ಕಳೆಯುತ್ತಾಳೆ.  ಅವನೊಡನೆ ಸಹಜವಾಗಿರಲು ಪ್ರಯತ್ನಿಸುತ್ತಾಳೆ . ಆದರೆ ವಾಲ್ಟರ್ ಕರಗುವುದಿಲ್ಲ.  ಕಾಲೆರಾ ದ  ಅಂತಹ ಭಯಾನಕ ಪರಿಸ್ಥಿತಿಯಲ್ಲೂ ತನ್ನ ಒಂದು  ಅತಿಕ್ರಮಣವನ್ನು ಕ್ಷಮಿಸದ ಅವನ ಕಠೋರತೆ ಅವಳಿಗೆ ಆಶ್ಚರ್ಯ ಉಂಟು ಮಾಡುತ್ತದೆ.  ಅವಳನ್ನು ತೀವ್ರವಾಗಿ ಪ್ರೀತಿಸಿದವನಾಗಿ ಕಡೆಗೆ ಆ ಪ್ರೀತಿ  ಒಂದು ಸುಂದರ ಭ್ರಮೆಯಾಗಿತ್ತೆಂಬುದು  ಅರಿವಾದಾಗ ಅವನಿಗೆ  ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅವಳನ್ನಿರಲಿ ತನ್ನನ್ನೇ ಕ್ಷಮಿಸುವುದು ಅವನಿಗೆ ಕಷ್ಟವಾಗುತ್ತದೆ.  ಹೀಗಾಗಿ ಅವನು ಮಾನಸಿಕವಾಗಿ ಅವಳಿಂದ ದೂರವೇ ಉಳಿಯುತ್ತಾನೆ. ಕಾಲೆರಾದಂತಹ ಅತಿ ಬಿಕ್ಕಟ್ಟಿನ ಸಂದರ್ಭದಲ್ಲೂ ಅವನ ಈ ವರ್ತನೆ ಅವಳಿಗೆ ಅತಿಯೆನಿಸುತ್ತದೆ.

ಮುಂದೆ ಕತೆಯು ಪಡೆಯುವ ತಿರುವು ಹಾಗೂ ನಿರೂಪಣೆಯು ಸಾಮರ್ಸೆಟ್  ಮೌಮ್ ನ ಕುಶಲ ಕಲೆಗಾರಿಕೆಯನ್ನು ಪರಿಚಯಿಸುತ್ತದೆ. ಕೆಲವೊಮ್ಮೆ ತೀವ್ರ ಬಿಕ್ಕಟ್ಟಿನ ಸಂದರ್ಭಗಳು ನಮ್ಮ ಯೋಚನೆಯ ಹಾದಿಯನ್ನೇ ಬದಲಿಸಿಬಿಡುತ್ತವೆ. ನಮ್ಮ ಆಯ್ಕೆಗಳು  ಮೌಲ್ಯಗಳು ಹೊಸದೊಂದು ನಿಕಷಕ್ಕೆ ಒಡ್ಡಿಕೊಳ್ಳುತ್ತವೆ. ಬಿಕ್ಕಟ್ಟಿನ ಆಚಿನ ಬದುಕು ಇನ್ನೊಂದು ಆವರ್ತದಲ್ಲಿ ಚಲಿಸುವುದು ಸಾಧ್ಯವಿರುತ್ತದೆ.

ಕಿಟ್ಟಿ ಚಿಕ್ಕ ಮಕ್ಕಳಿಗಾಗಿ ಚರ್ಚಿನ ವತಿಯಿಂದ ಸನ್ಯಾಸಿನಿಯರು ನಡೆಸುತ್ತಿದ್ದ ಶಾಲೆಯಲ್ಲಿ ಕೆಲಸ ಮಾಡಲು ಆರಂಭಿಸುತ್ತಾಳೆ. ಇದೇ ಸಮಯದಲ್ಲಿ ವಾಲ್ಟರ್ ಗೆ ಕಾಲೆರಾ ತಗುಲುತ್ತದೆ. ಸ್ವಲ್ಪ ಸಮಯದಲ್ಲೇ ಆತ ತೀರಿಕೊಳ್ಳುತ್ತಾನೆ. ಚರ್ಚಿನ ಸೇವಾ ಕೆಲಸದಲ್ಲಿ ತೊಡಗಿಕೊಂಡ ಕಿಟ್ಟಿ ಈ ರೀತಿಯ ಜೀವನದಲ್ಲೂ ಇರುವ ನೆಮ್ಮದಿಯನ್ನು ಗುರುತಿಸುತ್ತಾಳೆ. ಆಕೆ ತಾಯಿಯಾಗಲಿರುವಳೆಂಬುದು ತಿಳಿದಾಗ ಚರ್ಚಿನ ಮದರ್ ಸುಪೀರಿಯರ್ ಅವಳನ್ನು ಹಾಂಗ್ ಕಾಂಗ್ ಗೆ ಮರಳಿ ಕಳಿಸುತ್ತಾರೆ. ಕಿಟ್ಟಿಯ ಕೆಲಸದ ಬಗ್ಗೆ ಅಷ್ಟರಲ್ಲಾಗಲೇ ಹಾಂಗ್ ಕಾಂಗ್ ನಲ್ಲೂ ತಿಳಿದಿರುತ್ತದೆ. ಚಾರ್ಲ್ಸ್ ನ ಜೊತೆ ಆಕೆಯ ಹಿಂದಿನ ಸ್ನೇಹದ ಬಗ್ಗೆ ತಿಳಿಯದ ಮಿಸೆಸ್ ಟೌನ್ಸೆಂಡ್ ಆಕೆಯನ್ನು ತಮ್ಮ ಮನೆಗೇ ಆಹ್ವಾನಿಸುತ್ತಾರೆ. ಅವರ ಬಲವಂತಕ್ಕೆ ಅಲ್ಲಿ ಉಳಿಯುತ್ತಾಳೆ.ಅಲ್ಲಿ ಮತ್ತೆ ಚಾರ್ಲ್ಸ್ ನ ಸಂಪರ್ಕಕ್ಕೆ ಬರುತ್ತಾಳೆ. ಇನ್ನೊಮ್ಮೆ ಚಾರ್ಲ್ಸ್ ನ ಆಹ್ವಾನಕ್ಕೆ ಮಣಿಯುತ್ತಾಳೆ. ಮೀ-ಟಾನ್-ಫು ನಲ್ಲಿನ ತನ್ನಎಲ್ಲ ಪರಿವರ್ತನೆಗಳೂ ನಿರ್ಧಾರಗಳೂ ಸುಳ್ಳಾಗಿ ತಾನು ದುರ್ಬಲಳಾದೆನೆಂದು ಆಕೆಗೆ ಪರಿತಾಪವಾಗುತ್ತದೆ. ತನ್ನ ಬದಲಾದ ಧ್ಯೇಯಗಳ ಅನ್ವಯವೇ ಬದುಕಬೇಕೆಂದು ನಿರ್ಧರಿಸಿ ಹಾಂಗ್ ಕಾಂಗ್ ಬಿಡಲು ನಿರ್ಧರಿಸುತ್ತಾಳೆ. ಇದೆ ಸಮಯದಲ್ಲಿ ಕಿಟ್ಟಿಯ ತಾಯಿ ತೀರಿಕೊಂಡದ್ದರಿಂದ ತಂದೆ ಒಬ್ಬರೇ ಇರಬೇಕಾಗಿರುತ್ತದೆ ಹಾಗೂ ಅವರಿಗೆ ಕ್ಯಾರಿಬಿಯನ್ ನಲ್ಲಿ ದೊಡ್ಡ ಹುದ್ದೆಯೂ ಸಿಕ್ಕಿರುತ್ತದೆ. ಕಿಟ್ಟಿ ಅವರೊಂದಿಗೆ ಹೋಗಿ ಇರಲು ನಿರ್ಧರಿಸುತ್ತಾಳೆ.

'ಮದಾಮ್ ಬೋವರಿ' ಯ ಎಮ್ಮಾ ಳೊಂದಿಗೆ ಬಹಳಷ್ಟು ಸಾಮ್ಯಗಳು ಕಂಡರೂ 'ದಿ ಪೇಂಟೆಡ್ ವೈಲ್' ನ ಕಿಟ್ಟಿ ಎಮ್ಮಾ ಳಂತೆ ದುರಂತ ಅಂತ್ಯವನ್ನು ಕಾಣದಿರುವುದು ಒಂದು ಪ್ರಮುಖ ವ್ಯತ್ಯಾಸ. ಕಿಟ್ಟಿ ತನ್ನ ಭವಿಷ್ಯದ ದಿನಗಳನ್ನು ಭರವಸೆಯಿಂದ ಹೊಸ ಸ್ಪೂರ್ತಿಯಿಂದ ಎದುರು ನೋಡುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಕಾದಂಬರಿಯ ಕಡೆಯಲ್ಲಿ ಕಿಟ್ಟಿಯ ಸ್ವಗತ ಹೀಗೆ ಸಾಗುತ್ತದೆ -

"ನನಗೆ ಧೈರ್ಯ ಮತ್ತು ಭರವಸೆಗಳಿವೆ. ಆಗಿದ್ದು ಆಗಿದೆ. ಜೀವನವು ಅಸ್ಥಿರ. ಬರುವುದೆಲ್ಲ ಬರಲಿ. ಎಲ್ಲವನ್ನೂ ಲಘು ಹೃದಯದಿಂದ ಎದುರಿಸುತ್ತೇನೆ. ಇನ್ನೂ ಎಷ್ಟೊಂದು ತಿಳಿಯಲು ಇದೆ. ನಾನು ಬಹಳಷ್ಟು ಓದಬೇಕು. ಬಹಳಷ್ಟು ಕಲಿಯಬೇಕು. ನನ್ನ ಕಣ್ಣ ಮುಂದೆ ಪ್ರಪಂಚದ ಎಷ್ಟೊಂದು ಖುಷಿಗಳಿವೆ, ಜನರಿದ್ದಾರೆ, ಸಂಗೀತವಿದೆ, ನೃತ್ಯವಿದೆ, ಸೌಂದರ್ಯವಿದೆ, ಸಮುದ್ರವಿದೆ, ತಾಳೆ ಮರಗಳಿವೆ, ಸೂರ್ಯೋದಯ, ಸೂರ್ಯಾಸ್ತ, ನಕ್ಷತ್ರಗಳಿಂದ ಕೂಡಿದ ರಾತ್ರಿಗಳಿವೆ. ಎಲ್ಲವೂ ಅಸ್ಪಷ್ಟವಾಗಿದೆ. ಆದರೂ ಒಂದು ಆಕೃತಿಯಿದೆ. ಒಂದು ಅನಂತ ಸಂಪತ್ತಿನ ರಾಶಿ, ಒಂದು ಉದಾರತೆ, ಒಂದು ದಾರಿ, ಒಂದು ದಾರಿ ದೀವಿಗೆ ಮತ್ತು ಬಹುಶಃ ಎಲ್ಲದರ ಕಡೆಯಲ್ಲಿ - ದೇವರು."

