Monday, December 29, 2025

'ಅಮ್ಮ' ಎಂದರೆ...

ಇತ್ತೀಚೆಗೆ ಪ್ರಕಟವಾದ ಕನ್ನಡದ ಲೇಖಕಿ ಸಂಧ್ಯಾರಾಣಿಯವರ ಬಿಡಿಬರಹಗಳ ಸಂಗ್ರಹ "ಕದಡಿದ ಕೊಳವು ತಿಳಿಯಾಗಿರಲು..." ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಬರಹ "ಅಮ್ಮ ಕಲಿಸಿದ ಫೆಮಿನಿಸಮ್". ಅದರಲ್ಲಿ ಅವರು ಹೀಗೆ ಬರೆಯುತ್ತಾರೆ-  "ಹೆಣ್ಣು ಮಕ್ಕಳು ಮತ್ತು ಅಮ್ಮನ ನಡುವಿನ ಸಂಬಂಧ ವಿಶಿಷ್ಟವಾದದ್ದು. ಅಮ್ಮನ ಅಧಿಕಾರವನ್ನು ಒಮ್ಮೆ ಒಪ್ಪಿಕೊಳ್ಳುತ್ತಾ, ಒಮ್ಮೆ ಎದುರಿಸುತ್ತಾ, ಆಗಾಗ ಸಂಧಾನ ಮಾಡಿಕೊಳ್ಳುತ್ತಾ ಹೆಣ್ಣುಮಕ್ಕಳು ಬೆಳೆಯುತ್ತಾರೆ..." . ತನ್ನ ಸ್ವಂತತೆಯನ್ನು ಬಿಟ್ಟು ಕೊಡದೇ  ಬದುಕಿದ ತಮ್ಮ ಅಮ್ಮನ ಕುರಿತು ಬರಹದಲ್ಲಿ ಆರ್ದ್ರವಾಗಿ ಹಂಚಿಕೊಂಡಿರುವ ಲೇಖಕಿ ಕೃತಿಯನ್ನು ಸಹ  ಅವರಿಗೇ ಅರ್ಪಿಸಿದ್ದಾರೆ. 

ಹಲವಾರು ಕತೆ ಕಾದಂಬರಿಗಳಲ್ಲಿ ಅಮ್ಮ-ಮಗಳ ಸಂಬಂಧದ ಕುರಿತು ಅಭಿವ್ಯಕ್ತಿಯನ್ನು ನೋಡಿದ್ದೇನೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಬರವಣಿಗೆಯಲ್ಲಿ ಇದು ವ್ಯಕ್ತವಾಗಿರುವುದನ್ನು ಹೆಚ್ಚಾಗಿ ಕಂಡಿದ್ದೇನೆ. 

"ಅಮ್ಮ ಕಲಿಸಿದ ಫೆಮಿನಿಸಂ" ಬರಹ ಓದುವಾಗ ಈಚೆಗೆ ಓದಿದ  ಎರಡು ಕೃತಿಗಳಲ್ಲಿ  ತಾಯಿ- ಮಗಳ  ಸಂಬಂಧವು  ಇನ್ನೊಂದು ಬಗೆಯಲ್ಲಿ  ನಿರೂಪಿತವಾಗಿದ್ದುದು   ನೆನಪಾಯಿತು. ಅದರ ಬಗ್ಗೆ ಬರೆಯಬೇಕೆನಿಸಿತು. 

"ಮದರ್ ಮೇರಿ ಕಮ್ಸ್ ಟು ಮಿ"  ಎಂಬುದು ಅರುಂಧತಿ ರಾಯ್ ಅವರ ೨೦೨೫ ರ ಆತ್ಮಚರಿತ್ರೆಯಾಗಿದ್ದು, ಇದು 1997 ರ ಬುಕರ್ ಪ್ರಶಸ್ತಿ ಪಡೆದ ಈ ಲೇಖಕಿ  ಮತ್ತು ಅವರ ತಾಯಿ ಮೇರಿ ರಾಯ್ ಅವರಿಬ್ಬರ  ಪ್ರಕ್ಷುಬ್ಧ ಬಾಂಧವ್ಯವನ್ನು ವಿವರಿಸುತ್ತದೆ. 

"ಮೂನ್ ಟೈಗರ್" ಎಂಬ ಕಾದಂಬರಿಯು ಪೆನೆಲೋಪ್ ಲೈವ್ಲಿ ಅವರ  ೧೯೮೭ ರ ಬುಕರ್ ಪ್ರಶಸ್ತಿ ವಿಜೇತ ಕೃತಿ.  ಈ ಕಾದಂಬರಿಯಲ್ಲಿ ಇತಿಹಾಸಕಾರಳಾದ  ಕ್ಲಾಡಿಯಾ ಹ್ಯಾಂಪ್ಟನ್ ಮತ್ತು ಅವಳ  ಮಗಳು ಲಿಸಾ ಎಂಬ ಪಾತ್ರಗಳಿವೆ. 

ಎರಡೂ ಕೃತಿಗಳು ತಾಯಿ ಮತ್ತು ಮಗಳ ಸಂಬಂಧದ ಭಾವನಾತ್ಮಕ ತೀವ್ರತೆ, ಪರಸ್ಪರರ ಮುಖಾಮುಖಿಗಳು ಮತ್ತು ಸಂಧಾನಗಳು, ಕಡೆಯಲ್ಲಿನ ವಿಷಾದ ಇವನ್ನೆಲ್ಲ  ಮನಮುಟ್ಟುವಂತೆ ನಿರೂಪಿಸುತ್ತವೆ. 

ಅರುಂಧತಿ  ಅವರು ಮೇರಿಯವರೊಂದಿಗಿನ ತಮ್ಮ ಸಂಬಂಧವನ್ನು "ಎರಡು ಉಗ್ರ ಶಕ್ತಿಗಳ ಘರ್ಷಣೆ" ಯಂತೆ ಚಿತ್ರಿಸುತ್ತಾರೆ.  ಬಡತನ ಮತ್ತು ಕೌಟುಂಬಿಕ ಕಲಹಗಳ ಕಾರಣದಿಂದ ಮೇರಿಯವರು ಸ್ವತಃ ಅನುಭವಿಸುವ ಆಘಾತ ಮತ್ತು ಅದರಿಂದ ಅವರು ಮಗಳಾದ ತಮಗೆ ನೀಡುವ  ಹಿಂಸೆಯ ಬಗ್ಗೆ ಬರೆದಿದ್ದಾರೆ. ಹೀಗಿದ್ದರೂ ಸಹ "ನೀನು  ಏನನ್ನು  ಬೇಕಾದರೂ ಸಾಧಿಸಬಹುದು" ಎಂಬಂತಹ ಆತ್ಮವಿಶ್ವಾಸವನ್ನು ತಾಯಿ ತಮಗೆ ನೀಡಿದ್ದನ್ನು ಅರುಂಧತಿಯವರು ನೆನೆಯದೆ ಇರುವುದಿಲ್ಲ. 

ಮೂನ್  ಟೈಗರ್ ನಲ್ಲಿ, ಇತಿಹಾಸಕಾರ ವೃತ್ತಿಯ ಕ್ಲಾಡಿಯಾ ತನ್ನದೇ ಮಗಳು ಲೀಸಾಳನ್ನು ತನ್ನ ಬುದ್ಧಿಶಕ್ತಿಗೆ ಸಾಟಿಯೇ ಅಲ್ಲದ "ಮಂದ ಬುದ್ಧಿಯ  ಮಗು" ಎಂದು ಕಾಣುತ್ತಾಳೆ. ಮಗುವಿನ ಪಾಲನೆಯನ್ನು  ಮಗುವಿನ  ಅಜ್ಜಿಯರಿಗೆ ವಹಿಸುತ್ತಾಳೆ. ಆದರೂ  ಆ ಮಗಳು ಜಗವನ್ನು ನೋಡುವ ದೃಷ್ಟಿಕೋನ ಮಾತ್ರ ತನ್ನದೇ ಆಗಿರುವಂತೆ  ಮಾಡಲು ಮಧ್ಯಪ್ರವೇಶಿಸುತ್ತಾಳೆ. ಹೀಗೆ ಮಾಡುವುದರ ಮೂಲಕ ಲೀಸಾಳಲ್ಲಿ  ಆಜೀವ ಪರಕೀಯತೆಯನ್ನು ಬೆಳೆಸುತ್ತಾಳೆ. 

ಮೇರಿ ರಾಯ್ ಸಂಪೂರ್ಣ  ಸ್ವಾಯತ್ತವಾಗಿ ಬದುಕುವುದನ್ನು ಆಯ್ದುಕೊಳ್ಳುತ್ತಾರೆ. ವಿಚ್ಛೇದನದ ನಂತರ ಶಾಲೆಯನ್ನು ಸ್ಥಾಪಿಸುತ್ತಾರೆ.    ಮತ್ತು ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ  ಹಕ್ಕುಗಳನ್ನು ಪಡೆಯಲು ಸುಪ್ರೀಂ ಕೋರ್ಟ್ ವರೆಗೂ ಕೇಸು ನಡೆಸಿ ಯಶಸ್ವಿಯಾಗುತ್ತಾರೆ.  ಆದರೆ ತಾಯಿ ಮತ್ತು ಮಗಳು  ಏಳು ವರ್ಷಗಳ ಕಾಲ ದೂರವೇ  ಉಳಿಯುತ್ತಾರೆ. 

ಕ್ಲಾಡಿಯಾ ಯುದ್ಧ ವರದಿಗಾರ್ತಿಯಾಗಿ  ತಾಯ್ತನಕ್ಕಿಂತ ತನ್ನ ಸ್ವಂತದ  ವೃತ್ತಿಜೀವನಕ್ಕೆ  ಆದ್ಯತೆ ನೀಡುತ್ತಾಳೆ. ಅದು  ಲೀಸಾಳ ಚೈತನ್ಯವನ್ನೇ  ನಂದಿಸುತ್ತದೆ. 

ತಾಯಿಯಿಂದಾದ ಎಲ್ಲ ಗಾಯಗಳ ನೋವುಗಳ ಹೊರತಾಗಿಯೂ ಆರುಂಧತಿಯವರು ತಮ್ಮ ಊರಿಗೆ ಹಿಂದಿರುಗಿ ಮೇರಿಯವರ   ಚಿತಾಭಸ್ಮವನ್ನು ಗೌರವಿಸುವಲ್ಲಿ "ಮದರ್ ಮೇರಿ ಕಮ್ಸ್  ಟು ಮಿ " ಕೊನೆಗೊಳ್ಳುತ್ತದೆ. 

ಇನ್ನು " ಮೂನ್ ಟೈಗರ್'  ನಲ್ಲಿ ತಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಕ್ಲಾಡಿಯಾಳು ಲೀಸಾಳಲ್ಲಿ  ಕ್ಷಮೆಯಾಚಿಸುವುದರೊಂದಿಗೆ ತನ್ನ  ನಿರ್ಲಕ್ಷ್ಯದ ಬಗ್ಗೆ ವಿಷಾದವನ್ನು ವ್ಯಕ್ತ ಪಡಿಸಿದಂತಾಗುತ್ತದೆ.  ಎರಡೂ ನಿರೂಪಣೆಗಳು ವಿಷತ್ವದ ನಡುವೆ ಪ್ರೀತಿಯ ಸಹಿಷ್ಣುತೆಯನ್ನು ಬಹಿರಂಗಪಡಿಸುತ್ತವೆ.   ಮಗಳು ತನ್ನ ವ್ಯಕ್ತಿತ್ವದ ಗುರುತನ್ನು ರೂಪಿಸಿಕೊಳ್ಳುವ ವಿಷಯದಲ್ಲಿ  ಮತ್ತು ಭಾವನಾತ್ಮಕ  ಸಮತೋಲನವನ್ನು ಹೊಂದುವಲ್ಲಿ ತಾಯಿ ಎಷ್ಟು ಪ್ರಮುಖ ಪ್ರಭಾವ ಹೊಂದಿರುತ್ತಾಳೆ ಎಂಬುದನ್ನು ಇವೆರಡೂ ಕೃತಿಗಳಲ್ಲಿ ಕಾಣಬಹುದು. 

Monday, December 22, 2025

ಮೆಸ್ಸಿ ಮೇನಿಯಾ !

ಈಚೆಗೆ ಭಾರತದಲ್ಲಿ ಫುಟ್ ಬಾಲ್ ತಾರೆ ಲಯೊನೆಲ್ ಮೆಸ್ಸಿ  ಕೈಗೊಂಡ ಪ್ರವಾಸ  ನಮ್ಮ ದೇಶದಲ್ಲಿ ಕ್ರೀಡೆ ಇರುವ  ಸ್ಥಿತಿಯ ಮತ್ತು ಜನಮನದಲ್ಲಿ ಕ್ರೀಡೆಗಿರುವ ಸ್ಥಾನವನ್ನು ತೋರುವಂತಿತ್ತು. ಕ್ರೀಡೆ  ಉತ್ಸಾಹ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಯೊಂದು ದೇಶ ಹಾಗೂ ಸಮಾಜವು ಪ್ರೋತ್ಸಾಹಿಸಬೇಕಾದ ಚಟುವಟಿಕೆಯಾಗಿದೆ. ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡುವ ಕ್ರೀಡಾ ಪಟುಗಳ ಬಗೆಗೆ ಎಲ್ಲ ದೇಶಗಳಲ್ಲೂ ಅಭಿಮಾನಿಗಳು ಇರುವುದು ಸಹಜವೇ ಆದರೂ ಬರಿಯ ಅಭಿಮಾನ ಆರಾಧನೆಯಷ್ಟಕ್ಕೇ ಕ್ರೀಡೆ ಸೀಮಿತವಲ್ಲ. ಭಾರತದಲ್ಲಂತೂ ಕ್ರಿಕೆಟ್ ತಾರೆಯರ  ಆರಾಧನೆ ಒಂದು ಮಟ್ಟದ ವ್ಯಾಧಿಯ ಹಂತಕ್ಕೆ ಹೋಗುತ್ತಿದೆ. 

