Wednesday, November 19, 2025

ಬುಕರ್ 2025 ವಿನ್ನರ್ - 'ಫ್ಲೆಷ್' by ಡೇವಿಡ್‌ ಸಲಯ್

ಈ ಸಲದ ಬುಕರ್ ಪ್ರಶಸ್ತಿ ಪಡೆದ ಕಾದಂಬರಿ ಡೇವಿಡ್‌ ಸಲಯ್  ಬರೆದ ' ಫ್ಲೆಷ್ '  ನನಗೆ ಇಷ್ಟವಾದ ಕೃತಿ. ಸಾಮಾನ್ಯವಾಗಿ ಅಮೆರಿಕನ್ ಅಥವಾ ಬ್ರಿಟಿಷ್ ಲೇಖಕರ ಕೃತಿಗಳೇ  ಇಂತಹ ಪ್ರಶಸ್ತಿಗಳಿಗೆ ಆಯ್ಕೆಯಾಗುವುದನ್ನು ನಾವು  ಕಾಣುತ್ತೇವೆ . ಹಾಗೆಯೇ ಕಾದಂಬರಿಗಳು ಈ ಎರಡು ದೇಶಗಳಲ್ಲಿಯೇ ನಡೆಯುವ ಕತೆಗಳಾಗಿರುವ ಸಾಧ್ಯತೆಯೂ ಹೆಚ್ಚು. ' ಫ್ಲೆಷ್ '  ಕೃತಿಯ ಕಾದರಂಬರಿಕಾರ ಹಂಗರಿ - ಕೆನಡ - ಬ್ರಿಟಿಷ್ ಮೂಲದವರು ಮತ್ತು ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರುವ ಇಸ್ಟ್ವಾನ್ ಸಹ ಹಂಗರಿ ಮೂಲದವನಾಗಿದ್ದು ನಂತರ ಬ್ರಿಟನ್ ನಲ್ಲಿ ವೃತ್ತಿ ಮಾಡುತ್ತಿರುವವನು.  

ಬಾಲ್ಯದಿಂದ ಮಧ್ಯವಯಸ್ಸಿನ ತನಕ ಇಸ್ಟ್ವಾನ್ ನ ಬದುಕಿನ ಕತೆ ಮತ್ತು ಈ ದಶಕಗಳಲ್ಲಿ ಅವನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏಕಾಂಗಿಯಾಗುಳಿಯುವುದರ ಶೋಧನೆ ಈ ಕೃತಿಯ ಮುಖ್ಯ ಸೆಲೆಯಾಗಿದೆ. ಇಸ್ಟ್ವಾನ್ ಮತ್ತು ಅವನ ತಾಯಿ ಹಂಗರಿಯ ಒಂದು ಪಟ್ಟಣದಲ್ಲಿ  ವಾಸ ಮಾಡಲು ತೊಡಗುತ್ತಾರೆ. ತುಂಬ ನಾಚಿಕೆಯ ಮತ್ತು ಹೆಚ್ಚು ಮಾತನಾಡದ ಸ್ವಭಾವದ ಹದಿವಯಸ್ಸಿನ ಇಸ್ಟ್ವಾನ್ ಮತ್ತು ಅವನ ನೆರೆಮನೆಯ  ವಯಸ್ಕ ಮಹಿಳೆ ದೈಹಿಕ ಸಂಬಂಧ ಹೊಂದಿರುತ್ತಾರೆ ಮತ್ತು ಒಮ್ಮೆ ಇಸ್ಟ್ವಾನ್ ಅವಳ ಮನೆಗೆ ಹೋದಾಗ ಆಕೆಯ ಗಂಡನ ಜೊತೆ ಮುಖಾಮುಖಿಯಾಗಿ ತಳ್ಳಾಟದಲ್ಲಿ ಗಂಡ ಮೆಟ್ಟಲುಗಳಿಂದ ಕೆಳಗೆ ಬಿದ್ದು ಸತ್ತು ಹೋಗುತ್ತಾನೆ. ಇಸ್ಟ್ವಾನ್ ನನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಸ್ವಲ್ಪ ಕಾಲದ ನಂತರ ಅಲ್ಲಿಂದ ಬಿಡುಗಡೆಯಾಗಿ, ಸೇನೆಯನ್ನು ಸೇರುತ್ತಾನೆ. ಇರಾಕ್ ನಲ್ಲಿ ಸೇವೆ ಸಲ್ಲಿಸುತ್ತಾನೆ. ಅಲ್ಲಿಂದ ಅವನು  ಹಂಗರಿಗೆ  ಹಿಂದಿರುಗಿದ ಮೇಲೆ ಸಮಾಜದೊಂದಿಗೆ ಬೆರೆಯಲು ಅವನಿಗೆ ಕಷ್ಟವಾಗುತ್ತದೆ. 

ಮುಂದೆ ಇಸ್ಟ್ ವಾನ್ ಲಂಡನ್ ಗೆ ಹೋಗುತ್ತಾನೆ. ಅಲ್ಲಿ ಮೊದಲು ಸೆಕ್ಯುರಿಟಿ ಕೆಲಸಕ್ಕೆ ಸೇರುತ್ತಾನೆ. ಮುಂದೆ ಶ್ರೀಮಂತನೊಬ್ಬನ ಕಾರು ಡ್ರೈವರ್ ಆಗಿ ಸೇರುತ್ತಾನೆ. ಶ್ರೀಮಂತನ ಹೆಂಡತಿಯೊಡನೆ ಸಂಬಂಧವಾಗುತ್ತದೆ. ಹಣ ಮತ್ತು ಅಧಿಕಾರಗಳು ಸಹಜ ಮೌಲ್ಯಗಳನ್ನು ಮುಕ್ಕಾಗಿಸುವ ಪರಿ ಇಲ್ಲಿ ಚಿತ್ರಿತವಾಗಿದೆ. 

ಹೀಗೇ ಮುಂದುವರಿಯುವ ಇಸ್ಟ್ವಾನ್ ನ ಬದುಕು ಅವನ ಸ್ವಂತದ ನಿರ್ಧಾರ ಯೋಜನೆಗಳಿಗಿಂತ ಅವನ ಜೀವನದಲ್ಲಿ ಬರುವ  ಬೇರೆಯವರ ಆಸೆಗಳು,  ಸಾಮಾಜಿಕ ರಿವಾಜು ವ್ಯವಸ್ಥೆಗಳು ಇವೇ ಕಾರಣಗಳನ್ನು ಹೆಚ್ಚಾಗಿ ಅವಲಂಬಿಸಿದಂತೆ ಭಾಸವಾಗುತ್ತದೆ. ಹಂಗರಿಯಿಂದ ಆರಂಭವಾಗುವ ಅವನ ಬದುಕಿನ ಪಯಣದಲ್ಲಿ  ಅವನು ಮರಳಿ ಹಂಗರಿಗೆ ಬರುವುದರೊಂದಿಗೆ  ಕಾದಂಬರಿ ಮುಗಿಯುತ್ತದೆ. 

ಇಷ್ಟೇ ಹೇಳಿದರೆ ಕಾದಂಬರಿಗೆ ನ್ಯಾಯ ಒದಗೀತೆ? ಇಲ್ಲ . ಗಮನಿಸಿದರೆ ಇನ್ನೂ ಎಷ್ಟೋ ವಿಚಾರಗಳನ್ನು ಸಲಯ್ ಕಾದಂಬರಿಯಲ್ಲಿ  ದಾಖಲಿಸಿದ್ದಾರೆ.  ಎಲ್ಲರೂ ತನ್ನನ್ನು ದೂರ ಇಟ್ಟಂತೆ ಭಾವಿಸುವ ಇಸ್ಟ್ವಾನ್, ಅವನ ಒಂದೊಂದೇ ಪದದ ಉತ್ತರಗಳು, ಇದೆಲ್ಲಾ ಕೆಲವರಲ್ಲಿ ನಾವು ಕಾಣುವ  ಒಂದು ಬಗೆಯ ವಿಮುಖತೆಯ ಲಕ್ಷಣಗಳಂತೆ ಕಾಣುತ್ತವೆ.

ಲೈಂಗಿಕ ವಾಂಛೆ, ಕೆಲವೊಮ್ಮೆ ಭಾಷೆಯಲ್ಲಿ ಸಂವಹಿಸಲಾಗಿದ ಅದರ ಅನುಭವ ತೀವ್ರತೆ, ದೈಹಿಕ ಅಗತ್ಯಗಳು ಪ್ರಚೋದಿಸುವ ಅವನ ವರ್ತನೆಗಳು, ಮತ್ತದರಿಂದಲೂ ಅವನಿಗೆ ನಿಜವಾದ ಆತ್ಮೀಯತೆ ನಿಲುಕದೇ ಹೋಗುವುದು, ಇದೆಲ್ಲವೂ  ವ್ಯಕ್ತಿಯ ಜೀವನದಲ್ಲಿ ದೈಹಿಕತೆಯ ಪಾತ್ರವನ್ನು ಕಾಣಿಸುವ ಪ್ರಯತ್ನವಾಗಿದೆ.   ಕಾದಂಬರಿಯ  ಶೀರ್ಷಿಕೆ ಸಹ ಇದನ್ನೇ ಪ್ರತಿನಿಧಿಸುವಂತಿದೆ. 

ಇನ್ನು ಇಸ್ಟ್ವಾನ್  ಹಂಗರಿಯಿಂದ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಹೋಗುವುದು, ದುಡಿಯುವ ವರ್ಗ ಮತ್ತು ಶ್ರೀಮಂತವರ್ಗಗಳಲ್ಲಿನ ಅಂತರ, ವಲಸಿಗನಾಗಿ ಎದುರಿಸುವ ಸಮಸ್ಯೆ, ಆರ್ಥಿಕವಾಗಿ ಯಶಸ್ವಿಯಾದರೂ ಸಾಮಾಜಿಕವಾಗಿ ಅವನನ್ನು ಒಪ್ಪಿಕೊಳ್ಳದ ಗಣ್ಯವರ್ಗ, ಹೀಗೆ ಯೂರೋಪಿನ ವರ್ತಮಾನದ ಬಿಕ್ಕಟ್ಟುಗಳೂ ಬಿಂಬಿತವಾಗಿವೆ. 

ಮಿತವಾದ ಪದ ಬಳಕೆ, ಚುರುಕಾಗಿ ಸಾಗುವ ನಿರೂಪಣೆ ಇವುಗಳಿಂದ  ಈ ಕಾದಂಬರಿಯು  ವೇಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. 

ಒಟ್ಟಿನಲ್ಲಿ , ಬುಕರ್ ನಂತಹ ಪ್ರತಿಷ್ಟಿತ ಪ್ರಶಸ್ತಿಗೆ ಅರ್ಹವಾದ ಕಾದಂಬರಿ ಇದೆಂದು ನನಗನಿಸಿತು. ಸಾಹಿತ್ಯದ  ಮಹತ್ವ ಇರುವುದೇ ವ್ಯಕ್ತಿ ಮತ್ತು ಸಮಾಜ ಇವೆರಡು ಮೂಲಭೂತ ಘಟಕಗಳ ಮುಖಾಮುಖಿಯನ್ನು ವಿವರಿಸುವುದರಲ್ಲಿ. ಸ್ಪಷ್ಟವಾಗಿ ರಾಜಕೀಯವಾದ ವಿವರಣೆಗೆ ಹೋಗದೆಯೂ ಯಾವುದೇ ಉತ್ತಮ ಸಾಹಿತ್ಯ ಕೃತಿಯು ತನ್ನ ಕಾಲಮಾನದ ತಲ್ಲಣಗಳನ್ನು ಕಟ್ಟಿಕೊಡಬಲ್ಲದು. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಚಿಕ್ಕಚಿಕ್ಕ ವಿಚಾರಗಳನ್ನೂ  ಸೂಕ್ಷ್ಮತೆಯಿಂದ ಗಮನಿಸುವುದು ಮತ್ತು ಅರಿಯುವುದನ್ನು  ಕಲಿಸಬಲ್ಲದು.