ಆದರೆ ಎಮ್ಮಾ ಬೊವರಿಗೆ ಕಡೆಯಲ್ಲಿ ಇದ್ದ ಆಯ್ಕೆಯೇ  ಬೇರೆ.

Monday, March 23, 2020

ಏನೋ ಹೇಳುತ್ತಿದ್ದಾರೆ

“Lock up your libraries if you like; but there is no gate, no lock, no bolt that you can set upon the freedom of my mind.”
― Virginia Woolf, A Room of One's Own

ಈಚೆಗೆ ಮಾರ್ಚ್ ೮ ರ ಮಹಿಳಾ ದಿನದ ಹಿನ್ನೆಲೆಯಲ್ಲಿ ಸಾವಣ್ಣ ಪ್ರಕಾಶನ ಸಂಸ್ಥೆಯವರು ಒಂದು ಲೇಖನ ಸಂಗ್ರಹ ಬಿಡುಗಡೆ ಮಾಡಿದ್ದಾರೆ . ಅದರ ಹೆಸರು 'ಏನೋ ಹೇಳುತ್ತಿದ್ದಾರೆ'. ಹದಿನಾರು ಮಹಿಳಾ ಬರಹಗಾರ್ತಿಯರ ಬರಹಗಳ ಸಂಗ್ರಹ ಇದು . ಈ ಎಲ್ಲ ಬರಹಗಾರ್ತಿಯರು ತಮಗೆ ಸ್ಪೂರ್ತಿ ನೀಡಿದ ಮತ್ತು ಇತರರಿಗೂ ಸ್ಪೂರ್ತಿ ನೀಡಬಹುದಾದ ವಿಷಯಗಳ ಬಗ್ಗೆ ಬರೆದ ಬರಹಗಳು ಇವು . ಈ ಪುಸ್ತಕದ ಇ -ಬುಕ್ ಅನ್ನು MyLang Books ನಲ್ಲಿ ಖರೀದಿಸಬಹುದು.

ಮುನ್ನುಡಿಯಲ್ಲಿ ಈ ಸಂಗ್ರಹದ ಬರಹಗಳ ಬಗ್ಗೆ ಬರೆಯುತ್ತಾ ಲೇಖಕಿ ಎಚ್ ಎಸ್ ಶ್ರೀಮತಿ ಯವರು, ಮೇಲ್ನೋಟಕ್ಕೆ ಈ ಬರಹಗಳಲ್ಲಿ ತಾವು ಕಂಡದ್ದರ ಬಗ್ಗೆ ಬರೆಯುತ್ತಾರೆ. ಮಹಿಳೆಯರು ಶಿಕ್ಷಣ,ಆರ್ಥಿಕ ಸ್ವಾವಲಂಬನೆಗಳಂಥವನ್ನು ಎಟುಕಿಸಿಕೊಂಡಾಗ ಎಲ್ಲ ಪ್ರಶ್ನೆಗಳನ್ನೂ ಎದುರಿಸಬಹುದು ಮತ್ತು ಸ್ವಂತದ ನಿರ್ಧಾರ, ಪ್ರಯತ್ನಗಳಿದ್ದರೆ ಸೋಲು ಇರದು ಎಂಬ ಭರವಸೆ ಎಲ್ಲ ಬರಹಗಳಲ್ಲಿ ಕಂಡದ್ದಾಗಿ ಬರೆಯುತ್ತಾರೆ.

ಹೆಣ್ಣು ಅಭಿವ್ಯಕ್ತಿಗಾಗಿ ತಾನು ಬಳಸುತ್ತಿರುವ ಸಾಹಿತ್ಯ ಅಥವಾ ಇನ್ನಾವುದೇ ಕಲಾಪ್ರಕಾರಗಳು ಮತ್ತು ಅವುಗಳ ಮಾಧ್ಯಮವಾಗಿ ಬಳಸುತ್ತಿರುವ ಭಾಷೆಯಂತಹ ಸಾಧನಗಳು ತನ್ನವಲ್ಲ ಎಂಬ ಜಾಗೃತಿಯೂ ಸಾಧ್ಯವಾಗದ ಸಾಮಾಜಿಕ ಸಂದರ್ಭದಲ್ಲಿ ಇದ್ದಾಳೆ ಎನ್ನುವುದನ್ನು ವಿವರಿಸಲು ಸಿಮೋನ್ ದ ಬೋವ ಬರೆದಿರುವ 'ದ ಸೆಕೆಂಡ್ ಸೆಕ್ಸ್ ' ಕೃತಿಯನ್ನು ಪ್ರಸ್ತಾಪಿಸುತ್ತಾರೆ. ಹೆಣ್ಣೊಬ್ಬಳು ತನ್ನ ಬಾಲ್ಯದಿಂದ ತೊಡಗಿ, ಹದಿಹರೆಯ, ತಾರುಣ್ಯ , ಮಧ್ಯ ವಯಸ್ಸು, ವೃದ್ಧಾಪ್ಯ ದವರೆಗೆ ಹೇಗೆ ಕಾಣಿಸಿಕೊಳ್ಳುತ್ತಾ ತನ್ನ ಆಯಸ್ಸು ಕಳೆಯುತ್ತಾಳೆ ಎಂಬುದನ್ನು ಬಾಹ್ಯ ವಿವರಗಳಿಂದಲೇ ಹಿಡಿದಿಡುವುದರ ಬಗ್ಗೆ ಹೇಳುತ್ತಾರೆ .ಹದಿ ಹರಯಕ್ಕೆ ಕಾಲಿಡುತ್ತಿದ್ದಂತೆ ಹೆಣ್ಣು ಸ್ವಮೋಹಿಯಾಗುವದನ್ನೂ ಮತ್ತು ಅದೇ ಕಾರಣವಾಗಿ ತಾನು ಯಾರು ಎಂಬುದನ್ನೇ ಗುರುತಿಸಿಕೊಳ್ಳದೇ ಕಳೆದುಹೋಗುವುದನ್ನು ಆ ಕೃತಿಯಲ್ಲಿ ಚಿತ್ರವತ್ತಾಗಿ ವಿವರಿಸಿರುವುದನ್ನು ಪ್ರಸ್ತಾಪಿಸುತ್ತಾರೆ. ಅವಳು ಏನೇ ಮಾತನಾಡಲು ಹೊರಟರೂ ಅದು ಬೋವಾ ಳು ಹೇಳಿದ ಕನ್ನಡಿಯ ಎದುರು ನಿಂತ ಸ್ವಮೋಹಿ ಹೆಣ್ಣಿನ ರೀತಿಯದೇ ಆಗಿಬಿಡುವುದರ ಅನುಮಾನ ವ್ಯಕ್ತಪಡಿಸುತ್ತಾರೆ . ನಮ್ಮ ಶಿಕ್ಷಣ, ಉದ್ಯೋಗಗಳಂಥವು ನಮಗೆ ನೀಡಿವೆ ಎನ್ನಲಾದ ಬುದ್ಧಿ, ಆರ್ಥಿಕ ಸ್ವಾವಲಂಬನೆ ಎಂಬ ಪ್ರಗತಿಯ ನಡೆಗಳು ನಿಜಕ್ಕೂ ನಮ್ಮನ್ನು ಜಾಗೃತಗೊಳಿಸಿವೆಯೇ, ಬಲಗೊಳಿಸಿವೆಯೇ ಎಂಬ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಲು ಸಿದ್ಧರಿದ್ದೇವೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ.

ಬಹುಶಃ ಸ್ತ್ರೀವಾದಕ್ಕೆ ಸಂಬಂಧಿಸಿ ಅವರು ನಡೆಸಿರುವ ಆಳವಾದ ಅಧ್ಯಯನದ ಆಧಾರದಲ್ಲಿ ಕಂಡುಕೊಂಡಿರುವ ಸತ್ಯಗಳು ವ್ಯವಸ್ಥೆಯಲ್ಲಿ ಬದಲಾವಣೆ ತರುವುದರ ಕಷ್ಟಗಳನ್ನು ಅವರಿಗೆ ಪರಿಚಯಿಸಿರಬಹುದು.ಮಹಿಳೆಯರ ಅಭಿವ್ಯಕ್ತಿಯು, ದಿನ ನಿತ್ಯದ ಮಾತಿನಲ್ಲೇ ಇರಲಿ, ಅಥವಾ ಯಾವುದೇ ಕಲಾ ಪ್ರಕಾರದ ಮಾತಿನಲ್ಲೇ ಆಗಲಿ ಬದುಕಿನ ಎಲ್ಲ ಪ್ರಸಂಗಗಳಲ್ಲೂ ಎದುರಾಳಿಯಾಗಿ ಕಾಣುವುದು ಗಂಡಸರೇ ಆಗಿರುವುದರಿಂದ ಅಭಿವ್ಯಕ್ತಿಯು ಕ್ರಿಯಾಶೀಲತೆಗೆ ಅವಕಾಶವಿಲ್ಲದೇ ಭಾವುಕ ಕ್ರಿಯೆ ಮಾತ್ರವೇ ಆಗಿ ಉಳಿದು ಹೋಗುವ ಎಚ್ಚರಿಕೆಯನ್ನುಅವರು ನೀಡುತ್ತಾರೆ.