ವೈಯಕ್ತಿಕವಾಗಿ ಫುಟ್ ಬಾಲ್ ಅಭಿಮಾನಿಯಾಗಿದ್ದು,  ನನಗೆ ಮೆಸ್ಸಿಯ ಅದ್ಭುತ ಪ್ರತಿಭೆ ಮತ್ತು ಸಾಧನೆಗಳ ಅರಿವಿದೆ. ಎಂಬತ್ತರ ದಶಕದಿಂದಲೂ ಫುಟ್ ಬಾಲ್ ವರ್ಲ್ಡ್ ಕಪ್ ನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದಿದ್ದೇನೆ.  2018ರ ವರ್ಲ್ಡ್ ಕಪ್ ನಲ್ಲಿ ಮೆಸ್ಸಿಯ ಉತ್ತಮ ಪ್ರದರ್ಶನದ ನಂತರವೂ ಅರ್ಜೆಂಟಿನಾ  ಅಂತಿಮ ಹಂತದಲ್ಲಿ ಸೋತಿದ್ದು , ಮೆಸ್ಸಿ ಅತ್ತಿದ್ದು, ಮತ್ತೆ 2022ರಲ್ಲಿ ಅಮೋಘ ಪ್ರದರ್ಶನ ನೀಡಿ ಅರ್ಜೆಂಟಿನಾ ಕಪ್ ಗೆಲ್ಲುವಲ್ಲಿ ಪ್ರಮುಖ ರೂವಾರಿಯಾದದ್ದು ಇವೆಲ್ಲವೂ ನನಗೆ ಗೊತ್ತಿರುವ  ಸಂಗತಿಗಳೇ. ಆದರೂ . . . ಮೆಸ್ಸಿಯ ಭಾರತ ಪ್ರವಾಸ ಮತ್ತು ಆ ಸಂದರ್ಭದಲ್ಲಿ ಅವನ ಅಭಿಮಾನಿಗಳ ಉನ್ಮಾದ ಅತಿರೇಕಗಳು ಇಷ್ಟವಾಗಲಿಲ್ಲ. 

ಈ ಹಿನ್ನೆಲೆಯಲ್ಲಿ ಕ್ರೀಡಾ ಪತ್ರಕರ್ತರೊಬ್ಬರ ಲೇಖನ ಗಮನಿಸಬೇಕಾದದ್ದು. ESPN ನಲ್ಲಿ ಅನಿರುದ್ಧ್ ಮೆನನ್ ಲೇಖನ- 

Indian football's great irony: Millions for Messi, none for the beautiful game

ಫುಟ್ ಬಾಲ್ ಅಭಿಮಾನ ಮುಖ್ಯವಾಗಿ ಕೇರಳ ಮತ್ತು ಬಂಗಾಳಗಳಲ್ಲಿ ಅಧಿಕವಾಗಿರುವುದು ನಿಜವಾದರೂ ಈಚಿನ ವರ್ಷಗಳಲ್ಲಿ ಭಾರತದ ಇತರ ರಾಜ್ಯಗಳಲ್ಲೂ ಈ ಕ್ರೀಡೆ ಜನಪ್ರಿಯವಾಗುತ್ತಿದೆ. ಕ್ರೀಡೆ ಕೇವಲ ವೀಕ್ಷಣೆಗೆ ಅಥವಾ ಮನರಂಜನೆಗೆ ಸೀಮಿತವಾಗುವುದು ಸರಿಯಲ್ಲ. ಸರ್ಕಾರಗಳು ಮೂಲಸೌಕರ್ಯವನ್ನು ನಿರ್ಮಿಸುವುದರ ಮೂಲಕ ಹೆಚ್ಚು ಯುವಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ಸಾಧ್ಯವಾಗಿಸಿದರೆ ಹೊಸ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ.  ಒಂದೆಡೆ ತಳಮಟ್ಟದ ಸೌಲಭ್ಯಗಳೇ ಇಲ್ಲದೆ ಬಳಲುತ್ತಿರುವ ಕ್ರೀಡೆಗಳು, ಇನ್ನೊಂದೆಡೆ ಅಂತಾರಾಷ್ಟ್ರೀಯ ಕ್ರೀಡಾ ತಾರೆಯ ಸಂಕ್ಷಿಪ್ತ ಪ್ರದರ್ಶನಕ್ಕೆ 120-180 ಕೋಟಿ ರೂಪಾಯಿಗಳ ಪ್ರಾಯೋಜಕತ್ವ. ಇದು ನಿಜಕ್ಕೂ ವ್ಯಂಗ್ಯ. ಫುಟ್  ಬಾಲ್ ನ ISL  ಲೀಗ್ ( ವಿವಿಧ ಭಾರತೀಯ ಫುಟ್ ಬಾಲ್  ತಂಡಗಳು ಭಾಗವಹಿಸುವ ಲೀಗ್) ಪ್ರಾಯೋಜಕತ್ವವಿಲ್ಲದೆ ಆರಂಭದ ದಿನಾಂಕವೂ ಪೋಷಣೆಯಾಗದೆ  ಸೊರಗುತ್ತಿದ್ದರೆ ಇತ್ತ ಮೆಸ್ಸಿಯ 15 ನಿಮಿಷದ ದರ್ಶನಕ್ಕಾಗಿ ಮುಗಿಬೀಳುವ ಜನ ಮತ್ತು ಅದನ್ನು ಆಯೋಜಿಸಿ ಹಣ ಮಾಡುವ ಸಂಸ್ಥೆಗಳು. 

ಕ್ರೀಡಾ ತಾರೆಗಳಲ್ಲೂ ವಿವಿಧ ಮಾದರಿಗಳಿವೆ. ಎಪ್ಪತ್ತು ಎಂಬತ್ತರ ದಶಕಗಳ ಬ್ರೆಜಿಲ್ ನ ಫುಟ್‌ಬಾಲ್ ತಾರೆ ಸಾಕ್ರೆಟೀಸ್ ನಂತೆ ಸಾಮಾಜಿಕ ಕಾಳಜಿಯಿರುವ ಮತ್ತು ಜನಹಿತಕ್ಕಾಗಿ ತಮ್ಮ ಜನಪ್ರಿಯತೆಯನ್ನೂ ಒರೆಗಿಡುವ ಮಾದರಿ ಅವುಗಳಲ್ಲೊಂದು. ವೃತ್ತಿಯಲ್ಲಿ ವೈದ್ಯನಾಗಿದ್ದ ಸಾಕ್ರೆಟೀಸ್ ಸರ್ವಾಧಿಕಾರದ ವಿರುದ್ಧ ಮತ್ತು ಮುಕ್ತ ಚುನಾವಣೆಗಾಗಿ ರಾಜಕೀಯವಾಗಿ ಕೂಡ ತೊಡಗಿಕೊಳ್ಳಲು ಹಿಂಜರಿಯಲಿಲ್ಲ . ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಮುನ್ನಡೆಗಾಗಿ ಫುಟ್‌ಬಾಲ್ ನ ವೇದಿಕೆಯನ್ನು ಬಳಸಿಕೊಂಡ ನಿಜ ಜೀವನದ ಹೀರೋ ಈತ. ತಮ್ಮ ಜನಪ್ರಿಯತೆಯ ಮತ್ತು ಆರ್ಥಿಕ ಅನುಕೂಲತೆಯ ರಕ್ಷಣೆಗಾಗಿ ರಾಜಕೀಯವಾಗಿ ರಿಸ್ಕ್ ತೆಗೆದುಕೊಳ್ಳದೆ ತಟಸ್ಥವಾಗಿರುವ ಅಥವಾ ಜನತಂತ್ರ ವಿರೋಧಿ ಶಕ್ತಿಗಳೊಡನೆಯೂ ಶಾಮೀಲಾಗುವ ಕ್ರೀಡಾ ತಾರೆಯರಿಗೆ ಹೋಲಿಸಿದರೆ ಸಾಕ್ರೆಟೀಸ್ ಹಿರಿಮೆ ಅರ್ಥವಾಗುತ್ತದೆ. ಅಪ್ರತಿಮ ಆಟಗಾರನಾಗಿದ್ದ ಸಾಕ್ರೆಟೀಸ್ ಬ್ರೆಜಿಲ್ ಅನ್ನು ತೊರೆದು ಹೋಗುವ ಬೆದರಿಕೆ ಸಹ ಹಾಕಿದ್ದುಂಟು. 

ಸಮಾಜದ ಭಾಗವಾಗಿರುವ ಕ್ರೀಡಾ ಪಟುಗಳು  ಅದೇ ಸಮಾಜದ ಸ್ವಾಸ್ಥ್ಯ ಕೆಡುತ್ತಿದ್ದರೆ ಧ್ವನಿ ಎತ್ತಬೇಕು. ಅಂತಹ ಕ್ರೀಡಾ ತಾರೆಗಳು ನಮಗೆ ಬೇಕು. ಅಂತಹವರು ಮೆಸ್ಸಿಯಂತೆ ಹಣಕ್ಕಾಗಿ ಪ್ರದರ್ಶನದ ವಸ್ತುಗಳಾಗಲು ಒಪ್ಪುವುದು ಅನುಮಾನ. 

Monday, December 15, 2025

ಭಾರತದಲ್ಲಿ ತನಿಖಾ ಪತ್ರಿಕೋದ್ಯಮ

ಇವತ್ತು  ಭಾರತದಲ್ಲಿ  ಪತ್ರಿಕೋದ್ಯಮವು ರಾಜಕೀಯ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿ ಸಾರ್ವಜನಿಕ  ನಂಬಿಕೆಯನ್ನು  ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ  ವಿಚಾರ. ವರದಿಗಾರರ  ಮೇಲಿನ ದೈಹಿಕ ಹಿಂಸೆ, ಕಾನೂನು ಕಿರುಕುಳ, ಆರ್ಥಿಕ ಒತ್ತಡಗಳು ಇವೆಲ್ಲದರ ನಡುವೆ ಟೆಲಿವಿಷನ್ ಮತ್ತು ವೃತ್ತ ಪತ್ರಿಕೆಗಳಲ್ಲಿ ಪ್ರಾಮಾಣಿಕ ಕೆಲಸ ಅತ್ಯಂತ  ಸವಾಲಿನದಾಗಿ ಪರಿಣಮಿಸಿದೆ. ಕಳೆದ ಎರಡು ಮೂರು ದಶಕಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ NDTV ಯಂತಹ ಚಾನೆಲ್ ಸಹ  ಇವತ್ತು ಕಾರ್ಪೊರೇಟ್ ಕೈವಶವಾಗಿದ್ದನ್ನು ನಾವು ನೋಡಿದ್ದೇವೆ. ಬಹುತೇಕ ಎಲ್ಲ ಚಾನೆಲ್ ಗಳೂ ಸರ್ಕಾರಿ ಪ್ರಾಪಗಾಂಡದ ಸಾಧನಗಳಾಗಿದ್ದು ವಸ್ತುನಿಷ್ಟ ವರದಿ ಅಥವಾ ಚರ್ಚೆ ಸಾಧ್ಯವೇ ಇರದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕೇವಲ ಡಿಜಿಟಲ್ ವೇದಿಕೆಗಳು ಮತ್ತು ಅವುಗಳ ಪರಸ್ಪರ ಸಹಯೋಗಗಳ ಮೂಲಕ ಸ್ವತಂತ್ರ ಪತ್ರಿಕೋದ್ಯಮದ  ಪ್ರಯತ್ನಗಳು ಮುಂದುವರಿಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. The Wire, News Laundry, The News Minute ಇಂತಹ ಪ್ರಯತ್ನದ ಮಾದರಿಗಳು. ಯಾವುದೇ ಕಾರ್ಪೊರೇಟ್ ಅಧೀನಕ್ಕೆ ಅಥವಾ ಜಾಹಿರಾತುಗಳನ್ನು ಆಧರಿಸದೆ ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಪ್ರಯತ್ನಗಳಿಗೆ ಪ್ರೋತ್ಸಾಹ ಅತ್ಯಗತ್ಯ. 

The News Minute ವೇದಿಕೆಯಿಂದ ಪ್ರತಿ  ಶುಕ್ರವಾರ ಪ್ರಸಾರವಾಗುವ ' ಸೌತ್ ಸೆಂಟ್ರಲ್' ಪಾಡ್ ಕಾಸ್ಟ್ ನ ಡಿಸೆಂಬರ್ 12ರ ಸಂಚಿಕೆಯಲ್ಲಿ 2025 ರ 'ಭಾರತದಲ್ಲಿ ತನಿಖಾ ಪತ್ರಿಕೋದ್ಯಮದ ಸ್ಥಿತಿ' ಎಂಬ ವಿಷಯದ ಕುರಿತು ಚರ್ಚಿಸಿದರು. ತನಿಖಾ ವರದಿಗಾರಿಕೆ ಇಂದು ಒಂದು ನಶಿಸಿಹೋಗುತ್ತಿರುವ ವೃತ್ತಿಯಾಗಿದೆಯೆ ಅಥವಾ ಅಂತಹ ಆತಂಕ ಅನಗತ್ಯವೇ ಎಂಬ ಬಗ್ಗೆ ಪಾಡ್ ಕಾಸ್ಟ್ ಸ ಹೋಸ್ಟ್ ಗಳಾದ ಧನ್ಯಾ  ರಾಜೇಂದ್ರನ್ ಹಾಗೂ ಪೂಜಾ ಪ್ರಸನ್ನ ಚರ್ಚಿಸಿದರು. ಇವರೊಂದಿಗೆ ಭಾರತದ ಶ್ರೇಷ್ಟ ತನಿಖಾ ಪತ್ರಕರ್ತರಲ್ಲೊಬ್ಬರಾದ  ಜೋಸಿ ಜೋಸೆಫ್,  ಟೈಮ್ಸ್ ಆಫ್  ಇಂಡಿಯಾ ದ ರೆಮಾ ನಾಗರಾಜನ್, ಹಾಗೂ ಸ್ವತಂತ್ರ ಪತ್ರಕರ್ತೆಯಾದ  ನಿಕಿತಾ ಸಕ್ಸೇನಾ ಸಹ ಭಾಗವಹಿಸಿದ್ದರು. ಇದೊಂದು ಆಸಕ್ತಿದಾಯಕವಾದ ಸಂವಾದವಾಗಿತ್ತು.

ಪ್ರಸ್ತಾಪವಾದ ಕೆಲ ವಿಚಾರಗಳು- 

ಮಾಧ್ಯಮ ಮಾಲೀಕತ್ವದ ಕೇಂದ್ರೀಕರಣವು ಸಂಪಾದಕೀಯ ಪಕ್ಷಪಾತಕ್ಕೆ ಕಾರಣವಾಗುತ್ತದೆ. ಅಲ್ಲಿ ಮಾಧ್ಯಮಗಳು ಜಾಹೀರಾತುದಾರರು ಅಥವಾ ರಾಜಕೀಯ ಮಿತ್ರರ ಕಥೆಗಳನ್ನು ತಪ್ಪಿಸುತ್ತವೆ, ಆದಾಯ ತೆರಿಗೆ ಮಸೂದೆ 2025 ನಂತಹ ಹೊಸ ಕಾನೂನುಗಳು ಪತ್ರಕರ್ತರ ಮೂಲಗಳು ಮತ್ತು ಸಾಧನಗಳ ಕಣ್ಗಾವಲನ್ನು ಸಕ್ರಿಯಗೊಳಿಸುತ್ತವೆ. ಪತ್ರಕರ್ತರು ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆ: ಕನಿಷ್ಠ ಇಬ್ಬರು ಕೊಲ್ಲಲ್ಪಟ್ಟರು (ಮುಖೇಶ್ ಚಂದ್ರಕರ್ ಮತ್ತು ರಾಘವೇಂದ್ರ ಬಾಜ್‌ಪೈ), ನಾಲ್ವರು ದಾಳಿಗೊಳಗಾದರು ಮತ್ತು 2025 ರ ಆರಂಭದಲ್ಲಿ ಆರು ಜನರನ್ನು ಬಂಧಿಸಲಾಯಿತು, ಇದೆಲ್ಲವೂ ಆದದ್ದು  ಆಗಾಗ್ಗೆ ಭೂ ಹಗರಣಗಳು ಅಥವಾ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ. ಆರ್ಥಿಕ ಬದಲಾವಣೆಗಳಿಂದಾಗಿ ಹೆಚ್ಚು ಸಂಪನ್ಮೂಲ ಬೇಕಾಗುವ ತನಿಖೆಗಳಿಗಿಂತ ಬೇಗನೆ ನೆಟ್ಟಿಗರ ಆಸಕ್ತಿ ಸೆಳೆಯುವ ಕ್ಲಿಕ್‌ಬೈಟ್‌ಗೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ. ಇನ್ನು ಸ್ವತಂತ್ರ ಮಾಧ್ಯಮವು ಕುಗ್ಗುತ್ತಿರುವ ಸುದ್ದಿ ಕೊಠಡಿ ಬಜೆಟ್‌ಗಳ ನಡುವೆ ಕ್ರೌಡ್‌ಫಂಡಿಂಗ್ ಅನ್ನು ಅವಲಂಬಿಸಬೇಕಾಗಿದೆ. 

​ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕವು ( 151/180 ) ಆಗಿದೆ. ಭಯೋತ್ಪಾದನಾ ವಿರೋಧಿ ಕಾನೂನುಗಳು, ಮಾನನಷ್ಟ ಮೊಕದ್ದಮೆಗಳು ಮತ್ತು ಮಹಾರಾಷ್ಟ್ರದ ಸಾರ್ವಜನಿಕ ಭದ್ರತಾ ಮಸೂದೆಯಂತಹ ಮಸೂದೆಗಳು ವರದಿ ಮಾಡುವಿಕೆಯನ್ನು ಅಪರಾಧೀಕರಿಸಬಹುದು. ಡಿಜಿಟಲ್ ಪರಿಕರಗಳು ಅವಕಾಶಗಳನ್ನು ನೀಡುತ್ತವೆಯಾದರೂ ತಪ್ಪು ಉದ್ದೇಶಗಳಿಗೆ ಬಳಕೆಯಾಗಿರುವುದನ್ನು ಸಹ  ನಾವು ನೋಡಿದ್ದೇವೆ.  ಅಲ್ಗಾರಿದಮಿಕ್ ಪಕ್ಷಪಾತ ಮತ್ತು ನಿರ್ದಿಷ್ಟ ಸಂಸ್ಥೆಗಳಿಗಷ್ಟೆ ಸೀಮಿತವಾದ ಮಾಹಿತಿ ಲಭ್ಯತೆ ಇವೆಲ್ಲದರಿಂದ ಸಾರ್ವಜನಿಕ  ನಂಬಿಕೆ ಕುಸಿಯುತ್ತದೆ. 

ಯೂಟ್ಯೂಬ್‌ನಂತಹ ಸ್ವತಂತ್ರ ವೇದಿಕೆಗಳು ಮತ್ತು ಕನ್ಫ್ಲುಯೆನ್ಸ್ ಮೀಡಿಯಾದಂತಹ ಔಟ್‌ಲೆಟ್‌ಗಳು  ಭ್ರಷ್ಟಾಚಾರ ಮತ್ತು ಸಾಮಾಜಿಕ ಸಮಸ್ಯೆಗಳ ತನಿಖೆಗಳನ್ನು ಬೆಂಬಲಿಸುತ್ತವೆ. ಕಾನೂನು ರಕ್ಷಣೆಗಳು, ಹಣಕಾಸು ಮಾದರಿಗಳು ಮತ್ತು ಮಾಧ್ಯಮ ಸಾಕ್ಷರತೆಯನ್ನು ಬಲಪಡಿಸಲು ಕರೆಗಳು ಕೇಳಿ ಬರುತ್ತಿವೆ. 

ತನಿಖಾ ಪತ್ರಿಕೋದ್ಯಮದ ಮಹತ್ವದ ಬಗ್ಗೆ ಯೋಚಿಸಿದರೆ ಎರಡು ಹಾಲಿವುಡ್ ಚಿತ್ರಗಳು ನೆನಪಿಗೆ ಬರುತ್ತವೆ. ಅವುಗಳೆಂದರೆ - 'ದಿ ಪೋಸ್ಟ್' ಮತ್ತು 'ಆಲ್ ದಿ ಪ್ರೆಸಿಡೆಂಟ್ಸ್ ಮೆನ್'. 

ಇವೆರಡು  ಚಿತ್ರಗಳಲ್ಲಿ ತನಿಖಾ ಪತ್ರಿಕೋದ್ಯಮವು ಸರ್ಕಾರದ ತಪ್ಪುಗಳನ್ನು ಬಹಿರಂಗಪಡಿಸಲು ಮತ್ತು ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳನ್ನು ರಕ್ಷಿಸಲು ಅತ್ಯಗತ್ಯ ಎಂದು ತೋರಿಸಲಾಗಿದೆ. ಈ ಚಲನಚಿತ್ರಗಳು ಸ್ವತಂತ್ರ ಸುದ್ದಿ ಕೊಠಡಿಗಳ ಬೆಂಬಲದೊಂದಿಗೆ ದೃಢನಿಶ್ಚಯದ ವರದಿಗಾರರು ಹೇಗೆ ಸತ್ಯಗಳನ್ನು ಬಹಿರಂಗಪಡಿಸುವುದರ ಮೂಲಕ  ನಾಯಕರನ್ನು ಅವರ ಕ್ರಿಯೆಗಳಿಗೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿದೆ ಎಂಬುದನ್ನು ಎತ್ತಿ ತೋರಿಸುತ್ತವೆ. 

' ದಿ ಪೋಸ್ಟ್' ಚಿತ್ರದಲ್ಲಿ ಪೆಂಟಗನ್ ಪೇಪರ್ಸ್ ಅನ್ನು ಪ್ರಕಟಿಸುವ ನಿರ್ಧಾರದ ಹಿನ್ನೆಲೆಯಲ್ಲಿ ನಡೆದ ವಿದ್ಯಮಾನಗಳನ್ನು ತೋರಿಸುತ್ತದೆ, ವಿಯೆಟ್ನಾಂ ಯುದ್ಧದ ಬಗ್ಗೆ ಸರ್ಕಾರದ ವರ್ಷಗಳ ವಂಚನೆಯನ್ನು ಬಹಿರಂಗಪಡಿಸುತ್ತದೆ,  ಮತ್ತು ಮುಕ್ತ ಪತ್ರಿಕಾ ರಂಗವು  ರಾಜ್ಯದ ಗೌಪ್ಯತೆಯನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ದೃಢಪಡಿಸುತ್ತದೆ

ಒಂದು "ಸರಳ" ಕಳ್ಳತನದ ವರದಿಗಾರಿಕೆಯು ' ವಾಟರ್‌ಗೇಟ್'  ತನಿಖೆಯಾಗಿ ಹೇಗೆ ಬೆಳೆಯುತ್ತದೆ ಎಂಬುದನ್ನು ' ಆಲ್ ದಿ ಪ್ರೆಸಿಡೆಂಟ್ಸ್ ಮೆನ್' ತೋರಿಸುತ್ತದೆ.  ಅಂತಿಮವಾಗಿ ಭ್ರಷ್ಟ ಅಧ್ಯಕ್ಷ ಸ್ಥಾನವನ್ನು ಉರುಳಿಸಲು ಸಹಾಯ ಮಾಡುತ್ತದೆ ಮತ್ತು ಪತ್ರಿಕೋದ್ಯಮಕ್ಕೆ ಇರುವ ಪ್ರಜಾಪ್ರಭುತ್ವದ  ಕಾವಲುಗಾರನ  ಪಾತ್ರವನ್ನು ಒತ್ತಿಹೇಳುತ್ತದೆ.

ಎರಡೂ ಚಲನಚಿತ್ರಗಳು ತನಿಖಾ ವರದಿಗಾರಿಕೆಯಲ್ಲಿ  ಇರುವ  ಶ್ರಮದಾಯಕ ಕೆಲಸವನ್ನು ಒತ್ತಿಹೇಳುತ್ತವೆ: ಮೂಲಗಳನ್ನು ಪರಿಶೀಲಿಸುವುದು, ಸುಳಿವುಗಳನ್ನು ಅನುಸರಿಸುವುದು ಮತ್ತು ಪ್ರಬಲ ಹಿತಾಸಕ್ತಿಗಳಿಂದ ಬರುವ ಒತ್ತಡವನ್ನು ವಿರೋಧಿಸುವುದು. ವಿಶ್ವಾಸಾರ್ಹ ತನಿಖಾ ವರದಿಯು ತಾಳ್ಮೆ, ನಿಖರತೆ ಮತ್ತು ಧೈರ್ಯವನ್ನು ಅವಲಂಬಿಸಿರುವುದನ್ನು ಎರಡೂ ಚಿತ್ರಗಳು  ಸ್ಪಷ್ಟಪಡಿಸುತ್ತವೆ. ​

ಹಾಗೆಯೇ, ಸಾರ್ವಜನಿಕರು ಸತ್ಯವನ್ನು ತಿಳಿದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳ ಅಪಾಯವನ್ನು ತಡೆದುಕೊಳ್ಳಲು ಸಿದ್ಧರಿರುವ ಸಂಪಾದಕರು ಮತ್ತು ಪ್ರಕಾಶಕರ ಪ್ರಾಮುಖ್ಯತೆಯನ್ನು ಈ ಚಲನಚಿತ್ರಗಳು ತಿಳಿಸುತ್ತವೆ. ತನಿಖಾ ಪತ್ರಕರ್ತರು ನಿಜವಾಗಿ ಏನು ಮಾಡುತ್ತಾರೆ ಎಂಬುದನ್ನು ಪ್ರೇಕ್ಷಕರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ನೈಜ ಐತಿಹಾಸಿಕ ಪ್ರಕರಣಗಳನ್ನು ನಾಟಕೀಯಗೊಳಿಸುವುದರ ಮೂಲಕ  ಸ್ವತಂತ್ರ ಪತ್ರಿಕೋದ್ಯಮವು ಆರೋಗ್ಯಕರ  ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂಬ ಕಲ್ಪನೆಯನ್ನು  ಬಲಪಡಿಸುತ್ತವೆ. 

ತನಿಖಾ ಪತ್ರಿಕೋದ್ಯಮದ ಪರಿಣಾಮ ಮತ್ತು ಪ್ರಭಾವ ವನ್ನು ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿ 'ಲಂಕೇಶ್ ಪತ್ರಿಕೆ' ಯಲ್ಲಿ ನಾವು ಕಂಡಿದ್ದೇವೆ. ಸರ್ಕಾರವನ್ನೇ ಬೀಳಿಸುವ ಹಾಗೂ ಸ್ಥಾಪಿಸುವಷ್ಟು ಪ್ರಭಾವವನ್ನು ಒಂದು ಪತ್ರಿಕೆ ಹೊಂದಿತ್ತೆಂಬುದನ್ನು ಇಂದಿನ ಸಂದರ್ಭದಲ್ಲಿ ನಂಬುವುದೇ ಕಷ್ಟವಾಗಿದೆ.  


Wednesday, December 10, 2025

'ದಿ ಗರ್ಲ್‌ಫ್ರೆಂಡ್' - ಪ್ರೀತಿ ಮತ್ತು ಸ್ವಾಮ್ಯ

ಮೊನ್ನೆ ನೆಟ್ ಫ್ಲಿಕ್ಸ್ ನಲ್ಲಿ ' ದಿ ಗರ್ಲ್ ಫ್ರೆಂಡ್' ' ತೆಲುಗು ಸಿನಿಮಾ ನೋಡುವಾಗ ವರ್ಷಗಳ ಹಿಂದೆ ಓದಿದ್ದ ರೇಮಂಡ್ ಕಾರ್ವರ್ ಕತೆ   “ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ಲವ್” ನೆನಪಾಯಿತು. ಈ ಚಿತ್ರ ಮತ್ತು ಆ ಕತೆ ಇವೆರಡು ಬಳಸುವ ನಿರೂಪಣಾ ತಂತ್ರ ವಿಭಿನ್ನವಾದರೂ ಎರಡರಲ್ಲೂ ಇರುವ ಒಂದು ಸಮಾನ ಸೆಲೆ ಏನೆಂದರೆ ರೊಮ್ಯಾಂಟಿಕ್ ಲವ್ ಅನ್ನು  ಒಂದು ವಾಸ್ತವಿಕ ನೆಲೆಯಿಂದ ಶೋಧಿಸುವುದು. 

ರಾಹುಲ್ ರವೀಂದ್ರನ್ ನಿರ್ದೇಶನದ ' ದಿ ಗರ್ಲ್‌ಫ್ರೆಂಡ್'  ಮತ್ತು ರೇಮಂಡ್ ಕಾರ್ವರ್ ಅವರ “ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ಲವ್” ಎರಡೂ ಒಂದೇ ಪ್ರಶ್ನೆಯನ್ನು ಸುತ್ತುವರೆದಿವೆ: “ಪ್ರೀತಿ” ಸಹ ಹೇಗೆ ಇನ್ನೊಬ್ಬರ ಸ್ವಂತತೆಯನ್ನು ಇಲ್ಲವಾಗಿಸುವ, ಭಾವನಾತ್ಮಕವಾಗಿ ನಿರ್ಬಂಧಿಸುವ , ಉಸಿರುಗಟ್ಟಿಸುವ ಸಂಬಂಧವಾಗಿ ಪರಿಣಮಿಸಬಹುದು ಅನ್ನುವುದನ್ನು ಈ ಎರಡೂ ಕೃತಿಗಳು ಶೋಧಿಸುತ್ತವೆ. 