Monday, November 10, 2025

ದಿ ಲೋನ್ಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ

ಈ ವರ್ಷದ ಬೂಕರ್ ಗೆ ಶಾರ್ಟ್ ಲಿಸ್ಟ್ ಆಗಿರುವ ಎಲ್ಲ ಆರು ಕಾದಂಬರಿಗಳು ಉತ್ಕೃಷ್ಟ ಗುಣಮಟ್ಟದ್ದವಾಗಿದ್ದು ಯಾವುದಕ್ಕೆ ಪ್ರಶಸ್ತಿ ಬರುತ್ತದೆ ಎಂದು ಊಹಿಸುವುದು ಕಷ್ಟ. ಅಂತಿಮ ಪಟ್ಟಿ ಘೋಷಣೆಯಾದ ಮೇಲೆ ಕಳೆದ ಒಂದೂವರೆ ತಿಂಗಳಲ್ಲಿ ಎಲ್ಲ ಆರು ಕಾದಂಬರಿಗಳನ್ನು ಓದಿದ ಮೇಲೆ ನನಗನಿಸಿದ್ದು ಇದು.  ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ಘೋಷಣೆಯಾಗಲಿದೆ. 

ಗೆಲ್ಲಲೆಂದು ನಾನು ಬಯಸುತ್ತಿರುವ, ಭಾರತೀಯ ಸಂಜಾತೆ ಕಿರಣ್ ದೇಸಾಯಿ ಅವರ "ದಿ ಲೋನ್ಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ" ಹಲವಾರು  ವಿಮರ್ಶಕರ ಮನ್ನಣೆ ಗಳಿಸಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರುವುದು ನಿಜವಾದರೂ ಗೆಲುವು ನಿಶ್ಚಯವಿಲ್ಲ. ಸೂಸನ್ ಚೊಯ್ ಅವರು ಬರೆದಿರುವ "ಫ್ಲಾಶ್ ಲೈಟ್" ಗೆದ್ದರೂ ಗೆಲ್ಲಬಹುದು. ಅಮೇರಿಕ, ಜಪಾನ್, ಸೌತ್ ಕೊರಿಯಾ ಗಳನ್ನು ಒಳಗೊಳ್ಳುವ  ಕಾದಂಬರಿ ಬಹುತೇಕ 'ಫ್ಲಾಶ್ ಬ್ಯಾಕ್' ನಲ್ಲಿ ನಿರೂಪಿತಗೊಳ್ಳುತ್ತದೆ. ಒಂದು ರಾಜಕೀಯ ಥ್ರಿಲ್ಲರ್ ನಂತೆ ವೇಗದ ಶೈಲಿ ಹೊಂದಿದ್ದರೂ ಇದು ನಿರೂಪಿಸುವ  ವಲಸಿಗರ ಅನುಭವ, ಕೊರಿಯಾ-ಜಪಾನ್ ನ ಯುದ್ಧದಲ್ಲಿ ನಡುವೆ ಸಿಲುಕಿದ ಕುಟುಂಬವೊಂದರ ಕತೆ, ಇವೆಲ್ಲ ಎಳೆಗಳನ್ನೂ ಅತ್ಯಂತ ನಾಜೂಕಾಗಿ ಹೆಣೆದಿರುವ ಬಗೆ  ಇವೆಲ್ಲದರಿಂದ ಇಷ್ಟವಾಗುತ್ತದೆ. ಇನ್ನುಳಿದ ನಾಲ್ಕರಲ್ಲಿ ಒಂದು ಕಾದಂಬರಿ ಈ ವರ್ಷದ ಬೂಕರ್ ಗದ್ದುಗೆ ಏರಿದರೂ ನನಗಂತೂ ಬೇಸರವಾಗುವುದಿಲ್ಲ.

ಕಿರಣ್ ದೇಸಾಯಿಯವರು  ತಮ್ಮ ೨೦೦೬ರ ಕೃತಿ 'ಇನ್‌ಹೆರಿಟೆನ್ಸ್ ಆಫ್ ಲಾಸ್" ಗೆ ಬೂಕರ್ ಪ್ರಶಸ್ತಿ ಗಳಿಸಿದ್ದರು  . 'ಇನ್‌ಹೆರಿಟೆನ್ಸ್ ' ನನಗೆ ಬಹಳ ಇಷ್ಟವಾಗಿದ್ದ ಕಾದಂಬರಿ.  ನ್ಯೂಯಾರ್ಕ್ ನಗರ ಮತ್ತು ದಾರ್ಜಿಲಿಂಗ್ ಗಳಲ್ಲಿ ಕೇಂದ್ರಿತವಾಗಿತ್ತು. ವಲಸಿಗರ ಅನುಭವಗಳು  ಹಾಗೂ ಏಕಾಂಗಿತನದ ಅವಸ್ಥೆ ಇವನ್ನು ಮುಖ್ಯ ಕಾಳಜಿಗಳಾಗಿ ಉಳ್ಳ ಕತಾವಸ್ತು ಆ ಕಾದಂಬರಿಯದಾಗಿತ್ತು. ನೆನಪಿಸಿಕೊಂಡಷ್ಟೇ ಈಗಲೂ ಡಾರ್ಜಿಲಿಂಗಿನ ಮಂಜು ಸುರಿಯುವ ಮಬ್ಬುಗತ್ತಲೆಯ ದೃಶ್ಯ ಕಣ್ಣ ಮುಂದೆ ಬರುತ್ತದೆ.

ಕಿರಣ್ ದೇಸಾಯಿ ಅವರ ಹೊಸ ಕಾದಂಬರಿಯು ಹಿಂದಿನ  ಕಾದಂಬರಿಗಿಂತ ಬಹಳ ವಿಸ್ತಾರವಾದ  ಕಾಲ ಹಾಗೂ ಸ್ಥಳಗಳನ್ನು ಒಳಗೊಂಡಿದೆ. ವಿವಿಧ ಪಾತ್ರಗಳ ಜೀವನದ ಸಣ್ಣ ವಿವರಗಳನ್ನು ಒಳಗೊಳ್ಳುತ್ತದೆ. 

600 ಕ್ಕೂ ಹೆಚ್ಚು  ಪುಟಗಳ ಈ ಕಾದಂಬರಿ ಆರಂಭವಾಗುವುದು  ಸೋನಿಯಾ ಶಾ ಮತ್ತು ಸನ್ನಿ  ಭಾಟಿಯಾ ಅವರ ಕುಟುಂಬಗಳ ಮತ್ತು ಅವರ ಪೋಷಕರ ಆಪ್ತ ವಲಯಗಳ ವಿವರಗಳೊಂದಿಗೆ. ವರ್ಗ, ಧರ್ಮ, ಲಿಂಗ ಮತ್ತು ವಲಸೆ ಈ ಎಲ್ಲಾ ಅಂಶಗಳು ಪ್ರತಿ  ಪಾತ್ರದ ಮೇಲೆ ಹೇರುವ ಭಾರ,  ಬೀರುವ ಪ್ರಭಾವ  ಇವು ಪ್ರಕಟವಾಗುವ  ಬಗೆಯು ಕಾದಂಬರಿಯ ಶಕ್ತಿ.  ಬಹುತೇಕ ಎಲ್ಲ ಪಾತ್ರಗಳ ಆಂತರಿಕ ಚಿಂತನೆಗಳಿಗೂ ಅವರ ಕಾದಂಬರಿಗಳಲ್ಲಿ ಜಾಗವಿದೆ. 

90ರ ಮಧ್ಯಭಾಗದಿಂದ 2000 ದ ಆರಂಭದವರೆಗೂ ಕತೆ ಜರುಗುತ್ತದೆ. ಅಮೆರಿಕೆಯ ವರ್ಮಾಂಟ್ ನಲ್ಲಿ ವಿದ್ಯಾರ್ಥಿಯಾಗಿರುವ ಸೋನಿಯಾ  ಬಗ್ಗೆ ಅವಳ ತಂದೆ ದೆಹಲಿಯಿಂದ ತಮ್ಮ  ಪೋಷಕರಿಗೆ (ದಾದಾಜಿ ಮತ್ತು ಬಾ) ಕರೆ ಮಾಡಿ ಅವಳು ಅಮೆರಿಕೆಯಲ್ಲಿ ಏಕಾಕಿತನವನ್ನು ಅನುಭವಿಸುತ್ತಿರುವುದಾಗಿ ಹೇಳುತ್ತಾರೆ. ದಾದಾಜಿ ಅಲಹಾಬಾದ್ನಲ್ಲಿ ತನ್ನ ನೆರೆಹೊರೆಯವರಾದ  ಮತ್ತು ತಮ್ಮೊಂದಿಗೆ ಚೆಸ್ ಆಡುವ ಭಾಟಿಯಾಗೆ ಪತ್ರ  ಬರೆಯುತ್ತಾರೆ. ಭಾಟಿಯಾ ಅವರ  ಮೊಮ್ಮಗ ಸನ್ನಿಗೆ ಸೋನಿಯಾಳೊಂದಿಗೆ  ಮದುವೆಯ  ಪ್ರಸ್ತಾವನೆಯನ್ನು ದಾದಾಜಿ ಮಾಡುತ್ತಾರೆ—ಅವನು  ನ್ಯೂಯಾರ್ಕ್ ನಗರದಲ್ಲಿ ಪತ್ರಕರ್ತನಾಗಿದ್ದು ಆಸೋಸಿಯೇಟೆಡ್ ಪ್ರೆಸ್‌ನಲ್ಲಿ ಕೆಲಸ  ಗಟ್ಟಿ ಮಾಡಿಕೊಳ್ಳುವ  ಪ್ರಯತ್ನದಲ್ಲಿರುತ್ತಾನೆ.

ಸೋನಿಯಾ ಮತ್ತು ಸನ್ನಿ ಮೊದಲು  ಹೇಗೆ ಭೇಟಿಯಾಗುತ್ತಾರೆ ಮತ್ತು ನಂತರ ಮತ್ತೆ ಹೇಗೆ ಭೇಟಿಯಾಗುತ್ತಾರೆ ಎಂಬುದು ಕಥೆಯೊಳಗಿನ ಎಳೆ. ಸೋನಿಯಾ ತನ್ನ ಒಂಟಿತನವನ್ನು ಕಳೆಯಲು ಮೊದಲು ಭೇಟಿಯಾಗುವುದು  ಸನ್ನಿಯನ್ನಲ್ಲ.  ಯಶಸ್ವಿ   ಚಿತ್ರಕಲಾವಿದನಾದರೂ ತುಂಬ ಸ್ವಾರ್ಥಿಯಾದ  ಇಲಾನ್‌ನನ್ನು ಅವಳು ಭೇಟಿಯಾಗುತ್ತಾಳೆ. ಅವನು  ಅವಳನ್ನು  ತನ್ನ ಸಂಗಾತಿಯಾಗಿಸಿಕೊಳ್ಳುತ್ತಾನೆ.  ಆದರೆ ಅದು ಆರೋಗ್ಯಕರವಾದ  ಸಂಬಂಧವಾಗಿರುವುದಿಲ್ಲ ಮತ್ತು  ಕೆಟ್ಟದಾಗಿ  ಕೊನೆಗೊಳ್ಳುತ್ತದೆ.

ಸೋನಿಯಾ  ಭಾರತಕ್ಕೆ ವಾಪಸ್ಸಾಗುತ್ತಾಳೆ, ಅಲ್ಲಿ ಮಹಿಳೆಯಾಗಿ, ಭಾರತೀಯಳಾಗಿ, ತನ್ನ ಮೇಲಿನ ಶತಮಾನಗಳ ಪ್ರಭಾವ ಮತ್ತು ಪೂರ್ವಾಗ್ರಹಗಳನ್ನು  ಅರಿತುಕೊಳ್ಳುವ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ, ಮತ್ತು ಕಲಾವಿದಳಾಗಿ ತನ್ನ ಧ್ವನಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ತನ್ನ ಸ್ವಂತದ  ಇಷ್ಟದಂತೆ ಬದುಕಲು ಕಲಿಯುತ್ತಾಳೆ. ದೆಹಲಿ, ವರ್ಮಾಂಟ್, ಅಲಹಾಬಾದ್,  ಮೆಕ್ಸಿಕೊ, ಗೋವಾ,  ಇಟಲಿ  ಹೀಗೆ ಕತೆಯ ಹಂದರ  ಹಲವು ಸ್ಥಳಗಳನ್ನು ವ್ಯಾಪಿಸಿದೆ.     