ಮಹಿಳೆಯರೇ ಬರೆದ 'ಏನೋ ಹೇಳುತ್ತಿದ್ದಾರೆ' ಸಂಗ್ರಹದ ಬರಹಗಳನ್ನು ಓದುವಾಗ ಮಹಿಳಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಾನು ಹಿಂದೊಮ್ಮೆ ಓದಿದ್ದ 'ಎ ರೂಮ್ ಆಫ್ ಒನ್ಸ್ ಓನ್' ಕೃತಿಯು ನೆನಪಾಯಿತು . ಅತ್ಯುತ್ತಮ ಕಾದಂಬರಿಗಾರ್ತಿಯಾಗಿದ್ದ ವರ್ಜೀನಿಯಾ ವುಲ್ಫ್ ಳು ಮಹಿಳೆ ಮತ್ತು ಸಾಹಿತ್ಯದ ವಿಚಾರವಾಗಿ ಸಾಕಷ್ಟು ಚಿಂತನೆ ಮಾಡಿದವಳು . ಆಕೆ ಕೇಂಬ್ರಿಜ್ ವಿಶ್ವವಿದ್ಯಾನಿಲಯ ದಲ್ಲಿ ನೀಡಿದ ಒಂದು ಉಪನ್ಯಾಸವು 'ಎ ರೂಮ್ ಆಫ್ ಒನ್ಸ್ ಓನ್' ಕೃತಿಯ ಮೂಲವಸ್ತು. ಹಿಂದಿನ ಶತಮಾನಗಳಲ್ಲೆಲ್ಲ ಮಹಿಳಾ ಕಾದಂಬರಿಗಾರ್ತಿಯರು ಪುರುಷ ಕಾದಂಬರಿಗಾರರಿಗೆ ಹೋಲಿಸಿದರೆ ಅಲ್ಪವೇ ಯಶಸ್ಸನ್ನು ಕಾಣಲು ಕಾರಣವನ್ನು ವುಲ್ಫ್ ಈ ಕೃತಿಯಲ್ಲಿಪಟ್ಟಿ ಮಾಡುತ್ತಾಳೆ. ಆರ್ಥಿಕ ಪರಾವಲಂಬನೆ, ಬೌದ್ಧಿಕ ಅಸ್ವಾತಂತ್ರ್ಯ, ಪ್ರಾಪಂಚಿಕ ಅನುಭವದ ಮಿತಿ ಇತ್ಯಾದಿಗಳು ಆಕೆ ಪಟ್ಟಿ ಮಾಡುವ ಕಾರಣಗಳು. ಖ್ಯಾತ ಲೇಖಕ ಟಾಲ್ಸ್ಟಾಯ್ ಮತ್ತು ಲೇಖಕಿ ಜಾರ್ಜ್ ಎಲಿಯಟ್ ಈ ಇಬ್ಬರ ಜೀವನ ಸಂದರ್ಭಗಳ ಹೋಲಿಕೆ ಮಾಡುತ್ತಾ ಟಾಲ್ ಸ್ಟಾಯ್ ಗಿದ್ದ ಜಗತ್ತನ್ನು ಸುತ್ತುವ ಸ್ವಾತಂತ್ರ್ಯ ಎಲಿಯಟ್ಟಳಿಗೆ ಇರದಿದ್ದನ್ನು ಪ್ರಸ್ತಾಪಿಸುತ್ತಾಳೆ. ಅದೂ ಅಲ್ಲದೆ ತಮ್ಮ ಬರವಣಿಗೆಗೆ ಇತರ ಮಿತಿಗಳ ಜೊತೆಯೇ ಈ ಕಾದಂಬರಿಗಾರ್ತಿಯರು ತಮ್ಮ ಬರವಣಿಗೆಯಲ್ಲಿ ತಮ್ಮ ಸ್ವಂತ ಅಭಿವ್ಯಕ್ತಿಯ ಬದಲು ಪುರುಷ ಮಾನದಂಡಕ್ಕೆ ಅನುಗುಣವಾಗಿಯೋ ಅಥವಾ ಪುರುಷ ವಿರೋಧಿ ಧೋರಣೆಯಿಂದಲೋ ಬರೆದದ್ದೂ ಅವರ ಕಾದಂಬರಿಗಳ ಯಶಸ್ಸಿಗೆ ಮುಳುವಾದದ್ದನ್ನು ಪ್ರಸ್ತಾಪಿಸುತ್ತಾಳೆ. ಮಹಿಳಾ ಕಾದಂಬರಿಗಾರ್ತಿಯು ತನ್ನ ಲಿಂಗಪ್ರಜ್ಞೆಯಿಂದ ಬರೆಯಬಾರದು, ಯಾವುದೇ ಸೃಜನಾತ್ಮಕ ಮನಸ್ಸು ಗಂಡು-ಹೆಣ್ಣು ಪ್ರಜ್ಞೆಗಳ ಸಮನ್ವಯ ಹೊಂದಿರಬೇಕು ಎಂಬುದು ವುಲ್ಫ್ ಳ ವಾದವಾಗಿತ್ತು.

'ಏನೋ ಹೇಳುತ್ತಿದ್ದಾರೆ' ಸಂಗ್ರಹದ ಮೊದಲನೇ ಬರಹವಾದ ತೇಜಸ್ವಿನಿ ಹೆಗಡೆ ಅವರ 'ದಾರಿ ನೂರಾರಿವೆ ಬೆಳಕಿನರಮನೆಗೆ..' ಬರಹದಲ್ಲಿ ಖ್ಯಾತ ಹಾಲಿವುಡ್ ನಟಿ ಎಮ್ಮಾ ವಾಟ್ಸನ್ ಳ ಒಂದು ಹೇಳಿಕೆಯಿದೆ - "It is time that we all see gender as a spectrum instead of two sets of opposing ideals. We should stop defining each other by what we are and start defining ourselves by who we are".

ಎಮ್ಮಾ ವಾಟ್ಸನ್ ಳ ಈ ಹೇಳಿಕೆ ಬಹಳ ಅರ್ಥಪೂರ್ಣವಾಗಿದೆ. 'What we are' ದೇಹಕ್ಕೆ ಸಂಬಂಧಿಸಿದ್ದು ಮತ್ತು 'who we are' ಪ್ರಜ್ಞೆಗೆ ಸಂಬಂಧಿಸಿದ್ದು. 'What we are' ನಿಂದ ನಿರ್ಧಾರವಾಗುವ ಶ್ರೇಣೀಕರಣವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕ್ರಿಶತಶತಮಾನಗಳಿಂದ ಆಳವಾಗಿ ಬೇರೂರಿರುವ ಗಂಡು ಹೆಣ್ಣುಗಳ ಸಂಬಂಧಗಳ ಶ್ರೇಣೀಕರಣದ ನಿರಾಕರಣ ಮತ್ತು ನಿರ್ಮೂಲನವು ಬಹಳ ಅಗತ್ಯವಾದ ಆದರೆ ಸುಲಭವಲ್ಲದ ಕೆಲಸ. ಜನರ ನಂಬಿಕೆಗಳು ದೃಷ್ಟಿಕೋನಗಳು ಸುಲಭದಲ್ಲಿ ಬದಲಾಗುವುದಿಲ್ಲ. ನಿಯಂತ್ರಿಸುವವರು ಮತ್ತು ನಿಯಂತ್ರಿಸಲ್ಪಡುವವರು ಇಬ್ಬರೂ ಸುಲಭಕ್ಕೆ ಬದಲಾಗುವುದಿಲ್ಲ. ಇದೊಂದು ದೀರ್ಘವಾದ ಮತ್ತು ಸೂಕ್ಷ್ಮವಾದ ಹೋರಾಟ. ಶ್ರೀಮತಿಯವರು ಮುನ್ನುಡಿಯಲ್ಲಿ ಇದನ್ನೇ ಒತ್ತಿ ಹೇಳಲು ಪ್ರಯತ್ನಿಸಿದ್ದಾರೆ ಎಂದು ನನಗನಿಸಿತು.

ಸ್ವಾತಂತ್ರ್ಯವು ಮಹಿಳೆಯ ಅಭಿವ್ಯಕ್ತಿ ಅರಳಲು ಅಗತ್ಯವಾದದ್ದು. ತನ್ನದೇ ಕೋಣೆ, ತನ್ನದೇ ವರಮಾನ ಇರದೇ ಇದ್ದಾಗ ಕಲಾ ಅಭಿವ್ಯಕ್ತಿ ಅಸಾಧ್ಯ ಎಂದು ವರ್ಜೀನಿಯಾ ವುಲ್ಫ್ 'ಎ ರೂಮ್ ಆಫ್ ಒನ್ಸ್ ಓನ್ ' ಕೃತಿಯಲ್ಲಿ ಬರೆಯುತ್ತಾಳೆ .'ಏನೋ ಹೇಳುತ್ತಿದ್ದಾರೆ' ಸಂಗ್ರಹದ ' ಅಗ್ನಿದಿವ್ಯದಲ್ಲಿ ಹುಟ್ಟುವ ನಗುವಿನ ನತ್ತು' ಬರಹದಲ್ಲಿ ಸಂಧ್ಯಾರಾಣಿಯವರೂ ಇದೇ ಭಾವನೆ ವ್ಯಕ್ತಪಡಿಸುತ್ತ- 'ಯಾವುದೇ ವ್ಯಕ್ತಿಯ ಆತ್ಮ ಗೌರವ ಮತ್ತು ಆತ್ಮ ಸಮ್ಮಾನಕ್ಕೆ ಬೇಕಾದ ಟಿಕೆಟ್ ಎಂದರೆ ಅದು ಆರ್ಥಿಕ ಸ್ವಾವಲಂಬನೆ' ಎಂದು ಬರೆಯುತ್ತಾರೆ. ಇದೇ ಬರಹದಲ್ಲಿ ಅವರು ಮಹಿಳೆಯರ ವೈಯಕ್ತಿಕ ಅನುಭವಗಳು ಬದುಕಿನ ಅಪಾರ ಸಾಧ್ಯತೆಗಳ ಬಗ್ಗೆ ಧನಾತ್ಮಕ ಭಾವನೆಯನ್ನು ಕಟ್ಟಿಕೊಡಬಹುದಾದದ್ದರ ಬಗ್ಗೆ ಬರೆಯುತ್ತ ಈ ಕುರಿತು 'ಸ್ತ್ರೀವಾದ - ಚಿಂತನೆ ಮತ್ತು ಹೋರಾಟ' ಕೃತಿಯಲ್ಲಿ ಶ್ರೀಮತಿಯವರ ಕೆಲವು ಯೋಚನೆಗಳನ್ನು(ದಿ ಪಾಲಿಟಿಕ್ಸ್ ಆಫ್ ಇಂಡಿವಿಜುವಲಿಂ) ಉಲ್ಲೇಖಿಸುತ್ತಾರೆ- 'ಸಾಧಾರಣವಾಗಿ ಗಂಭೀರ ಚಿಂತನೆಗಳು ಎಂದರೆ ಅದರಲ್ಲಿ ವೈಯಕ್ತಿಕ ಅಂಶಗಳು ಬೆರೆಯುವಂತಿಲ್ಲ ಎಂಬುದು ಪುರುಷಜ್ಞಾನವಲಯದ ಹೇಳಿಕೆ...ಆದರೆ ಸ್ತ್ರೀ ವಾದಿ ಜ್ಞಾನಮೀಮಾಂಸೆ ಮಹಿಳಾ ಬದುಕನ್ನು ವೈಯಕ್ತಿಕತೆಯಿಂದ ಹೊರತಾಗಿ ಚಿಂತಿಸುವುದು ಅರ್ಥಹೀನವಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿಯೇ ಕಂಡುಕೊಂಡಿದೆ. ಅಂದರೆ ಮಹಿಳಾ ಬದುಕಿನ ದಿನನಿತ್ಯದ ವಿವರಗಳಿಗೆ ಆಪ್ತವಾಗಿ ಸಂಬಂಧಿಸಿಕೊಂಡಲ್ಲದೆ ಸ್ತ್ರೀವಾದಿ ಚಿಂತನೆಗಳು ಮುನ್ನಡೆಯಲಾರವು ಎಂಬ ಖಚಿತ ನಿಲುವು ಇಲ್ಲಿದೆ'. ಹೀಗೆ ಶ್ರೀಮತಿಯವರ ಆಲೋಚನೆಗಳು ಈ ಪುಸ್ತಕದಲ್ಲಿ ಮುನ್ನುಡಿಯಿಂದಲೇ ಓದುಗರನ್ನು ಆವರಿಸುತ್ತವೆ. ಎಲ್ಲರಿಗೂ ನಾವು ನಾವಾಗಿ ಬದುಕುವ ಅವಕಾಶವಿರುವ ವ್ಯವಸ್ಥೆಯೊಂದನ್ನುಹಾಗೂ ಅಂಥದೊಂದು ವ್ಯವಸ್ಥೆಯಲ್ಲಿ ಗಂಡು ಹೆಣ್ಣುಗಳ ಆರೋಗ್ಯಕರ ಸಂಬಂಧವನ್ನು ಸ್ಥಾಪಿಸುವುದೂ ಒಂದು ಉದ್ದೇಶವಾಗಿರುವ ಸ್ತ್ರೀವಾದದ ಇತಿಹಾಸ, ಪರಿಕಲ್ಪನೆ, ಮತ್ತು ಪ್ರಸ್ತುತತೆಯನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಶ್ರೀಮತಿ ಅವರು ವಿವರಿಸಿರುವ ವಿಡಿಯೋಗಳು ಋತುಮಾನ ದಲ್ಲಿ ಲಭ್ಯವಿವೆ.