ದಿ ಗರ್ಲ್‌ಫ್ರೆಂಡ್  ಮುಖ್ಯವಾಗಿ ಭೂಮಾ ಎಂಬ ಸಾಹಿತ್ಯ ವಿದ್ಯಾರ್ಥಿನಿಯ, ಮತ್ತು  ಆಕೆಯ ಜೀವನದಲ್ಲಿ ಪ್ರವೇಶಿಸಿ  ಕ್ರಮೇಣವಾಗಿ ಸಂಪೂರ್ಣ ಆವರಿಸಿಕೊಳ್ಳುವ  ಇಂಜಿನಿಯರಿಂಗ್ ವಿದ್ಯಾರ್ಥಿ ವಿಕ್ರಮ್ ಇವರ ಕತೆಯಾಗಿದೆ.  ಅವನು ಆಕೆಯ ಸರಳ ಸೌಮ್ಯ ಸ್ವಭಾವದಿಂದ ಆಕರ್ಷಿತನಾಗುತ್ತಾನೆ.  ಅವಳು  ಭವಿಷ್ಯದಲ್ಲಿ ತನ್ನ  ಹೆಂಡತಿಯಾಗಬೇಕೆಂಬ ಹಂಬಲದಿಂದಾಗಿ ಅವಳನ್ನು ಪ್ರೀತಿಸುತ್ತಾನೆ. ಸಂಬಂಧ ಮುಂದುವರೆದಂತೆ, ಅವಳ ಮೇಲಿನ ಅವನ  ಭಾವನಾತ್ಮಕ ಮತ್ತು ದೈನಂದಿನ  ಅವಲಂಬನೆ ಹೆಚ್ಚುತ್ತಾ ಹೋಗುತ್ತದೆ.  ತನ್ನ ಅಗತ್ಯಗಳ ಪೂರೈಕೆಯ ಸಾಧನವಾಗಿ ರೂಪುಗೊಳ್ಳುತ್ತಾಳೆ, ಕೋಣೆಯನ್ನು ಸ್ವಚ್ಛಗೊಳಿಸುವುದು, ಅವನ ಊಟ ತಿಂಡಿಯ ಕಾಳಜಿ ಹೀಗೆ ತನ್ನ ತಾಯಿಯಂತೆ ‘ಚೆನ್ನಾಗಿ ನೋಡಿಕೊಳ್ಳುವುದನ್ನು’ಅವನು ನಿರೀಕ್ಷಿಸುತ್ತಾನೆ. ಇದು ಭೂಮಾಳಿಗೆ ಒಂದು ರೀತಿಯ ಉಸಿರುಗಟ್ಟಿಸುವ ಅನುಭವವಾಗಿ ಬದಲಾಗುತ್ತ ಹೋಗುತ್ತದೆ. ಅಸೂಯೆ, ನಿಯಂತ್ರಣ ಮತ್ತು ಕಾಳಜಿ ಇವುಗಳನ್ನು ‘ಪ್ರೀತಿ’ ಯ ಸಂಕೇತಗಳಾಗಿ ಭಾವಿಸುವ ಪುರುಷಸ್ವಾಮ್ಯ ದ ಮಾದರಿ ವಿಕ್ರಮ್ ನ ಪ್ರೀತಿಯಲ್ಲಿ ಕಾಣಬಹುದು. ಇದು ಅವನು ತನ್ನದೇ ಕುಟುಂಬದಲ್ಲಿ ಕಂಡ ಮಾದರಿಯ ಪ್ರೀತಿಯಾಗಿರುತ್ತದೆ. ಭೂಮಾಳಿಗೆ ಸಹ ಚಿಕ್ಕ ವಯಸ್ಸಿನಲ್ಲೇ ತಾಯಿ ತೀರಿಕೊಂಡಿದ್ದರಿಂದ ತನ್ನ ತಂದೆಯನ್ನಷ್ಟೇ ಕುಟುಂಬವಾಗಿ ಹೊಂದಿರುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಅವಳು ತೆಗೆದುಕೊಳ್ಳುವ ನಿರ್ಧಾರ, ಎದುರಿಸುವ ಮಾನಸಿಕ ಒತ್ತಡ ಚಿತ್ರದ ನಿರ್ಣಾಯಕ ಸನ್ನಿವೇಶ.

ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಇಬ್ಬರೂ ಭೂಮಾ ಮತ್ತು ವಿಕ್ರಮ್ ರ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಹಾಗೆಯೇ, ಸಾಹಿತ್ಯದ ಅಧ್ಯಾಪಕನ ಪಾತ್ರದಲ್ಲಿ ರಾಹುಲ್ ರವೀಂದ್ರನ್ ಪಾತ್ರ ಸಹ ಗಮನ ಸೆಳೆಯುತ್ತದೆ. ಇಂದಿನ ದಿನದಲ್ಲಿ ಸಾಹಿತ್ಯದ ಪ್ರಸ್ತುತತೆಯ ಬಗ್ಗೆ ಅವರು ವಿದ್ಯಾಥಿಗಳೊಂದಿಗೆ ಚರ್ಚಿಸುತ್ತಾರೆ.

ಅವರ ಆರಂಭಿಕ ಸಾಹಿತ್ಯ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ನೀವು ಇಂಗ್ಲಿಷ್ ಏಕೆ ಅಧ್ಯಯನ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಕಥೆಗಳ ಮೂಲಕ ಸ್ವಂತದ ಧ್ವನಿಯನ್ನು ಅರಿಯುವ ಬಗ್ಗೆ ಮಾತನಾಡುತ್ತಾರೆ. ನಂತರದ ಇನ್ನೊಂದು ತರಗತಿಯಲ್ಲಿ ಸಂಬಂಧಗಳಲ್ಲಿ ಗೌರವ ಮತ್ತು ಒಪ್ಪಿಗೆಯ ಅಗತ್ಯವನ್ನು ಚರ್ಚಿಸುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ಭೂಮಾ ಳ ಚಿಂತನೆಯನ್ನು ಪ್ರಭಾವಿಸುವಂತೆ ಅನಿಸುತ್ತದೆ.

ಇನ್ನು ಕಾರ್ವರ್‌ನ ಕಥೆಯು ಪ್ರೀತಿಯ ಅನ್ವೇಷಣೆಯನ್ನು ಒಂದೇ ಮಧ್ಯಾಹ್ನಕ್ಕೆ ಸಂಕುಚಿತಗೊಳಿಸುತ್ತದೆ, ಎರಡು ಜೋಡಿಗಳು ಒಂದು ಮೇಜಿನ ಸುತ್ತಲೂ ಕುಳಿತು ಮದ್ಯಪಾನ ಮಾಡುತ್ತಾ  ಪ್ರೀತಿಯ ವ್ಯಾಖ್ಯಾನ ಕ್ಕೆ ಪ್ರಯತ್ನಿಸುತ್ತಾರೆ. ಪಾತ್ರಗಳು ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸುವುದು ನಿರಂತರವಾಗಿ ವಿಫಲಗೊಳ್ಳುತ್ತದೆ. ರೇಮಂಡ್ ಕಾರ್ವರ್ ಕತೆಗಳ ಮುಖ್ಯಗುಣ ಸಾಮಾನ್ಯ ಜನರ ದಿನನಿತ್ಯದ ಜೀವನದ ಘಟನೆಗಳನ್ನು ತುಂಬ ವಾಸ್ತವಿಕವಾದ ದೃಷ್ಟಿಯಿಂದ ಅವಲೋಕಿಸಿ, ಅತ್ಯಂತ ಸರಳ ನೇರ ಶೈಲಿಯಲ್ಲಿ ಆದರೂ ಸೂಕ್ಷ್ಮವಾಗಿ ಹಿಡಿದಿಡುವುದು. ಜೀವನವನ್ನು ಇದು ಹೀಗೆ ಎಂದು ನಿಖರವಾಗಿ ಹೇಳುವುದರ ಕಷ್ಟ ಕಾರ್ವರ್ ಕತೆಗಳನ್ನು ಓದುವಾಗ ಅರಿವಿಗೆ ಬರುವ ಸಂಗತಿ.  

ಈ ಕತೆಯಲ್ಲೂ ಹಾಗೆಯೇ. ತನ್ನ ಮಾಜಿ ಪ್ರೇಮಿ  ಎಡ್ ತನ್ನನ್ನು ಹೊಡೆದು ಜೀವ ಬೆದರಿಕೆ ಹಾಕಿದರೂ ಸಹ, ತನ್ನನ್ನು ಪ್ರೀತಿಸುತ್ತಿದ್ದ ಎಂದು ಟೆರ್ರಿ ಹೇಳುತ್ತಾಳೆ.  ಆದರೆ ಅವಳ ಪ್ರಸ್ತುತ ಸಂಗಾತಿ ಮೆಲ್, ಇದು ಪ್ರೀತಿಯಲ್ಲ ಎಂದು ಒತ್ತಿ ಹೇಳುತ್ತಾನೆ. ವೃತ್ತಿಯಲ್ಲಿ ಕಾರ್ಡಿಯಾಲಜಿಸ್ಟ್ ಆಗಿರುವ ಮೆಲ್ ತನ್ನ ವೃತ್ತಿ ಅನುಭವದ ಅನುಭವಗಳನ್ನೂ ಆಧರಿಸಿ ಪ್ರೀತಿಯ ವ್ಯಾಖ್ಯಾನಕ್ಕೆ ಪ್ರಯತ್ನಿಸುತ್ತಾನೆ. 

ಕಾರ್ವರ್ ಯಾವುದೇ ಸುಲಭವಾದ ವ್ಯಾಖ್ಯಾನವನ್ನು ಮುಂದಿಡುವುದಿಲ್ಲ. ಪ್ರೀತಿಯು  ಮೃದುತ್ವ ಮತ್ತು ಹಾನಿ ಎರಡನ್ನೂ ಒಳಗೊಂಡಿರುವುದರ ಬಗ್ಗೆ  ಮತ್ತು ಯಾವುದೇ ಒಂದು  ನಿಖರವಾದ  ಪರಿಭಾಷೆಗೆ ಅದು ಸಿಗದಿರುವ ಬಗ್ಗೆ ಈ ಕತೆಯಲ್ಲಿ ಅನುಭವವಾಗುತ್ತದೆ. .

‘ದಿ ಗರ್ಲ್ ಫ್ರೆಂಡ್ ‘ ಮತ್ತು ‘ವಾಟ್ ವಿ ಟಾಕ್ ಎಬೌಟ್’ ಎರಡೂ ಕೃತಿಗಳು ಲಿಂಗ ಆಧಾರಿತ ನಿರೀಕ್ಷೆಗಳು ಪ್ರೀತಿ ಎಂದರೇನು ಎಂಬುದರ ಬಗ್ಗೆ ಜನರ ಅರ್ಥವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಆರೋಗ್ಯಕರ ಪ್ರೀತಿಯು ಇಬ್ಬರೂ ಪಾಲುದಾರರನ್ನು ಪೂರ್ಣ ವ್ಯಕ್ತಿಗಳಾಗಿ ಪರಿಗಣಿಸುತ್ತದೆ, ತುಂಬಬೇಕಾದ ಸಾಂಪ್ರದಾಯಿಕ ಪಾತ್ರಗಳಾಗಿ ಅಲ್ಲ. ಅಲ್ಲಿ ಸಮಾನತೆಯಿರುತ್ತದೆ. ಪರಸ್ಪರರ ಗಡಿಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ನಿಜವಾದ ಗೌರವ ಇರುತ್ತದೆ. ​ಪ್ರೀತಿ ಸ್ವಾಮ್ಯವಾದಾಗ ಹಾನಿಕಾರಕವಾಗುತ್ತದೆ. ಬಹುಶಃ ಇದೇ ಈ ಎರಡು ಕೃತಿಗಳ ಸಂದೇಶ.

Tuesday, December 02, 2025

ರಷ್ಯಾ: ಸಾಮ್ರಾಜ್ಯ, ಕ್ರಾಂತಿ, ಸರ್ವಾಧಿಕಾರ

ಈ ವಾರ ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರುವ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ರಷ್ಯಾವನ್ನು ನೆನೆದಾಗ ಹಲವು ವಿಚಾರಗಳು ಸುಳಿದವು. ಇತಿಹಾಸ ಪುಸ್ತಕದಲ್ಲಿ ಓದಿರುವುದಕ್ಕಿಂತ ಸಾಹಿತ್ಯದ ಮೂಲಕ ದೇಶಗಳ ಬಗ್ಗೆ ಜನರ ಬಗ್ಗೆ ಅರಿಯಲು ಪ್ರಯತ್ನಿಸುವುದು ನನಗೆ ಇಷ್ಟ. ಕೆಲವಾರು ಕಾದಂಬರಿಗಳು ನೆನಪಿಗೆ ಬಂದವು. ಹಾಗೆಯೇ ಈ ವರ್ಷ ಓದಿದ ರಷ್ಯನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ಪುಸ್ತಕಗಳು ನೆನಪಾದವು. ಈ ಎರಡು ಪುಸ್ತಕಗಳು ಕಳೆದ ನಾಲ್ಕು ಶತಮಾನಗಳಲ್ಲಿ ರಷ್ಯಾವು ದಾಟಿ ಬಂದಿರುವ ವಿವಿಧ ಬಗೆಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಸಮಗ್ರವಾಗಿ ದಾಖಲಿಸುತ್ತವೆ. ಆ ಎರಡೂ ಕೃತಿಗಳಲ್ಲಿನ ಮುಖ್ಯ ವಿಚಾರಗಳನ್ನು ವಿಶದವಾಗಿ ಹಿಡಿದಿಡುವ ಪ್ರಯತ್ನ ಈ ಲೇಖನದಲ್ಲಿದೆ.

1. Russia under the Romanovs (1613–1917) by Simon Sebag Montefiore

2. Motherland: A Feminist History of Modern Russia, from Revolution to Autocracy by Julia Ioffe

1. Russia under the Romanovs (1613–1917) by Simon Sebag Montefiore

1613 ರಲ್ಲಿ ರೊಮಾನೋವ್ ರಾಜವಂಶವು ಪ್ರಾರಂಭವಾಯಿತು, 17 ವರ್ಷದ ಮೈಕೆಲ್ ರೊಮಾನೋವ್ ನನ್ನು ಹಿಂದಿನ ರುರಿಕಿಡ್ ವಂಶವನ್ನು ನಾಶಪಡಿಸಿದ ಮೇಲಿನ  ಒಂದು ದಶಕದ ಅಂತರ್ಯುದ್ಧ, ಕ್ಷಾಮ ಮತ್ತು ವಿದೇಶಿ ಹಸ್ತಕ್ಷೇಪದ ನಂತರ ತ್ಸಾರ್ ಆಗಿ ಆಯ್ಕೆ ಮಾಡಲಾಯಿತು. ಮೈಕೆಲ್ ಆಳ್ವಿಕೆಯಲ್ಲಿ ಅವನ  ತಂದೆ ಫಿಲರೆಟ್ ಪ್ರಾಬಲ್ಯ ಹೊಂದಿದ್ದನು. ಆಡಳಿತವನ್ನು ಕ್ರಮಬದ್ಧವಾಗಿಸುವುದು ಮತ್ತು ಶ್ರೀಮಂತರೊಂದಿಗೆ ನಿಕಟ ಮೈತ್ರಿಯ ಮೂಲಕ ಸಾಮ್ರಾಜ್ಯವನ್ನು ಸ್ಥಿರಗೊಳಿಸುವುದು ಮೈಕೆಲ್ ನ ಆದ್ಯತೆಯಾಗಿದ್ದವು. ರೈತರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಅವನಿಗೆ ಸಾಧ್ಯವಾಯಿತು. 