ದೇಸಾಯಿ ಎರಡು ದಶಕಗಳ ಕಾಲ "The Loneliness of Sonia and Sunny" ಮೇಲೆ ಕೆಲಸ ಮಾಡಿದ್ದಾರೆ. ವಿಭಿನ್ನ ಪಾತ್ರಗಳ ಒಳತೋಟಿಗಳು, ಒಬ್ಬಂಟಿತನ ಎಲ್ಲವನ್ನೂ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.   ಹಿಂದಿನ  ಕಾದಂಬರಿಯಂತೇ ಇಲ್ಲೂ  ಅನೇಕ ರಾಜಕೀಯದ ವಿಚಾರಗಳೂ ಕತಾ ನಿರೂಪಣೆಯ ಭಾಗವಾಗಿ ಸೂಕ್ತವಾಗಿ ಮತ್ತು ಮಾರ್ಮಿಕವಾಗಿ ಪ್ರಸ್ತಾಪಿಸಲ್ಪಟ್ಟಿವೆ. ದೆಹಲಿಯಲ್ಲಿ ಸಿಖ್ ಜನರ  ಹತ್ಯೆ, ಅಯೋಧ್ಯೆಯ ಬಾಬರಿ ಮಸೀದಿಯ ಧ್ವಂಸ, ನ್ಯೂಯಾರ್ಕ್ ನ  9/11,  ಹೀಗೆ ಅನೇಕ ಘಟನೆಗಳು ಕತೆಯ ಭಾಗವಾಗಿವೆ. 

ಒಂದು ಉತ್ತಮ ಕಾದಂಬರಿಯನ್ನು ಓದುವುದೆಂದರೆ ನಮ್ಮನ್ನೇ ಮತ್ತು ನಮ್ಮ ಸುತ್ತಲಿನ ಜಗತ್ತನ್ನೇ ಇನ್ನೊಂದು ಕೋನದಿಂದ ನೋಡಿದಂತೆ. ಸಂವೇದನೆ ಮತ್ತು ಸೂಕ್ಷ್ಮತೆ ಬೆರೆತ ದೃಷ್ಟಿ ಕೃತಿಕಾರರದ್ದಾದರೆ ನಮ್ಮ ಗ್ರಹಿಕೆಗೆ ಸಿಕ್ಕಿರದ ಎಷ್ಟೋ ವಿವರಗಳನ್ನು ಪಡೆದಂತೆ.    

Thursday, November 06, 2025

ಕನ್ನಡವೆಂದರೆ ಬರಿ ನುಡಿಯಲ್ಲ

"ಕರ್ನಾಟಕವೆನ್ನುವುದು ಸಮಾನತೆ, ಸೌಹಾರ್ದತೆಗಳ ಪರಂಪರೆಯುಳ್ಳ ನಾಡು. 'ಕನ್ನಡವಾಗಿರುವುದು' ಮತ್ತು 'ಕನ್ನಡತನ' ಹೊಂದಿರುವುದೆಂದರೆ, ಭಾಷೆಯ ಜೊತೆಗೆ ಈ ಪರಂಪರೆಯನ್ನು ಹೃದಯಸ್ಥ ಮಾಡಿಕೊಂಡು ಬೆಳೆಸಬೇಕು. ಇಲ್ಲದಿದ್ದರೆ, ಕನ್ನಡಪರ ಪ್ರತಿಪಾದನೆಯು ಅಪೂರ್ಣವಾಗುತ್ತದೆ."  (ಕನ್ನಡ ರಾಜ್ಯೋತ್ಸವ ದಿನದಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಬರಗೂರು ರಾಮಚಂದ್ರಪ್ಪನವರ "ಕನ್ನಡವಾಗಿರುವುದು ಎಂದರೆ..." ಎಂಬ ಲೇಖನದ ಸಾಲುಗಳು.)

ಕುವೆಂಪು ಅವರ ಎರಡು ಕವನಗಳ ಸಾಲುಗಳಲ್ಲಿ ಕನ್ನಡದ ಪರಂಪರೆ  ಬಿಂಬಿತವಾಗಿರುವುದನ್ನು ಲೇಖಕರು ಪ್ರಸ್ತಾಪಿಸುತ್ತಾರೆ. 

ಕನ್ನಡದ ಐಡೆಂಟಿಟಿಯ ಪರಿಕಲ್ಪನೆಯಲ್ಲೇ ಭಿನ್ನ ಅಭಿಪ್ರಾಯಗಳು ಇರಬಹುದು. 

ಡಿ. ಆರ್ . ನಾಗರಾಜ್ ಅವರ 'ಸಾಹಿತ್ಯ ಕಥನ' (ಲೇಖನ ಸಂಗ್ರಹ)ದಲ್ಲಿ 'ಕನ್ನಡ ರಾಷ್ಟ್ರೀಯತೆಯ ಸ್ವರೂಪ' ಎಂಬ  ಲೇಖನದಲ್ಲಿ 'ಕನ್ನಡತ್ವ ಮತ್ತು ಕರ್ನಾಟಕತ್ವ'ಗಳ  ಪರಿಕಲ್ಪನೆಯಲ್ಲೇ ಭಿನ್ನ ಚಿಂತನೆಗಳು ಇರುವುದನ್ನು ಗುರುತಿಸಲಾಗಿದೆ. ಒಂದೆಡೆ, ಡಾ. ಎಂ. ಚಿದಾನಂದ ಮೂರ್ತಿಯವರು ತಮ್ಮ  'ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ" ಎಂಬ ಕೃತಿಯಲ್ಲಿ  ಪ್ರತಿಪಾದಿಸುವ  'ಅನ್ಯರಿಂದ ಕನ್ನಡಿಗ ನಾಶವಾಗುತ್ತಿದ್ದಾನೆ; ಅನ್ಯರಿಂದ ಕನ್ನಡ ಭಾಷೆ ನಿರ್ನಾಮವಾಗುತ್ತಿದೆ' ಎಂಬ ಆತಂಕ (ಇದನ್ನು ನಾಗರಾಜ್ 'ಆತಂಕಕೇಂದ್ರಿತ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ); ಇನ್ನೊಂದೆಡೆ ಆಲೂರು ವೆಂಕಟರಾಯರ 'ಕರ್ನಾಟಕತ್ವದ ವಿಕಾಸ' ಕೃತಿಯಲ್ಲಿ  ಕನ್ನಡ ರಾಷ್ಟ್ರೀಯತೆ ಮತ್ತು 'ಹಿಂದುತ್ವ'ದ ನಡುವಿನ ಸಂಬಂಧದ ಸ್ಪಷ್ಟ ಉಲ್ಲೇಖ ( ನಾಗರಾಜ್  ಇದನ್ನು 'ಆಧ್ಯಾತ್ಮಿಕ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ). ಕನ್ನಡ ಸಂಸ್ಕೃತಿಗೆ ಹಿಂದುಯೇತರ ಜನಾಂಗಗಳ ಕೊಡುಗೆಯ ಪ್ರಸ್ತಾಪ ಆಲೂರರಲ್ಲೂ, ಚಿದಾನಂದ ಮೂರ್ತಿ ಅವರಲ್ಲೂ ಇಲ್ಲದೇ ಇರುವುದನ್ನು ನಾಗರಾಜ್ ಗುರುತಿಸುತ್ತಾರೆ. ಕನ್ನಡ ರಾಷ್ಟ್ರೀಯತೆಯು ಹಲವು ಗುರುತುಗಳನ್ನು (multiple identities) ಒಳಗೊಂಡಿರಬೇಕು ಎಂದು ಡಿ. ಆರ್. ನಾಗರಾಜ್ ಅವರು ಪ್ರತಿಪಾದಿಸುತ್ತಾರೆ.  

ಮತ್ತೆ ಬರಗೂರರ ಲೇಖನಕ್ಕೆ ಹಿಂದಿರುಗುವುದಾದರೆ, ಅವರು ಪ್ರಸ್ತಾಪಿಸುವ ಕುವೆಂಪು ರವರ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸಾಲಾಗಲೀ, 'ಕವಿರಾಜಮಾರ್ಗ'ದಲ್ಲಿ ಪ್ರತಿಪಾದಿಸಿರುವ 'ಪರವಿಚಾರ ಮತ್ತು ಪರಧರ್ಮವನ್ನು ಸಹಿಸುವುದೇ ನಿಜವಾದ ಬಂಗಾರ' ಎನ್ನುವುದಾಗಲೀ , ಆದಿಕವಿ ಪಂಪನ 'ಮಾನವ ಜಾತಿ ತಾನೊಂದೆ ವಲಂ' ಸಾಲಾಗಲೀ...  ಇವೆಲ್ಲವೂ ಪ್ರಬಲವಾಗಿ  ಪ್ರತಿಪಾದಿಸುವುದು ಈ ನೆಲದ ಒಳಗೊಳ್ಳುವಿಕೆ ಮತ್ತು ಸೌಹಾರ್ದತೆಗಳನ್ನೇ. 

ಕುವೆಂಪು ಅವರ  ಇನ್ನೊಂದು ಕವನದಲ್ಲಿ ಈ ಸಾಲುಗಳಿವೆ-
ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ


ಕನ್ನಡವಾಗಿರುವುದು ಎಂದರೆ ಇದೇ ಅಲ್ಲವೇ.  

Wednesday, October 29, 2025

ಮುಸೋಲಿನಿ : ನಿರಂಕುಶಾಧಿಕಾರದ ಕರಾಳ ಮುಖ

 "ಪ್ರಜಾಪ್ರಭುತ್ವವು ಸುಂದರವಾಗಿದೆ. ಅದು ನಿಮಗೆ ಸಾಕಷ್ಟು ಸ್ವಾತಂತ್ರ್ಯಗಳನ್ನು ನೀಡುತ್ತದೆ. ಅದನ್ನು ನಾಶಮಾಡುವ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ" - ಮುಬಿ  ಓಟಿಟಿ ವೇದಿಕೆಯಲ್ಲಿ ಕಳೆದ ಎಂಟು ವಾರಗಳಿಂದ ಸ್ಟ್ರೀಮ್ ಆದ "ಮುಸೋಲಿನಿ: ಸನ್ ಆಫ್ ದಿ ಸೆಂಚುರಿ" ಎಂಬ ವೆಬ್ ಸರಣಿಯಲ್ಲಿ ಒಂದು ಎಪಿಸೋಡ್ ನಲ್ಲಿ ಮುಸೋಲಿನಿ ಹೇಳುವ ಮಾತಿದು. 2018 ರಲ್ಲಿ ಪ್ರಕಟವಾದ  ಆಂಟೋನಿಯೊ ಸ್ಕುರಾಟಿ  ಬರೆದ ಇದೇ ಹೆಸರಿನ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಸರಣಿಯಾದರೂ ನಿರ್ದೇಶಕ ಜೋ ರೈಟ್ ಇದನ್ನು ಒಂದು ಸಾಮಾನ್ಯ ನಾಟಕವನ್ನು ಮೀರಿದ ಕೃತಿಯನ್ನಾಗಿಸಲು ಕೆಲವು ತಂತ್ರಗಳನ್ನು ಬಳಸಿದ್ದಾರೆ. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ ಮುಖ್ಯ ಪಾತ್ರವಾದ ಮುಸೋಲಿನಿ ಗುಂಪಿನಲ್ಲಿ ಬೇರೆ ಜನರೊಡನೆ ಓಡಾಡುತ್ತಿರುವಾಗಲೇ ವೀಕ್ಷಕರೊಡನೆ (ಅಂದರೆ ನಮ್ಮೊಡನೆ) ನೇರವಾಗಿ ಮಾತನಾಡುವುದು ಅಂತಹ ಒಂದು ತಂತ್ರ. ಒಂದು ದೀರ್ಘವಾದ ಸ್ವಗತದಲ್ಲಿ ತನ್ನ ಬಗ್ಗೆ ಆತ ಹೇಳಿಕೊಳ್ಳುವುದು ಅವನ ಮಾನಸಿಕತೆಯನ್ನು ಅರಿಯಲು ಸಹಾ ಮಾಡುತ್ತದೆ. 

ಈ ಸರಣಿಯು 1920 ರಿಂದ 1945ರ ನಡುವೆ ಇಟಲಿಯಲ್ಲಿ ನಡೆದ ವಿದ್ಯಮಾನಗಳ  ರಕ್ತಸಿಕ್ತ ಇತಿಹಾಸದ  ನಾಟಕವಷ್ಟೇ  ಅಲ್ಲ , ಇದು ನಿರಂಕುಶಾಧಿಕಾರದ (authoritarianism) ಆಕರ್ಷಕ ಶಕ್ತಿಯ ಕುರಿತಾದ ಎಚ್ಚರಿಕೆಯ ಕಥೆಯೂ  ಆಗಿದೆ. ಲೂಕಾ ಮೆರಿನೆಲ್ಲಿ  ಎಂಬ ಇಟಾಲಿಯನ್  ನಟ ಮುಸೋಲಿನಿಯ   ಪಾತ್ರವನ್ನು ಅದ್ಭುತವಾಗಿ  ನಿರ್ವಹಿಸಿದ್ದಾರೆ. 

ಈ ಸರಣಿಗೆ ಆಧಾರವಾಗಿರುವ ಪುಸ್ತಕದ ಕರ್ತೃ ಸ್ಕುರಾಟಿ  ಪುಸ್ತಕವನ್ನು ಐತಿಹಾಸಿಕ ಸಾಕ್ಷ್ಯಚಿತ್ರ ಎಂದು ವಿವರಿಸುತ್ತಾರೆ, ಐತಿಹಾಸಿಕ ಕಾದಂಬರಿ ಎಂದಲ್ಲ. ಅಂದರೆ ಇದರಲ್ಲಿರುವ ಬಹುಪಾಲು ಘಟನೆಗಳು ವಾಸ್ತವದಲ್ಲಿ ನಡೆದ ಘಟನೆಗಳೇ ಆಗಿವೆ. 

ಮುಸೊಲಿನಿ ತನ್ನ ಫ್ಯಾಸಿಸ್ಟ್ ಆಡಳಿತವನ್ನು ಸ್ಥಾಪಿಸುವ ಮೂಲಕ ಇಟಲಿಯಲ್ಲಿದ್ದ ಸಂಸದೀಯ ಪ್ರಜಾಪ್ರಭುತ್ವವನ್ನು ಹೇಗೆ ದುರ್ಬಲಗೊಳಿಸಿದ ಎಂಬುದನ್ನು ಸರಣಿಯು ವಿವರವಾಗಿ ತೋರಿಸುತ್ತದೆ. 

1914-1918 ರ ಮೊದಲನೇ ಜಾಗತಿಕ ಮಹಾಯುದ್ಧವಾದ ಮೇಲೆ ಇಟಲಿಯಲ್ಲಿ ಬಡತನ, ನಿರುದ್ಯೋಗ, ಹತಾಶೆ ತುಂಬಿದ್ದವು. ಇದನ್ನು ಬಳಸಿಕೊಂಡು ಗದ್ದುಗೆಗೆ ಏರಲು ಮುಸೋಲಿನಿ ಯೋಜನೆ ರೂಪಿಸುತ್ತಾನೆ.  ಅವನಂತೆಯೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕೆಲವರನ್ನು ಸೇರಿಸಿ ಒಂದು ಗೂಂಡಾ ಪಡೆಯನ್ನು ಸೃಷ್ಟಿಸಿ ವಿರೋಧಿಗಳನ್ನು ಅಂಗವಿಕಲಗೊಳಿಸಲು, ಕೊಲ್ಲಲು ಮತ್ತು ಬೆದರಿಸಲು ಬಳಸುತ್ತಾನೆ. 'ಇಟಾಲಿಯನ್ ಫಾಸ್ಸಿಸ್ ಆಫ್ ಕಾಂಬ್ಯಾಟ್' (Italian Fasces of Combat) ಎಂಬ ಹೆಸರಿನ ಈ ಗುಂಪು  ಚರ್ಚ್, ರಾಜಪ್ರಭುತ್ವ, ಅಂದಿನ ಇಟಾಲಿಯನ್ ರಾಜ್ಯ ಮತ್ತು ಚುನಾವಣೆಗಳ ಪರಿಕಲ್ಪನೆಯ ವಿರುದ್ಧ ನಿಲ್ಲುತ್ತದೆ ಎಂದು ಮುಸೊಲಿನಿ ಘೋಷಿಸುತ್ತಾನೆ. 1921 ರಲ್ಲಿ ಡೆಪ್ಯೂಟಿಗಳ ಚೇಂಬರ್‌ಗೆ ಚುನಾಯಿತರಾಗಲು, ಅವರು ಭೂಮಾಲೀಕರು ಮತ್ತು ವ್ಯಾಪಾರಸ್ಥರಂತಹ ಬೂರ್ಜ್ವಾ ಸಮಾಜದ ಅಂಶಗಳೊಂದಿಗೆ ಕೈಜೋಡಿಸುತ್ತಾರೆ.

ಮುಸೊಲಿನಿಯ ಅಧಿಕಾರದ ಏರಿಕೆಗೆ ಆಳುವ ವರ್ಗಗಳ ನ್ಯೂನತೆಗಳು ಕಾರಣ ಎಂದು ಸರಣಿಯು ಒತ್ತಿಹೇಳುತ್ತದೆ. 1922 ರ 'ಮಾರ್ಚ್ ಆನ್ ರೋಮ್' (March on Rome) ಒಂದು ಸಾಮೂಹಿಕ ಪ್ರದರ್ಶನವಾಗಿದ್ದರೂ, ಅದರ ಹಿಂದಿನ ಶಕ್ತಿ ಅಷ್ಟೇನೂ  ಪ್ರಬಲವಾಗಿರುವುದಿಲ್ಲ; ಮುಸೊಲಿನಿ ವಾಸ್ತವವಾಗಿ ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಸಿದ್ಧನಾಗಿರುತ್ತಾನೆ. ಆದರೂ, ರಾಜ ವಿಕ್ಟರ್ ಎಮ್ಯಾನುಯೆಲ್ III ಯು   ಪ್ರಧಾನ ಮಂತ್ರಿ ಲೂಯಿಗಿ ಫ್ಯಾಕ್ಟಾ ನ  ಮಾರ್ಷಲ್ ಲಾ (martial law) ಘೋಷಣೆಗೆ ಸಹಿ ಹಾಕಲು ನಿರಾಕರಿಸುತ್ತಾನೆ. ಜನರಲ್ ಗಳು ತನ್ನ ವಿರುದ್ಧ ಬಂಡೇಳಬಹುದು ಎನ್ನುವ ಭಯ ಅವನಿಗಿರುತ್ತದೆ. ನಂತರ ರಾಜನು ಮುಸೊಲಿನಿಯನ್ನು ಪ್ರಧಾನ ಮಂತ್ರಿಯಾಗಿ ನೇಮಿಸುತ್ತಾನೆ, ಫ್ಯಾಸಿಸ್ಟರು ಸಂಸತ್ತಿನಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹ. ಈ ನಡುವೆ ಪ್ರಜಾಪ್ರಭುತ್ವದ ಸಮರ್ಥಕ ಮ್ಯಾಟಿಯೊಟಿ ಎನ್ನುವವನನ್ನು ಫ್ಯಾಸಿಸ್ಟರ ಗುಂಪು ಬರ್ಬರವಾಗಿ ಹತ್ಯೆಗೈಯುತ್ತದೆ. ಆದಾಗ್ಯೂ ಕೆಲವೇ ವಾರಗಳಲ್ಲಿ, ಸಂಸತ್ತು ಮುಸೊಲಿನಿಗೆ ಸರ್ವಾಧಿಕಾರಿ ಅಧಿಕಾರವನ್ನು ನೀಡಲು ಮತ ಹಾಕುತ್ತದೆ. 

ಈ ಸರಣಿಯನ್ನು ನೋಡುವಾಗ ಹಿಂದೆ ಓದಿದ್ದ ವಿಲಿಯಮ್ ಶೈರರ್  ಬರೆದ  'ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಖ್' (The Rise and Fall of the Third Reiche) ಕೃತಿ ನೆನಪಿಗೆ ಬಂತು. ಆರಂಭದಲ್ಲಿ ಹಿಟ್ಲರ್ ಸಹ ಇಟಲಿಯಲ್ಲಿ ಮುಸೋಲಿನಿ ಅಧಿಕಾರಕ್ಕೆ ಬಂದ ಮಾದರಿಯನ್ನು ಮೆಚ್ಚಿದ್ದನು ಎಂದು ಈ ಪುಸ್ತಕದಲ್ಲಿ ಓದಿದ್ದು ನೆನಪಿದೆ. 

ಹಾಗೆಯೇ, ಮ್ಯಾಡೆಲಿನ್ ಆಲ್ ಬ್ರೈಟ್ ಬರೆದ  'ಫ್ಯಾಸಿಸಂ: ಎ ವಾರ್ನಿಂಗ್ ' (Fascism: A Warning) ಸಹ ಅನೇಕ ದೇಶಗಳಲ್ಲಿ  ಜನತಂತ್ರ ವ್ಯವಸ್ಥೆ ಎದುರಿಸುವ ಅಪಾಯಗಳು, ಯಾವುದೇ ಉತ್ತಮ ಪರ್ಯಾಯವನ್ನೂ ಒದಗಿಸದೆಯೇ ಅಸ್ತಿತ್ವದಲ್ಲಿರುವ ಜನತಂತ್ರದ ಸಂಸ್ಥೆಗಳು ಮತ್ತು ತತ್ವಗಳನ್ನು ಹಾಳುಗೆಡವುವ ಅಹಂಕಾರಿ ನಾಯಕರುಗಳು ಮುಂತಾದ ವಿಚಾರಗಳನ್ನು ಚರ್ಚಿಸುತ್ತದೆ.  ರಾಜಕೀಯ ಸಹಭಾಗಿತ್ವ, ಸಂವಾದ, ವೈಚಾರಿಕತೆ, ಸತ್ಯ, ಇವೆಲ್ಲವುಗಳೂ ಮಾಯವಾಗುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ. ನಾವು ಅವಮಾನಪಡಬೇಕಾದ ಮುಸೋಲಿನಿ, ಹಿಟ್ಲರ್, ಸ್ಟಾಲಿನ್, ಮಿಲೋಸೆವಿಚ್, ಪುಟಿನ್ ಮುಂತಾದ ನಿರಂಕುಶಾಧಿಕಾರಿಗಳ ಬಗ್ಗೆ ಮತ್ತು ನಾವು ನೆನೆಯಬೇಕಾದ ಲಿಂಕನ್, ಕಿಂಗ್, ಗಾಂಧಿ, ಮಂಡೇಲಾ ರಂತಹ ಶ್ರೇಷ್ಟ ನಾಯಕರ ಬಗ್ಗೆಯೂ ಪುಸ್ತಕದಲ್ಲಿದೆ. 

'ಮುಸೋಲಿನಿ' ಸರಣಿಯಾಗಲಿ, ಮೇಲೆ ಪ್ರಸ್ತಾಪಿಸಿದ ಪುಸ್ತಕಗಳಾಗಲಿ, ಇವತ್ತಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಕೆಲವರನ್ನು ಹೊರಗಿಡುವ (exclusionary), ಕಿರಿದಾದ, ಅಸಹಿಷ್ಣುತೆಯ ದೇಶಭಕ್ತಿಯ ಪರಿಕಲ್ಪನೆಯನ್ನು ವಿರೋಧಿಸಲು, ರಾಷ್ಟ್ರೀಯತಾವಾದಿ ಮತಾಂಧತೆಯನ್ನು ಎದುರಿಸಲು, ಬಹುತ್ವವಾದಿ ದೇಶಭಕ್ತಿಯ ಪರ್ಯಾಯ ಪರಿಕಲ್ಪನೆಯನ್ನು ಮುಂದಿಡಬೇಕಾಗಿದೆ.  ಆಗ ಮಾತ್ರ ಮತಾಂಧತೆ ಮತ್ತು ಫ್ಯಾಸಿಸಂನಿಂದ ರಾಷ್ಟ್ರವನ್ನು ಉಳಿಸಬಹುದು  

ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮುಸೋಲಿನಿಯ ಇಟಲಿ, ಹಿಟ್ಲರ ನ ಜರ್ಮನಿಗಳ ಉದಾಹರಣೆಗಳು ಇದ್ದೇ ಇವೆ.    

Monday, October 13, 2025

ಧಡಕ್ 2 - ಬಾಲಿವುಡ್ ನಲ್ಲೊಂದು ಡಿಫರೆಂಟ್ ಸಿನಿಮಾ

ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿ, ಜಾತಿ (caste) ಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವುದು ಬಹಳ ಕಡಿಮೆ. ಸಮಕಾಲೀನ ಹಿಂದಿ ಸಿನಿಮಾಗಳನ್ನು ಮಾತ್ರ ನೋಡಿದರೆ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ "ಮುಗಿದುಹೋಗಿದೆ" ಎಂದುಕೊಳ್ಳುವಷ್ಟು ಅದರ ಅವಗಣನೆ ಕಾಣುತ್ತದೆ. "ಮಸಾನ್" ನಂತಹ ಚಿತ್ರ ಬಂದು ಹೋಗಿ ಹತ್ತು ವರ್ಷಗಳ ಕಾಲವೇ ಆಗಿದೆ. ಇದೀಗ ಮತ್ತೊಮ್ಮೆ ಅದೇ ನೀರಜ್ ಗೈವಾನ್  ಅವರ ನಿರ್ದೇಶನದ  "ಹೋಂಬೌನ್ಡ್ " ಎಂಬ ಚಿತ್ರ ಸಹ ಜಾತಿ ಸಮಸ್ಯೆಯ ಕುರಿತಾಗಿದ್ದು ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿ ಇದೀಗ ಚಿತ್ರ ಮಂದಿರಗಳಲ್ಲಿ ಬಂದಿದೆ. ಕೆಲವೇ ದಿನಗಳಲ್ಲಿ ಓಟಿಟಿ ಗೂ ಬರಲಿದೆ. 

ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ "ಧಡಕ್ 2" ಚಿತ್ರವು  ಭಾರತೀಯ ಸಮಾಜದ ಅತಿರೇಕದ ಜಾತಿ ವಿಭಜಿತ ಮನಸ್ಥಿತಿಯ ವಿಕಾರವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದೆ.  ಬಾಲಿವುಡ್ ನ ಅತಿರಂಜಿತ ಕಥಾವಸ್ತುಗಳ ಚಿತ್ರಗಳ ನಡುವೆ, ಅಂತರ-ಜಾತಿ ಸಂಬಂಧದ  ಈ ಚಿತ್ರವು  ವಾಸ್ತವಿಕ  ಚಿತ್ರವಾಗಿ ಮೂಡಿಬಂದಿದೆ. ಶಜಿಯಾ ಇಕ್ಬಾಲ್ ಅವರ ಚೊಚ್ಚಲ ನಿರ್ದೇಶನದ  ಈ ಚಿತ್ರವು 2018 ರ ತಮಿಳು ಭಾಷೆಯ ಚಲನಚಿತ್ರವಾದ Pariyerum Perumal (ಪರಿಯೇರುಮ್ ಪೆರುಮಾಳ್) ನ ರಿಮೇಕ್ ಆಗಿದೆ, ಇದು ಜಾತಿ ಹಿಂಸಾಚಾರ ಮತ್ತು ಪೂರ್ವಾಗ್ರಹದ ಕಥೆಯನ್ನು ತಮಿಳುನಾಡಿನಿಂದ ಹಿಂದಿಯ  ಹೃದಯಭಾಗಕ್ಕೆ ಕೊಂಡೊಯ್ದಿದೆ.

ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಮೇಲ್ಜಾತಿಯ  ಮಹಿಳೆ ವಿಧಿಶಾ ಭಾರದ್ವಾಜ್ ಮತ್ತು ದಲಿತ ನೀಲೇಶ್ ಅಹಿರ್ವಾರ್ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ಚಿತ್ರ ಅನ್ವೇಷಿಸುತ್ತದೆ. ನೀಲೇಶ್ ಮತ್ತು ವಿಧಿ ಒಂದು ಮದುವೆಯಲ್ಲಿ ಭೇಟಿಯಾಗುತ್ತಾರೆ. ನೀಲೇಶ್  ಬ್ಯಾಂಡ್‌ ಒಂದರಲ್ಲಿ ಡ್ರಮ್ಮರ್ ಆಗಿರುತ್ತಾನೆ.  ಕಾಲೇಜಿನಲ್ಲಿ, ನೀಲೇಶ್ ಭಾರತದ ಮೀಸಲಾತಿ  ವ್ಯವಸ್ಥೆಯ ಮೂಲಕ ತನ್ನ ಸೀಟು ಪಡೆದಿರುತ್ತಾನೆ. ಮತ್ತು ಆ  ಕಾರಣಕ್ಕಾಗಿ ತನ್ನ ಸುತ್ತಲಿರುವ ಹೆಚ್ಚಿನ ಮೇಲ್ಜಾತಿಯ ಸಹಪಾಠಿಗಳಿಂದ ಅವಮಾನವನ್ನು ಎದುರಿಸುತ್ತಿರುತ್ತಾನೆ.  ಸಂಯಮದಿಂದ ವರ್ತಿಸುವ  ನೀಲೇಶ್ ನ  ಸ್ನೇಹವನ್ನು  ಬಯಸಿ ವಿಧಿ ಅವನನ್ನು ಹಿಂಬಾಲಿಸುತ್ತಾಳೆ.

ನೀಲೇಶ್ ಮತ್ತು ವಿಧಿ ಇಬ್ಬರ ನಿಕಟತೆಯು ವಿಧಿಯ ಕುಟುಂಬದ ಕೋಪಕ್ಕೆ ಕಾರಣವಾಗುತ್ತದೆ. ವಿಧಿ ತನ್ನ ಕುಟುಂಬದ ಆಳವಾದ ಪೂರ್ವಾಗ್ರಹದ ಬಗ್ಗೆ ಅರಿವಿಲ್ಲದೆ ನೀಲೇಶ್‌ನನ್ನು ಕುಟುಂಬದ ಮದುವೆಗೆ ಆಹ್ವಾನಿಸುತ್ತಾಳೆ, ಅಲ್ಲಿ ಆಕೆಯ ಕುಟುಂಬವು ನೀಲೇಶ್‌ನನ್ನು ಅವಮಾನಿಸಿ ತೀವ್ರವಾಗಿ ಥಳಿಸುತ್ತದೆ.

ಈ ಪ್ರೀತಿಯ ಸಂಬಂಧವು ನೀಲೇಶ್‌ಗೆ ಅಪಾಯಕಾರಿಯಾಗಿರುತ್ತದೆ. ಮೇಲ್ನೋಟಕ್ಕೆ ಅತ್ಯಾಧುನಿಕವಾಗಿ ಕಂಡರೂ ವಿಧಿ ಯ  ಕುಟುಂಬದವರು ಈ  ಅಂತರ-ಜಾತಿ ಸಂಬಂಧದಿಂದ ಕುಟುಂಬದ ಹೆಸರಿಗೆ ಅಪಮಾನವಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಇದು  ಸೃಷ್ಟಿಸುವ ಸ್ಫೋಟಕ  ಸನ್ನಿವೇಶವನ್ನು ಚಿತ್ರಿಸಿರುವುದು  ಪರಿಣಾಮಕಾರಿಯಾಗಿದೆ. ಸಂಭಾಷಣೆಗಳು ಸಹ ಚೆನ್ನಾಗಿವೆ. ಚಿತ್ರದ ಅಂತ್ಯ ಸಹ ಸ್ವಲ್ಪ ವಿಭಿನ್ನವಾಗಿದೆ. 

ಚಿತ್ರದಲ್ಲಿ ಒಂದೆಡೆ ವಿಧಿ ಹೇಳುತ್ತಾಳೆ - 'ಇದೆಲ್ಲ (ಜಾತಿವಾದ) ಮುಗಿದು ಹೋದ ವಿಚಾರ ಎಂದು ನಾನೆಣಿಸಿದ್ದೆ'. ಅದಕ್ಕೆ ನೀಲೇಶ್‌ ಹೇಳುತ್ತಾನೆ- "ಅದನ್ನು ಅನುಭವಿಸದವರಿಗೆ ಹಾಗೆ ಅನಿಸುತ್ತದೆ". ಚಿತ್ರೋದ್ಯಮವನ್ನು ನಿಯಂತ್ರಿಸುವವರೂ ಜಾತಿವಾದದ ಸಂಕಷ್ಟವನ್ನು ಸ್ವಯಂ ಅನುಭವಿಸದ ಕಾರಣಕ್ಕೇ  ಇಂತಹ ಕಥಾವಸ್ತುಗಳ ಆಯ್ಕೆಯಲ್ಲಿ ಹಿಂಜರಿಯುತ್ತಿರಬಹುದೇನೋ.   ಅಥವಾ ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರ  ಅಸಮಾಧಾನಕ್ಕೆ ಗುರಿಯಾಗುವ ಭಯವೂ ಇರಬಹುದೇನೋ. 

ಜಾತಿವಾದವು ಸ್ವಾತಂತ್ರ್ಯ ಬಂದ ಮೇಲಿನ ಏಳು ದಶಕಗಳ ನಂತರವೂ ಹಾಗೆಯೇ ಮುಂದುವರೆದಿದೆ. ಕನ್ನಡದ ವಿಶಿಷ್ಟ ಲೇಖಕ, ಪತ್ರಕರ್ತ ಲಂಕೇಶ್ ಅವರು ಜಾತೀಯತೆಯ ಬಗ್ಗೆ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆಯುತ್ತಾರೆ- "ನಮ್ಮ  ದೇಶದ ಜಾತೀಯತೆಯ ಜೊತೆಗೆ ಎಲ್ಲ ದೇಶಗಳ ಜಾತೀಯತೆಯ ಸಣ್ಣತನ, ಕೇಡಿತನ, ನನ್ನನ್ನು ಚಿಂತೆಗೀಡುಮಾಡಿದೆ. ನಾವು ಬೆಳೆದಂತೆಲ್ಲ, ಸುಶಿಕ್ಷಿತರಾದಂತೆಲ್ಲ ಯಾಕೆ ಮಾನವೀಯತೆ, ಜಾತ್ಯತೀತತೆ, ವಿನೋದ, ವ್ಯಾಮೋಹ ವೃದ್ಧಿಯಾಗುವುದಿಲ್ಲ ಎಂದು ಕೇಳಿಕೊಳ್ಳುತ್ತಿದ್ದೇನೆ..." ಅವರು ಇದನ್ನು ಬರೆದಿದ್ದು 1995 ರಲ್ಲಿ. ನಂತರದ ಈ ಮೂವತ್ತು ವರ್ಷಗಳಲ್ಲಿ ಬದಲಾವಣೆಯೇನೂ ಆದಂತೆ ಅನಿಸುವುದಿಲ್ಲ. 

ಅದೇನೇ ಇರಲಿ, ಕೇವಲ ಸಿದ್ಧ ಸೂತ್ರಗಳನ್ನು ಅವಲಂಬಿಸಿದ ಚಿತ್ರಗಳನ್ನೇ ನಿರ್ಮಿಸದೆ, ಸಾಮಾಜಿಕ ಪ್ರಸ್ತುತತೆಯಿರುವ ಕಥೆಗಳತ್ತಲೂ ಬಾಲಿವುಡ್ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. 


Tuesday, October 07, 2025

ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆ


"ಈ ದೇಶದಲ್ಲಿ ಯಾರನ್ನು ಕೇಳಿದರೂ ಕಥೆ ಹೇಳುತ್ತಾರೆ. ಅದೂ ಆ ಕಥೆ ನಡೆಯುವಾಗ ಎದುರಿಗೆ ಇದ್ದೆ ಅನ್ನುವಂತೆ ಹೇಳುತ್ತಾರೆ. ನಮಗೆ ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾಗಿ ಕೆಲವು ಕಥೆಗಳು ಸಂವಿಧಾನದ ಜಾಗ ಆಕ್ರಮಿಸಿಕೊಳ್ಳುತ್ತಿವೆ."  

"ಈ ನೆಲದಲ್ಲಿ ಕಥೆಗಳನ್ನು ಹುಟ್ಟಿಸಿ, ಸಾಕಿ, ಅವು ಬಲಿಷ್ಠವಾದ ಮೇಲೆ ಸಾಮಾನ್ಯರ ಮೇಲೆ ಛೂ ಬಿಡುವ ತಂಡಗಳೇ ಇವೆ." 

ಸೆ. ೩೦ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ನಟರಾಜ ಬೂದಾಳು ಅವರ  "ನಮ್ಮನ್ನು ಆಳುತ್ತಿರುವ ಕಥೆಗಳು " ಎಂಬ ಲೇಖನವು  ಕಥಾ ರಾಜಕಾರಣದ (Story Politics) ಕುರಿತು ವಿಶ್ಲೇಷಣೆಯನ್ನು ನೀಡುತ್ತದೆ. ಇದು ಅತ್ಯಂತ ಗಂಭೀರ ವಿಚಾರವಾಗಿದೆ. 

ಕಥೆಗಳನ್ನು ಕಥೆಗಳಾಗಿ ಓದುವ, ಅಥವಾ ಕೇಳುವ, ಪರಿಜ್ಞಾನ ಇದ್ದರೆ,  ಕಲ್ಪಿತ  ಕಥೆಗಳು ಉಪಯುಕ್ತವೇ ಆಗುತ್ತವೆ. ಅದಿಲ್ಲದಿದ್ದಾಗ ಕಥೆಗಳು ದುಷ್ಟರ ರಾಜಕೀಯ ದಾಳಗಳಾಗುತ್ತವೆ. ಇದು  ವಿಷಾದದ ಸಂಗತಿ. ಯಾಕೆಂದರೆ ಕಲ್ಪಿತ ಕಥೆಗಳು, ಅವು ಪುರಾಣವೇ ಆಗಲಿ, ಜಾನಪದವೇ ಆಗಲಿ, ಒಳ್ಳೆಯದನ್ನು ಉದ್ದೀಪನಗೊಳಿಸುವ ಉದ್ದೇಶ ಹೊಂದಿರುತ್ತವೆ. ಅಹಂಕಾರವನ್ನು ತೊಡೆಯುವುದು, ಸಹಾನುಭೂತಿಯನ್ನು ಬೆಳೆಸುವುದು, ನಿರಾಶೆಯ ಸ್ಥಿತಿಯಲ್ಲಿರುವಾಗ ಆಶಾಭಾವನೆಯನ್ನು ಮೂಡಿಸುವುದು, ಇತ್ಯಾದಿ.  ಆದರೆ ಅವನ್ನು ವಾಸ್ತವವೆಂದು ನಂಬುವುದು ಅಪಾಯಕ್ಕೆ ದಾರಿ.

 ಒಂದೆಡೆ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ "ಕಥೆ"ಗಳನ್ನು ನಂಬುವವರು ಹೆಚ್ಚುತ್ತಿದ್ದಾರೆ. ಇದು ಅಮೆರಿಕದಂತಹ ದೇಶಗಳನ್ನೂ ಬಿಟ್ಟಿಲ್ಲ. ಜಾರ್ಜ್ ಆರ್ ಆರ್ ಮಾರ್ಟಿನ್ ಬರೆದ "ಗೇಮ್ ಆಫ್ ಥ್ರೋನ್ಸ್ " ನಲ್ಲಿ ಬರುವ ಈ ಸಾಲುಗಳನ್ನು ನೋಡಿ- There is nothing in the world more powerful than a good story. Nothing can stop it. No enemy can defeat it. (ಕಥೆಗಿಂತ ಶಕ್ತಿಶಾಲಿಯಾಗಿರುವುದು ಈ ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಯಾವುದೂ ಇದನ್ನು ತಡೆಯಲಾಗದು. ಯಾವ ಶತ್ರುವೂ ಇದನ್ನು ಸೋಲಿಸಲಾಗದು. ) ಟ್ರಂಪ್ ತರಹದ ಅವಿವೇಕಿಗಳು ರಾಷ್ಟ್ರದ ಗದ್ದುಗೆಗೆ ಬರುವುದು ಸುಳ್ಳು"ಕಥೆ"ಗಳ ಶಕ್ತಿಗೆ ಸಾಕ್ಷಿ.


 

Monday, September 22, 2025

ಚೀನಾ ಎಂಬ ಒಗಟು

ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಮತ್ತು ವಾಯು ಸಂಪರ್ಕವನ್ನು ಪುನರಾರಂಭಿಸಲು ನಿರ್ಧರಿಸಿದರು.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಎರಡು ನೆರೆಹೊರೆಯವರ ನಡುವಿನ ಮಾರಣಾಂತಿಕ ಗಡಿ ಘರ್ಷಣೆಯ ಐದು ವರ್ಷಗಳ ನಂತರ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ “ಭಾರತವು ಗಡಿ ಸಮಸ್ಯೆಗಳನ್ನು ಕಡೆಗಣಿಸಬೇಕೇ?“ ಎಂಬ ವಿಷಯದ ಕುರಿತು ಹಿಂದು ಪತ್ರಿಕೆಯ ‘ಇನ್ ಫೋಕಸ್’ ಪಾಡ್ಕಾಸ್ಟ್ನಲ್ಲಿ ಒಂದು ಆಸಕ್ತಿಕರ ಸಂವಾದ ಇತ್ತು.

ಕಳೆದ ಎಪ್ಪತ್ತೈದು ವರ್ಷಗಳ ಭಾರತ-ಚೀನಾ ಸಂಬಂಧವನ್ನು ಅವಲೋಕಿಸುವುದಾದರೆ, ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹಲವು ಏರಿಳಿತಗಳನ್ನು ಕಂಡಿದೆ. ನಡುನಡುವೆ ಕೆಲವೊಮ್ಮೆ ಉಭಯ ದೇಶಗಳ ನಾಯಕರ ನಡುವೆ ಸಾಮಾನ್ಯ ರೀತಿಯ ಸಂವಾದ ಸಂಪರ್ಕಗಳು ಕಂಡು ಬಂದಿದ್ದರೂ ಒಂದು ಬಗೆಯ ಸುಪ್ತ ಅಪನಂಬಿಕೆ ಅನುಮಾನಗಳು ಎರಡೂ ದೇಶದ ಜನರಲ್ಲೂ ಮುಂದುವರಿದೇ ಇದೆ.

ಚೀನಾ ಕುರಿತು ನನ್ನ ಅಭಿಪ್ರಾಯ ರೂಪಿಸುವಲ್ಲಿ ನಾನು ಓದಿದ ಕೆಲವು ಪುಸ್ತಕಗಳು ಮುಖ್ಯ ಪಾತ್ರ ವಹಿಸಿವೆ ಎನ್ನಬಹುದು.

INDIA AFTER GANDHI (2007)

ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬರೆದ ಈ ಕೃತಿಯು ಎರಡು ದೇಶಗಳೂ ಆರಂಭದಿಂದಲೂ ಹೊಂದಿದ್ದ ಸಂಬಂಧದ ವಿವರಗಳನ್ನು ಒದಗಿಸುತ್ತದೆ. ಹಾಗೆಯೇ ಮುಂದಿನ ದಶಕಗಳಲ್ಲಿ ಈ ಎರಡೂ ನೆರೆಹೊರೆ ದೇಶಗಳಲ್ಲಿ ಏರ್ಪಟ್ಟ ಗಡಿ ವಿವಾದದ ವಿವರಗಳನ್ನೂ ಒದಗಿಸುತ್ತದೆ.

ಐತಿಹಾಸಿಕವಾಗಿ ಭಾರತ ಮತ್ತು ಚೀನಾ ಸುದೀರ್ಘವಾದ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದವು. ಭಾರತವು 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರವಾದ ಬೆನ್ನಲ್ಲೇ ಚೀನಾದಲ್ಲಿ 1949 ರಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದರು.

ಅಕ್ಟೋಬರ್ 1950 ರಲ್ಲಿ, ಚೀನಾ ಟಿಬೆಟ್ ಅನ್ನು ಆಕ್ರಮಿಸಿ ಸೇರಿಸಿಕೊಂಡಿತು. ಭಾರತವು ಟಿಬೆಟ್‌ನೊಂದಿಗೆ ನಿಕಟ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿತ್ತು, ಆದರೆ ಹೊಸದಾಗಿ ಸ್ವತಂತ್ರಗೊಂಡ ಭಾರತವು ಟಿಬೆಟ್ ಪರವಾಗಿ ಯುದ್ಧ ಮಾಡಲು ಸಾಧ್ಯವಿರಲಿಲ್ಲ.

1954 ರಲ್ಲಿ, ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಅಧಿಕೃತವಾಗಿ ಗುರುತಿಸಿತು ಮತ್ತು ಪರಸ್ಪರ ಆಕ್ರಮಣಶೀಲವಲ್ಲದ ಮತ್ತು ಪ್ರಾದೇಶಿಕ ಸಮಗ್ರತೆಗೆ ಪರಸ್ಪರ ಗೌರವ ಸೇರಿದಂತೆ ಐದು ತತ್ವಗಳ ಶಾಂತಿಯುತ ಸಹಬಾಳ್ವೆಗೆ (ಪಂಚಶೀಲ) ಸಹಿ ಹಾಕಿತು.

ಆದಾಗ್ಯೂ, ಭಾರತೀಯ-ಚೀನೀ ಗಡಿ ವಿವಾದಗಳು ಉದ್ಭವಿಸಿದವು. ಪೂರ್ವದಲ್ಲಿ, ಮ್ಯಾಕ್ಮೋಹನ್ ಲೈನ್ ಗಡಿಯನ್ನು ವ್ಯಾಖ್ಯಾನಿಸಿದರೆ, ಚೀನೀಯರು ಈ ಗೆರೆಯನ್ನು ಸಾಮ್ರಾಜ್ಯಶಾಹಿ ಹೇರಿಕೆ ಎಂದು ಪರಿಗಣಿಸಿದರು.

ಮಾರ್ಚ್ 1959 ರಲ್ಲಿ, ಚೀನೀ ಆಕ್ರಮಣಕಾರರ ವಿರುದ್ಧ ಟಿಬೆಟ್‌ನಲ್ಲಿ ದಂಗೆ ನಡೆದ ನಂತರ, ದಲೈ ಲಾಮ ಅವರು ಭಾರತಕ್ಕೆ ಪಲಾಯನ ಮಾಡಿ ರಾಜಕೀಯ ಆಶ್ರಯ ಪಡೆದರು. ಈ ಘಟನೆಯು ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಇನ್ನಷ್ಟು ಹದಗೆಡಿಸಿತು.

1959 ರಲ್ಲಿ ಗಡಿ ಘರ್ಷಣೆಗಳು (ಲಾಂಗ್ಜು ಮತ್ತು ಕೊಂಗ್ಕಾ ಪಾಸ್) ನಡೆದ ನಂತರ, ನೆಹರೂ ಸರ್ಕಾರವು ಚೀನಾದೊಂದಿಗಿನ ಪತ್ರವ್ಯವಹಾರವನ್ನು ಒಳಗೊಂಡ ಶ್ವೇತಪತ್ರವನ್ನು (White Paper) ಬಿಡುಗಡೆ ಮಾಡಿತು, ಇದು ಚೀನಾದ ಪ್ರಾದೇಶಿಕ ಹಕ್ಕುಗಳ ವ್ಯಾಪ್ತಿಯ ಬಗ್ಗೆ ಭಾರತೀಯ ಸಂಸತ್ತಿನಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಏಪ್ರಿಲ್ 1960 ರಲ್ಲಿ, ಚೌ ಎನ್-ಲೈ ದೆಹಲಿಯಲ್ಲಿ ನೆಹರೂ ಅವರನ್ನು ಭೇಟಿಯಾದರು. ಚೌ ಅವರು ಗಡಿ ವಿವಾದವನ್ನು ಕೊನೆಗೊಳಿಸಲು ಒಂದು ರೀತಿಯ “ಸಂಧಾನ ಸೂತ್ರ” (compromise) ವನ್ನು ಪ್ರಸ್ತಾಪಿಸಿದರು, ಇದರ ಅಡಿಯಲ್ಲಿ ಭಾರತವು ಪೂರ್ವದಲ್ಲಿ (ಮ್ಯಾಕ್ಮೋಹನ್ ಲೈನ್ ದಕ್ಷಿಣದಲ್ಲಿ, ಟವಾಂಗ್ ಸೇರಿದಂತೆ) ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಬೇಕು ಮತ್ತು ಚೀನಾವು ಪಶ್ಚಿಮದಲ್ಲಿ (ಅಕ್ಸಾಯ್ ಚಿನ್ ಸೇರಿದಂತೆ, ಅಲ್ಲಿ ರಸ್ತೆ ನಿರ್ಮಿಸಲಾಗಿತ್ತು) ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಬೇಕು. ಚೌ ಈ ಮಾರ್ಗವನ್ನು ಟಿಬೆಟ್‌ಗೆ ಪ್ರವೇಶಿಸಲು ಅಗತ್ಯವೆಂದು ಪರಿಗಣಿಸಿದರು.

ನೆಹರೂ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು, ಏಕೆಂದರೆ ಈ ಪ್ರಸ್ತುತ ‘ಯಥಾಸ್ಥಿತಿ’ (status quo) ಯು ಚೀನಾ ಅಕ್ರಮವಾಗಿ ಮತ್ತು ಕದ್ದು ಪಡೆದ ಲಾಭಗಳನ್ನು ನ್ಯಾಯಸಮ್ಮತಗೊಳಿಸುತ್ತದೆ ಎಂದು ಅವರು ವಾದಿಸಿದರು. ಮಾತುಕತೆಗಳು ವಿಫಲವಾದವು.

ಭಾರತವು ಬ್ರಿಟಿಷ್ ಸಾಮ್ರಾಜ್ಯದ ಪರಂಪರೆಯನ್ನು ಸಮರ್ಥಿಸಿದರೆ, ಚೀನಾವು 1949 ರ ಮೊದಲು ಟಿಬೆಟ್ ಅಥವಾ ಚೀನಾ ಪರವಾಗಿ ಮಾತುಕತೆ ನಡೆಸಿದ ಯಾವುದೇ ಒಪ್ಪಂದಗಳನ್ನು ಸ್ವೀಕರಿಸಲು ನಿರಾಕರಿಸಿತು.

1962 ರ ಜುಲೈ ಮೂರನೇ ವಾರದಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ನಡುವೆ ಘರ್ಷಣೆಗಳು ಸಂಭವಿಸಿದವು. ಭಾರತದ ದೌರ್ಬಲ್ಯಗಳು ಬಹಿರಂಗವಾದ ನಂತರ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ (ಬ್ರಿಟನ್, ಅಮೆರಿಕ, ಫ್ರಾನ್ಸ್ ಮತ್ತು ಕೆನಡಾ) ಶಸ್ತ್ರಾಸ್ತ್ರ ಸಹಾಯವನ್ನು ಕೋರಿತು ಮತ್ತು ಪಡೆಯಿತು. ನವೆಂಬರ್ 22 ರಂದು ಚೀನಿಯರು ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿ, ಈಶಾನ್ಯ ಗಡಿ ಪ್ರದೇಶದಲ್ಲಿ (NEFA) ಮೆಕ್‌ಮೋಹನ್ ಲೈನ್‌ನ ಉತ್ತರಕ್ಕೆ ಹಿಂತೆಗೆದುಕೊಂಡರು. ಈ ಯುದ್ಧವು ಭಾರತಕ್ಕೆ ಭಾರಿ ಸೋಲು ಎನಿಸಿತು.

ಅಲ್ಲಿಂದ ಈಚೆಗೆ ಗಡಿ ವಿವಾದವು ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಒಂದು ನಿರಂತರ ಉಪಸ್ಥಿತಿಯಾಗಿ ಉಳಿದಿದೆ.

SMOKE AND MIRRORS (2008)

ಪಲ್ಲವಿ ಅಯ್ಯರ್ ಅವರು ಬರೆದ ಈ ಕೃತಿಯು ಆತ್ಮಕತೆ, ಪ್ರವಾಸಿ ಕಥನ, ರಾಜಕೀಯ ವಿಶ್ಲೇಷಣೆ ಈ ಎಲ್ಲ ಅಂಶಗಳನ್ನೂ ಒಳಗೊಂಡಿದ್ದು ಚೀನಾ ಬಗ್ಗೆ ಹೆಚ್ಚೇನೂ ಗೊತ್ತೇ ಇರದ ಭಾರತೀಯರಿಗೆ ಆ ದೇಶದ ಮತ್ತು ಜನರನ್ನು ಪರಿಚಯಿಸಲು ಸಹಕಾರಿಯಾಗಿದೆ. ಈ ಕೃತಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಬ್ಲಾಗಿನಲ್ಲಿ ದಾಖಲಿಸಿದ್ದೇನೆ.

INDIA AND ASIAN GEOPOLITICS (2021)

ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ರಚಿಸಿದ ಈ ಕೃತಿಯು ಭಾರತದ ಭೌಗೋಳಿಕ ರಾಜಕೀಯ ಸನ್ನಿವೇಶವನ್ನು ವಿಶ್ಲೇಷಿಸುವ ಕೃತಿಯಾಗಿದ್ದು, ಕೆಲವು ಅಧ್ಯಾಯಗಳು ಚೀನಾದ ವಿಷಯಕ್ಕೇ ಸಂಬಂಧಿಸಿವೆ.

2008 ರ ನಂತರ, ಏಷ್ಯಾದಲ್ಲಿ ಪ್ರಾಬಲ್ಯಕ್ಕಾಗಿ ಪ್ರಯತ್ನಿಸುತ್ತಿರುವ ಚೀನಾ, ತನ್ನ ನೆರೆಹೊರೆಯವರ ಮೇಲೆ (ಜಪಾನ್, ವಿಯೆಟ್ನಾಂ, ಇತ್ಯಾದಿ) ಒತ್ತಡ ಹೇರುವ ಮತ್ತು ಯುಎಸ್‌ನೊಂದಿಗೆ “ಹೊಸ ರೀತಿಯ ಪ್ರಮುಖ ಶಕ್ತಿಯ ಸಂಬಂಧ” ವನ್ನು ಪ್ರಸ್ತಾಪಿಸುವ ದ್ವಿಮುಖ ತಂತ್ರವನ್ನು ಅನುಸರಿಸಿತು. ಇದಕ್ಕೆ ಪ್ರತಿಯಾಗಿ, ಅಮೆರಿಕವು ಏಷ್ಯಾದತ್ತ ಮುಖ ಮಾಡಿತು, ಮತ್ತು ಭಾರತ, ಜಪಾನ್, ವಿಯೆಟ್ನಾಂ ಮುಂತಾದ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಹೆಚ್ಚಿಸಿ ಅನೌಪಚಾರಿಕ ಒಕ್ಕೂಟಗಳನ್ನು ರಚಿಸಿದವು. ಈ ಆರಂಭಿಕ ಹಿನ್ನಡೆಗೆ ಪ್ರತಿಕ್ರಿಯೆಯಾಗಿ ಚೀನಾ 2012 ರಲ್ಲಿ ತನ್ನ ತಂತ್ರವನ್ನು ವಿಶಾಲವಾದ ತಂತ್ರಕ್ಕೆ ಮರುಹೊಂದಿಸಿತು. ಇದು 2013 ರ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ನಲ್ಲಿ (ಒಂದು ಪಟ್ಟಿ-ಒಂದು ರಸ್ತೆ) ಪರಿಣಮಿಸಿದೆ ಕಾಣಿಸುತ್ತದೆ.

ಚೀನಾ ತನ್ನ ಆರ್ಥಿಕ ಮತ್ತು ರಾಜಕೀಯ ಪಾತ್ರವನ್ನು ಬಿಟ್ಟು ಕೊಡದೆ ಇರಲು ಮಿಲಿಟರಿ ಶಕ್ತಿಯನ್ನು ಅವಲಂಬಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಮೂರು ದಶಕಗಳ ಬಜೆಟ್ ಬೆಳವಣಿಗೆಯ ನಂತರ ರಾಷ್ಟ್ರೀಯ ಬಲವರ್ಧನೆಯ ಸಾಧನದಿಂದ ಶಕ್ತಿ ಪ್ರದರ್ಶನಾ ಸಾಧನವಾಗಿ ರೂಪಾಂತರಗೊಂಡಿದೆ.

ಆಂತರಿಕವಾಗಿ, ಚೀನಾದ ಆರ್ಥಿಕ ಬೆಳವಣಿಗೆಯು ನಿಧಾನಗೊಂಡಿರುವುದರಿಂದ, ಚೀನಾದ ಕಮ್ಯುನಿಸ್ಟ್ ಪಕ್ಷ (CCP) ದ ಆಡಳಿತದ ಸಿಂಧುತ್ವವು ದೇಶದಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯತೆ, ನಾಯಕನ ವ್ಯಕ್ತಿತ್ವ ಪೂಜೆ ಮತ್ತು ಆಂತರಿಕ ಭದ್ರತೆಯ ಮೇಲೆ ತೀವ್ರವಾದ ನಿಯಂತ್ರಣವನ್ನು ಅವಲಂಬಿಸಿದೆ. ಚೀನಾ ಈಗ ಬಾಹ್ಯ ರಕ್ಷಣೆ ಗಿಂತ ಆಂತರಿಕ ಭದ್ರತೆಗಾಗಿ ಹೆಚ್ಚು ಖರ್ಚು ಮಾಡುತ್ತದೆ.

ಚೀನಾವು ಇಂದು ವಿಶ್ವ ಆರ್ಥಿಕತೆಗೆ ಹೆಚ್ಚು ಅವಲಂಬಿತವಾಗಿದೆ. ಅದರ ನಾಯಕತ್ವವು ಚೀನಾದ ಈಗ ಉತ್ತುಂಗದಲ್ಲಿರುವ ಶಕ್ತಿಯು ಭವಿಷ್ಯದಲ್ಲಿ ಕುಸಿಯಬಹುದು ಎಂದು ಅರಿತಿರುವ ಸಾಧ್ಯತೆಯಿದೆ. ಅದರ ಆರ್ಥಿಕತೆ ನಿಧಾನಗೊಳ್ಳುತ್ತಿದೆ ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ; 2040 ರ ವೇಳೆಗೆ ಚೀನಾದ ಜನಸಂಖ್ಯಾ ಪ್ರೊಫೈಲ್ ಇಂದಿನ ಜಪಾನ್‌ನಂತಿರಲಿದೆ. ಈ ಜನಸಂಖ್ಯಾ ಬದಲಾವಣೆಯು ಚೀನಾಕ್ಕೆ ತುಲನಾತ್ಮಕವಾಗಿ ಕಡಿಮೆ ಸಮಯ ಉಳಿದಿರುವುದನ್ನು ಸೂಚಿಸುತ್ತದೆ.

ಯುಎಸ್-ಚೀನಾ ಸಂಬಂಧಗಳು ಆಳವಾದ ಆರ್ಥಿಕ ಪರಸ್ಪರ ಅವಲಂಬನೆಯ ಹೊರತಾಗಿಯೂ ಸ್ಪರ್ಧೆಯಿಂದ ಕೂಡಿವೆ. ಚೀನಾದ ನಡವಳಿಕೆಯನ್ನು ಬದಲಾಯಿಸಲು ಸುಂಕಗಳು ಮತ್ತು ತಂತ್ರಜ್ಞಾನ ವರ್ಗಾವಣೆ ನಿರ್ಬಂಧಗಳನ್ನು ಯುಎಸ್ ವಿಧಿಸಿದೆ.

ಚೀನಾದ ನೆರೆಹೊರೆಯು ಭಾರತದ ಭದ್ರತೆ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ. ಚೀನಾದ ಬೆಳವಣಿಗೆ ಭಾರತದ ಹಿತಾಸಕ್ತಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ, ಏಕೆಂದರೆ ಭಾರತವೂ ಬೆಳೆಯುತ್ತಿರುವ ಶಕ್ತಿಯಾಗಿದೆ. ಹೆಚ್ಚಿದ ಯುಎಸ್-ಚೀನಾ ಪೈಪೋಟಿಯು ಭಾರತ-ಚೀನಾ ಸಂಬಂಧಗಳನ್ನು ಜಟಿಲಗೊಳಿಸುತ್ತದೆ ಮತ್ತು ಯುಎಸ್ ನ ಏಷ್ಯನ್ ತಂತ್ರದಲ್ಲಿ ಅದು ಭಾರತವನ್ನು ಪ್ರಮುಖವಾಗಿಸಬಹುದು.

CHINA - INDIAN PERSPECTIVES from the The Hindu Group (2025)

ಈಚೆಗೆ ‘ದಿ ಹಿಂದೂ’ ಮಾಧ್ಯಮ ಸಮೂಹ ಹೊರತಂದಿರುವ ‘China - Indian Perspectives on China’s Politics, Economy and Foreign Relations’ ಕೃತಿಯು ಚೀನಾ ದೇಶವನ್ನು ಹಲವಾರು ಆಯಾಮಗಳಿಂದ ಅದ್ಭುತವಾಗಿ ಪರಿಚಯಿಸುತ್ತದೆ. ವಿವಿಧ ಕ್ಷೇತ್ರಗಳ ತಜ್ಞರುಗಳು ಬರೆದಿರುವ ಹನ್ನೆರಡು ಪ್ರಬಂಧಗಳ ಸಂಕಲನ ಇದಾಗಿದ್ದು, ಕಳೆದ ಕೆಲವು ದಶಕಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಚೀನಾವು ಸಾಧಿಸಿರುವ ಅದ್ಭುತ ಪ್ರಗತಿ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಆ ದೇಶದ ಪಾತ್ರ, ಭಾರತ-ಚೀನಾ ಸಂಬಂಧ ಇತ್ಯಾದಿಗಳ ವಿಶ್ಲೇಷಣೆ ಈ ಕೃತಿಯಲ್ಲಿದೆ.

ಈ ಸಂಕಲನದಲ್ಲಿ ಅಂತರಾ ಘೋಷಲ್ ಸಿಂಗ್ ಅವರು ಬರೆದಿರುವ ಒಂದು ಪ್ರಬಂಧವನ್ನು ಅವಲೋಕಿಸೋಣ.

ಭಾರತದ ಕುರಿತು ಇಂದಿನ ಚೀನೀ ಜನರ ಭಾವನೆಗಳು, ಅಭಿಪ್ರಾಯಗಳು ಏನಿರಬಹುದು ಎಂಬ ಕುತೂಹಲ ನಮಗಿರುವುದು ಸಹಜ. ಹಾಗೆಯೇ ನೆರೆಯ ದೇಶವಾಗಿರುವ ಕಾರಣಕ್ಕೆ ಉತ್ತಮ ಸಂಬಂಧ ಹೊಂದುವುದೂ ನಮಗಿರುವ ಅನಿವಾರ್ಯತೆ. ಪರಸ್ಪರ ಸಹಕಾರ ಎರಡೂ ದೇಶಗಳ ಹಿತಕ್ಕೆ ಅಗತ್ಯವೇ ಆದರೂ ಅದು ಸುಲಭವಾಗಿ ಸಹಜವಾಗಿ ದೊರೆಯುವಂತದ್ದಲ್ಲ. ಪರಸ್ಪರರ ದೃಷ್ಟಿಕೋನವನ್ನು ಅರಿಯಬೇಕಾಗುತ್ತದೆ. ಈ ಪ್ರಬಂಧದಲ್ಲಿ ಅಂತಹ ಒಂದು ಪ್ರಯತ್ನವಿದೆ.

CHINESE DEBATES ON INDIA’S PLACE IN THE WORLD by Antara Ghosal Singh

2025 ರ ಮಿಲಿಟರಿ ಸಂಘರ್ಷದ ನಂತರ, ಭಾರತದ ವಿಶ್ವಸ್ಥಾನಮಾನ ಮತ್ತು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಕುರಿತು ಚೀನಾದ ಕಾರ್ಯತಂತ್ರದ ಸಮುದಾಯದಲ್ಲಿ ಒಂದು ಸಂಕೀರ್ಣವಾದ ಮತ್ತು ಬಹುಮುಖಿ ಚರ್ಚೆ ನಡೆಯುತ್ತಿದೆ. ಚೀನಾದ ಸಾರ್ವಜನಿಕ ಅಭಿಪ್ರಾಯವು ಈ ವಿಷಯದಲ್ಲಿ ತೀವ್ರವಾಗಿ ಧ್ರುವೀಕರಣಗೊಂಡಿದೆ.

1. ತಿರಸ್ಕಾರ ಮತ್ತು ಸಂಶಯ (Contempt and Skepticism):

  • ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತವನ್ನು “ಕಾಗದದ ಹುಲಿ” (paper tiger) ಮತ್ತು “ಒಣಹಮ್ಮಿನ ಮತ್ತು ಬೊಗಳೆ” (unreasonably vain and boastful) ದೇಶ ಎಂದು ಅಪಹಾಸ್ಯ ಮಾಡುತ್ತಾರೆ.

  • ಈ ದೃಷ್ಟಿಕೋನವನ್ನು ಹೊಂದಿರುವವರ ಪ್ರಕಾರ, ಭಾರತವು ನಿಜವಾದ ಮಹಾಶಕ್ತಿಯಾಗಲು ಸಾಧ್ಯವಿಲ್ಲ ಏಕೆಂದರೆ ಅದು ಜಾತಿ ಪದ್ಧತಿ, ಧಾರ್ಮಿಕ ಸಂಘರ್ಷಗಳು, ಆಡಳಿತಾತ್ಮಕ ದಕ್ಷತೆಯ ಕೊರತೆ, ಮತ್ತು ದುರ್ಬಲ ಕೈಗಾರಿಕಾ ಅಡಿಪಾಯದಂತಹ ಆಳವಾದ ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಾದಿಸುತ್ತಾರೆ. ಭಾರತದ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡುವುದು ಚೀನಾದ ಕಾರ್ಯತಂತ್ರದ ತಪ್ಪು ನಿರ್ಧಾರವಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

  • ಇದೇ ರೀತಿ, ಭಾರತವು ಚೀನಾದ ಕೈಗಾರಿಕಾ ಸರಪಳಿಯನ್ನು(supply chain) ಬದಲಾಯಿಸುವ ಸಿದ್ಧಾಂತವು “ಶತಮಾನದ ದೊಡ್ಡ ಹಗರಣ” (scam of this century) ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಇದಕ್ಕೆ ಕಾರಣ, ಭಾರತದ ಆರ್ಥಿಕ ಬೆಳವಣಿಗೆಯು ಮುಖ್ಯವಾಗಿ ಸೇವಾ ವಲಯದಿಂದ ಕೂಡಿದೆ ಮತ್ತು ಅದರ ಉತ್ಪಾದನಾ ಕ್ಷೇತ್ರದ ಕೊಡುಗೆ ಕಡಿಮೆಯಾಗಿದೆ.

2. ಎಚ್ಚರಿಕೆ ಮತ್ತು ಗೌರವ (Caution and Respect):

ಕೆಲವು ಪ್ರಮುಖ ವಿದ್ವಾಂಸರು, ಭಾರತವನ್ನು ಲಘುವಾಗಿ ಪರಿಗಣಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಬೀಜಿಂಗ್ ಡೈಲಿ (Beijing Daily) ಲೇಖನದ ಪ್ರಕಾರ, ಚೀನಾ ಭಾರತವನ್ನು ಈ ಕೆಳಗಿನೆ ಕಾರಣಗಳಿಗಾಗಿ ನಿರ್ಲಕ್ಷಿಸಬಾರದು:

  • ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಮತ್ತು ಜಾಗತಿಕ ಬಂಡವಾಳವನ್ನು ಆಕರ್ಷಿಸುತ್ತಿದೆ.

  • ಭಾರತವು ಭೌಗೋಳಿಕವಾಗಿ ಮಹತ್ವದ ಸ್ಥಾನದಲ್ಲಿದೆ (ಪಶ್ಚಿಮ ಏಷ್ಯಾದ ಶಕ್ತಿ ವಲಯ ಮತ್ತು ಪೂರ್ವ ಏಷ್ಯಾದ ಕೈಗಾರಿಕಾ ವಲಯದ ನಡುವೆ) ಮತ್ತು ಅಮೆರಿಕವು ಚೀನಾವನ್ನು ಕಟ್ಟಿಹಾಕಲು ಭಾರತವನ್ನು ಪ್ರೋತ್ಸಾಹಿಸುತ್ತಿದೆ.

  • ಭಾರತವು ಗಡಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮತ್ತು ಆರ್ಥಿಕತೆಯಲ್ಲಿ ಚೀನಾದೊಂದಿಗೆ ಸ್ಪರ್ಧಿಸುತ್ತಿರುವ ಪ್ರಮುಖ ಶಕ್ತಿಯಾಗಿದೆ.

  • ಚೀನಾ, ಯುಎಸ್ ಮತ್ತು ಭಾರತವು ಜಗತ್ತಿನಲ್ಲಿ ಉಳಿಯುವ ಮೂರು “ಸ್ವತಂತ್ರ ದೊಡ್ಡ ಮಾರುಕಟ್ಟೆಗಳು” ಆಗಿರಲಿವೆ. ಚೀನಾ ಭಾವನಾತ್ಮಕ ದ್ವೇಷದಿಂದ ಸಹಕಾರದ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.

ಒಟ್ಟಿನಲ್ಲಿ, ಚೀನಾ ಎಂದರೆ ನಾವು ಭಯಪಡಬೇಕಾದ ನೆರೆರಾಷ್ಟ್ರವೆ? ನಾವು ನಮ್ಮೆಡೆಗೆ ಸೆಳೆಯಬೇಕಾದ ಮಿತ್ರರಾಷ್ಟ್ರವೆ? ಅಥವಾ ನಾವು ದೂರ ಕಾಯ್ದುಕೊಳ್ಳಬೇಕಾದ ಅಪರಿಚಿತ ಘಟಕವೆ?

ಈ ಲೇಖನದಲ್ಲಿ ಉಲ್ಲೇಖಿಸಿರುವ ಪುಸ್ತಕಗಳು ಇಂಥ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಮಾಡುತ್ತವೆ ಮತ್ತು ಚೀನಾ ದೇಶದ ಕುರಿತಾದ ನಮ್ಮ ಎಷ್ಟೋ ತಪ್ಪು ಕಲ್ಪನೆಗಳನ್ನು ಕಳೆಯುತ್ತವೆ.