ಈ ಸಂಗ್ರಹದ ಇನ್ನು ಕೆಲವು ಬರಹಗಳು ಇಂದಿನ ಸಾಮಾಜಿಕ ಸಂದರ್ಭದ ಬಗೆಗೆ ಬಹಳಷ್ಟು ಭರವಸೆಯನ್ನೂ ಹೊಂದಿವೆ. ಮಹಿಳೆಯಿಂದಲೇ ಮುಂದೊಂದು ದಿನ ಸ್ವಸ್ಥ ಸಮಾಜದ ನಿರ್ಮಾಣ ಆಗಲಿದೆ ಎಂಬ ಆಶಯವೂ ಒಂದು ಬರಹದಲ್ಲಿ ಕಂಡು ಬಂತು. ಹಾಗೆ ಆಗಲಿ ಎಂಬ ಹಾರೈಕೆ ನನ್ನದು. ಜೆ ಕೆ ರೌಲಿಂಗ್, ಮೇರಿ ಕ್ಯೂರಿ, ಛಾಯಾ ನಂಜಪ್ಪ, ಬೆಂಗಳೂರು ನಾಗರತ್ನಮ್ಮ ಮುಂತಾದ ಸಾಧಕಿಯರ ಸ್ಪೂರ್ತಿದಾಯಕ ಜೀವನ ಚಿತ್ರಗಳೂ ಈ ಬರಹಗಳಲ್ಲಿವೆ.

ಧಾವಂತದ ಬದುಕಿನಲ್ಲಿ ಮುಳುಗಿರುವ ಕನ್ನಡಿಗರನ್ನು ಒಮ್ಮೆ ನಿಲ್ಲಿಸಿ, ನೋಡಿ ಈ ಮಹಿಳಾ ದಿನದಂದು 'ಏನೋ ಹೇಳುತ್ತಿದ್ದಾರೆ' ಕೇಳಿಸಿಕೊಳ್ಳಿ ಎಂದು ಈ ಪುಸ್ತಕ ಕೈಗಿಟ್ಟಿರುವ ಸಾವಣ್ಣ ಪ್ರಕಾಶನದ್ದು ಮೆಚ್ಚಬೇಕಾದ ಕೆಲಸ.

ಸಾಹಿತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಮಹಿಳೆಯರ ವಿಚಾರಗಳ ಅಭಿವ್ಯಕ್ತಿಯು ಒಂದು ಸಮ ಸಮಾಜದಲ್ಲಿ ಸಹಜವಾದ ಪ್ರಕ್ರಿಯೆಯಾಗಿರಬೇಕಾಗುವುದರ ಜೊತೆಗೆ ರೂಢಿಗತ ಮೌಲ್ಯಗಳ ಪ್ರಶ್ನೆಗೂ ಒದಗಿ ಬರುವುದೆಂದು ನನ್ನ ನಂಬಿಕೆ.


Wednesday, April 17, 2019

ಮಂದೆಯಲಿ ಒಂದಾಗಿ ಸ್ವಂತತೆಯೇ ಬಂದಾಗಿ


'ಇತಿಹಾಸವನ್ನು ನೆನಪು ಮಾಡಿಕೊಳ್ಳಲಾರದವರು ಅದೇ ಇತಿಹಾಸವನ್ನು ಮರು ಜೀವಿಸಬೇಕಾಗುತ್ತದೆ' ಎಂದ ಹಾರ್ವರ್ಡ್ ಪ್ರೊಫೆಸರ್ ಜಾರ್ಜ್ ಸಾಂಟಯಾನನ ಮಾತು  ಒಂದು ಎಚ್ಚರಿಕೆಯ ಗಂಟೆಯಂತಿದೆ.

ಲಂಕೇಶ್ ಹಿಟ್ಲರನ ಬಗ್ಗೆ ಕೆಲವು ಲೇಖನಗಳನ್ನು ಬರೆದಿದ್ದರು. 'ಟೀಕೆ - ಟಿಪ್ಪಣಿ' ಪುಸ್ತಕವನ್ನು ತಿರುವಿದಾಗ ಇಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಹಿಟ್ಲರ್' ಮತ್ತು ' ಫ್ಯಾಸಿಸಂ'  ಕುರಿತಾದ ಬರಹ ಕಣ್ಣಿಗೆ ಬಿತ್ತು. ಕೆಲವೇ ಪ್ಯಾರಾಗಳಲ್ಲಿ ಮನಮುಟ್ಟುವಂತೆ ಪ್ರಜಾಪ್ರಭುತ್ವದ ಇನ್ನೊಂದು ಮುಖದ ಬಗ್ಗೆ ಅವರು ಬರೆಯುತ್ತಾರೆ.

ಪ್ರಭುತ್ವವನ್ನು ಪ್ರಶ್ನಿಸುವುದನ್ನೇ ಮರೆತು ವ್ಯಕ್ತಿ ಆರಾಧನೆಯಲ್ಲಿ ತೊಡಗುವುದು ಎಂತಹ ಅಪಾಯಕಾರಿ ಸನ್ನಿವೇಶವನ್ನು ತಂದೊಡ್ಡಬಹುದು ಎಂದು ಅರಿಯುವುದಕ್ಕೆ ಜರ್ಮನಿಯಲ್ಲಿ ಆದದ್ದರ ಬಗೆಗಿನ ಲಂಕೇಶರ ಪುಟ್ಟ ವ್ಯಾಖ್ಯಾನವನ್ನು ಇಂದು ನೆನಪು ಮಾಡಿಕೊಳ್ಳುವುದು ಉಪಯುಕ್ತ.
 --------------------
"ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಹುಟ್ಟಿದ. ಈತ ಭಿಕಾರಿಯಾದ ಮನುಷ್ಯ; ಬೀದಿಯ ಪಕ್ಕದಲ್ಲಿ ಮಲಗುತ್ತಿದ್ದವನು. ಇವನು ಭಾಷಣ ಮಾಡುವುದನ್ನು, ತನ್ನ ದೇಶದ ಚರಿತ್ರೆಯ ಬಗ್ಗೆ ಆಕರ್ಷಕ ಸುಳ್ಳುಗಳನ್ನು ಹೇಳುವುದನ್ನು ಕಲಿತಿದ್ದ. ಸ್ವಂತದ ಲಾಭ, ನಾಯಕತ್ವವೇ ಮುಖ್ಯವಾಗಿದ್ದರೂ ಈ ಹಿಟ್ಲರ್ ತಾನಿರುವುದು ರಾಷ್ಟ್ರಕ್ಕಾಗಿ ಎಂದು ಸಾರಿ ಜನರನ್ನು ನಂಬಿಸಿದ. ರಾಷ್ಟ್ರದ ಹೆಸರಲ್ಲಿ ಮಿಲಿಟರಿಯನ್ನು ಕಟ್ಟಬೇಕು ಎಂದು ಘೋಷಿಸಿದ. ಈತನ ಮಾತು ರಾಷ್ಟ್ರದ ಬಗ್ಗೆ, ರಾಷ್ಟ್ರಕ್ಕಾದ ಅನ್ಯಾಯವನ್ನು ಸರಿಪಡಿಸಲು; ಆದರೆ ಇವನ ಏಕಮಾತ್ರ ಗುರಿ ಅಧಿಕಾರ. ಲಕ್ಷಾಂತರ ಜನರನ್ನು ಆಕರ್ಷಿಸಿ ಗಂಟೆಗಟ್ಟಲೆ ಅವರ ತಲೆಯಲ್ಲಿ ಹುಸಿ ಸಂಗತಿಗಳನ್ನು ತುಂಬುವ ಶಕ್ತಿ ಪಡೆದಿದ್ದ ಈತ ಆಧುನಿಕ ಜಗತ್ತಿನ ಹೊಸ್ತಿಲಲ್ಲಿದ್ದ ಆಗತಾನೆ ಬಂದಿದ್ದ ಮೈಕ್ರೋಫೋನ್ ಗಳು, ಭಿತ್ತಿಪತ್ರ, ಸಿನಿಮಾ ಎಲ್ಲವನ್ನೂ ಬಳಸಿಕೊಳ್ಳತೊಡಗಿದ. ಭಾಷಣ ಮತ್ತು ಪ್ರಚಾರ ಈತನ ಮಂತ್ರವಾಗಿದ್ದವು. ಪ್ರಚಾರಕ್ಕೆ ಗೊಬೆಲ್ಸ್ ಎಂಬುವವನನ್ನು ನೇಮಿಸಿಕೊಂಡ. ಜನ ಸುಳ್ಳುಗಳನ್ನು ನಂಬುವಂತೆ ಪ್ರಚಾರ ಮಾಡುವುದರಲ್ಲಿ ಈತ ಎತ್ತಿದ ಕೈ.

ಜರ್ಮನಿ, ಇಟಲಿ, ಜಪಾನಿನ ಗೂಂಡಾಗಳು ಶುರು ಮಾಡಿದ ಯುದ್ಧದಲ್ಲಿ ಮೂರು ಮುಖ್ಯ ಅಂಶಗಳಿದ್ದವು. ರಾಷ್ಟ್ರಮುಖ್ಯ. ವ್ಯಕ್ತಿಗೌಣ. ರಾಷ್ಟ್ರಕ್ಕಾಗಿ ಜನರೆಲ್ಲ ಬಲಿಕೊಡಬಹುದು. ಎರಡನೆಯದಾಗಿ ಸೈನ್ಯದ ಬಲ ಮುಖ್ಯ. ಸೇನೆ ಅಜೇಯವಾಗಿದ್ದರೆ ಮಾತ್ರ ಗೂಂಡಾಗಳ ಕನಸು ನನಸಾಗುತ್ತದೆ. ಮೂರನೆಯದಾಗಿ, ಅನ್ಯ ಜಾತಿ ಬಗ್ಗೆ ಅಸಹನೆ. ಇಪ್ಪತ್ತನೇ ಶತಮಾನ ಶುರುಮಾಡಿದ ಈ ಗೂಂಡಾಗಳ ಹುಚ್ಚು 'ಫ್ಯಾಸಿಸ್ಟ್' ಅನ್ನಿಸಿಕೊಂಡಿದೆ; ಇದು ಸರಳ, ವೈಚಾರಿಕ ವಿಷಯಗಳನ್ನು, ಚರ್ಚೆಯ ಮೂಲಕ ಸರ್ಕಾರ ರೂಪಿಸುವುದನ್ನು ಇಷ್ಟಪಡುವುದಿಲ್ಲ;ಜನತಂತ್ರವನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಲೇ ಜನತಂತ್ರವನ್ನು ಕಸದಬುಟ್ಟಿಗೆ ಎಸೆಯುತ್ತದೆ. ಇದು ಫ್ಯಾಸಿಸಂ."
------------------------

ಹಿಟ್ಲರ್ ಹೇಗೇ ಇದ್ದಿರಲಿ, ನನಗೆ ನಿಜಕ್ಕೂ ಕಾಡುವ ವಿಚಾರವೆಂದರೆ ಅವನ ದೇಶದ ಜನರ ಮೇಲೆ ಅವನಿಗಿದ್ದ ನಿಯಂತ್ರಣ ಮತ್ತು ಪ್ರಭಾವ. ಅವನ ಎಲ್ಲ ಅವಿವೇಕಿ, ಅಮಾನುಷ ತೀರ್ಮಾನಗಳಿಗೂ ಅವರು ಬೆಂಬಲಕ್ಕೆ ನಿಂತದ್ದು. ಅವರೆಲ್ಲ ನಮ್ಮ ನಿಸಾರರ  ಪದ್ಯದ  'ಕುರಿಗಳು' ಆಗಿದ್ದಿರಬೇಕು. 'ಮಂದೆಯಲಿ ಒಂದಾಗಿ, ಸ್ವಂತತೆಯೇ ಬಂದಾಗಿ' ಇದ್ದವರಾಗಿರಬೇಕು!