ಮೈಕೆಲ್ ನ  ಉತ್ತರಾಧಿಕಾರಿ ಅಲೆಕ್ಸಿಯು  ಪಶ್ಚಿಮ ಮತ್ತು ದಕ್ಷಿಣಕ್ಕೆ ಪ್ರದೇಶವನ್ನು ವಿಸ್ತರಿಸಿದನು.  ಆದರೆ ಜೀತದಾಳುತನ, ಧಾರ್ಮಿಕ ಸಂಘರ್ಷ ಮತ್ತು ಅವನು ಅಶಾಂತಿಗೆ ವಿಧಿಸುತ್ತಿದ್ದ  ಕ್ರೂರ ಶಿಕ್ಷೆ ಇವುಗಳಿಂದ ಅವನು ಆಳುತ್ತಿದ್ದ ಸಮಾಜವು  ಗುರುತಿಸಲ್ಪಡುತ್ತದೆ. 

ಪೀಟರ್ ದಿ ಗ್ರೇಟ್ ಮತ್ತು ಪಾಶ್ಚಿಮಾತ್ಯೀಕರಣ

ಪೀಟರ್ I ("ದಿ ಗ್ರೇಟ್")  ಮುಖ್ಯವಾಗಿ ಗುರುತಿಸಲ್ಪಡುವ ತ್ಸಾರ್ ಗಳಲ್ಲಿ ಒಬ್ಬ. ರಷ್ಯಾವನ್ನು ಯುರೋಪ್  ಕಡೆ ತಿರುಗಿಸಿ  ಪುನರ್ನಿರ್ಮಿಸಿದವನು ಎಂದು ಅವನನ್ನು ಗುರುತಿಸಲಾಗುತ್ತದೆ.  ಪ್ರಬಲ ಸೈನ್ಯ ಮತ್ತು ನೌಕಾಪಡೆಯನ್ನು ನಿರ್ಮಿಸಿದವನ. 1709 ರಲ್ಲಿ ಪೋಲ್ಟವಾದಲ್ಲಿ ಸ್ವೀಡನ್ ಅನ್ನು ಸೋಲಿಸಿದನು.  ಸೇಂಟ್ ಪೀಟರ್ಸ್ಬರ್ಗ್ ಅನ್ನು  ರಾಜಧಾನಿಯಾಗಿ  ಸ್ಥಾಪಿಸಿದನು. ಆಡಳಿತ, ಮಿಲಿಟರಿ, ಆಸ್ಥಾನ ಸಂಸ್ಕೃತಿ ಮತ್ತು ಚರ್ಚ್‌ನಲ್ಲಿ ತ್ವರಿತ ಆಧುನೀಕರಣ ಮತ್ತು ಸುಧಾರಣೆಗಳನ್ನು ತರಲು ಪ್ರಯತ್ನಿಸಿದನು. ಆದರೆ ದಂಗೆಗಳ ಕಠಿಣ ದಮನ ಮತ್ತು ಸ್ವಂತ ಮಗನನ್ನೇ  ಚಿತ್ರಹಿಂಸೆಯಿಂದ ಸಾಯಿಸುವ  ತೀವ್ರ ವೈಯಕ್ತಿಕ ಕ್ರೌರ್ಯ ಸಹ ಅವನಲ್ಲಿತ್ತು. ಪೀಟರ್ ಅಡಿಯಲ್ಲಿ, ರಷ್ಯಾ ಪ್ರಮುಖ ಯುರೋಪಿಯನ್ ಶಕ್ತಿಯಾಗಿ ಹೊರಹೊಮ್ಮಿತು. ಇವನ ಕಾಲದಲ್ಲಿ ಸರ್ವಾಧಿಕಾರಿ  ಶಕ್ತಿ ಮತ್ತು ಜೀತಪದ್ಧತಿಗಳು ಬಲಗೊಂಡವು.

ಹದಿನೆಂಟನೇ ಶತಮಾನದ ಸಾಮ್ರಾಜ್ಯ ಮತ್ತು ಆಸ್ಥಾನ ರಾಜಕೀಯ 

ಪೀಟರ್ ನಂತರ, ಹದಿನೆಂಟನೇ ಶತಮಾನವು ಆಗಾಗ್ಗೆ ಅರಮನೆ ದಂಗೆಗಳು, ಬೇಗನೆ ಬದಲಾಗುತ್ತಿದ್ದ  ಆಳ್ವಿಕೆಗಳು ಮತ್ತು ಹಲವಾರು ಪ್ರಬಲ ಮಹಿಳಾ ಆಡಳಿತಗಾರರನ್ನು ಕಂಡಿತು.  ಒಳಸಂಚು, ಹಿಂಸೆ ಮತ್ತು ಐಷಾರಾಮಿ  ಆಸ್ಥಾನ ಸಂಸ್ಕೃತಿ ಇವೆಲ್ಲ ಈ ಕಾಲಘಟ್ಟದ ಭಾಗವಾಗಿದ್ದವು. ಸಾಮ್ರಾಜ್ಞಿ ಎಲಿಜಬೆತ್ ಮತ್ತು ವಿಶೇಷವಾಗಿ ಕ್ಯಾಥರೀನ್ II ​​("ದಿ ಗ್ರೇಟ್"),  ಪೋಲೆಂಡ್ ಮತ್ತು ಕಪ್ಪು ಸಮುದ್ರ ಪ್ರದೇಶಕ್ಕೆ ಸಾಮ್ರಾಜ್ಯವನ್ನು ವಿಸ್ತರಿಸಿದರು. ಆದರೆ  ಜೀತಪದ್ಧತಿಯನ್ನು ಉಳಿಸಿಕೊಂಡರು. ಆಸ್ಥಾನ ಜೀವನವು ಲೈಂಗಿಕ ಹಗರಣ ಮತ್ತು  ಕ್ರೌರ್ಯಗಳಿಗೆ ಸಾಕ್ಷಿಯಾಗಿತ್ತು.  ಹಲವಾರು ರೊಮಾನೋವ್‌ಗಳು  ಬೌದ್ಧಿಕ ಮಹತ್ವಾಕಾಂಕ್ಷೆಯನ್ನು ಹೊಂದಿದವರೂ ಆಗಿದ್ದರು. ಪೀಟರ್ III ಮತ್ತು ಪಾಲ್ I ರಂತಹ ಆಡಳಿತಗಾರರನ್ನು ಅವರ ಆಸ್ಥಾನದ ಗಣ್ಯರೇ  ಪದಚ್ಯುತಗೊಳಿಸಿ ಕೊಲೆ ಮಾಡಿದರು.

ಹತ್ತೊಂಬತ್ತನೇ ಶತಮಾನ: ಸುಧಾರಣೆ, ಪ್ರತಿಕ್ರಿಯೆ ಮತ್ತು ಬಿಕ್ಕಟ್ಟು

ಅಲೆಕ್ಸಾಂಡರ್ I ನೆಪೋಲಿಯನ್ ವಿರುದ್ಧ ರಷ್ಯಾದ ಯಶಸ್ವಿ ಪ್ರತಿರೋಧವನ್ನು ಮುನ್ನಡೆಸಿದನು  ಮತ್ತು ನೆಪೋಲಿಯನ್ ನಂತರದ ಯುರೋಪ್ ಅನ್ನು ರೂಪಿಸಲು ಸಹಾಯ ಮಾಡಿದನು.  ಆದರೆ ಅವನ ಆಳ್ವಿಕೆಯು  ತನ್ನದೇ ದೇಶದಲ್ಲಿ  ಸಂಪ್ರದಾಯವಾದಿಗಳ  ಪ್ರತಿರೋಧವನ್ನು ಎದುರಿಸಬೇಕಾಯಿತು  ಮತ್ತು 1825 ರ ವಿಫಲ 'ಡಿಸೆಂಬ್ರಿಸ್ಟ್' ಅಧಿಕಾರಿಗಳ ದಂಗೆಗೆ ಪ್ರೇರಣೆ ನೀಡಿತು. ಇದು ಸಾಂವಿಧಾನಿಕ ಬದಲಾವಣೆಗಾಗಿ ಗಣ್ಯರ ಬೇಡಿಕೆಗಳನ್ನು ಬಹಿರಂಗಪಡಿಸಿತು. ( ಟಾಲ್ಸ್ಟಾಯ್ ಬರೆದ ' ವಾರ್ ಅಂಡ್ ಪೀಸ್' ಕೃತಿಯಲ್ಲಿ ಅಲೆಕ್ಸಾಂಡರ್ I ಪಾತ್ರವಿದೆ.)  

ನಂತರ ಬಂದ ನಿಕೋಲಸ್ I ಕಠಿಣ ನಿರಂಕುಶಾಧಿಕಾರ, ಸೆನ್ಸಾರ್ಶಿಪ್ ಮತ್ತು ರಹಸ್ಯ ಪೊಲೀಸ್ ಆಳ್ವಿಕೆಯೊಂದಿಗೆ ಗುರುತಿಸಿಕೊಂಡನು.  (ದೋಸ್ತೊವಸ್ಕಿಯನ್ನು ಸೆರೆಮನೆಗೆ ದೂಡಿ ಮರಣದಂಡನೆ ಶಿಕ್ಷೆ ವಿಧಿಸಿ ಕಡೆ ಗಳಿಗೆಯಲ್ಲಿ ಆಜ್ಞೆಯನ್ನು ವಾಪಸ್ ಪಡಿದಿದ್ದು ಇದೇ ನಿಕೋಲಸ್ . ಈ ಸೆರೆವಾಸದ ಆಧಾರದಲ್ಲೇ ದೋಸ್ತೊವಸ್ಕಿ ರಚಿಸಿದ ಕಾದಂಬರಿ  ' ದಿ ಹೌಸ್‌ ಆಫ್ ದಿ ಡೆಡ್ ' ). 

ಅಲೆಕ್ಸಾಂಡರ್ II ಜೀತದಾಳುಗಳನ್ನು ವಿಮೋಚನೆಗೊಳಿಸಿದನು  ಮತ್ತು ಪ್ರಮುಖ ಕಾನೂನು ಮತ್ತು ಸ್ಥಳೀಯ ಸ್ವ-ಸರ್ಕಾರ ಸುಧಾರಣೆಗಳನ್ನು ಪರಿಚಯಿಸಿದನು, ಆದರೆ 1881 ರಲ್ಲಿ ಬಾಂಬ್‌ನಿಂದ ಕೊಲ್ಲಲ್ಪಡುವ ಮೊದಲು ಅನೇಕ ಹತ್ಯೆ ಪ್ರಯತ್ನಗಳಿಂದ ಬದುಕುಳಿದಿದ್ದನು.  

ನಂತರ ಬಂದ  ಅಲೆಕ್ಸಾಂಡರ್ III ಅನೇಕ ಸುಧಾರಣೆಗಳನ್ನು ಹಿಂತೆಗೆದನು. 

ನಿಕೋಲಸ್ II ಮತ್ತು ರಹಸ್ಯ ಪೊಲೀಸ್ ಆಳ್ವಿಕೆಯ ಪತನ 

ನಿಕೋಲಸ್ II ಕೈಗಾರಿಕೀಕರಣಗೊಳ್ಳುತ್ತಿರುವ ಆದರೆ ಸಾಮಾಜಿಕವಾಗಿ ಸ್ಫೋಟಕ ಸ್ಥಿತಿಯಲ್ಲಿದ್ದ ಸಾಮ್ರಾಜ್ಯಕ್ಕೆ  ವಾರಸುದಾರನಾದನು. ವೈಯಕ್ತಿಕ ಧರ್ಮನಿಷ್ಠೆ ಮತ್ತು ಕುಟುಂಬ ಭಕ್ತಿ ಇವು ಇವನ ಆಡಳಿತದ ಲಕ್ಷಣಗಳಾಗಿದ್ದವು. ಜಪಾನ್ ಜೊತೆ  ಯುದ್ಧದಲ್ಲಿನ ಸೋಲುಗಳು, 1905 ರ ಕ್ರಾಂತಿ ಮತ್ತು ಡುಮಾ ಮೂಲಕ ಸೀಮಿತ ಸಾಂವಿಧಾನಿಕ ರಿಯಾಯಿತಿಗಳು ರಾಜಪ್ರಭುತ್ವವನ್ನುದುರ್ಬಲಗೊಳಿಸಿದವು ಮತ್ತು ಅಪನಂಬಿಕೆಗೆ ಒಳಪಡಿಸಿದವು. ರಾಸ್ಪುಟಿನ್ ನಂತಹ ವ್ಯಕ್ತಿಗಳ ಪ್ರಭಾವವು ಅದರ ಪ್ರತಿಷ್ಠೆಯನ್ನು ಮತ್ತಷ್ಟು ಹಾನಿಗೊಳಿಸಿದವು . ಮೊದಲನೆಯ ಮಹಾಯುದ್ಧದ ದುರಂತದ ಒತ್ತಡಗಳು ಸಾಮೂಹಿಕ ಅಶಾಂತಿ ಮತ್ತು ದಂಗೆಗೆ ಕಾರಣವಾಯಿತು; ನಿಕೋಲಸ್ 1917 ರಲ್ಲಿ ಪದತ್ಯಾಗ ಮಾಡಿದನು, ಮತ್ತು 1918 ರಲ್ಲಿ ಅವನು ಮತ್ತವನ  ಕುಟುಂಬದ  ಹಲವರನ್ನು  ಬೊಲ್ಶೆವಿಕ್ ಪಡೆಗಳು ಗಲ್ಲಿಗೇರಿಸಿದವು. ( ಬೋರಿಸ್ ಪಾಸ್ತರ್ನಾಕ್ ರಚಿಸಿರುವ ' ಡಾ ಜಿವಾಗೋ' ಕಾದಂಬರಿಯು ಘಟಿಸುವುದು ಇದೇ ಕಾಲಘಟ್ಟದಲ್ಲೇ. )

ಪುಸ್ತಕದ ಕಡೆಯ ಭಾಗದಲ್ಲಿ ಒಂದೆಡೆ ಬರುವ ಒಂದು ಸಂಗತಿ ಗಮನ ಸೆಳೆಯಿತು. ಅದೇನೆಂದರೆ-ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪೆಟ್ರೋಗ್ರಾಡ್‌ನ ಆಸ್ಟೋರಿಯಾ ಹೋಟೆಲ್‌ನಲ್ಲಿ ರಾಸ್‌ಪುಟಿನ್‌ಗೆ ಆಹಾರವನ್ನು ಸಿದ್ಧಪಡಿಸಿದ ಅಡುಗೆಯವರಲ್ಲಿ ಒಬ್ಬರು ನಂತರದಲ್ಲಿ ರಷ್ಯನ್  ಕ್ರಾಂತಿಯ ನಂತರದ ವರ್ಷಗಳಲ್ಲಿ ಲೆನಿನ್ ಮತ್ತು ಸ್ಟಾಲಿನ್ ರಿಗೂ ಅಡುಗೆ ಮಾಡಲು ಹೋದರು ಎಂದು ಮಾಂಟೆಫಿಯೋರ್ ನಮೂದಿಸುತ್ತಾರೆ; ಈ ವ್ಯಕ್ತಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಜ್ಜ ಸ್ಪಿರಿಡಾನ್ ಪುಟಿನ್!