ಯಾವುದೇ ದೇಶದಲ್ಲಿ ಸರ್ವಾಧಿಕಾರಿಗಳು ಬಂದಾಗ ಅವರು ಮೊದಲು ಮಾಡುವ ಕೆಲಸ ಬುದ್ಧಿಜೀವಿಗಳನ್ನು, ಸಾಹಿತಿಗಳು, ಶಿಕ್ಷಕರು, ಕವಿಗಳು ಇವರನ್ನು ಜೈಲಿಗೆ ಅಟ್ಟುವುದು. ಯಾಕೆಂದರೆ ಸ್ವಂತ ಯೋಚನೆ, ಹೊಸ ವಿಚಾರಗಳು ಇವರಿಂದಲೇ ಬರುವುದು. ಹಾಗೆಯೇ ನಿಜವಾದ ಸ್ವಾತಂತ್ರ್ಯ ನಿರಂಕುಶತೆಯನ್ನು ಬಯಸುವವರಿಗೆಲ್ಲ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಅಂಟಿಸುವ ಮೂಲಕ ಅವರನ್ನೂ ನಿಯಂತ್ರಿಸುವುದು ಇದು ಎಲ್ಲ ಸರ್ವಾಧಿಕಾರಿಗಳ ಮಾಮೂಲಿ ತಂತ್ರ.

ನಮ್ಮ ದೇಶದಲ್ಲೂ ಎಪ್ಪತ್ತರ ದಶಕದಲ್ಲಿ ಒಮ್ಮೆ ಮತ್ತು ಈಚಿನ ಕೆಲ ವರ್ಷಗಳಲ್ಲಿ ಮತ್ತೊಮ್ಮೆ ಸರ್ವಾಧಿಕಾರಿ ಧೋರಣೆ ಕಂಡು ಬಂದಿದೆ. ಅಸಂಖ್ಯಾತ ಹಿರಿಯರ ನಿರಂತರ ತ್ಯಾಗ, ಹೋರಾಟಗಳಿಂದ ಸಂಪಾದಿಸಿರುವ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ, ಸಂವಿಧಾನದ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ.

Friday, March 22, 2019

ಸತ್ಯೋತ್ತರ (post-truth) ಕಾಲದ ಸವಾಲುಗಳು

2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ಪರಸ್ಪರ ದಾಳಿ ಪ್ರತಿದಾಳಿಗಳು, ಆರೋಪ ಪ್ರತ್ಯಾರೋಪಗಳು ಕಾವೇರುತ್ತಿರುವ ಈ ಹೊತ್ತಿನಲ್ಲಿ ಕನ್ನಡದಲ್ಲಿ ಸಮರ್ಥ ರಾಜಕೀಯ ಸುದ್ದಿ ನಿಯತಕಾಲಿಕೆಯೊಂದರ ಅಭಾವ ಅನುಭವಕ್ಕೆ ಬರುತ್ತಿದೆ. ಎಂಬತ್ತರ ದಶಕದಲ್ಲಿ ಆರಂಭವಾಗಿ ಎರಡು ದಶಕಗಳ ಕಾಲ  ನಾಡಿನ ಜನತೆಯ ಸಾಕ್ಷಿಪ್ರಜ್ಞೆಯಾಗಿ ಅತ್ಯಂತ ಪ್ರಭಾವಿ ಪಾತ್ರ ನಿರ್ವಹಿಸಿದ ಪತ್ರಿಕೆಯೆಂದರೆ 'ಲಂಕೇಶ್ ಪತ್ರಿಕೆ'. ಲಂಕೇಶರ ಸಂಪಾದಕೀಯ ಬರಹಗಳ ಸಂಗ್ರಹವನ್ನು ಓದುತ್ತಿದ್ದಾಗ ಕಣ್ಣಿಗೆ ಬಿದ್ದದ್ದು  ಸರಿಯಾಗಿ ಇಪ್ಪತ್ತೊಂದು ವರ್ಷಗಳ ಹಿಂದೆ ಅವರು 1999ರಲ್ಲಿ ಬರೆದಿದ್ದ 'ನನಗೇಕೆ ಬಿಜೆಪಿ ಹಿಡಿಸುವುದಿಲ್ಲ' ಎಂಬ ಬರಹ.

ಈ ಬರಹವು ಪ್ರಕಟವಾದ ಸಂದರ್ಭದಲ್ಲೂ ಭಾರತೀಯ ರಾಜಕಾರಣದಲ್ಲಿ ಬಲಪಂಥೀಯವಾದ ಮುನ್ನೆಲೆಗೆ ಬರುವುದರಲ್ಲಿತ್ತು. ಇದೀಗ  ಬಲಪಂಥೀಯ  ಪಕ್ಷ ಬಿಜೆಪಿ ಐದು ವರ್ಷಗಳ ಅಧಿಕಾರ ಮುಗಿಸಿ ಮತ್ತೆ ಚುನಾವಣೆ ಎದುರಿಸುತ್ತಿರುವ ಸನ್ನಿವೇಶದಲ್ಲಿ ಏನೀ ಪಕ್ಷದ ಆಕರ್ಷಣೆ ಎಂಬ ಪ್ರಶ್ನೆ ಮೂಡುತ್ತದೆ.

ಸಾಹಿತ್ಯ, ಸಮಾಜ, ರಾಜಕೀಯ, ಕಲೆ, ಸಂಸ್ಕೃತಿ, ಸಿನಿಮಾ ಹೀಗೆ ಹಲವು ವಿಚಾರಗಳಲ್ಲಿ ಆಸಕ್ತಿಯುಳ್ಳವರಾಗಿಯೂ, ತಮ್ಮ ಅಧ್ಯಯನ ಅನುಭವಗಳ ಮೂಲಕ   ಪ್ರಭಾವಶಾಲಿಯಾಗಿ ವಿಚಾರಗಳನ್ನು ಮಂಡಿಸುವುದರ ಮೂಲಕ  ಜನಾಭಿಪ್ರಾಯವನ್ನು ರೂಪಿಸುವಷ್ಟು ಶಕ್ತರಾಗಿದ್ದ ಲಂಕೇಶರು  ಬಲಪಂಥೀಯರ ಬಗ್ಗೆ ನಿಖರವಾದ ವಿರೋಧ ಉಳ್ಳವರಾಗಿದ್ದರು.
ಅವರ ಈ ತೀವ್ರ ವಿರೋಧಕ್ಕೆ ಕಾರಣಗಳನ್ನು ಅವರ ಬರಹದ ಕೆಲವು ಪ್ಯಾರಾಗಳಲ್ಲಿ ನಾವು ಕಾಣಬಹುದು-
---------
"ನಮ್ಮಂಥ ಕೆಲವರಿಗೆ ಬಿಜೆಪಿ ಯಾಕೆ ಅತ್ಯಂತ ದುಷ್ಟ ಪಕ್ಷ ಎನ್ನಿಸುತ್ತದೆ ಎನ್ನುವುದನ್ನು ನೋಡಬೇಕು.

ಈ ದೇಶದ ಎಲ್ಲ ಜಾತಿಯ, ವರ್ಗದ ಜನರೂ ಒಂದಾಗಬೇಕು, ಚಾರಿತ್ರ್ಯ ಬೆಳೆಸಿಕೊಳ್ಳಬೇಕು, ಸ್ವಾತಂತ್ರ್ಯವನ್ನು ಪಡೆಯಲು ಅರ್ಹರಾಗಬೇಕು ಎಂದು ಬಾಪೂ ನಂಬಿದ್ದರು. ಅವರ ಜೀವನಸಂಹಿತೆಯಲ್ಲಿ ಪ್ರೇಮ, ಸತ್ಯ, ಅಹಿಂಸೆ ಈ ಮೂರೂ ಒಂದೇ ಆಗಿದ್ದವು. ಸಹಬಾಳ್ವೆ, ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ನಾಗರಿಕನ ಮುಖ್ಯ ಗುಣಗಳಾಗಿದ್ದವು.

ಆರೆಸೆಸ್ಗಳ ದೇಶಭಕ್ತಿ ಮತ್ತು ಧರ್ಮಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರೆಸೆಸ್ಗಳ ಈ ದೇಶಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮದ ದ್ವೇಷ ಎಂದು ಅವರು ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪರಾಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು.

ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ ಆರೆಸೆಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ. ಇದಕ್ಕೆ ಗಾಂಧೀಜಿಯ ಹತ್ಯೆಯನ್ನು ಉದಾಹರಣೆಯನ್ನಾಗಿ ನೀಡುವುದು ಸ್ವಾಭಾವಿಕ. ಧರ್ಮ ಎಂಬ ಲಾಂಛನದ ಮರೆಯಲ್ಲಿ ಜಾತಿಪದ್ಧತಿಯನ್ನು ಬಚ್ಚಿಡುವ, ಈ ಅರೆಸೆಸ್ಗಳಿಗೆ ಮಾನವೀಯತೆ, ನ್ಯಾಯವಂತಿಕೆ, ಪ್ರಜಾಪ್ರಭುತ್ವದ ದಾಕ್ಷಿಣ್ಯಗಳು ಅರ್ಥವಾಗುವುದಿಲ್ಲ. ಇದರಿಂದಾಗಿಯೇ ತನ್ನ ಸಂಕೀರ್ಣ, ಸ್ವಾರ್ಥ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸುಳ್ಳು, ಹಿಂಸೆ, ನಯವಂಚನೆಯನ್ನು ನಂಬಿ 'ಫ್ಯಾಸಿಸ್ಟ್' ಎಂಬ ವರ್ಣನೆಗೆ ಅರ್ಹವಾಗುತ್ತದೆ. ಲಿಂಗಭೇದ (gender discrimination), ಜಾತಿಭೇದ, ವರ್ಣಭೇದಗಳನ್ನು ಸಿದ್ಧಾಂತವಾಗಿಸಿಕೊಂಡು ತನ್ನ ಶ್ರೇಷ್ಠತೆ ಭ್ರಮೆಯಲ್ಲಿ ಬದುಕುವ ಪ್ರತಿಯೊಂದು ಗುಂಪೂ ಫ್ಯಾಸಿಸ್ಟ್.

ಈ ಕಾರಣಕ್ಕಾಗಿ ನನ್ನಂಥವರಿಗೆ ಬಿಜೆಪಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಅನರ್ಹವಾದ ಪಕ್ಷ."
---------
ಎರಡು ದಶಕಗಳ ಹಿಂದೆ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಆರೆಸೆಸ್ ಕುರಿತು ಲಂಕೇಶರು ವ್ಯಕ್ತಪಡಿಸಿದ್ದ ಈ ವಿಚಾರಗಳನ್ನು ಇವತ್ತು ಅನುಮಾನಿಸಲು ಪ್ರೇರೇಪಿಸುವ ಯಾವುದೇ ಸಾಕ್ಷ್ಯ ಈ ಎರಡು ದಶಕಗಳಲ್ಲಿ ನನಗಂತೂ ಕಂಡಿಲ್ಲ. ಆರಂಭದಲ್ಲಿ ತೀರಾ ಸೀಮಿತ ಬೆಂಬಲ ಪಡೆದಿದ್ದ ಧಾರ್ಮಿಕ ಮೂಲಭೂತವಾದಿ ರಾಜಕಾರಣ ಈಚಿನ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೇರಲು ಕಾರಣವೇನೆಂಬುದು  ಯೋಚಿಸಬೇಕಾದ ವಿಚಾರ.

ಮತೀಯವಾದವೇ ಎಲ್ಲೆಡೆಯೂ ಮನ್ನಣೆ ಪಡೆಯುತ್ತಿದ್ದು ಆಧುನಿಕ ಚಿಂತನೆಯ ಮಾತಾಡುವವರು, ಬುದ್ಧಿಜೀವಿಗಳು, ಉದಾರವಾದಿಗಳು ತಾತ್ಸಾರಕ್ಕೆ, ಅವಹೇಳನಕ್ಕೆ, ಕೆಲವೊಮ್ಮೆ ಜೀವಹಾನಿಯ ಬೆದರಿಕೆಗೆ ಒಳಗಾಗುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ ನಾವಿಂದು ಇದ್ದೇವೆ.ಸಾಮಾಜಿಕ ಮಾಧ್ಯಮಗಳೂ ಎಲ್ಲರಿಗೂ ವೇದಿಕೆ ಒದಗಿಸಿ ಸಂಘರ್ಷಕ್ಕೆ ಇನ್ನೂ ಸ್ಫೂರ್ತಿ ದೊರಕಿಸುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದಂತಹ ಎರಡು ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಸಂಪ್ರದಾಯವಾದಿ ಬಲಪಂಥೀಯ ಗುಂಪು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿರುವ ವಿದ್ಯಮಾನವು ಅಧ್ಯಯನಯೋಗ್ಯ ವಿಷಯ.

ಪ್ರಜಾಪ್ರಭುತ್ವದಲ್ಲಿ ಮತೀಯವಾದದ ಜನಪ್ರಿಯತೆಗೆ ಒಂದು ಮುಖ್ಯ ಕಾರಣ ವಿಚ್ಛಿದ್ರಕಾರೀ ಸಂಘಟನೆಗಳ ಅವಿರತ ಸುಳ್ಳು ಪ್ರಚಾರ. ತಮ್ಮ ದೇಶಪ್ರೇಮ, ದೇಶಸೇವೆಗಳ ಸ್ವಗುಣಗಾನದ ಜೊತೆಗೆ ತಮ್ಮ ವಿರೋಧಪಕ್ಷಗಳ ಬಗೆಗೆ ಇವರು ತೇಲಿಬಿಡುವ ಅಪಪ್ರಚಾರದ ಕಂತೆಗಳು. ಕೆಲವು ಟಿವಿ ಚಾನಲ್ ಗಳು, ಅಂತರ್ಜಾಲ ತಾಣಗಳು ತರಾವರಿ ಸುಳ್ಳುಗಳ ಉತ್ಪ್ರೇಕ್ಷೆಗಳ ಕೂಪಗಳಾಗಿರುವ ವಿದ್ಯಮಾನ ಭಾರತದಲ್ಲಿ ಇತ್ತೀಚಿನದು. ಮತೀಯವಾದದ; ಜೀವಸೆಲೆಯೇ ಇಂತಹ ಚಾನೆಲ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳು. ದಿನವಿಡೀ ಮತೀಯ ದ್ವೇಷ,ಪ್ರಚೋದನೆ, ಮತ್ತಿತರ ಋಣಾತ್ಮಕ ಸಂಗತಿಗಳನ್ನೇ ವೈಭವೀಕರಿಸುವ ಇಂತಹ ಮಾಧ್ಯಮಗಳು ಸಮಾಜದಲ್ಲಿ ಸಾಮರಸ್ಯವನ್ನು ನಾಶಗೊಳಿಸಿವೆ.

ಇಂದಿನ ಕಾಲಘಟ್ಟವನ್ನು ಸತ್ಯೋತ್ತರ (post-truth) ಎಂದು ವರ್ಣಿಸಲಾಗುತ್ತಿದೆ. ಟ್ವಿಟರ್, ಫೇಸ್ಬುಕ್, ವಾಟ್ಸಾಪ್, ಯೂ ಟ್ಯೂಬ್ ಎಲ್ಲೆಡೆ  ಸುಳ್ಳು ಸುದ್ದಿಗಳದ್ದೇ ಅಬ್ಬರ. ಸುದ್ದಿಯ ಸತ್ಯಪರೀಕ್ಷೆಗೆಂದೇ ಆಲ್ಟ್-ನ್ಯೂಸ್, ಬೂಮ್ ನಂತಹ; ಸಂಸ್ಥೆಗಳೂ ಆರಂಭವಾಗಿವೆ. ಇವು ಪತ್ತೆ ಮಾಡುವ ಸುದ್ದಿಗಳನ್ನು ಗಮನಿಸಿದರೆ ಅಂತಹ ಸುದ್ದಿಗಳು ಸುಳ್ಳಾಗಿ ಪಕ್ಷಪಾತಿಯಾಗಿ ಇರುವುದರ ಜೊತೆಗೆ; ಹೆದರಿಸುವ, ಕೆರಳಿಸುವ, ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿರುತ್ತವೆ.

ಈ ವಿದ್ಯಮಾನ ನಮ್ಮ ದೇಶದಲ್ಲಿ ಮುನ್ನೆಲೆಗೆ ಬಂದಿದ್ದು 2014ರಲ್ಲಿ. ಆ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ಸಾಮಾಜಿಕ ಮಾಧ್ಯಮಗಳ ಕಾಣಿಕೆ ಸಣ್ಣದಲ್ಲ. ಇದರ ಪರಿಣಾಮ ಏನೆಂದರೆ ಇಂದು ಸುದ್ದಿಯಾಗಲಿ, ಮಾಹಿತಿಯಾಗಲಿ ಒಂದು ನಿರ್ದಿಷ್ಟ ಪ್ರಮಾಣೀಕರಣಕ್ಕೆ ಒಳಪಡದೆ ಬಿಡುಗಡೆಯಾಗುವುದರಿಂದ ಅದಕ್ಕೆ ಹೆಚ್ಚಿನ ಬೆಲೆಯೇ ಉಳಿದಿಲ್ಲ. ಹಿಂದೆಲ್ಲ ಸಾಕ್ಷ್ಯಪೂರ್ಣ ಅಂಕಿ ಅಂಶ,ನಿಪುಣರಿಂದ ಚರ್ಚೆಗೊಳಪಟ್ಟ ಮಾಹಿತಿ ಇವೆಲ್ಲವನ್ನು ಅಧರಿಸಿಯೇ ಮುಖ್ಯವಾದ ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗಿನ ಸರ್ಕಾರಕ್ಕೆ ಅದರಲ್ಲಿ ನಂಬಿಕೆಯಿದ್ದಂತಿಲ್ಲ. ಈಗ ನಿರ್ಧಾರಗಳು ಮೊದಲು; ನಂತರ ಬೇಕಾದ ಅಂಕಿ ಅಂಶಗಳನ್ನು ಒದಗಿಸುವುದು. ಉದಾಹರಣೆಗೆ, ನೋಟು ರದ್ದತಿ ನಿರ್ಧಾರ, ನಿರುದ್ಯೋಗದ ಏರಿಕೆ ಪ್ರಮಾಣದ ಮಾಹಿತಿ ಪ್ರಕಟಗೊಳಿಸದಿರುವ ನಿರ್ಧಾರ ಇತ್ಯಾದಿ. ಸುಳ್ಳು ಮಾಹಿತಿಗಳು, ಏಕಪಕ್ಷೀಯ ನಿರ್ಧಾರಗಳು, ಸಾಂವಿಧಾನಿಕ ಸಂಸ್ಥೆಗಳ ದುರ್ಬಲೀಕರಣ ಯಾವುದೂ ನಮ್ಮಲ್ಲಿ ಹಲವರಿಗೆ ಮುಖ್ಯ ಅನಿಸುತ್ತಲೇ ಇಲ್ಲ.

ಬಿಜೆಪಿಯವರ ಇನ್ನೊಂದು ಕೆಟ್ಟ ಪ್ರವೃತ್ತಿಯೆಂದರೆ ಸರ್ಕಾರವನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಕರೆಯುವುದು. ಆಡಳಿತವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಕರ್ತವ್ಯ ಎನ್ನುವ ಸತ್ಯ ಇವರ ಅರಿವಿಗೆ ನಿಲುಕುವುದೇ ಇಲ್ಲ. ವ್ಯಕ್ತಿಪೂಜೆ ಈ ಪಕ್ಷದವರ ಮುಖ್ಯ ಗುಣಲಕ್ಷಣ. ನಾನು ಗಮನಿಸಿರುವಂತೆ ಈ ಪಕ್ಷವನ್ನು ಬೆಂಬಲಿಸುವ ಹಲವು ಮಂದಿ ಸುಶಿಕ್ಷಿತರಲ್ಲೇ ಕಾಣಬರುವ ಒಂದು ಸಾಮಾನ್ಯ ಲಕ್ಷಣವೆಂದರೆ ದೇಶದ ಇತಿಹಾಸ ಮತ್ತು ಸಮಾಜ ವಿಜ್ಞಾನದ ಕುರಿತು ಕಂಡುಬರುವ ಅರಿವಿನ ಕೊರತೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಾರಣವಿರಬಹುದು.

ಈಚೆಗೆ ಪ್ರತಾಪ್ ಭಾನು ಮೆಹ್ತಾ ಹೇಳಿದಂತೆ ಮತೀಯವಾದಿ, ವಿಚ್ಛಿದ್ರಕ ಶಕ್ತಿಗಳನ್ನು ನಾವು ಬೆಂಬಲಿಸುವುದು ನಮ್ಮ 'ಅಸಮಾಧಾನದ ಹೃದಯ, ಸಣ್ಣ ಮನಸ್ಸು, ಸಂಕುಚಿತ ಆತ್ಮ' ಇವುಗಳ ಸೂಚಕವಿರಬಹುದು.
ಹಲವಾರು ಕ್ಷೇತ್ರಗಳಲ್ಲಿ ಗುರಿಗೂ ಸಾಧನೆಗೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಅಸೀಮ ವಿಶ್ವಾಸದಿಂದ ಮತ್ತೆ ಜನರಲ್ಲಿಗೆ ಹೋಗಲು ಬಹುಶಃ ಬಿಜೆಪಿ ಪಕ್ಷಕ್ಕೆ ಇರುವ ಒಂದೇ ಭರವಸೆ ಮತದಾರರ ಬಹುಸಂಖ್ಯಾತವಾದೀ ಮತೀಯವಾದಿ ಮನಸ್ಥಿತಿ. ಕಳೆದ ಸಲ ಕಾಂಗ್ರೆಸ್ ಸರ್ಕಾರದ; ಹಗರಣಗಳ ಬಲವೂ; ಬಿಜೆಪಿಗಿತ್ತು. ಈ ಸಲ ಪರಿಸ್ಥಿತಿ ಬದಲಾಗಬಹುದು. ತಮ್ಮ ಹಿಂದಿನ ಭರವಸೆ ಮತ್ತು ಅವುಗಳ ಸಾಧನೆಯ ಬಗೆಗೆ ದನಿಯನ್ನೇ ತೆಗೆಯದೆ, ಇನ್ನೂ ಅದೇ ಹಳೇ ರಾಗವಾದ ವಂಶ ರಾಜಕೀಯ, ಎಪ್ಪತ್ತು ವರ್ಷಗಳ ಆಡಳಿತ ಇತ್ಯಾದಿಯನ್ನೇ ಜಪಿಸುವುದು, ರಾಜಕೀಯೇತರ ಸಂಸ್ಥೆಯಾದ ಸೇನೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುವುದು; ಪ್ರಪಂಚದಲ್ಲೇ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವವರಿಗೆ ಶೋಭೆ ತರುವುದಿಲ್ಲ.

ಅಮಿತವಾದ ತಮ್ಮ ಹಣಬಲವನ್ನು ಉಪಯೋಗಿಸಿ ಜಾಹೀರಾತುಗಳು, ಮಾಧ್ಯಮಗಳು, ಬೃಹತ್ ಸಭೆಗಳು, ಇತ್ಯಾದಿಗಳ ಮೂಲಕ ಮತದಾರರ ಮನಸ್ಸಿನಲ್ಲಿ ಬೇರೆ ಅಲೋಚನೆಗಳೇ ಸುಳಿಯದಂತೆ ಒಂದು ಬಗೆಯ ಮುಗಿದ ನಿರ್ಧಾರದಂಥ ಭ್ರಮೆಯನ್ನು ಸೃಷ್ಟಿಸುವುದೂ ಬಿಜೆಪಿಯವರ ರಾಜಕೀಯ ತಂತ್ರವಾಗಿರಬಹುದು. ಆದರೆ ಜನರಲ್ಲಿ ಇರಬಹುದಾದ ಮುಚ್ಚಿಟ್ಟ ಅಸಮಾಧಾನ, ಸಂಕಟ, ಆಕ್ರೋಶಗಳು ಚುನಾವಣೆಯಲ್ಲಿ ಪ್ರಕಟವಾಗದೇ ಇರುವ ಗ್ಯಾರಂಟಿಯೇನೂ ಇಲ್ಲ.

ಇದೆಲ್ಲ ಏನೇ ಇರಲಿ, ಕಳೆದ ಐದು ವರ್ಷಗಳಲ್ಲಿ ಬಿಜೆಪಿಯವರು ಎಸಗಿದ ದೊಡ್ಡ ಅಪಚಾರ ಏನೆಂದರೆ ರಾಜಕೀಯ ಸಂವಾದವನ್ನು ಕೀಳು ಮಟ್ಟಕ್ಕಿಳಿಸಿದ್ದು. ಬಿಜೆಪಿಯ ಐಟಿ ಸೆಲ್ ನ ಪಾತ್ರ ಇದರಲ್ಲಿ ಹೆಚ್ಚಿನದ್ದು. ತರ್ಕ, ವಿವೇಚನೆ, ಪ್ರಶ್ನೆ ಯಾವುದಕ್ಕೂ ಅವಕಾಶವಿಲ್ಲದಂತೆ ಅಸಂಬದ್ಧ ಅವಹೇಳನ, ಬೆದರಿಕೆ ಇತ್ಯಾದಿಗಳು ಈ ಗುಂಪಿನ ಮಾಮೂಲಿ ಪ್ರತಿಕ್ರಿಯೆಯಾದದ್ದು ವಿಷಾದಕರ. ಇಂತಹ ಹಲವು ಅನಾಗರಿಕ ಟ್ವಿಟ್ಟಿಗರನ್ನು ಹಿಂಬಾಲಿಸುವ ಮೂಲಕ ದೇಶದ ಪ್ರಧಾನಿಯೇ ಇವರಿಗೆ ಅಧಿಕೃತತೆಯನ್ನು ಒದಗಿಸಿದ್ದು ವಿಪರ್ಯಾಸ ಮತ್ತು ದುರಂತ. ರಾಜಕೀಯ ಸಂವಾದದಲ್ಲಿ ಘನತೆಯ ಪ್ರಾಮುಖ್ಯತೆಯನ್ನು ಮತ್ತೆ ಲಂಕೇಶರ ಮಾತುಗಳಲ್ಲೇ ಹೇಳಬಹುದು. 1998ರಲ್ಲಿ ಪ್ರಕಟವಾಗಿದ್ದ 'ಜನರನ್ನು ಅಲ್ಪರಾಗಿಸುವ ದುಷ್ಟರು' ಎಂಬ ಲೇಖನದಲ್ಲಿ ಅವರು ಹೀಗೆ ಬರೆಯುತ್ತಾರೆ-

-------
"ರಾಜಕೀಯ ಬಹುಮುಖ್ಯವಾದದ್ದು; ಅದು ಒಂದು ಜನತೆಯ ಜೀವನಸೂತ್ರವನ್ನು ನಿಯಂತ್ರಿಸುವ ಕ್ರಿಯೆ; ಜನರನ್ನು ಉದಾರಿಗಳನ್ನಾಗಿಯೂ, ಸುಸಂಸ್ಕೃತರನ್ನಾಗಿಯೂ ಮಾಡುವ ಕೆಲಸ. ಇಷ್ಟು ಗೊತ್ತಿಲ್ಲದ ಅವಿವೇಕಿಗಳ ತಂಡ ಎಲ್ಲೆಲ್ಲೂ ತನ್ನ ಅವಾಂತರದಲ್ಲಿ ಮುಳುಗಿರುವುದನ್ನು ಇವತ್ತು ನೋಡುತ್ತಿದ್ದೇವೆ. ಸಾರ್ವಜನಿಕ ಬದುಕು ಗಾಂಧೀಜಿಯ ಘನತೆ, ಪ್ರೀತಿ, ಮೌಲ್ಯಪ್ರಜ್ಞೆಯಿಂದ ದೂರವಾಗುತ್ತಿರುವುದು ಎಲ್ಲರಲ್ಲಿ ದುಃಖ, ಸಿಟ್ಟು ಮೂಡಿಸಿದೆ."
--------
ಅವರ ಈ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತ. ಅಲ್ಲವೇ?

Saturday, August 25, 2018

ಮುಕ್ಕು ಚಿಕ್ಕಿಯ ಕಾಳು





ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು
ಮುತ್ತುರತುನವ ಬಿತ್ತಿ ಮಾಡದಿರು ಹೊಲ ಹಾಳು
ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ 
ದೇವನುಡಿ ನುಡಿವಂತೆ ಮಾಡು ಮೆಚ್ಚಿ 
- ದ ರಾ ಬೇಂದ್ರೆ 



ಬೇಂದ್ರೆಯವರ ಕವನದ ಸಾಲೊಂದರಿಂದ ಶೀರ್ಷಿಕೆಯನ್ನು ಪಡೆದಿರುವ ಜಯಲಕ್ಷ್ಮಿ ಪಾಟೀಲರ ಮೊದಲ ಕಾದಂಬರಿ ಆ ಕವನದ ಸಾಲು ಪ್ರತಿನಿಧಿಸುವ  ಅದೇ ಜೀವನ್ಮುಖತೆಯ  ಸಂದೇಶವನ್ನೇ ಪುಟಪುಟದಲ್ಲೂ  ಪ್ರತಿಬಿಂಬಿಸುತ್ತದೆ. ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ಕಾದಂಬರಿಯ ಬಹು ಮುಖ್ಯ ಆಕರ್ಷಣೆ.  ಇದನ್ನು ಓದುವಾಗ  'ಗಂಗವ್ವ ಗಂಗಾಮಾಯಿ' ಕಾದಂಬರಿ ನೆನಪಿಗೆ ಬಂತು. ಗಂಗವ್ವ -ಕಿಟ್ಟಪ್ಪರ ತಾಯಿ ಮಗನ ಸಂಬಂಧದ ಚಿತ್ರ ನೆನಪಿಗೆ ತರುವಂತೆ ಈ ಕೃತಿಯಲ್ಲೂ ತಾಯಿ-ಮಗನ ಭಾವನಾತ್ಮಕ ಸಂಬಂಧದ ಚಿತ್ರಣವಿದೆ. 
 .
'ಮುಕ್ಕು ಚಿಕ್ಕಿಯ ಕಾಳು' ಕಾದಂಬರಿಯ ಮುನ್ನುಡಿಯಲ್ಲಿ ಬರೆಯುತ್ತಾ ಹಿರಿಯ ವಿಮರ್ಶಕ ಸಿ ಎನ್ ರಾಮಚಂದ್ರನ್ ಅವರು ಕಲಾಮಾಧ್ಯಮವೊಂದು ಕಲಾವಿದನಿಗೆ ಆತ್ಮತೃಪ್ತಿಯನ್ನು ಕೊಡುವುದರೊಡನೆ ತನ್ನ ಮಿತಿಗಳನ್ನು ಮೀರುವ ಪರಿಹಾರ 'ಮಾರ್ಗ'ವೂ (compensatory means) ಆಗಬಹುದು ಎಂಬುದನ್ನು ಈ ಕಾದಂಬರಿಯ ನಾಯಕ ಮೌನೇಶ ಪತ್ತಾರನ ಪಾತ್ರದಲ್ಲಿ ಕಾಣಬಹುದು ಎಂದು ವಿವರಿಸುತ್ತಾರೆ.