ಅಲ್ಲಿಗೆ  ಮೂರು ಶತಮಾನಗಳಿಗೂ ಹೆಚ್ಚು ಕಾಲದ ರೊಮಾನೋವ್ ಆಳ್ವಿಕೆ ಕೊನೆಯಾಯಿತು  ಮತ್ತು ಸೋವಿಯತ್ ಅಧಿಕಾರಕ್ಕೆ ದಾರಿಯಾಯಿತು. 

2. Motherland: A Feminist History of Modern Russia, from Revolution to Autocracy by Julia Ioffe

೧೯೧೭ ರ ಕ್ರಾಂತಿಯಿಂದ ಇಂದಿನವರೆಗಿನ ರಷ್ಯಾದ ಇತಿಹಾಸವು ತ್ಸಾರ್ ಪತನದಿಂದ, ಸೋವಿಯತ್ ಪ್ರಯೋಗ ಮತ್ತು ಅದರ ಪತನದ ಮೂಲಕ ಸಾಗಿ, ಇಂದಿನ ವ್ಲಾಡಿಮಿರ್ ಪುಟಿನ್ ನ  ನಿರಂಕುಶ ರಾಜ್ಯದವರೆಗೆ ಸಾಗುತ್ತದೆ. 

ಈ ಕೃತಿಯ ಮೂಲಕ ರಷ್ಯಾದ ಸ್ತ್ರೀವಾದಿ ಇತಿಹಾಸವನ್ನು ಒಂದು ಮಸೂರವಾಗಿಸಿಕೊಂಡು, ಅಧಿಕಾರ, ಯುದ್ಧ ಮತ್ತು ಸಿದ್ಧಾಂತವು ಒಂದು ಶತಮಾನದುದ್ದಕ್ಕೂ ರಷ್ಯಾದ ಮಹಿಳೆಯರು ಮತ್ತು ವಿಶಾಲ ಸಮಾಜದ ಜೀವನವನ್ನು ಹೇಗೆ ಮರುರೂಪಿಸಿತು ಎಂಬುದನ್ನು ತಿಳಿಯಲು ಪ್ರಯನ್ನಿಸಬಹುದು.

ಕ್ರಾಂತಿ ಮತ್ತು ಆರಂಭಿಕ ಸೋವಿಯತ್ ವರ್ಷಗಳು

೧೯೧೭ ರ ಕ್ರಾಂತಿಯು ತ್ಸಾರಿಸ್ಟ್ ನಿರಂಕುಶಾಧಿಕಾರವನ್ನು ಉರುಳಿಸಿತು ಮತ್ತು ಬೊಲ್ಶೆವಿಕ್‌ಗಳನ್ನು ಅಧಿಕಾರಕ್ಕೆ ತಂದಿತು, ಅವರು ಹೆಚ್ಚಾಗಿ ಗ್ರಾಮೀಣ, ಬಡ ಮತ್ತು ಅನಕ್ಷರಸ್ಥ ಸಾಮ್ರಾಜ್ಯದಲ್ಲಿ ಸಮಾಜವಾದಿ ರಾಜ್ಯವನ್ನು ನಿರ್ಮಿಸಲು ಹೊರಟರು. ಈ ಕ್ರಾಂತಿಯ ಕೇಂದ್ರಬಿಂದುವಾಗಿದ್ದ ಮಹಿಳೆಯರು, ಬೊಲ್ಶೆವಿಕ್ ಕಾರ್ಯಪಡೆಯ ದೊಡ್ಡ ಭಾಗವಾಗಿದ್ದರಿಂದ  ಹೊಸ ಆಡಳಿತದಲ್ಲಿ ಭಾಗವಾಗಿದ್ದರು. 

ಅಲೆಕ್ಸಾಂಡ್ರಾ ಕೊಲ್ಲೊಂಟೈ ಮತ್ತು ಇನೆಸ್ಸಾ ಅರ್ಮಾಂಡ್ ಅವರಂತಹ ಕ್ರಾಂತಿಕಾರಿ ನಾಯಕರು ಕಾನೂನು ಸಮಾನತೆ, ಸುಲಭ ವಿಚ್ಛೇದನ, ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದು (1920 ರಿಂದ), ಶಿಕ್ಷಣದ ಪ್ರವೇಶ ಮತ್ತು ಶಿಶುಪಾಲನೆಯನ್ನು ರಾಜ್ಯಾಡಳಿತವೇ ನಿರ್ವಹಿಸುವಂತಹ  ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಮುಂದಿಟ್ಟರು.  ಆರಂಭಿಕ ಸೋವಿಯತ್ ರಷ್ಯಾವನ್ನು ಲಿಂಗ ಮತ್ತು ಕುಟುಂಬ ನೀತಿಯ ವಿಷಯದಲ್ಲಿ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿದರು. ಆದರೂ ಈ ಹಂತದಲ್ಲಿಯೂ  ಸಹ ಪಕ್ಷವು ಪುರುಷ ಪ್ರಾಬಲ್ಯದಲ್ಲಿ ಉಳಿಯಿತು ಮತ್ತು ಸಾಮಾಜಿಕ ಬೆಂಬಲದ ಅನೇಕ ಭರವಸೆಗಳು (ವ್ಯಾಪಕವಾದ ನರ್ಸರಿಗಳು ಮತ್ತು ಸಮುದಾಯ  ಸೇವೆಗಳಂತಹವು) ಕಾನೂನುಗಳಿಗಿಂತ ಹಿಂದುಳಿದವು, ಮಹಿಳೆಯರಿಗೆ ಅವರ  ಉದ್ಯೋಗಗಳ ಜೊತೆಗೇ ದೇಶೀಯವಾಗಿ ಸಾಂಪ್ರದಾಯಿಕವಾಗಿದ್ದ ಇತರ ಹೊಣೆಗಳು ತಪ್ಪಲಿಲ್ಲ .  

ಸ್ಟಾಲಿನ್, ಭಯೋತ್ಪಾದನೆ ಮತ್ತು ಯುದ್ಧ

1920 ರ ದಶಕದ ಅಂತ್ಯದ ವೇಳೆಗೆ, ಜೋಸೆಫ್ ಸ್ಟಾಲಿನ್ ನೇತೃತ್ವದಲ್ಲಿ, ಆಡಳಿತವು ವೈಯಕ್ತಿಕ ಸರ್ವಾಧಿಕಾರವಾಗಿ ಗಟ್ಟಿಯಾಗಿ, ಅದು ಅನೇಕ ಆರಂಭಿಕ ಸ್ತ್ರೀವಾದಿ ಲಾಭಗಳನ್ನು ಮೊಟಕುಗೊಳಿಸಿತು. ಪಕ್ಷದ  ಮಹಿಳಾ ವಿಭಾಗವನ್ನು ಮುಚ್ಚಲಾಯಿತು. 1936 ರಲ್ಲಿ ಗರ್ಭಪಾತವನ್ನು ನಿಷೇಧಿಸಲಾಯಿತು, ಮತ್ತು ರಹಸ್ಯ ಪೊಲೀಸ್ ಮತ್ತು ಗುಲಾಗ್‌ನ ವಿಸ್ತರಣೆಯಾಯಿತು.   ತಾಯ್ತನ ಮತ್ತು ದೊಡ್ಡ ಕುಟುಂಬಗಳನ್ನು ವೈಭವೀಕರಿಸುವುದರೊಂದಿಗೆ  ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. 

1930 ರ ದಶಕದ ಮಹಾ ಭಯೋತ್ಪಾದನೆಯು ರಾಜಕೀಯ ವಿರೋಧಿಗಳನ್ನೆಲ್ಲ  "ಜನರ ಶತ್ರುಗಳು " ಎಂಬ ಹಣೆ ಪಟ್ಟಿ ಹಚ್ಚಿ ನಾಶ ಮಾಡುವುದು ಮಾತ್ರವಲ್ಲದೆ ಅವರ ಹೆಂಡತಿಯರನ್ನು ಸಹ ನಾಶಮಾಡಿತು, "ಮಾತೃಭೂಮಿಗೆ ದ್ರೋಹಿಗಳ ಪತ್ನಿಯರು" ಎಂಬ ಹಣೆಪಟ್ಟಿಯೊಡನೆ  ವಿಶೇಷ ಶಿಬಿರಗಳನ್ನು ಸ್ಥಾಪಿಸಿ  ಹತ್ತಾರು ಸಾವಿರ ಮಹಿಳೆಯರನ್ನು ಸಂಹರಿಸಿದರು. ಎರಡನೆಯ  ಮಹಾಯುದ್ಧದ ಸಮಯದಲ್ಲಿ ಮಹಿಳೆಯರು ಸ್ನೈಪರ್‌ಗಳು, ಪೈಲಟ್‌ಗಳಾಗಿ ದೊಡ್ಡ ಸಂಖ್ಯೆಯಲ್ಲಿ ಸೇವೆ ಸಲ್ಲಿಸಿದರು, ಆದರೆ ಯುದ್ಧಾನಂತರದಲ್ಲಿ  ಮಹಿಳೆಯರನ್ನು ರಾಷ್ಟ್ರದ ಸಂತಾನೋತ್ಪತ್ತಿ ಮಾಡುವವರ ಪಾತ್ರಕ್ಕೆ ಮತ್ತೆ ತಳ್ಳಲಾಯಿತು, ಮಕ್ಕಳಿಲ್ಲದವರ ಮೇಲೆ ತೆರಿಗೆ ವಿಧಿಸಲಾಯಿತು  ಮತ್ತು ಅನೇಕ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ಸನ್ಮಾನ ನೀಡಲಾಯಿತು. 

( ಸ್ಟಾಲಿನ್ ಕಾಲದ ಹಿಂಸೆ ಮತ್ತು ಅತಿರೇಕಗಳ ಬಗೆಗೆ ಸ್ವತಃ ಸ್ಟಾಲಿನನ ಮಗಳು ಬರೆದಿರುವ ' ಸ್ಟಾಲಿನ್ ಸ್ ಡಾಟರ್ ' ಕೃತಿಯನ್ನು ನೋಡಬಹುದು. ) ಸ್ಟಾಲಿನ್ ಅಧಿಕಾರದ ಕಾಲ ನಿಜಕ್ಕೂ ರಷ್ಯಾದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ. 

ಸೋವಿಯತ್ ಒಕ್ಕೂಟದ ದೈನಂದಿನ ಜೀವನ

1953 ರಲ್ಲಿ ಸ್ಟಾಲಿನ್ ನ  ಮರಣದ ನಂತರ, ನಂತರದ ನಾಯಕರು ಕೆಲವು ಕಠಿಣ ನೀತಿಗಳನ್ನು ಸಡಿಲಿಸಿದರು, ಗರ್ಭಪಾತವನ್ನು ಮತ್ತೆ ಕಾನೂನುಬದ್ಧಗೊಳಿಸಿದರು ಮತ್ತು ಮುಕ್ತ ಭಯೋತ್ಪಾದನೆಯನ್ನು ಮೃದುಗೊಳಿಸಿದರು.  ಆದರೆ ಮೂಲಭೂತ ಸಾಮಾಜಿಕ ಒಪ್ಪಂದವು ಮಹಿಳೆಯರನ್ನು ಎರಡು ಬಗೆಯ ಬಂಧನದಲ್ಲಿ ಇರಿಸಿತು. ಅವರು ಕೈಗಾರಿಕಾ, ನಗರೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಪೂರ್ಣ ಸಮಯ ಕೆಲಸ ಮಾಡಬೇಕಾಗಿತ್ತು ಮತ್ತು ಮನೆ ಮತ್ತು ಮಕ್ಕಳ ಪ್ರಾಥಮಿಕ ಜವಾಬ್ದಾರಿಯನ್ನು ಸಹ ಹೊರಬೇಕಾಗಿತ್ತು. 

ಈ ಅವಧಿಯಲ್ಲಿ, ಅನೇಕ ಮಹಿಳೆಯರು ಉನ್ನತ ಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಸಾಧನೆಯನ್ನು ತಲುಪಿದರು, ಯೋಫೀ  ಅವರ ಕುಟುಂಬದಲ್ಲೇ ಅನೇಕರು, ವಿಶೇಷವಾಗಿ ಮಹಿಳೆಯರು,  ವೈದ್ಯರು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಾಗಿದ್ದರೂ  ಅವರು ತಮ್ಮ ಮನೆಗಳನ್ನು ನಿಭಾಯಿಸಲು ಕಷ್ಟ ಪಡಬೇಕಾಗುತ್ತಿತ್ತು. ಕಮ್ಯುನಿಸ್ಟ್ ಪಕ್ಷದ ಗಣ್ಯರು ಮತ್ತು ಅವರ ಕುಟುಂಬಗಳು  ವಿಶೇಷ ಸವಲತ್ತುಗಳನ್ನು ಅನುಭವಿಸಿದರು, ಸಾಮಾನ್ಯ ನಾಗರಿಕರಿಗೆ ಸಮಾನತೆಯ ಅಧಿಕೃತ ಭರವಸೆಗಳಷ್ಟೇ ಲಭಿಸುತ್ತಿದ್ದವು.

USSR ನ ಕುಸಿತ ಮತ್ತು 1990 ರ ದಶಕದ ಪ್ರಕ್ಷುಬ್ಧತೆ

1980 ರ ದಶಕದಲ್ಲಿ ಮಿಖಾಯಿಲ್ ಗೋರ್ಬಚೇವ್ ಅವರ ಸುಧಾರಣೆಗಳ ಅಡಿಯಲ್ಲಿ ಸೋವಿಯತ್ ಒಕ್ಕೂಟವು ಹೊರಜಗತ್ತಿಗೆ ತೆರೆದುಕೊಳ್ಳಲು  ಪ್ರಾರಂಭಿಸಿತು, ಇದು ಸಾರ್ವಜನಿಕ ಚರ್ಚೆಯನ್ನು ಆರಂಭಿಸಿತು ಮತ್ತು ಆರ್ಥಿಕ ನಿಶ್ಚಲತೆ ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು. 1991 ರಲ್ಲಿ USSR ವಿಭಜನೆಯಾಯಿತು, ಸ್ವತಂತ್ರ ರಷ್ಯನ್ ಒಕ್ಕೂಟವು ಮಾರುಕಟ್ಟೆಯ ಆಘಾತ, ಹಣದುಬ್ಬರ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಸಿಲುಕಿತು ಮತ್ತು ಅನೇಕರಿಗೆ ಜೀವನ ಮಟ್ಟದಲ್ಲಿ ತೀವ್ರ ಕುಸಿತದ ಅನುಭವವಾಯಿತು.

1990 ರ ದಶಕದ ಅವ್ಯವಸ್ಥೆಯಲ್ಲಿ, ಔಪಚಾರಿಕ ಕಾನೂನು ಸ್ವಾತಂತ್ರ್ಯಗಳು ವಿಸ್ತರಿಸಿದವು, ಆದರೆ ಸಾಮಾಜಿಕ ಸುರಕ್ಷತಾ ಜಾಲಗಳು ಕುಗ್ಗಿದವು ಮತ್ತು ಹೆಚ್ಚು ತರಬೇತಿ ಪಡೆದ ವೃತ್ತಿಪರರಾಗಿದ್ದ ಅನೇಕ ಮಹಿಳೆಯರು ಇದ್ದಕ್ಕಿದ್ದಂತೆ ಆರ್ಥಿಕ ಅಭದ್ರತೆ, ವೇತನ ಬಾಕಿ ಮತ್ತು ಪುರುಷ ಸಂಪಾದನೆದಾರರ ಮೇಲಿನ ಹೆಚ್ಚುತ್ತಿರುವ ಅವಲಂಬನೆಯನ್ನು ಎದುರಿಸಿದರು. ಒಂದೆಡೆ ಹೊಸ ಗ್ರಾಹಕ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಪ್ರಭಾವಗಳು, ಇನ್ನೊಂದೆಡೆ  ಮರಳಿ ಜಾಗೃತಗೊಂಡ  ಪಿತೃಪ್ರಧಾನ ವ್ಯವಸ್ಥೆಯ ಆದರ್ಶಗಳು, ಹೀಗೆ ದ್ವಂದ್ವದಲ್ಲಿ ಸಿಲುಕಿದ  ಅನೇಕ ಯುವತಿಯರು ಸೋವಿಯತ್ ಶೈಲಿಯ ವೃತ್ತಿಪರ ಜೀವನದ ಆಯ್ಕೆಗಿಂತ  ಯಶಸ್ವಿ ಪುರುಷರನ್ನು ಆಕರ್ಷಿಸುವುದಕ್ಕೆ ಸೀಮಿತವಾದ  ಸಾಂಪ್ರದಾಯಿಕ ಜೀವನವನ್ನು ಹೆಚ್ಚು ಬಯಸಿದರು. 

ಪುಟಿನ್ ನ  ರಷ್ಯಾ ಮತ್ತು ಇಂದಿನ ಯುದ್ಧ

ಸಹಸ್ರಮಾನದ ತಿರುವಿನಲ್ಲಿ ವ್ಲಾಡಿಮಿರ್ ಪುಟಿನ್ ನ  ಉದಯವು, ಮಾಧ್ಯಮ ಮತ್ತು ನಾಗರಿಕ ಸಮಾಜದ ಮೇಲೆ ಬಿಗಿಯಾದ ನಿಯಂತ್ರಣ ಮತ್ತು ಸಾಂಪ್ರದಾಯಿಕ ಮೌಲ್ಯಗಳು, ರಾಷ್ಟ್ರೀಯತೆ ಮತ್ತು ಮಹಾನ್-ಶಕ್ತಿ ಅಸ್ಮಿತೆಯ ಸುತ್ತ ನಿರ್ಮಿಸಲಾದ ಸಿದ್ಧಾಂತವನ್ನು ತಂದಿತು. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರೂ, ನಿಜವಾದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಪುರುಷರಿಗೆ ವಹಿಸಲಾಗಿದೆ, ಮತ್ತು  ಕೆಲವು ರೀತಿಯ ದೇಶೀಯ ಹಿಂಸಾಚಾರವನ್ನು ಅಪರಾಧಮುಕ್ತಗೊಳಿಸುವುದು, ಇದರ ಜೊತೆಗೆ  ಸ್ತ್ರೀವಾದಿ ಮತ್ತು ಹಿಂಸಾಚಾರ ವಿರೋಧಿ ಸಂಸ್ಥೆಗಳ ಮೇಲೆ "ವಿದೇಶಿ ಏಜೆಂಟ್" ಎಂಬಂತಹ ಪದಚಿಹ್ನೆಗಳನ್ನು ಹಚ್ಚಿ  ದಂಡಗಳನ್ನು ಹೇರುವ ಮೂಲಕ  ಒತ್ತಡ ಸೃಷ್ಟಿಸಲಾಗುತ್ತಿದೆ. ಹಲವು ನಿರಂಕುಶವಾದಿ ರಾಜಕಾರಣಿಗಳು ಹಲವು ದೇಶಗಳಲ್ಲಿ ಇಂತಹದ್ದೇ ಪ್ರವೃತ್ತಿಯನ್ನು ತೋರುತ್ತಿರುವುದು ನಾವು ಗಮನಿಸುತ್ತಿರುವ ಕಳವಳಕಾರಿ ಸಂಗತಿ. 

ಜನಸಂಖ್ಯೆಯ ಕುಸಿತ ಮತ್ತು ಇತ್ತೀಚೆಗೆ ಉಕ್ರೇನ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧದ ಹಿನ್ನೆಲೆಯಲ್ಲಿ ಕ್ರೆಮ್ಲಿನ್ ನ  ಪ್ರಸವಪೂರ್ವ ನೀತಿಗಳು, ಆರಂಭಿಕ ಹೆರಿಗೆಗೆ ಪ್ರೋತ್ಸಾಹ ಮತ್ತು ಗರ್ಭಪಾತವನ್ನು ನಿರುತ್ಸಾಹಗೊಳಿಸುವ ಅಭಿಯಾನಗಳನ್ನು ಪುನರುಜ್ಜೀವನಗೊಳಿಸಿದವೆ.  ಹಿಂದಿನ ಸೋವಿಯತ್ ಯುಗದಲ್ಲಿ ಮಾಡುತ್ತಿದ್ದಂತೆ  ಮಿಲಿಟರಿ  ನಷ್ಟಗಳಿಗೆ ಪರಿಹಾರವಾಗಿ  ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೆರುವಂತೆ ಕೇಳಲಾಗುತ್ತಿದೆ.  ಸಮಕಾಲೀನ ರಷ್ಯಾವು ನಿರಂಕುಶಾಧಿಕಾರ ಮತ್ತು ಲಿಂಗ ಸಂಪ್ರದಾಯವಾದಕ್ಕೆ ಮರಳಿದೆ, ಅನೇಕರನ್ನು ಭ್ರಮನಿರಸನಗೊಳಿಸಿ ದೇಶಭ್ರಷ್ಟರನ್ನಾಗಿ ಮಾಡಿದೆ ಎಂಬುದನ್ನು  ಗುರುತಿಸುತ್ತಾ  ಯೋಫೀ  ಅವರ ಕೃತಿ ಮುಗಿಯುತ್ತದೆ. 

ಪುಟಿನ್ ಆಡಳಿತದಲ್ಲಿ ಮಾಧ್ಯಮಗಳ ಮೇಲಿರುವ ಬಿಗಿ ಹಿಡಿತದಿಂದಾಗಿ ರಷ್ಯಾದ ಸಧ್ಯದ ವಸ್ತುಸ್ಥಿತಿ ಹೊರಜಗತ್ತಿಗೆ ತಿಳಿಯುವುದೂ ದುಸ್ತರವಾಗಿದೆ. 

( Putin: Prisoner of Power ಎಂಬ ಪಾಡ್ ಕಾಸ್ಟ್ ಆಡಿಬಲ್ ನಲ್ಲಿ ಲಭ್ಯವಿದೆ . ಇದರಲ್ಲಿ ಈ ನಿರಂಕುಶ ಅಧಿಕಾರದಾಹಿ ವ್ಯಕ್ತಿಯು  ಅನಿರೀಕ್ಷಿತವಾಗಿ ಹಾಗೂ ಅತಿ  ಶೀಘ್ರವಾಗಿ ರಷ್ಯಾದ ಪರಮಾಧಿಕಾರವನ್ನು ಹಿಡಿದದ್ದರ ಬಗ್ಗೆ ವಿವರಗಳಿವೆ. ) 


Monday, November 24, 2025

ಓಡುವುದರ ಬಗ್ಗೆ

ಮೊನ್ನೆ  (ನವೆಂಬರ್ 22) ಚಿಕ್ಕಮಗಳೂರಿನಲ್ಲಿ  ' ಮಲ್ನಾಡ್ ಅಲ್ಟ್ರಾ' ಮ್ಯಾರಥಾನ್ ಸ್ಪರ್ಧೆ ಇತ್ತು. 50 ಕಿಮೀ ಓಟದಲ್ಲಿ ಭಾಗವಹಿಸಿ ನಿಗದಿತ ಹತ್ತು ಗಂಟೆಗಳ ಒಳಗೆ ಮುಗಿಸಿದ್ದು ಒಂದು ಒಳ್ಳೆಯ ಅನುಭವವಾಗಿತ್ತು. ಚಿಕ್ಕಮಗಳೂರಿನ ಹಸಿರು ಗುಡ್ಡಗಳಲ್ಲಿರುವ ಕಾಫಿ ತೋಟಗಳ ಒಳಗೆ ಹೆಚ್ಚಿನ ಭಾಗ ಸಾಗುವ ಈ ಓಟದ ಒಂಬತ್ತನೆ ಆವೃತ್ತಿ ಈ ವರ್ಷದ ಓಟವಾಗಿತ್ತು. ಮೊದಲ ಎರಡನ್ನು ಬಿಟ್ಟರೆ ಉಳಿದ ಎಲ್ಲ ಆವೃತ್ತಿಗಳಲ್ಲಿ ಭಾಗವಹಿಸಿದ್ದೇನೆ.

ಕಾಲೇಜಿನ ದಿನಗಳಲ್ಲಿ ಕೆಲವೊಂದು ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದದ್ದು ಬಿಟ್ಟರೆ ದೂರ  ಓಟದ   ಬಗ್ಗೆ ಹೆಚ್ಚೇನೂ ಅನುಭವವಾಗಲಿ ಮಾಹಿತಿಯಾಗಲಿ ನನಗೆ ಇರಲಿಲ್ಲ. ಈಗ ಹತ್ತು ವರ್ಷಗಳ ಕೆಳಗೆ ಓದಿದ ಪುಸ್ತಕವೊಂದು ಓಡುವುದರ ಬಗ್ಗೆ ಕುತೂಹಲ ಆಸಕ್ತಿ ಮೂಡಲು ಕಾರಣವಾಯಿತು. 

ಹಾರುಕಿ ಮುರಾಕಮಿ ಎಂಬ ಜಪಾನಿ  ಲೇಖಕ ಬರೆದ What I Talk About When I Talk About Running ( ಓಡುವುದರ ಬಗ್ಗೆ ಮಾತನಾಡುವಾಗ ನಾನು ಯಾವುದರ ಬಗ್ಗೆ ಮಾತನಾಡುತ್ತೇನೆ ) ಎಂಬ ಪುಸ್ತಕ ಅವರ  ಜೀವನದ ಕತೆಯೇ ಆಗಿದ್ದು ಅವರ  ಓಟದ ಬಗೆಗಿನ ಪ್ರೇಮ ಮತ್ತು ಅವರ  ಬರವಣಿಗೆಯ ವೃತ್ತಿ ಇವೆರಡನ್ನೂ ಕುರಿತದ್ದೇ ಆಗಿದೆ. ತಮ್ಮ  33 ನೇ ವಯಸ್ಸಿಗೆ ಓಡುವುದನ್ನು ಆರಂಭಿಸಿದ ಮುರಾಕಮಿ 2007 ರಲ್ಲಿ  ಈ ಪುಸ್ತಕ ಪ್ರಕಟವಾಗುವ ವೇಳೆಗೆ ಸುಮಾರು 25 ಮ್ಯಾರಥಾನ್ ಗಳನ್ನು ಓಡಿರುತ್ತಾರೆ .

ಓಟ ಮತ್ತು ಬರವಣಿಗೆ ಇವೆರಡು ಚಟುವಟಿಕೆಗಳ ನಡುವೆ ಇರುವ ಸಂಬಂಧದ ಬಗ್ಗೆ ಗಮನಿಸುವುದು ಈ ಪುಸ್ತಕದ ಕೇಂದ್ರ ಉದ್ದೇಶವಾಗಿದೆ.  ಇವೆರಡರಲ್ಲೂ ಏಕಾಗ್ರತೆ , ಶಿಸ್ತು , ಮತ್ತು ಸಹಿಷ್ಣುತೆ ಇವು ಮುಖ್ಯ ಗುಣಗಳಾಗಿರುವ ಬಗ್ಗೆ ಬರೆಯುತ್ತಾರೆ. ತಮ್ಮ ಓಟಗಳ ಬಗ್ಗೆ ಬರೆಯುತ್ತಲೇ ಅಂತರ್ಮುಖತೆ , ಏಕಾಂತ , ತನ್ನನ್ನು ತಾನು ಒಪ್ಪಿಕೊಳ್ಳುವ ಪ್ರಕ್ರಿಯೆ ಮುಂತಾದವನ್ನು ಶೋಧಿಸುತ್ತಾರೆ.  ಓಡುವುದಕ್ಕೆ  ಪ್ರೇರಣೆ , ಓಡುವಾಗ ದೇಹ ಮತ್ತು ಮನಸ್ಸು ಎರಡೂ ಎದುರಿಸುವ ಹೋರಾಟಗಳು,  ಮತ್ತು ಒಬ್ಬಂಟಿಯಾಗಿ ದೂರದ ಓಟದಲ್ಲಿ ತೊಡಗುವಾಗ ಸಿಗುವ ಶಾಂತಿ ಇವೆಲ್ಲದರ ಬಗೆಗೆ ತುಂಬ ಸರಳವಾಗಿ ವಿವರಿಸುತ್ತಾರೆ. ಹಾಗೆಯೇ ವಯಸ್ಸು ಮಾಡುವ ಪರಿಣಾಮಗಳು, ಓಡುವ ವೇಗ ತಗ್ಗುವುದು ಅದನ್ನು  ಒಪ್ಪಿಕೊಳ್ಳುವುದು ಮತ್ತು ಆ ಪ್ರಕ್ರಿಯೆಯನ್ನು ಜೀವನಕ್ಕೂ  ಅನ್ವಯವಾಗುವ ದರ್ಶನದಂತೆ ಕಾಣುವುದು,  ಹೀಗೆ ಓಡುವುದನ್ನು ಕುರಿತು ಮಾತನಾಡುತ್ತ ಜೀವನದ ಕುರಿತೂ ಮಾತನಾಡುತ್ತಾರೆ.  

ಒಂದು ದಿನಚರಿಯ ಶೈಲಿಯಲ್ಲಿ ಸಾಗುವ ಪುಸ್ತಕವು ಲೇಖಕರ ಪ್ರವಾಸಗಳು , ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ನಂತಹ ಓಟಗಳಿಗೆ ಅವರು ಸಿದ್ಧವಾಗುವ ಬಗೆ , ಅವರ ದೈನಂದಿನ ಅಭ್ಯಾಸಗಳು ಇತ್ಯಾದಿಗಳನ್ನೂ ಒಳಗೊಳ್ಳುತ್ತಾ ಆಸಕ್ತಿಯನ್ನು ಕಾಯುಕೊಳ್ಳುತ್ತದೆ . 

ಅಲ್ಲಿಯವರೆಗೆ ಓಡುವುದನ್ನು ಒಂದು ವೃತ್ತಿನಿರತ ಕ್ರೀಡೆಯಾಗಿಯಷ್ಟೇ  ಕಂಡಿದ್ದ ನನಗೆ ಇದೊಂದು ಸಾಮಾನ್ಯರಿಗೂ ಎಟುಕುವ ಆರೋಗ್ಯಪೂರ್ಣ ಹವ್ಯಾಸವೂ ಆಗಬಹುದೆಂದು ಅನಿಸತೊಡಗಿತು. ಓಡುವುದನ್ನು ಜೀವನಕ್ಕೊಂದು ರೂಪಕವಾಗಿ ಬಳಸಿಕೊಂಡು ಹಿಡಿದದ್ದನ್ನು ಸುಲಭವಾಗಿ ಕೈ  ಚೆಲ್ಲದಿರುವುದು , ಸ್ವತಹ ನಿರ್ಮಿಸಿಕೊಂಡ ಮಿತಿಗಳನ್ನು ವಿಸ್ತರಿಸಿಕೊಳ್ಳುವುದು,   ತನ್ನದೇ ಗುರಿಗಳನ್ನು ನಿರ್ಮಿಸಿಕೊಂಡು ಅವನ್ನು ಮೀರುವ ಸ್ಪರ್ಧೆಗಿಳಿಯುವುದು ಇವೆಲ್ಲ ಸಾಧ್ಯತೆಗಳನ್ನು ಮುರಾಕಮಿ ವಿವರಿಸುವ ರೀತಿ ತುಂಬಾ ಸ್ಫೂರ್ತಿದಾಯಕ ಅನಿಸಿತು. ಓಡುವುದನ್ನು ನಿತ್ಯಜೀವನದ ಭಾಗವಾಗಿಸಿಕೊಳ್ಳುವುದರ ಪ್ರಾಮುಖ್ಯತೆ ಮನವರಿಕೆಯಾಯಿತು. 

ಪುಸ್ತಕಗಳ ಅಗತ್ಯ, ಮಹತ್ವ ಮತ್ತು ಶಕ್ತಿಯ ಬಗ್ಗೆ ಮೊದಲಿಂದಲೂ ಯಾವುದೇ ಅನುಮಾನ ಇರದಿದ್ದರೂ ಕೆಲವು ಪುಸ್ತಕಗಳು ಆಶ್ಚರ್ಯವಾಗುವಷ್ಟು ಪರಿಣಾಮ ಬೀರುತ್ತವೆ. ಈ ಪುಸ್ತಕದ ಶೀರ್ಷಿಕೆಯು ರೇಮಂಡ್ ಕಾರ್ವರ್ ಬರೆದ What  we talk about When we talk about love ಎಂಬ ಸಣ್ಣಕತೆಯ ಶೀರ್ಷಿಕೆಯಿಂದ ಪ್ರಭಾವಿತವಾಗಿದೆ. ನಾನು ಓದಿರುವ ಅತ್ಯಂತ ಆಸಕ್ತಿಪೂರ್ಣ ಕತೆಗಳಲ್ಲಿ ಅದೂ ಒಂದು. ಅದರ ಬಗ್ಗೆ ಇನ್ನೊಂದು ದಿನ ಬರೆಯುವೆ. 

Wednesday, November 19, 2025

ಬುಕರ್ 2025 ವಿನ್ನರ್ - 'ಫ್ಲೆಷ್' by ಡೇವಿಡ್‌ ಸಲಯ್

ಈ ಸಲದ ಬುಕರ್ ಪ್ರಶಸ್ತಿ ಪಡೆದ ಕಾದಂಬರಿ ಡೇವಿಡ್‌ ಸಲಯ್  ಬರೆದ ' ಫ್ಲೆಷ್ '  ನನಗೆ ಇಷ್ಟವಾದ ಕೃತಿ. ಸಾಮಾನ್ಯವಾಗಿ ಅಮೆರಿಕನ್ ಅಥವಾ ಬ್ರಿಟಿಷ್ ಲೇಖಕರ ಕೃತಿಗಳೇ  ಇಂತಹ ಪ್ರಶಸ್ತಿಗಳಿಗೆ ಆಯ್ಕೆಯಾಗುವುದನ್ನು ನಾವು  ಕಾಣುತ್ತೇವೆ . ಹಾಗೆಯೇ ಕಾದಂಬರಿಗಳು ಈ ಎರಡು ದೇಶಗಳಲ್ಲಿಯೇ ನಡೆಯುವ ಕತೆಗಳಾಗಿರುವ ಸಾಧ್ಯತೆಯೂ ಹೆಚ್ಚು. ' ಫ್ಲೆಷ್ '  ಕೃತಿಯ ಕಾದರಂಬರಿಕಾರ ಹಂಗರಿ - ಕೆನಡ - ಬ್ರಿಟಿಷ್ ಮೂಲದವರು ಮತ್ತು ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರುವ ಇಸ್ಟ್ವಾನ್ ಸಹ ಹಂಗರಿ ಮೂಲದವನಾಗಿದ್ದು ನಂತರ ಬ್ರಿಟನ್ ನಲ್ಲಿ ವೃತ್ತಿ ಮಾಡುತ್ತಿರುವವನು.  

ಬಾಲ್ಯದಿಂದ ಮಧ್ಯವಯಸ್ಸಿನ ತನಕ ಇಸ್ಟ್ವಾನ್ ನ ಬದುಕಿನ ಕತೆ ಮತ್ತು ಈ ದಶಕಗಳಲ್ಲಿ ಅವನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏಕಾಂಗಿಯಾಗುಳಿಯುವುದರ ಶೋಧನೆ ಈ ಕೃತಿಯ ಮುಖ್ಯ ಸೆಲೆಯಾಗಿದೆ. ಇಸ್ಟ್ವಾನ್ ಮತ್ತು ಅವನ ತಾಯಿ ಹಂಗರಿಯ ಒಂದು ಪಟ್ಟಣದಲ್ಲಿ  ವಾಸ ಮಾಡಲು ತೊಡಗುತ್ತಾರೆ. ತುಂಬ ನಾಚಿಕೆಯ ಮತ್ತು ಹೆಚ್ಚು ಮಾತನಾಡದ ಸ್ವಭಾವದ ಹದಿವಯಸ್ಸಿನ ಇಸ್ಟ್ವಾನ್ ಮತ್ತು ಅವನ ನೆರೆಮನೆಯ  ವಯಸ್ಕ ಮಹಿಳೆ ದೈಹಿಕ ಸಂಬಂಧ ಹೊಂದಿರುತ್ತಾರೆ ಮತ್ತು ಒಮ್ಮೆ ಇಸ್ಟ್ವಾನ್ ಅವಳ ಮನೆಗೆ ಹೋದಾಗ ಆಕೆಯ ಗಂಡನ ಜೊತೆ ಮುಖಾಮುಖಿಯಾಗಿ ತಳ್ಳಾಟದಲ್ಲಿ ಗಂಡ ಮೆಟ್ಟಲುಗಳಿಂದ ಕೆಳಗೆ ಬಿದ್ದು ಸತ್ತು ಹೋಗುತ್ತಾನೆ. ಇಸ್ಟ್ವಾನ್ ನನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಸ್ವಲ್ಪ ಕಾಲದ ನಂತರ ಅಲ್ಲಿಂದ ಬಿಡುಗಡೆಯಾಗಿ, ಸೇನೆಯನ್ನು ಸೇರುತ್ತಾನೆ. ಇರಾಕ್ ನಲ್ಲಿ ಸೇವೆ ಸಲ್ಲಿಸುತ್ತಾನೆ. ಅಲ್ಲಿಂದ ಅವನು  ಹಂಗರಿಗೆ  ಹಿಂದಿರುಗಿದ ಮೇಲೆ ಸಮಾಜದೊಂದಿಗೆ ಬೆರೆಯಲು ಅವನಿಗೆ ಕಷ್ಟವಾಗುತ್ತದೆ. 

ಮುಂದೆ ಇಸ್ಟ್ ವಾನ್ ಲಂಡನ್ ಗೆ ಹೋಗುತ್ತಾನೆ. ಅಲ್ಲಿ ಮೊದಲು ಸೆಕ್ಯುರಿಟಿ ಕೆಲಸಕ್ಕೆ ಸೇರುತ್ತಾನೆ. ಮುಂದೆ ಶ್ರೀಮಂತನೊಬ್ಬನ ಕಾರು ಡ್ರೈವರ್ ಆಗಿ ಸೇರುತ್ತಾನೆ. ಶ್ರೀಮಂತನ ಹೆಂಡತಿಯೊಡನೆ ಸಂಬಂಧವಾಗುತ್ತದೆ. ಹಣ ಮತ್ತು ಅಧಿಕಾರಗಳು ಸಹಜ ಮೌಲ್ಯಗಳನ್ನು ಮುಕ್ಕಾಗಿಸುವ ಪರಿ ಇಲ್ಲಿ ಚಿತ್ರಿತವಾಗಿದೆ. 

ಹೀಗೇ ಮುಂದುವರಿಯುವ ಇಸ್ಟ್ವಾನ್ ನ ಬದುಕು ಅವನ ಸ್ವಂತದ ನಿರ್ಧಾರ ಯೋಜನೆಗಳಿಗಿಂತ ಅವನ ಜೀವನದಲ್ಲಿ ಬರುವ  ಬೇರೆಯವರ ಆಸೆಗಳು,  ಸಾಮಾಜಿಕ ರಿವಾಜು ವ್ಯವಸ್ಥೆಗಳು ಇವೇ ಕಾರಣಗಳನ್ನು ಹೆಚ್ಚಾಗಿ ಅವಲಂಬಿಸಿದಂತೆ ಭಾಸವಾಗುತ್ತದೆ. ಹಂಗರಿಯಿಂದ ಆರಂಭವಾಗುವ ಅವನ ಬದುಕಿನ ಪಯಣದಲ್ಲಿ  ಅವನು ಮರಳಿ ಹಂಗರಿಗೆ ಬರುವುದರೊಂದಿಗೆ  ಕಾದಂಬರಿ ಮುಗಿಯುತ್ತದೆ. 

ಇಷ್ಟೇ ಹೇಳಿದರೆ ಕಾದಂಬರಿಗೆ ನ್ಯಾಯ ಒದಗೀತೆ? ಇಲ್ಲ . ಗಮನಿಸಿದರೆ ಇನ್ನೂ ಎಷ್ಟೋ ವಿಚಾರಗಳನ್ನು ಸಲಯ್ ಕಾದಂಬರಿಯಲ್ಲಿ  ದಾಖಲಿಸಿದ್ದಾರೆ.  ಎಲ್ಲರೂ ತನ್ನನ್ನು ದೂರ ಇಟ್ಟಂತೆ ಭಾವಿಸುವ ಇಸ್ಟ್ವಾನ್, ಅವನ ಒಂದೊಂದೇ ಪದದ ಉತ್ತರಗಳು, ಇದೆಲ್ಲಾ ಕೆಲವರಲ್ಲಿ ನಾವು ಕಾಣುವ  ಒಂದು ಬಗೆಯ ವಿಮುಖತೆಯ ಲಕ್ಷಣಗಳಂತೆ ಕಾಣುತ್ತವೆ.

ಲೈಂಗಿಕ ವಾಂಛೆ, ಕೆಲವೊಮ್ಮೆ ಭಾಷೆಯಲ್ಲಿ ಸಂವಹಿಸಲಾಗಿದ ಅದರ ಅನುಭವ ತೀವ್ರತೆ, ದೈಹಿಕ ಅಗತ್ಯಗಳು ಪ್ರಚೋದಿಸುವ ಅವನ ವರ್ತನೆಗಳು, ಮತ್ತದರಿಂದಲೂ ಅವನಿಗೆ ನಿಜವಾದ ಆತ್ಮೀಯತೆ ನಿಲುಕದೇ ಹೋಗುವುದು, ಇದೆಲ್ಲವೂ  ವ್ಯಕ್ತಿಯ ಜೀವನದಲ್ಲಿ ದೈಹಿಕತೆಯ ಪಾತ್ರವನ್ನು ಕಾಣಿಸುವ ಪ್ರಯತ್ನವಾಗಿದೆ.   ಕಾದಂಬರಿಯ  ಶೀರ್ಷಿಕೆ ಸಹ ಇದನ್ನೇ ಪ್ರತಿನಿಧಿಸುವಂತಿದೆ. 

ಇನ್ನು ಇಸ್ಟ್ವಾನ್  ಹಂಗರಿಯಿಂದ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಹೋಗುವುದು, ದುಡಿಯುವ ವರ್ಗ ಮತ್ತು ಶ್ರೀಮಂತವರ್ಗಗಳಲ್ಲಿನ ಅಂತರ, ವಲಸಿಗನಾಗಿ ಎದುರಿಸುವ ಸಮಸ್ಯೆ, ಆರ್ಥಿಕವಾಗಿ ಯಶಸ್ವಿಯಾದರೂ ಸಾಮಾಜಿಕವಾಗಿ ಅವನನ್ನು ಒಪ್ಪಿಕೊಳ್ಳದ ಗಣ್ಯವರ್ಗ, ಹೀಗೆ ಯೂರೋಪಿನ ವರ್ತಮಾನದ ಬಿಕ್ಕಟ್ಟುಗಳೂ ಬಿಂಬಿತವಾಗಿವೆ. 

ಮಿತವಾದ ಪದ ಬಳಕೆ, ಚುರುಕಾಗಿ ಸಾಗುವ ನಿರೂಪಣೆ ಇವುಗಳಿಂದ  ಈ ಕಾದಂಬರಿಯು  ವೇಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. 

ಒಟ್ಟಿನಲ್ಲಿ , ಬುಕರ್ ನಂತಹ ಪ್ರತಿಷ್ಟಿತ ಪ್ರಶಸ್ತಿಗೆ ಅರ್ಹವಾದ ಕಾದಂಬರಿ ಇದೆಂದು ನನಗನಿಸಿತು. ಸಾಹಿತ್ಯದ  ಮಹತ್ವ ಇರುವುದೇ ವ್ಯಕ್ತಿ ಮತ್ತು ಸಮಾಜ ಇವೆರಡು ಮೂಲಭೂತ ಘಟಕಗಳ ಮುಖಾಮುಖಿಯನ್ನು ವಿವರಿಸುವುದರಲ್ಲಿ. ಸ್ಪಷ್ಟವಾಗಿ ರಾಜಕೀಯವಾದ ವಿವರಣೆಗೆ ಹೋಗದೆಯೂ ಯಾವುದೇ ಉತ್ತಮ ಸಾಹಿತ್ಯ ಕೃತಿಯು ತನ್ನ ಕಾಲಮಾನದ ತಲ್ಲಣಗಳನ್ನು ಕಟ್ಟಿಕೊಡಬಲ್ಲದು. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಚಿಕ್ಕಚಿಕ್ಕ ವಿಚಾರಗಳನ್ನೂ  ಸೂಕ್ಷ್ಮತೆಯಿಂದ ಗಮನಿಸುವುದು ಮತ್ತು ಅರಿಯುವುದನ್ನು  ಕಲಿಸಬಲ್ಲದು.