ತನ್ನ ಸೀಳು ತುಟಿಯ ಕಾರಣದಿಂದ ಎಲ್ಲರಂತೆ ಮಾತನಾಡಲು ಸಾಧ್ಯವಾಗದೇ ಆ ಕಾರಣಕ್ಕಾಗೇ ಮೌನೇಶ ತನ್ನ ಸಹಪಾಠಿಗಳ ಅಪಹಾಸ್ಯಕ್ಕೆ ಗುರಿಯಾಗಿ ಕೀಳರಿಮೆ ಅನುಭವಿಸುವುದು. ಮತ್ತು ನಂತರದಲ್ಲಿ ತನ್ನಲ್ಲಿರುವ ಚಿತ್ರಕಲೆಯ ಪ್ರತಿಭೆಯಿಂದ ಆ ಕೀಳರಿಮೆಯನ್ನು ಮೀರಲು ಪ್ರಯತ್ನಿಸುವುದು ಈ ಕಥನದ ಒಂದು ಭಾಗವಾದರೆ ಅದಕ್ಕೆ ಪೂರಕವಾಗಿ ಗ್ರಾಮೀಣ ಬದುಕಿನ ಚಿತ್ರಣವೂ ಅವನ ತಂದೆ ಶಂಕರಪ್ಪ ಮತ್ತು ತಾಯಿ ಕಾಮಾಕ್ಷಿಯವರ ಪಾತ್ರಗಳ ಮೂಲಕ ಮೂಡಿಬರುತ್ತದೆ.

ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನನ್ನ ನೆಚ್ಚಿನ ಸಾಹಿತ್ಯ ಪ್ರಕಾರ ಕಾದಂಬರಿ. ನಮ್ಮ ಕನ್ನಡದಲ್ಲಿ  ಕಾದಂಬರಿಗೊಂದು ಶ್ರೇಷ್ಟ ಪರಂಪರೆಯೇ ಇದೆ. ಹಿರಿಯ ವಿಮರ್ಶಕ ಜಿ ಎಸ್ ಅಮೂರ ಅವರ "ಕನ್ನಡ ಕಥನ ಸಾಹಿತ್ಯ: ಕಾದಂಬರಿ" ಎಂಬ ಕೃತಿಯು ಈ ನಮ್ಮ ಕಾದಂಬರಿಯ ಪರಂಪರೆಯನ್ನು ಸುಂದರವಾಗಿ ಕಟ್ಟಿ ಕೊಡುತ್ತದೆ. ಹತ್ತೊಂಬತ್ತನೇ ಶತಮಾನದ ಆರಂಭಿಕ ಕಾದಂಬರಿಗಳಿಂದ  ಇಪ್ಪತ್ತನೇ ಶತಮಾನದ ಕಡೆಯ ಭಾಗದ ಕಾದಂಬರಿಗಳವರೆಗೆ ಸಮಗ್ರವಾದ  ವಿವರಗಳ ಉಲ್ಲೇಖವಿದೆ. ಅಮೂರರ ಪುಸ್ತಕದಲ್ಲಿ ಕನ್ನಡದ ಕಾದಂಬರಿಗಳ ವರ್ಗಿಕರಣ ಇದೆ. ವಾಸ್ತವ ಮಾರ್ಗ, ನವೋದಯ ಮತ್ತು ಪ್ರಗತಿಶೀಲ, ನವ್ಯ, ನವ್ಯೋತ್ತರ ಹೀಗೆ ವಿವಿಧ ಕಾಲಘಟ್ಟಗಳಲ್ಲಿ ರಚಿತವಾದ ಕಾದಂಬರಿಗಳನ್ನು ವಸ್ತು, ಶಿಲ್ಪ, ಪಾತ್ರ, ಶೈಲಿ ಎಂಬಿತ್ಯಾದಿ  ಸಾಹಿತ್ಯಕ ಮಾನದಂಡಗಳಷ್ಟೇ ಅಲ್ಲದೆ ಈ ವಿವಿಧ ವರ್ಗಗಳ ಕೃತಿಗಳ ತಾತ್ತ್ವಿಕ ಆಯಾಮಗಳನ್ನೂ ಶೋಧಿಸುತ್ತಾರೆ. 

ಯಾವ ವರ್ಗಕ್ಕೇ ಸೇರಿರಲಿ ಕಾದಂಬರಿ ಮುಖ್ಯವಾಗಿ ಒಂದು ಕತೆ ಹೇಳುವ ಸಾಧನ. ಮತ್ತು ಆ ಕತೆಯ ಮೂಲಕ ಜಗತ್ತನ್ನು ಅರಿಯುವ ಪ್ರಯತ್ನ. ಅಕಾಡೆಮಿಕ್ ದೃಷ್ಟಿಯಿಂದ ಕೃತಿಯ ಆಳಕ್ಕಿಳಿದು ನೋಡುವುದು ಒಂದು ಬಗೆಯಾದರೆ ಅದೆಲ್ಲದರ ಹಂಗೇ ಇಲ್ಲದೆ ಸಿಕ್ಕ ಪುಸ್ತಕವನ್ನು ಸುಮ್ಮನೇ ಓದುವುದು ಇನ್ನೊಂದು ಬಗೆ. ಅಲ್ಲಿಯೂ ಕತೆಯ ಕುತೂಹಲಕ್ಕಾಗಿ ಓದುವುದು, ಓದುತ್ತ ಕಥಾಹಂದರವನ್ನು ಸೂಕ್ಷ್ಮವಾಗಿ ಅವಲೋಕಿಸುವುದು,  ಅಥವಾ ಕುವೆಂಪು ಅವರು ತಮ್ಮ ಓದುಗರಲ್ಲಿ ವಿನಂತಿಸಿಕೊಂಡಂತೆ ಸಚಿತ್ರವಾಗಿ, ಕಲ್ಪನೆಯೊಂದಿಗೆ, ಓದುತ್ತಿರುವ ಪಠ್ಯದ ಆಧಾರದಲ್ಲಿ ಮನಸಲ್ಲೇ ಒಂದು ಕಾಲ್ಪನಿಕ ಲೋಕವನ್ನು ಕಾಣುತ್ತ ಓದುವುದು ಹೀಗೇ ಹಲವು ಬಗೆಯ ಓದು ಸಾಧ್ಯ.

ನನಗೆ ಒಂದು ಕಾದಂಬರಿಯಲ್ಲಿನ  ಕತೆಯ ಕುತೂಹಲ ಕೋಲಾಹಲಗಳಿಗಿಂತ  ಅದು ಕಟ್ಟಿ ಕೊಡುವ ಒಂದು ಪರಿಸರದ, ಜೀವನ ಶೈಲಿಯ  ಚಿತ್ರಣ  ಬಹಳ ಇಷ್ಟ. ಆ ದೃಷ್ಟಿಯಿಂದ "ಮುಕ್ಕು ಚಿಕ್ಕಿಯ ಕಾಳು" ಹಿಡಿಸಿತು. ಬಿಜಾಪುರದ ಗ್ರಾಮೀಣ ರೈತ ಕುಟುಂಬದ ಬದುಕು, ಬಡತನ, ಸಹಿಷ್ಣುತೆ, ಹೋರಾಟ, ಉತ್ಸಾಹ ಎಲ್ಲವೂ ಕಣ್ಣೆದುರಿಗೆ ಮೂಡಿದಂತಾಯಿತು. ಕಾದಂಬರಿಗಳು ಮುಖ್ಯವಾಗುವುದೇ ಇಲ್ಲಿ. ಯಾವುದೇ ಸೃಜನಶೀಲ ಕೃತಿ ಮುಖ್ಯವಾಗಿ ಶೋಧಿಸಹೊರಡುವುದು  ಜೀವನದ ವ್ಯಕ್ತಿಗತ ಮತ್ತು ಸಾಮಾಜಿಕ ಆಯಾಮಗಳ ತಾಕಲಾಟವನ್ನೇ. ವ್ಯಕ್ತಿಯ ವೈಯಕ್ತಿಕ ನಿರೀಕ್ಷೆಗಳು  ಮತ್ತು ಅವಕ್ಕೆ ಎದುರಾಗುವ ವಾಸ್ತವದ ಗೋಡೆಗಳು. ಪರಿಸ್ಥಿತಿಯ ವಿರುದ್ಧ ಹೋರಾಡುವ ಅಥವಾ ಬಂದದ್ದನ್ನು ಬಂದ  ಹಾಗೇ ಸ್ವೀಕರಿಸಬೇಕಾದ ಅನಿವಾರ್ಯತೆ.  ಬಹುಪಾಲು ಕೃತಿಗಳು ಬಿಂಬಿಸುವುದು ಇದನ್ನೇ. ಬದುಕಿನ ವಾಸ್ತವವೇ ಸಾಹಿತ್ಯದಲ್ಲೂ ಇದ್ದರೂ ಸಾಹಿತ್ಯದ ಅಗತ್ಯ ಇದೆ. ಅದರಲ್ಲೂ ಇಂದಿನ ತೀವ್ರ ಅಸಹನೆಯ ದಿನಗಳಲ್ಲಿ  ಖಂಡಿತವಾಗಿಯೂ ಇದೆ.  ಯಾಕೆಂದರೆ ಸಾಹಿತ್ಯ ಅದರಲ್ಲೂ ಉತ್ತಮವಾದ ಕಾದಂಬರಿಗಳು ನಮ್ಮದೇ ಜೀವನವನ್ನು, ನಮ್ಮ ನಂಬಿಕೆಗಳು ಮೌಲ್ಯಗಳನ್ನು ಪರಿಶೀಲನೆಗೆ ಹಚ್ಚುವಂತೆ ಮಾಡುತ್ತವೆ. ಒಟ್ಟಿನಲ್ಲಿ ನಮ್ಮ ಅರಿವು ಗ್ರಹಿಕೆಗಳನ್ನು ವಿಸ್ತರಿಸುತ್ತವೆ.   

ಸಂಭಾಷಣೆ ಈ ಕಾದಂಬರಿಗಾರ್ತಿಯ ಶಕ್ತಿ ಅನಿಸಿತು. ಅಧ್ಯಾಯ ನಾಲ್ಕರಲ್ಲಿ, ಸೀಳು ತುಟಿಯ ಮಗುವಿನ ಜನನವಾದ ಮನೆಯಲ್ಲಿನ ವಿದ್ಯಮಾನಗಳು,  ಹೆಂಗಳೆಯರ ಚಟುವಟಿಕೆ, ಲವಲವಿಕೆ, ಅನಿರೀಕ್ಷಿತದ ಆಘಾತದಲ್ಲೂ ಕಳೆದುಕೊಳ್ಳದ ಮನೋಬಲ, ಆಗಷ್ಟೇ ಕಣ್ಣು ಬಿಡುತ್ತಿರುವ ಕೂಸಿನ ಬಗೆಗಿನ ಅವರ ಅಚ್ಚರಿ, ವಾತ್ಸಲ್ಯ, ಹಳ್ಳಿ ನುಡಿಗಟ್ಟಿನ ಒರಟಾದ  ನೇರವಾದ  ಆದರೂ ಕಾಳಜಿ ತುಂಬಿದ  ಮಾತುಗಳು ತುಂಬ  ಸಹಜವಾಗಿದ್ದು  ಕೃತಿಯನ್ನು ಆಪ್ತವಾಗಿಸುತ್ತವೆ.

ನನಗೆ ಇಷ್ಟವಾದ ಇತರ  ಕೆಲವು ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ.