Tuesday, December 02, 2025

ರಷ್ಯಾ: ಸಾಮ್ರಾಜ್ಯ, ಕ್ರಾಂತಿ, ಸರ್ವಾಧಿಕಾರ

ಈ ವಾರ ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರುವ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ರಷ್ಯಾವನ್ನು ನೆನೆದಾಗ ಹಲವು ವಿಚಾರಗಳು ಸುಳಿದವು. ಇತಿಹಾಸ ಪುಸ್ತಕದಲ್ಲಿ ಓದಿರುವುದಕ್ಕಿಂತ ಸಾಹಿತ್ಯದ ಮೂಲಕ ದೇಶಗಳ ಬಗ್ಗೆ ಜನರ ಬಗ್ಗೆ ಅರಿಯಲು ಪ್ರಯತ್ನಿಸುವುದು ನನಗೆ ಇಷ್ಟ. ಕೆಲವಾರು ಕಾದಂಬರಿಗಳು ನೆನಪಿಗೆ ಬಂದವು. ಹಾಗೆಯೇ ಈ ವರ್ಷ ಓದಿದ ರಷ್ಯನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ಪುಸ್ತಕಗಳು ನೆನಪಾದವು. ಈ ಎರಡು ಪುಸ್ತಕಗಳು ಕಳೆದ ನಾಲ್ಕು ಶತಮಾನಗಳಲ್ಲಿ ರಷ್ಯಾವು ದಾಟಿ ಬಂದಿರುವ ವಿವಿಧ ಬಗೆಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಸಮಗ್ರವಾಗಿ ದಾಖಲಿಸುತ್ತವೆ. ಆ ಎರಡೂ ಕೃತಿಗಳಲ್ಲಿನ ಮುಖ್ಯ ವಿಚಾರಗಳನ್ನು ವಿಶದವಾಗಿ ಹಿಡಿದಿಡುವ ಪ್ರಯತ್ನ ಈ ಲೇಖನದಲ್ಲಿದೆ.

1. Russia under the Romanovs (1613–1917) by Simon Sebag Montefiore

2. Motherland: A Feminist History of Modern Russia, from Revolution to Autocracy by Julia Ioffe

1. Russia under the Romanovs (1613–1917) by Simon Sebag Montefiore

1613 ರಲ್ಲಿ ರೊಮಾನೋವ್ ರಾಜವಂಶವು ಪ್ರಾರಂಭವಾಯಿತು, 17 ವರ್ಷದ ಮೈಕೆಲ್ ರೊಮಾನೋವ್ ನನ್ನು ಹಿಂದಿನ ರುರಿಕಿಡ್ ವಂಶವನ್ನು ನಾಶಪಡಿಸಿದ ಮೇಲಿನ  ಒಂದು ದಶಕದ ಅಂತರ್ಯುದ್ಧ, ಕ್ಷಾಮ ಮತ್ತು ವಿದೇಶಿ ಹಸ್ತಕ್ಷೇಪದ ನಂತರ ತ್ಸಾರ್ ಆಗಿ ಆಯ್ಕೆ ಮಾಡಲಾಯಿತು. ಮೈಕೆಲ್ ಆಳ್ವಿಕೆಯಲ್ಲಿ ಅವನ  ತಂದೆ ಫಿಲರೆಟ್ ಪ್ರಾಬಲ್ಯ ಹೊಂದಿದ್ದನು. ಆಡಳಿತವನ್ನು ಕ್ರಮಬದ್ಧವಾಗಿಸುವುದು ಮತ್ತು ಶ್ರೀಮಂತರೊಂದಿಗೆ ನಿಕಟ ಮೈತ್ರಿಯ ಮೂಲಕ ಸಾಮ್ರಾಜ್ಯವನ್ನು ಸ್ಥಿರಗೊಳಿಸುವುದು ಮೈಕೆಲ್ ನ ಆದ್ಯತೆಯಾಗಿದ್ದವು. ರೈತರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಅವನಿಗೆ ಸಾಧ್ಯವಾಯಿತು. 

ಮೈಕೆಲ್ ನ  ಉತ್ತರಾಧಿಕಾರಿ ಅಲೆಕ್ಸಿಯು  ಪಶ್ಚಿಮ ಮತ್ತು ದಕ್ಷಿಣಕ್ಕೆ ಪ್ರದೇಶವನ್ನು ವಿಸ್ತರಿಸಿದನು.  ಆದರೆ ಜೀತದಾಳುತನ, ಧಾರ್ಮಿಕ ಸಂಘರ್ಷ ಮತ್ತು ಅವನು ಅಶಾಂತಿಗೆ ವಿಧಿಸುತ್ತಿದ್ದ  ಕ್ರೂರ ಶಿಕ್ಷೆ ಇವುಗಳಿಂದ ಅವನು ಆಳುತ್ತಿದ್ದ ಸಮಾಜವು  ಗುರುತಿಸಲ್ಪಡುತ್ತದೆ. 

ಪೀಟರ್ ದಿ ಗ್ರೇಟ್ ಮತ್ತು ಪಾಶ್ಚಿಮಾತ್ಯೀಕರಣ

ಪೀಟರ್ I ("ದಿ ಗ್ರೇಟ್")  ಮುಖ್ಯವಾಗಿ ಗುರುತಿಸಲ್ಪಡುವ ತ್ಸಾರ್ ಗಳಲ್ಲಿ ಒಬ್ಬ. ರಷ್ಯಾವನ್ನು ಯುರೋಪ್  ಕಡೆ ತಿರುಗಿಸಿ  ಪುನರ್ನಿರ್ಮಿಸಿದವನು ಎಂದು ಅವನನ್ನು ಗುರುತಿಸಲಾಗುತ್ತದೆ.  ಪ್ರಬಲ ಸೈನ್ಯ ಮತ್ತು ನೌಕಾಪಡೆಯನ್ನು ನಿರ್ಮಿಸಿದವನ. 1709 ರಲ್ಲಿ ಪೋಲ್ಟವಾದಲ್ಲಿ ಸ್ವೀಡನ್ ಅನ್ನು ಸೋಲಿಸಿದನು.  ಸೇಂಟ್ ಪೀಟರ್ಸ್ಬರ್ಗ್ ಅನ್ನು  ರಾಜಧಾನಿಯಾಗಿ  ಸ್ಥಾಪಿಸಿದನು. ಆಡಳಿತ, ಮಿಲಿಟರಿ, ಆಸ್ಥಾನ ಸಂಸ್ಕೃತಿ ಮತ್ತು ಚರ್ಚ್‌ನಲ್ಲಿ ತ್ವರಿತ ಆಧುನೀಕರಣ ಮತ್ತು ಸುಧಾರಣೆಗಳನ್ನು ತರಲು ಪ್ರಯತ್ನಿಸಿದನು. ಆದರೆ ದಂಗೆಗಳ ಕಠಿಣ ದಮನ ಮತ್ತು ಸ್ವಂತ ಮಗನನ್ನೇ  ಚಿತ್ರಹಿಂಸೆಯಿಂದ ಸಾಯಿಸುವ  ತೀವ್ರ ವೈಯಕ್ತಿಕ ಕ್ರೌರ್ಯ ಸಹ ಅವನಲ್ಲಿತ್ತು. ಪೀಟರ್ ಅಡಿಯಲ್ಲಿ, ರಷ್ಯಾ ಪ್ರಮುಖ ಯುರೋಪಿಯನ್ ಶಕ್ತಿಯಾಗಿ ಹೊರಹೊಮ್ಮಿತು. ಇವನ ಕಾಲದಲ್ಲಿ ಸರ್ವಾಧಿಕಾರಿ  ಶಕ್ತಿ ಮತ್ತು ಜೀತಪದ್ಧತಿಗಳು ಬಲಗೊಂಡವು.

ಹದಿನೆಂಟನೇ ಶತಮಾನದ ಸಾಮ್ರಾಜ್ಯ ಮತ್ತು ಆಸ್ಥಾನ ರಾಜಕೀಯ 

ಪೀಟರ್ ನಂತರ, ಹದಿನೆಂಟನೇ ಶತಮಾನವು ಆಗಾಗ್ಗೆ ಅರಮನೆ ದಂಗೆಗಳು, ಬೇಗನೆ ಬದಲಾಗುತ್ತಿದ್ದ  ಆಳ್ವಿಕೆಗಳು ಮತ್ತು ಹಲವಾರು ಪ್ರಬಲ ಮಹಿಳಾ ಆಡಳಿತಗಾರರನ್ನು ಕಂಡಿತು.  ಒಳಸಂಚು, ಹಿಂಸೆ ಮತ್ತು ಐಷಾರಾಮಿ  ಆಸ್ಥಾನ ಸಂಸ್ಕೃತಿ ಇವೆಲ್ಲ ಈ ಕಾಲಘಟ್ಟದ ಭಾಗವಾಗಿದ್ದವು. ಸಾಮ್ರಾಜ್ಞಿ ಎಲಿಜಬೆತ್ ಮತ್ತು ವಿಶೇಷವಾಗಿ ಕ್ಯಾಥರೀನ್ II ​​("ದಿ ಗ್ರೇಟ್"),  ಪೋಲೆಂಡ್ ಮತ್ತು ಕಪ್ಪು ಸಮುದ್ರ ಪ್ರದೇಶಕ್ಕೆ ಸಾಮ್ರಾಜ್ಯವನ್ನು ವಿಸ್ತರಿಸಿದರು. ಆದರೆ  ಜೀತಪದ್ಧತಿಯನ್ನು ಉಳಿಸಿಕೊಂಡರು. ಆಸ್ಥಾನ ಜೀವನವು ಲೈಂಗಿಕ ಹಗರಣ ಮತ್ತು  ಕ್ರೌರ್ಯಗಳಿಗೆ ಸಾಕ್ಷಿಯಾಗಿತ್ತು.  ಹಲವಾರು ರೊಮಾನೋವ್‌ಗಳು  ಬೌದ್ಧಿಕ ಮಹತ್ವಾಕಾಂಕ್ಷೆಯನ್ನು ಹೊಂದಿದವರೂ ಆಗಿದ್ದರು. ಪೀಟರ್ III ಮತ್ತು ಪಾಲ್ I ರಂತಹ ಆಡಳಿತಗಾರರನ್ನು ಅವರ ಆಸ್ಥಾನದ ಗಣ್ಯರೇ  ಪದಚ್ಯುತಗೊಳಿಸಿ ಕೊಲೆ ಮಾಡಿದರು.

ಹತ್ತೊಂಬತ್ತನೇ ಶತಮಾನ: ಸುಧಾರಣೆ, ಪ್ರತಿಕ್ರಿಯೆ ಮತ್ತು ಬಿಕ್ಕಟ್ಟು

ಅಲೆಕ್ಸಾಂಡರ್ I ನೆಪೋಲಿಯನ್ ವಿರುದ್ಧ ರಷ್ಯಾದ ಯಶಸ್ವಿ ಪ್ರತಿರೋಧವನ್ನು ಮುನ್ನಡೆಸಿದನು  ಮತ್ತು ನೆಪೋಲಿಯನ್ ನಂತರದ ಯುರೋಪ್ ಅನ್ನು ರೂಪಿಸಲು ಸಹಾಯ ಮಾಡಿದನು.  ಆದರೆ ಅವನ ಆಳ್ವಿಕೆಯು  ತನ್ನದೇ ದೇಶದಲ್ಲಿ  ಸಂಪ್ರದಾಯವಾದಿಗಳ  ಪ್ರತಿರೋಧವನ್ನು ಎದುರಿಸಬೇಕಾಯಿತು  ಮತ್ತು 1825 ರ ವಿಫಲ 'ಡಿಸೆಂಬ್ರಿಸ್ಟ್' ಅಧಿಕಾರಿಗಳ ದಂಗೆಗೆ ಪ್ರೇರಣೆ ನೀಡಿತು. ಇದು ಸಾಂವಿಧಾನಿಕ ಬದಲಾವಣೆಗಾಗಿ ಗಣ್ಯರ ಬೇಡಿಕೆಗಳನ್ನು ಬಹಿರಂಗಪಡಿಸಿತು. ( ಟಾಲ್ಸ್ಟಾಯ್ ಬರೆದ ' ವಾರ್ ಅಂಡ್ ಪೀಸ್' ಕೃತಿಯಲ್ಲಿ ಅಲೆಕ್ಸಾಂಡರ್ I ಪಾತ್ರವಿದೆ.)  

ನಂತರ ಬಂದ ನಿಕೋಲಸ್ I ಕಠಿಣ ನಿರಂಕುಶಾಧಿಕಾರ, ಸೆನ್ಸಾರ್ಶಿಪ್ ಮತ್ತು ರಹಸ್ಯ ಪೊಲೀಸ್ ಆಳ್ವಿಕೆಯೊಂದಿಗೆ ಗುರುತಿಸಿಕೊಂಡನು.  (ದೋಸ್ತೊವಸ್ಕಿಯನ್ನು ಸೆರೆಮನೆಗೆ ದೂಡಿ ಮರಣದಂಡನೆ ಶಿಕ್ಷೆ ವಿಧಿಸಿ ಕಡೆ ಗಳಿಗೆಯಲ್ಲಿ ಆಜ್ಞೆಯನ್ನು ವಾಪಸ್ ಪಡಿದಿದ್ದು ಇದೇ ನಿಕೋಲಸ್ . ಈ ಸೆರೆವಾಸದ ಆಧಾರದಲ್ಲೇ ದೋಸ್ತೊವಸ್ಕಿ ರಚಿಸಿದ ಕಾದಂಬರಿ  ' ದಿ ಹೌಸ್‌ ಆಫ್ ದಿ ಡೆಡ್ ' ). 

ಅಲೆಕ್ಸಾಂಡರ್ II ಜೀತದಾಳುಗಳನ್ನು ವಿಮೋಚನೆಗೊಳಿಸಿದನು  ಮತ್ತು ಪ್ರಮುಖ ಕಾನೂನು ಮತ್ತು ಸ್ಥಳೀಯ ಸ್ವ-ಸರ್ಕಾರ ಸುಧಾರಣೆಗಳನ್ನು ಪರಿಚಯಿಸಿದನು, ಆದರೆ 1881 ರಲ್ಲಿ ಬಾಂಬ್‌ನಿಂದ ಕೊಲ್ಲಲ್ಪಡುವ ಮೊದಲು ಅನೇಕ ಹತ್ಯೆ ಪ್ರಯತ್ನಗಳಿಂದ ಬದುಕುಳಿದಿದ್ದನು.  

ನಂತರ ಬಂದ  ಅಲೆಕ್ಸಾಂಡರ್ III ಅನೇಕ ಸುಧಾರಣೆಗಳನ್ನು ಹಿಂತೆಗೆದನು. 

ನಿಕೋಲಸ್ II ಮತ್ತು ರಹಸ್ಯ ಪೊಲೀಸ್ ಆಳ್ವಿಕೆಯ ಪತನ 

ನಿಕೋಲಸ್ II ಕೈಗಾರಿಕೀಕರಣಗೊಳ್ಳುತ್ತಿರುವ ಆದರೆ ಸಾಮಾಜಿಕವಾಗಿ ಸ್ಫೋಟಕ ಸ್ಥಿತಿಯಲ್ಲಿದ್ದ ಸಾಮ್ರಾಜ್ಯಕ್ಕೆ  ವಾರಸುದಾರನಾದನು. ವೈಯಕ್ತಿಕ ಧರ್ಮನಿಷ್ಠೆ ಮತ್ತು ಕುಟುಂಬ ಭಕ್ತಿ ಇವು ಇವನ ಆಡಳಿತದ ಲಕ್ಷಣಗಳಾಗಿದ್ದವು. ಜಪಾನ್ ಜೊತೆ  ಯುದ್ಧದಲ್ಲಿನ ಸೋಲುಗಳು, 1905 ರ ಕ್ರಾಂತಿ ಮತ್ತು ಡುಮಾ ಮೂಲಕ ಸೀಮಿತ ಸಾಂವಿಧಾನಿಕ ರಿಯಾಯಿತಿಗಳು ರಾಜಪ್ರಭುತ್ವವನ್ನುದುರ್ಬಲಗೊಳಿಸಿದವು ಮತ್ತು ಅಪನಂಬಿಕೆಗೆ ಒಳಪಡಿಸಿದವು. ರಾಸ್ಪುಟಿನ್ ನಂತಹ ವ್ಯಕ್ತಿಗಳ ಪ್ರಭಾವವು ಅದರ ಪ್ರತಿಷ್ಠೆಯನ್ನು ಮತ್ತಷ್ಟು ಹಾನಿಗೊಳಿಸಿದವು . ಮೊದಲನೆಯ ಮಹಾಯುದ್ಧದ ದುರಂತದ ಒತ್ತಡಗಳು ಸಾಮೂಹಿಕ ಅಶಾಂತಿ ಮತ್ತು ದಂಗೆಗೆ ಕಾರಣವಾಯಿತು; ನಿಕೋಲಸ್ 1917 ರಲ್ಲಿ ಪದತ್ಯಾಗ ಮಾಡಿದನು, ಮತ್ತು 1918 ರಲ್ಲಿ ಅವನು ಮತ್ತವನ  ಕುಟುಂಬದ  ಹಲವರನ್ನು  ಬೊಲ್ಶೆವಿಕ್ ಪಡೆಗಳು ಗಲ್ಲಿಗೇರಿಸಿದವು. ( ಬೋರಿಸ್ ಪಾಸ್ತರ್ನಾಕ್ ರಚಿಸಿರುವ ' ಡಾ ಜಿವಾಗೋ' ಕಾದಂಬರಿಯು ಘಟಿಸುವುದು ಇದೇ ಕಾಲಘಟ್ಟದಲ್ಲೇ. )

ಪುಸ್ತಕದ ಕಡೆಯ ಭಾಗದಲ್ಲಿ ಒಂದೆಡೆ ಬರುವ ಒಂದು ಸಂಗತಿ ಗಮನ ಸೆಳೆಯಿತು. ಅದೇನೆಂದರೆ-ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪೆಟ್ರೋಗ್ರಾಡ್‌ನ ಆಸ್ಟೋರಿಯಾ ಹೋಟೆಲ್‌ನಲ್ಲಿ ರಾಸ್‌ಪುಟಿನ್‌ಗೆ ಆಹಾರವನ್ನು ಸಿದ್ಧಪಡಿಸಿದ ಅಡುಗೆಯವರಲ್ಲಿ ಒಬ್ಬರು ನಂತರದಲ್ಲಿ ರಷ್ಯನ್  ಕ್ರಾಂತಿಯ ನಂತರದ ವರ್ಷಗಳಲ್ಲಿ ಲೆನಿನ್ ಮತ್ತು ಸ್ಟಾಲಿನ್ ರಿಗೂ ಅಡುಗೆ ಮಾಡಲು ಹೋದರು ಎಂದು ಮಾಂಟೆಫಿಯೋರ್ ನಮೂದಿಸುತ್ತಾರೆ; ಈ ವ್ಯಕ್ತಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಜ್ಜ ಸ್ಪಿರಿಡಾನ್ ಪುಟಿನ್!

ಅಲ್ಲಿಗೆ  ಮೂರು ಶತಮಾನಗಳಿಗೂ ಹೆಚ್ಚು ಕಾಲದ ರೊಮಾನೋವ್ ಆಳ್ವಿಕೆ ಕೊನೆಯಾಯಿತು  ಮತ್ತು ಸೋವಿಯತ್ ಅಧಿಕಾರಕ್ಕೆ ದಾರಿಯಾಯಿತು. 

2. Motherland: A Feminist History of Modern Russia, from Revolution to Autocracy by Julia Ioffe

೧೯೧೭ ರ ಕ್ರಾಂತಿಯಿಂದ ಇಂದಿನವರೆಗಿನ ರಷ್ಯಾದ ಇತಿಹಾಸವು ತ್ಸಾರ್ ಪತನದಿಂದ, ಸೋವಿಯತ್ ಪ್ರಯೋಗ ಮತ್ತು ಅದರ ಪತನದ ಮೂಲಕ ಸಾಗಿ, ಇಂದಿನ ವ್ಲಾಡಿಮಿರ್ ಪುಟಿನ್ ನ  ನಿರಂಕುಶ ರಾಜ್ಯದವರೆಗೆ ಸಾಗುತ್ತದೆ. 

ಈ ಕೃತಿಯ ಮೂಲಕ ರಷ್ಯಾದ ಸ್ತ್ರೀವಾದಿ ಇತಿಹಾಸವನ್ನು ಒಂದು ಮಸೂರವಾಗಿಸಿಕೊಂಡು, ಅಧಿಕಾರ, ಯುದ್ಧ ಮತ್ತು ಸಿದ್ಧಾಂತವು ಒಂದು ಶತಮಾನದುದ್ದಕ್ಕೂ ರಷ್ಯಾದ ಮಹಿಳೆಯರು ಮತ್ತು ವಿಶಾಲ ಸಮಾಜದ ಜೀವನವನ್ನು ಹೇಗೆ ಮರುರೂಪಿಸಿತು ಎಂಬುದನ್ನು ತಿಳಿಯಲು ಪ್ರಯನ್ನಿಸಬಹುದು.

ಕ್ರಾಂತಿ ಮತ್ತು ಆರಂಭಿಕ ಸೋವಿಯತ್ ವರ್ಷಗಳು

೧೯೧೭ ರ ಕ್ರಾಂತಿಯು ತ್ಸಾರಿಸ್ಟ್ ನಿರಂಕುಶಾಧಿಕಾರವನ್ನು ಉರುಳಿಸಿತು ಮತ್ತು ಬೊಲ್ಶೆವಿಕ್‌ಗಳನ್ನು ಅಧಿಕಾರಕ್ಕೆ ತಂದಿತು, ಅವರು ಹೆಚ್ಚಾಗಿ ಗ್ರಾಮೀಣ, ಬಡ ಮತ್ತು ಅನಕ್ಷರಸ್ಥ ಸಾಮ್ರಾಜ್ಯದಲ್ಲಿ ಸಮಾಜವಾದಿ ರಾಜ್ಯವನ್ನು ನಿರ್ಮಿಸಲು ಹೊರಟರು. ಈ ಕ್ರಾಂತಿಯ ಕೇಂದ್ರಬಿಂದುವಾಗಿದ್ದ ಮಹಿಳೆಯರು, ಬೊಲ್ಶೆವಿಕ್ ಕಾರ್ಯಪಡೆಯ ದೊಡ್ಡ ಭಾಗವಾಗಿದ್ದರಿಂದ  ಹೊಸ ಆಡಳಿತದಲ್ಲಿ ಭಾಗವಾಗಿದ್ದರು. 

ಅಲೆಕ್ಸಾಂಡ್ರಾ ಕೊಲ್ಲೊಂಟೈ ಮತ್ತು ಇನೆಸ್ಸಾ ಅರ್ಮಾಂಡ್ ಅವರಂತಹ ಕ್ರಾಂತಿಕಾರಿ ನಾಯಕರು ಕಾನೂನು ಸಮಾನತೆ, ಸುಲಭ ವಿಚ್ಛೇದನ, ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದು (1920 ರಿಂದ), ಶಿಕ್ಷಣದ ಪ್ರವೇಶ ಮತ್ತು ಶಿಶುಪಾಲನೆಯನ್ನು ರಾಜ್ಯಾಡಳಿತವೇ ನಿರ್ವಹಿಸುವಂತಹ  ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಮುಂದಿಟ್ಟರು.  ಆರಂಭಿಕ ಸೋವಿಯತ್ ರಷ್ಯಾವನ್ನು ಲಿಂಗ ಮತ್ತು ಕುಟುಂಬ ನೀತಿಯ ವಿಷಯದಲ್ಲಿ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿದರು. ಆದರೂ ಈ ಹಂತದಲ್ಲಿಯೂ  ಸಹ ಪಕ್ಷವು ಪುರುಷ ಪ್ರಾಬಲ್ಯದಲ್ಲಿ ಉಳಿಯಿತು ಮತ್ತು ಸಾಮಾಜಿಕ ಬೆಂಬಲದ ಅನೇಕ ಭರವಸೆಗಳು (ವ್ಯಾಪಕವಾದ ನರ್ಸರಿಗಳು ಮತ್ತು ಸಮುದಾಯ  ಸೇವೆಗಳಂತಹವು) ಕಾನೂನುಗಳಿಗಿಂತ ಹಿಂದುಳಿದವು, ಮಹಿಳೆಯರಿಗೆ ಅವರ  ಉದ್ಯೋಗಗಳ ಜೊತೆಗೇ ದೇಶೀಯವಾಗಿ ಸಾಂಪ್ರದಾಯಿಕವಾಗಿದ್ದ ಇತರ ಹೊಣೆಗಳು ತಪ್ಪಲಿಲ್ಲ .  

ಸ್ಟಾಲಿನ್, ಭಯೋತ್ಪಾದನೆ ಮತ್ತು ಯುದ್ಧ

1920 ರ ದಶಕದ ಅಂತ್ಯದ ವೇಳೆಗೆ, ಜೋಸೆಫ್ ಸ್ಟಾಲಿನ್ ನೇತೃತ್ವದಲ್ಲಿ, ಆಡಳಿತವು ವೈಯಕ್ತಿಕ ಸರ್ವಾಧಿಕಾರವಾಗಿ ಗಟ್ಟಿಯಾಗಿ, ಅದು ಅನೇಕ ಆರಂಭಿಕ ಸ್ತ್ರೀವಾದಿ ಲಾಭಗಳನ್ನು ಮೊಟಕುಗೊಳಿಸಿತು. ಪಕ್ಷದ  ಮಹಿಳಾ ವಿಭಾಗವನ್ನು ಮುಚ್ಚಲಾಯಿತು. 1936 ರಲ್ಲಿ ಗರ್ಭಪಾತವನ್ನು ನಿಷೇಧಿಸಲಾಯಿತು, ಮತ್ತು ರಹಸ್ಯ ಪೊಲೀಸ್ ಮತ್ತು ಗುಲಾಗ್‌ನ ವಿಸ್ತರಣೆಯಾಯಿತು.   ತಾಯ್ತನ ಮತ್ತು ದೊಡ್ಡ ಕುಟುಂಬಗಳನ್ನು ವೈಭವೀಕರಿಸುವುದರೊಂದಿಗೆ  ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. 

1930 ರ ದಶಕದ ಮಹಾ ಭಯೋತ್ಪಾದನೆಯು ರಾಜಕೀಯ ವಿರೋಧಿಗಳನ್ನೆಲ್ಲ  "ಜನರ ಶತ್ರುಗಳು " ಎಂಬ ಹಣೆ ಪಟ್ಟಿ ಹಚ್ಚಿ ನಾಶ ಮಾಡುವುದು ಮಾತ್ರವಲ್ಲದೆ ಅವರ ಹೆಂಡತಿಯರನ್ನು ಸಹ ನಾಶಮಾಡಿತು, "ಮಾತೃಭೂಮಿಗೆ ದ್ರೋಹಿಗಳ ಪತ್ನಿಯರು" ಎಂಬ ಹಣೆಪಟ್ಟಿಯೊಡನೆ  ವಿಶೇಷ ಶಿಬಿರಗಳನ್ನು ಸ್ಥಾಪಿಸಿ  ಹತ್ತಾರು ಸಾವಿರ ಮಹಿಳೆಯರನ್ನು ಸಂಹರಿಸಿದರು. ಎರಡನೆಯ  ಮಹಾಯುದ್ಧದ ಸಮಯದಲ್ಲಿ ಮಹಿಳೆಯರು ಸ್ನೈಪರ್‌ಗಳು, ಪೈಲಟ್‌ಗಳಾಗಿ ದೊಡ್ಡ ಸಂಖ್ಯೆಯಲ್ಲಿ ಸೇವೆ ಸಲ್ಲಿಸಿದರು, ಆದರೆ ಯುದ್ಧಾನಂತರದಲ್ಲಿ  ಮಹಿಳೆಯರನ್ನು ರಾಷ್ಟ್ರದ ಸಂತಾನೋತ್ಪತ್ತಿ ಮಾಡುವವರ ಪಾತ್ರಕ್ಕೆ ಮತ್ತೆ ತಳ್ಳಲಾಯಿತು, ಮಕ್ಕಳಿಲ್ಲದವರ ಮೇಲೆ ತೆರಿಗೆ ವಿಧಿಸಲಾಯಿತು  ಮತ್ತು ಅನೇಕ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ಸನ್ಮಾನ ನೀಡಲಾಯಿತು. 

( ಸ್ಟಾಲಿನ್ ಕಾಲದ ಹಿಂಸೆ ಮತ್ತು ಅತಿರೇಕಗಳ ಬಗೆಗೆ ಸ್ವತಃ ಸ್ಟಾಲಿನನ ಮಗಳು ಬರೆದಿರುವ ' ಸ್ಟಾಲಿನ್ ಸ್ ಡಾಟರ್ ' ಕೃತಿಯನ್ನು ನೋಡಬಹುದು. ) ಸ್ಟಾಲಿನ್ ಅಧಿಕಾರದ ಕಾಲ ನಿಜಕ್ಕೂ ರಷ್ಯಾದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ. 

ಸೋವಿಯತ್ ಒಕ್ಕೂಟದ ದೈನಂದಿನ ಜೀವನ

1953 ರಲ್ಲಿ ಸ್ಟಾಲಿನ್ ನ  ಮರಣದ ನಂತರ, ನಂತರದ ನಾಯಕರು ಕೆಲವು ಕಠಿಣ ನೀತಿಗಳನ್ನು ಸಡಿಲಿಸಿದರು, ಗರ್ಭಪಾತವನ್ನು ಮತ್ತೆ ಕಾನೂನುಬದ್ಧಗೊಳಿಸಿದರು ಮತ್ತು ಮುಕ್ತ ಭಯೋತ್ಪಾದನೆಯನ್ನು ಮೃದುಗೊಳಿಸಿದರು.  ಆದರೆ ಮೂಲಭೂತ ಸಾಮಾಜಿಕ ಒಪ್ಪಂದವು ಮಹಿಳೆಯರನ್ನು ಎರಡು ಬಗೆಯ ಬಂಧನದಲ್ಲಿ ಇರಿಸಿತು. ಅವರು ಕೈಗಾರಿಕಾ, ನಗರೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಪೂರ್ಣ ಸಮಯ ಕೆಲಸ ಮಾಡಬೇಕಾಗಿತ್ತು ಮತ್ತು ಮನೆ ಮತ್ತು ಮಕ್ಕಳ ಪ್ರಾಥಮಿಕ ಜವಾಬ್ದಾರಿಯನ್ನು ಸಹ ಹೊರಬೇಕಾಗಿತ್ತು. 

ಈ ಅವಧಿಯಲ್ಲಿ, ಅನೇಕ ಮಹಿಳೆಯರು ಉನ್ನತ ಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಸಾಧನೆಯನ್ನು ತಲುಪಿದರು, ಯೋಫೀ  ಅವರ ಕುಟುಂಬದಲ್ಲೇ ಅನೇಕರು, ವಿಶೇಷವಾಗಿ ಮಹಿಳೆಯರು,  ವೈದ್ಯರು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಾಗಿದ್ದರೂ  ಅವರು ತಮ್ಮ ಮನೆಗಳನ್ನು ನಿಭಾಯಿಸಲು ಕಷ್ಟ ಪಡಬೇಕಾಗುತ್ತಿತ್ತು. ಕಮ್ಯುನಿಸ್ಟ್ ಪಕ್ಷದ ಗಣ್ಯರು ಮತ್ತು ಅವರ ಕುಟುಂಬಗಳು  ವಿಶೇಷ ಸವಲತ್ತುಗಳನ್ನು ಅನುಭವಿಸಿದರು, ಸಾಮಾನ್ಯ ನಾಗರಿಕರಿಗೆ ಸಮಾನತೆಯ ಅಧಿಕೃತ ಭರವಸೆಗಳಷ್ಟೇ ಲಭಿಸುತ್ತಿದ್ದವು.

USSR ನ ಕುಸಿತ ಮತ್ತು 1990 ರ ದಶಕದ ಪ್ರಕ್ಷುಬ್ಧತೆ

1980 ರ ದಶಕದಲ್ಲಿ ಮಿಖಾಯಿಲ್ ಗೋರ್ಬಚೇವ್ ಅವರ ಸುಧಾರಣೆಗಳ ಅಡಿಯಲ್ಲಿ ಸೋವಿಯತ್ ಒಕ್ಕೂಟವು ಹೊರಜಗತ್ತಿಗೆ ತೆರೆದುಕೊಳ್ಳಲು  ಪ್ರಾರಂಭಿಸಿತು, ಇದು ಸಾರ್ವಜನಿಕ ಚರ್ಚೆಯನ್ನು ಆರಂಭಿಸಿತು ಮತ್ತು ಆರ್ಥಿಕ ನಿಶ್ಚಲತೆ ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು. 1991 ರಲ್ಲಿ USSR ವಿಭಜನೆಯಾಯಿತು, ಸ್ವತಂತ್ರ ರಷ್ಯನ್ ಒಕ್ಕೂಟವು ಮಾರುಕಟ್ಟೆಯ ಆಘಾತ, ಹಣದುಬ್ಬರ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಸಿಲುಕಿತು ಮತ್ತು ಅನೇಕರಿಗೆ ಜೀವನ ಮಟ್ಟದಲ್ಲಿ ತೀವ್ರ ಕುಸಿತದ ಅನುಭವವಾಯಿತು.

1990 ರ ದಶಕದ ಅವ್ಯವಸ್ಥೆಯಲ್ಲಿ, ಔಪಚಾರಿಕ ಕಾನೂನು ಸ್ವಾತಂತ್ರ್ಯಗಳು ವಿಸ್ತರಿಸಿದವು, ಆದರೆ ಸಾಮಾಜಿಕ ಸುರಕ್ಷತಾ ಜಾಲಗಳು ಕುಗ್ಗಿದವು ಮತ್ತು ಹೆಚ್ಚು ತರಬೇತಿ ಪಡೆದ ವೃತ್ತಿಪರರಾಗಿದ್ದ ಅನೇಕ ಮಹಿಳೆಯರು ಇದ್ದಕ್ಕಿದ್ದಂತೆ ಆರ್ಥಿಕ ಅಭದ್ರತೆ, ವೇತನ ಬಾಕಿ ಮತ್ತು ಪುರುಷ ಸಂಪಾದನೆದಾರರ ಮೇಲಿನ ಹೆಚ್ಚುತ್ತಿರುವ ಅವಲಂಬನೆಯನ್ನು ಎದುರಿಸಿದರು. ಒಂದೆಡೆ ಹೊಸ ಗ್ರಾಹಕ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಪ್ರಭಾವಗಳು, ಇನ್ನೊಂದೆಡೆ  ಮರಳಿ ಜಾಗೃತಗೊಂಡ  ಪಿತೃಪ್ರಧಾನ ವ್ಯವಸ್ಥೆಯ ಆದರ್ಶಗಳು, ಹೀಗೆ ದ್ವಂದ್ವದಲ್ಲಿ ಸಿಲುಕಿದ  ಅನೇಕ ಯುವತಿಯರು ಸೋವಿಯತ್ ಶೈಲಿಯ ವೃತ್ತಿಪರ ಜೀವನದ ಆಯ್ಕೆಗಿಂತ  ಯಶಸ್ವಿ ಪುರುಷರನ್ನು ಆಕರ್ಷಿಸುವುದಕ್ಕೆ ಸೀಮಿತವಾದ  ಸಾಂಪ್ರದಾಯಿಕ ಜೀವನವನ್ನು ಹೆಚ್ಚು ಬಯಸಿದರು. 

ಪುಟಿನ್ ನ  ರಷ್ಯಾ ಮತ್ತು ಇಂದಿನ ಯುದ್ಧ

ಸಹಸ್ರಮಾನದ ತಿರುವಿನಲ್ಲಿ ವ್ಲಾಡಿಮಿರ್ ಪುಟಿನ್ ನ  ಉದಯವು, ಮಾಧ್ಯಮ ಮತ್ತು ನಾಗರಿಕ ಸಮಾಜದ ಮೇಲೆ ಬಿಗಿಯಾದ ನಿಯಂತ್ರಣ ಮತ್ತು ಸಾಂಪ್ರದಾಯಿಕ ಮೌಲ್ಯಗಳು, ರಾಷ್ಟ್ರೀಯತೆ ಮತ್ತು ಮಹಾನ್-ಶಕ್ತಿ ಅಸ್ಮಿತೆಯ ಸುತ್ತ ನಿರ್ಮಿಸಲಾದ ಸಿದ್ಧಾಂತವನ್ನು ತಂದಿತು. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರೂ, ನಿಜವಾದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಪುರುಷರಿಗೆ ವಹಿಸಲಾಗಿದೆ, ಮತ್ತು  ಕೆಲವು ರೀತಿಯ ದೇಶೀಯ ಹಿಂಸಾಚಾರವನ್ನು ಅಪರಾಧಮುಕ್ತಗೊಳಿಸುವುದು, ಇದರ ಜೊತೆಗೆ  ಸ್ತ್ರೀವಾದಿ ಮತ್ತು ಹಿಂಸಾಚಾರ ವಿರೋಧಿ ಸಂಸ್ಥೆಗಳ ಮೇಲೆ "ವಿದೇಶಿ ಏಜೆಂಟ್" ಎಂಬಂತಹ ಪದಚಿಹ್ನೆಗಳನ್ನು ಹಚ್ಚಿ  ದಂಡಗಳನ್ನು ಹೇರುವ ಮೂಲಕ  ಒತ್ತಡ ಸೃಷ್ಟಿಸಲಾಗುತ್ತಿದೆ. ಹಲವು ನಿರಂಕುಶವಾದಿ ರಾಜಕಾರಣಿಗಳು ಹಲವು ದೇಶಗಳಲ್ಲಿ ಇಂತಹದ್ದೇ ಪ್ರವೃತ್ತಿಯನ್ನು ತೋರುತ್ತಿರುವುದು ನಾವು ಗಮನಿಸುತ್ತಿರುವ ಕಳವಳಕಾರಿ ಸಂಗತಿ. 

ಜನಸಂಖ್ಯೆಯ ಕುಸಿತ ಮತ್ತು ಇತ್ತೀಚೆಗೆ ಉಕ್ರೇನ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧದ ಹಿನ್ನೆಲೆಯಲ್ಲಿ ಕ್ರೆಮ್ಲಿನ್ ನ  ಪ್ರಸವಪೂರ್ವ ನೀತಿಗಳು, ಆರಂಭಿಕ ಹೆರಿಗೆಗೆ ಪ್ರೋತ್ಸಾಹ ಮತ್ತು ಗರ್ಭಪಾತವನ್ನು ನಿರುತ್ಸಾಹಗೊಳಿಸುವ ಅಭಿಯಾನಗಳನ್ನು ಪುನರುಜ್ಜೀವನಗೊಳಿಸಿದವೆ.  ಹಿಂದಿನ ಸೋವಿಯತ್ ಯುಗದಲ್ಲಿ ಮಾಡುತ್ತಿದ್ದಂತೆ  ಮಿಲಿಟರಿ  ನಷ್ಟಗಳಿಗೆ ಪರಿಹಾರವಾಗಿ  ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೆರುವಂತೆ ಕೇಳಲಾಗುತ್ತಿದೆ.  ಸಮಕಾಲೀನ ರಷ್ಯಾವು ನಿರಂಕುಶಾಧಿಕಾರ ಮತ್ತು ಲಿಂಗ ಸಂಪ್ರದಾಯವಾದಕ್ಕೆ ಮರಳಿದೆ, ಅನೇಕರನ್ನು ಭ್ರಮನಿರಸನಗೊಳಿಸಿ ದೇಶಭ್ರಷ್ಟರನ್ನಾಗಿ ಮಾಡಿದೆ ಎಂಬುದನ್ನು  ಗುರುತಿಸುತ್ತಾ  ಯೋಫೀ  ಅವರ ಕೃತಿ ಮುಗಿಯುತ್ತದೆ. 

ಪುಟಿನ್ ಆಡಳಿತದಲ್ಲಿ ಮಾಧ್ಯಮಗಳ ಮೇಲಿರುವ ಬಿಗಿ ಹಿಡಿತದಿಂದಾಗಿ ರಷ್ಯಾದ ಸಧ್ಯದ ವಸ್ತುಸ್ಥಿತಿ ಹೊರಜಗತ್ತಿಗೆ ತಿಳಿಯುವುದೂ ದುಸ್ತರವಾಗಿದೆ. 

( Putin: Prisoner of Power ಎಂಬ ಪಾಡ್ ಕಾಸ್ಟ್ ಆಡಿಬಲ್ ನಲ್ಲಿ ಲಭ್ಯವಿದೆ . ಇದರಲ್ಲಿ ಈ ನಿರಂಕುಶ ಅಧಿಕಾರದಾಹಿ ವ್ಯಕ್ತಿಯು  ಅನಿರೀಕ್ಷಿತವಾಗಿ ಹಾಗೂ ಅತಿ  ಶೀಘ್ರವಾಗಿ ರಷ್ಯಾದ ಪರಮಾಧಿಕಾರವನ್ನು ಹಿಡಿದದ್ದರ ಬಗ್ಗೆ ವಿವರಗಳಿವೆ. ) 


Monday, November 24, 2025

ಓಡುವುದರ ಬಗ್ಗೆ

ಮೊನ್ನೆ  (ನವೆಂಬರ್ 22) ಚಿಕ್ಕಮಗಳೂರಿನಲ್ಲಿ  ' ಮಲ್ನಾಡ್ ಅಲ್ಟ್ರಾ' ಮ್ಯಾರಥಾನ್ ಸ್ಪರ್ಧೆ ಇತ್ತು. 50 ಕಿಮೀ ಓಟದಲ್ಲಿ ಭಾಗವಹಿಸಿ ನಿಗದಿತ ಹತ್ತು ಗಂಟೆಗಳ ಒಳಗೆ ಮುಗಿಸಿದ್ದು ಒಂದು ಒಳ್ಳೆಯ ಅನುಭವವಾಗಿತ್ತು. ಚಿಕ್ಕಮಗಳೂರಿನ ಹಸಿರು ಗುಡ್ಡಗಳಲ್ಲಿರುವ ಕಾಫಿ ತೋಟಗಳ ಒಳಗೆ ಹೆಚ್ಚಿನ ಭಾಗ ಸಾಗುವ ಈ ಓಟದ ಒಂಬತ್ತನೆ ಆವೃತ್ತಿ ಈ ವರ್ಷದ ಓಟವಾಗಿತ್ತು. ಮೊದಲ ಎರಡನ್ನು ಬಿಟ್ಟರೆ ಉಳಿದ ಎಲ್ಲ ಆವೃತ್ತಿಗಳಲ್ಲಿ ಭಾಗವಹಿಸಿದ್ದೇನೆ.

ಕಾಲೇಜಿನ ದಿನಗಳಲ್ಲಿ ಕೆಲವೊಂದು ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದದ್ದು ಬಿಟ್ಟರೆ ದೂರ  ಓಟದ   ಬಗ್ಗೆ ಹೆಚ್ಚೇನೂ ಅನುಭವವಾಗಲಿ ಮಾಹಿತಿಯಾಗಲಿ ನನಗೆ ಇರಲಿಲ್ಲ. ಈಗ ಹತ್ತು ವರ್ಷಗಳ ಕೆಳಗೆ ಓದಿದ ಪುಸ್ತಕವೊಂದು ಓಡುವುದರ ಬಗ್ಗೆ ಕುತೂಹಲ ಆಸಕ್ತಿ ಮೂಡಲು ಕಾರಣವಾಯಿತು. 

ಹಾರುಕಿ ಮುರಾಕಮಿ ಎಂಬ ಜಪಾನಿ  ಲೇಖಕ ಬರೆದ What I Talk About When I Talk About Running ( ಓಡುವುದರ ಬಗ್ಗೆ ಮಾತನಾಡುವಾಗ ನಾನು ಯಾವುದರ ಬಗ್ಗೆ ಮಾತನಾಡುತ್ತೇನೆ ) ಎಂಬ ಪುಸ್ತಕ ಅವರ  ಜೀವನದ ಕತೆಯೇ ಆಗಿದ್ದು ಅವರ  ಓಟದ ಬಗೆಗಿನ ಪ್ರೇಮ ಮತ್ತು ಅವರ  ಬರವಣಿಗೆಯ ವೃತ್ತಿ ಇವೆರಡನ್ನೂ ಕುರಿತದ್ದೇ ಆಗಿದೆ. ತಮ್ಮ  33 ನೇ ವಯಸ್ಸಿಗೆ ಓಡುವುದನ್ನು ಆರಂಭಿಸಿದ ಮುರಾಕಮಿ 2007 ರಲ್ಲಿ  ಈ ಪುಸ್ತಕ ಪ್ರಕಟವಾಗುವ ವೇಳೆಗೆ ಸುಮಾರು 25 ಮ್ಯಾರಥಾನ್ ಗಳನ್ನು ಓಡಿರುತ್ತಾರೆ .

ಓಟ ಮತ್ತು ಬರವಣಿಗೆ ಇವೆರಡು ಚಟುವಟಿಕೆಗಳ ನಡುವೆ ಇರುವ ಸಂಬಂಧದ ಬಗ್ಗೆ ಗಮನಿಸುವುದು ಈ ಪುಸ್ತಕದ ಕೇಂದ್ರ ಉದ್ದೇಶವಾಗಿದೆ.  ಇವೆರಡರಲ್ಲೂ ಏಕಾಗ್ರತೆ , ಶಿಸ್ತು , ಮತ್ತು ಸಹಿಷ್ಣುತೆ ಇವು ಮುಖ್ಯ ಗುಣಗಳಾಗಿರುವ ಬಗ್ಗೆ ಬರೆಯುತ್ತಾರೆ. ತಮ್ಮ ಓಟಗಳ ಬಗ್ಗೆ ಬರೆಯುತ್ತಲೇ ಅಂತರ್ಮುಖತೆ , ಏಕಾಂತ , ತನ್ನನ್ನು ತಾನು ಒಪ್ಪಿಕೊಳ್ಳುವ ಪ್ರಕ್ರಿಯೆ ಮುಂತಾದವನ್ನು ಶೋಧಿಸುತ್ತಾರೆ.  ಓಡುವುದಕ್ಕೆ  ಪ್ರೇರಣೆ , ಓಡುವಾಗ ದೇಹ ಮತ್ತು ಮನಸ್ಸು ಎರಡೂ ಎದುರಿಸುವ ಹೋರಾಟಗಳು,  ಮತ್ತು ಒಬ್ಬಂಟಿಯಾಗಿ ದೂರದ ಓಟದಲ್ಲಿ ತೊಡಗುವಾಗ ಸಿಗುವ ಶಾಂತಿ ಇವೆಲ್ಲದರ ಬಗೆಗೆ ತುಂಬ ಸರಳವಾಗಿ ವಿವರಿಸುತ್ತಾರೆ. ಹಾಗೆಯೇ ವಯಸ್ಸು ಮಾಡುವ ಪರಿಣಾಮಗಳು, ಓಡುವ ವೇಗ ತಗ್ಗುವುದು ಅದನ್ನು  ಒಪ್ಪಿಕೊಳ್ಳುವುದು ಮತ್ತು ಆ ಪ್ರಕ್ರಿಯೆಯನ್ನು ಜೀವನಕ್ಕೂ  ಅನ್ವಯವಾಗುವ ದರ್ಶನದಂತೆ ಕಾಣುವುದು,  ಹೀಗೆ ಓಡುವುದನ್ನು ಕುರಿತು ಮಾತನಾಡುತ್ತ ಜೀವನದ ಕುರಿತೂ ಮಾತನಾಡುತ್ತಾರೆ.  

ಒಂದು ದಿನಚರಿಯ ಶೈಲಿಯಲ್ಲಿ ಸಾಗುವ ಪುಸ್ತಕವು ಲೇಖಕರ ಪ್ರವಾಸಗಳು , ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ನಂತಹ ಓಟಗಳಿಗೆ ಅವರು ಸಿದ್ಧವಾಗುವ ಬಗೆ , ಅವರ ದೈನಂದಿನ ಅಭ್ಯಾಸಗಳು ಇತ್ಯಾದಿಗಳನ್ನೂ ಒಳಗೊಳ್ಳುತ್ತಾ ಆಸಕ್ತಿಯನ್ನು ಕಾಯುಕೊಳ್ಳುತ್ತದೆ . 

ಅಲ್ಲಿಯವರೆಗೆ ಓಡುವುದನ್ನು ಒಂದು ವೃತ್ತಿನಿರತ ಕ್ರೀಡೆಯಾಗಿಯಷ್ಟೇ  ಕಂಡಿದ್ದ ನನಗೆ ಇದೊಂದು ಸಾಮಾನ್ಯರಿಗೂ ಎಟುಕುವ ಆರೋಗ್ಯಪೂರ್ಣ ಹವ್ಯಾಸವೂ ಆಗಬಹುದೆಂದು ಅನಿಸತೊಡಗಿತು. ಓಡುವುದನ್ನು ಜೀವನಕ್ಕೊಂದು ರೂಪಕವಾಗಿ ಬಳಸಿಕೊಂಡು ಹಿಡಿದದ್ದನ್ನು ಸುಲಭವಾಗಿ ಕೈ  ಚೆಲ್ಲದಿರುವುದು , ಸ್ವತಹ ನಿರ್ಮಿಸಿಕೊಂಡ ಮಿತಿಗಳನ್ನು ವಿಸ್ತರಿಸಿಕೊಳ್ಳುವುದು,   ತನ್ನದೇ ಗುರಿಗಳನ್ನು ನಿರ್ಮಿಸಿಕೊಂಡು ಅವನ್ನು ಮೀರುವ ಸ್ಪರ್ಧೆಗಿಳಿಯುವುದು ಇವೆಲ್ಲ ಸಾಧ್ಯತೆಗಳನ್ನು ಮುರಾಕಮಿ ವಿವರಿಸುವ ರೀತಿ ತುಂಬಾ ಸ್ಫೂರ್ತಿದಾಯಕ ಅನಿಸಿತು. ಓಡುವುದನ್ನು ನಿತ್ಯಜೀವನದ ಭಾಗವಾಗಿಸಿಕೊಳ್ಳುವುದರ ಪ್ರಾಮುಖ್ಯತೆ ಮನವರಿಕೆಯಾಯಿತು. 

ಪುಸ್ತಕಗಳ ಅಗತ್ಯ, ಮಹತ್ವ ಮತ್ತು ಶಕ್ತಿಯ ಬಗ್ಗೆ ಮೊದಲಿಂದಲೂ ಯಾವುದೇ ಅನುಮಾನ ಇರದಿದ್ದರೂ ಕೆಲವು ಪುಸ್ತಕಗಳು ಆಶ್ಚರ್ಯವಾಗುವಷ್ಟು ಪರಿಣಾಮ ಬೀರುತ್ತವೆ. ಈ ಪುಸ್ತಕದ ಶೀರ್ಷಿಕೆಯು ರೇಮಂಡ್ ಕಾರ್ವರ್ ಬರೆದ What  we talk about When we talk about love ಎಂಬ ಸಣ್ಣಕತೆಯ ಶೀರ್ಷಿಕೆಯಿಂದ ಪ್ರಭಾವಿತವಾಗಿದೆ. ನಾನು ಓದಿರುವ ಅತ್ಯಂತ ಆಸಕ್ತಿಪೂರ್ಣ ಕತೆಗಳಲ್ಲಿ ಅದೂ ಒಂದು. ಅದರ ಬಗ್ಗೆ ಇನ್ನೊಂದು ದಿನ ಬರೆಯುವೆ. 

Wednesday, November 19, 2025

ಬುಕರ್ 2025 ವಿನ್ನರ್ - 'ಫ್ಲೆಷ್' by ಡೇವಿಡ್‌ ಸಲಯ್

ಈ ಸಲದ ಬುಕರ್ ಪ್ರಶಸ್ತಿ ಪಡೆದ ಕಾದಂಬರಿ ಡೇವಿಡ್‌ ಸಲಯ್  ಬರೆದ ' ಫ್ಲೆಷ್ '  ನನಗೆ ಇಷ್ಟವಾದ ಕೃತಿ. ಸಾಮಾನ್ಯವಾಗಿ ಅಮೆರಿಕನ್ ಅಥವಾ ಬ್ರಿಟಿಷ್ ಲೇಖಕರ ಕೃತಿಗಳೇ  ಇಂತಹ ಪ್ರಶಸ್ತಿಗಳಿಗೆ ಆಯ್ಕೆಯಾಗುವುದನ್ನು ನಾವು  ಕಾಣುತ್ತೇವೆ . ಹಾಗೆಯೇ ಕಾದಂಬರಿಗಳು ಈ ಎರಡು ದೇಶಗಳಲ್ಲಿಯೇ ನಡೆಯುವ ಕತೆಗಳಾಗಿರುವ ಸಾಧ್ಯತೆಯೂ ಹೆಚ್ಚು. ' ಫ್ಲೆಷ್ '  ಕೃತಿಯ ಕಾದರಂಬರಿಕಾರ ಹಂಗರಿ - ಕೆನಡ - ಬ್ರಿಟಿಷ್ ಮೂಲದವರು ಮತ್ತು ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರುವ ಇಸ್ಟ್ವಾನ್ ಸಹ ಹಂಗರಿ ಮೂಲದವನಾಗಿದ್ದು ನಂತರ ಬ್ರಿಟನ್ ನಲ್ಲಿ ವೃತ್ತಿ ಮಾಡುತ್ತಿರುವವನು.  

ಬಾಲ್ಯದಿಂದ ಮಧ್ಯವಯಸ್ಸಿನ ತನಕ ಇಸ್ಟ್ವಾನ್ ನ ಬದುಕಿನ ಕತೆ ಮತ್ತು ಈ ದಶಕಗಳಲ್ಲಿ ಅವನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏಕಾಂಗಿಯಾಗುಳಿಯುವುದರ ಶೋಧನೆ ಈ ಕೃತಿಯ ಮುಖ್ಯ ಸೆಲೆಯಾಗಿದೆ. ಇಸ್ಟ್ವಾನ್ ಮತ್ತು ಅವನ ತಾಯಿ ಹಂಗರಿಯ ಒಂದು ಪಟ್ಟಣದಲ್ಲಿ  ವಾಸ ಮಾಡಲು ತೊಡಗುತ್ತಾರೆ. ತುಂಬ ನಾಚಿಕೆಯ ಮತ್ತು ಹೆಚ್ಚು ಮಾತನಾಡದ ಸ್ವಭಾವದ ಹದಿವಯಸ್ಸಿನ ಇಸ್ಟ್ವಾನ್ ಮತ್ತು ಅವನ ನೆರೆಮನೆಯ  ವಯಸ್ಕ ಮಹಿಳೆ ದೈಹಿಕ ಸಂಬಂಧ ಹೊಂದಿರುತ್ತಾರೆ ಮತ್ತು ಒಮ್ಮೆ ಇಸ್ಟ್ವಾನ್ ಅವಳ ಮನೆಗೆ ಹೋದಾಗ ಆಕೆಯ ಗಂಡನ ಜೊತೆ ಮುಖಾಮುಖಿಯಾಗಿ ತಳ್ಳಾಟದಲ್ಲಿ ಗಂಡ ಮೆಟ್ಟಲುಗಳಿಂದ ಕೆಳಗೆ ಬಿದ್ದು ಸತ್ತು ಹೋಗುತ್ತಾನೆ. ಇಸ್ಟ್ವಾನ್ ನನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಸ್ವಲ್ಪ ಕಾಲದ ನಂತರ ಅಲ್ಲಿಂದ ಬಿಡುಗಡೆಯಾಗಿ, ಸೇನೆಯನ್ನು ಸೇರುತ್ತಾನೆ. ಇರಾಕ್ ನಲ್ಲಿ ಸೇವೆ ಸಲ್ಲಿಸುತ್ತಾನೆ. ಅಲ್ಲಿಂದ ಅವನು  ಹಂಗರಿಗೆ  ಹಿಂದಿರುಗಿದ ಮೇಲೆ ಸಮಾಜದೊಂದಿಗೆ ಬೆರೆಯಲು ಅವನಿಗೆ ಕಷ್ಟವಾಗುತ್ತದೆ. 

ಮುಂದೆ ಇಸ್ಟ್ ವಾನ್ ಲಂಡನ್ ಗೆ ಹೋಗುತ್ತಾನೆ. ಅಲ್ಲಿ ಮೊದಲು ಸೆಕ್ಯುರಿಟಿ ಕೆಲಸಕ್ಕೆ ಸೇರುತ್ತಾನೆ. ಮುಂದೆ ಶ್ರೀಮಂತನೊಬ್ಬನ ಕಾರು ಡ್ರೈವರ್ ಆಗಿ ಸೇರುತ್ತಾನೆ. ಶ್ರೀಮಂತನ ಹೆಂಡತಿಯೊಡನೆ ಸಂಬಂಧವಾಗುತ್ತದೆ. ಹಣ ಮತ್ತು ಅಧಿಕಾರಗಳು ಸಹಜ ಮೌಲ್ಯಗಳನ್ನು ಮುಕ್ಕಾಗಿಸುವ ಪರಿ ಇಲ್ಲಿ ಚಿತ್ರಿತವಾಗಿದೆ. 

ಹೀಗೇ ಮುಂದುವರಿಯುವ ಇಸ್ಟ್ವಾನ್ ನ ಬದುಕು ಅವನ ಸ್ವಂತದ ನಿರ್ಧಾರ ಯೋಜನೆಗಳಿಗಿಂತ ಅವನ ಜೀವನದಲ್ಲಿ ಬರುವ  ಬೇರೆಯವರ ಆಸೆಗಳು,  ಸಾಮಾಜಿಕ ರಿವಾಜು ವ್ಯವಸ್ಥೆಗಳು ಇವೇ ಕಾರಣಗಳನ್ನು ಹೆಚ್ಚಾಗಿ ಅವಲಂಬಿಸಿದಂತೆ ಭಾಸವಾಗುತ್ತದೆ. ಹಂಗರಿಯಿಂದ ಆರಂಭವಾಗುವ ಅವನ ಬದುಕಿನ ಪಯಣದಲ್ಲಿ  ಅವನು ಮರಳಿ ಹಂಗರಿಗೆ ಬರುವುದರೊಂದಿಗೆ  ಕಾದಂಬರಿ ಮುಗಿಯುತ್ತದೆ. 

ಇಷ್ಟೇ ಹೇಳಿದರೆ ಕಾದಂಬರಿಗೆ ನ್ಯಾಯ ಒದಗೀತೆ? ಇಲ್ಲ . ಗಮನಿಸಿದರೆ ಇನ್ನೂ ಎಷ್ಟೋ ವಿಚಾರಗಳನ್ನು ಸಲಯ್ ಕಾದಂಬರಿಯಲ್ಲಿ  ದಾಖಲಿಸಿದ್ದಾರೆ.  ಎಲ್ಲರೂ ತನ್ನನ್ನು ದೂರ ಇಟ್ಟಂತೆ ಭಾವಿಸುವ ಇಸ್ಟ್ವಾನ್, ಅವನ ಒಂದೊಂದೇ ಪದದ ಉತ್ತರಗಳು, ಇದೆಲ್ಲಾ ಕೆಲವರಲ್ಲಿ ನಾವು ಕಾಣುವ  ಒಂದು ಬಗೆಯ ವಿಮುಖತೆಯ ಲಕ್ಷಣಗಳಂತೆ ಕಾಣುತ್ತವೆ.

ಲೈಂಗಿಕ ವಾಂಛೆ, ಕೆಲವೊಮ್ಮೆ ಭಾಷೆಯಲ್ಲಿ ಸಂವಹಿಸಲಾಗಿದ ಅದರ ಅನುಭವ ತೀವ್ರತೆ, ದೈಹಿಕ ಅಗತ್ಯಗಳು ಪ್ರಚೋದಿಸುವ ಅವನ ವರ್ತನೆಗಳು, ಮತ್ತದರಿಂದಲೂ ಅವನಿಗೆ ನಿಜವಾದ ಆತ್ಮೀಯತೆ ನಿಲುಕದೇ ಹೋಗುವುದು, ಇದೆಲ್ಲವೂ  ವ್ಯಕ್ತಿಯ ಜೀವನದಲ್ಲಿ ದೈಹಿಕತೆಯ ಪಾತ್ರವನ್ನು ಕಾಣಿಸುವ ಪ್ರಯತ್ನವಾಗಿದೆ.   ಕಾದಂಬರಿಯ  ಶೀರ್ಷಿಕೆ ಸಹ ಇದನ್ನೇ ಪ್ರತಿನಿಧಿಸುವಂತಿದೆ. 

ಇನ್ನು ಇಸ್ಟ್ವಾನ್  ಹಂಗರಿಯಿಂದ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಹೋಗುವುದು, ದುಡಿಯುವ ವರ್ಗ ಮತ್ತು ಶ್ರೀಮಂತವರ್ಗಗಳಲ್ಲಿನ ಅಂತರ, ವಲಸಿಗನಾಗಿ ಎದುರಿಸುವ ಸಮಸ್ಯೆ, ಆರ್ಥಿಕವಾಗಿ ಯಶಸ್ವಿಯಾದರೂ ಸಾಮಾಜಿಕವಾಗಿ ಅವನನ್ನು ಒಪ್ಪಿಕೊಳ್ಳದ ಗಣ್ಯವರ್ಗ, ಹೀಗೆ ಯೂರೋಪಿನ ವರ್ತಮಾನದ ಬಿಕ್ಕಟ್ಟುಗಳೂ ಬಿಂಬಿತವಾಗಿವೆ. 

ಮಿತವಾದ ಪದ ಬಳಕೆ, ಚುರುಕಾಗಿ ಸಾಗುವ ನಿರೂಪಣೆ ಇವುಗಳಿಂದ  ಈ ಕಾದಂಬರಿಯು  ವೇಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. 

ಒಟ್ಟಿನಲ್ಲಿ , ಬುಕರ್ ನಂತಹ ಪ್ರತಿಷ್ಟಿತ ಪ್ರಶಸ್ತಿಗೆ ಅರ್ಹವಾದ ಕಾದಂಬರಿ ಇದೆಂದು ನನಗನಿಸಿತು. ಸಾಹಿತ್ಯದ  ಮಹತ್ವ ಇರುವುದೇ ವ್ಯಕ್ತಿ ಮತ್ತು ಸಮಾಜ ಇವೆರಡು ಮೂಲಭೂತ ಘಟಕಗಳ ಮುಖಾಮುಖಿಯನ್ನು ವಿವರಿಸುವುದರಲ್ಲಿ. ಸ್ಪಷ್ಟವಾಗಿ ರಾಜಕೀಯವಾದ ವಿವರಣೆಗೆ ಹೋಗದೆಯೂ ಯಾವುದೇ ಉತ್ತಮ ಸಾಹಿತ್ಯ ಕೃತಿಯು ತನ್ನ ಕಾಲಮಾನದ ತಲ್ಲಣಗಳನ್ನು ಕಟ್ಟಿಕೊಡಬಲ್ಲದು. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಚಿಕ್ಕಚಿಕ್ಕ ವಿಚಾರಗಳನ್ನೂ  ಸೂಕ್ಷ್ಮತೆಯಿಂದ ಗಮನಿಸುವುದು ಮತ್ತು ಅರಿಯುವುದನ್ನು  ಕಲಿಸಬಲ್ಲದು.

Monday, November 10, 2025

ದಿ ಲೋನ್ಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ

ಈ ವರ್ಷದ ಬೂಕರ್ ಗೆ ಶಾರ್ಟ್ ಲಿಸ್ಟ್ ಆಗಿರುವ ಎಲ್ಲ ಆರು ಕಾದಂಬರಿಗಳು ಉತ್ಕೃಷ್ಟ ಗುಣಮಟ್ಟದ್ದವಾಗಿದ್ದು ಯಾವುದಕ್ಕೆ ಪ್ರಶಸ್ತಿ ಬರುತ್ತದೆ ಎಂದು ಊಹಿಸುವುದು ಕಷ್ಟ. ಅಂತಿಮ ಪಟ್ಟಿ ಘೋಷಣೆಯಾದ ಮೇಲೆ ಕಳೆದ ಒಂದೂವರೆ ತಿಂಗಳಲ್ಲಿ ಎಲ್ಲ ಆರು ಕಾದಂಬರಿಗಳನ್ನು ಓದಿದ ಮೇಲೆ ನನಗನಿಸಿದ್ದು ಇದು.  ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ಘೋಷಣೆಯಾಗಲಿದೆ. 

ಗೆಲ್ಲಲೆಂದು ನಾನು ಬಯಸುತ್ತಿರುವ, ಭಾರತೀಯ ಸಂಜಾತೆ ಕಿರಣ್ ದೇಸಾಯಿ ಅವರ "ದಿ ಲೋನ್ಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ" ಹಲವಾರು  ವಿಮರ್ಶಕರ ಮನ್ನಣೆ ಗಳಿಸಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರುವುದು ನಿಜವಾದರೂ ಗೆಲುವು ನಿಶ್ಚಯವಿಲ್ಲ. ಸೂಸನ್ ಚೊಯ್ ಅವರು ಬರೆದಿರುವ "ಫ್ಲಾಶ್ ಲೈಟ್" ಗೆದ್ದರೂ ಗೆಲ್ಲಬಹುದು. ಅಮೇರಿಕ, ಜಪಾನ್, ಸೌತ್ ಕೊರಿಯಾ ಗಳನ್ನು ಒಳಗೊಳ್ಳುವ  ಕಾದಂಬರಿ ಬಹುತೇಕ 'ಫ್ಲಾಶ್ ಬ್ಯಾಕ್' ನಲ್ಲಿ ನಿರೂಪಿತಗೊಳ್ಳುತ್ತದೆ. ಒಂದು ರಾಜಕೀಯ ಥ್ರಿಲ್ಲರ್ ನಂತೆ ವೇಗದ ಶೈಲಿ ಹೊಂದಿದ್ದರೂ ಇದು ನಿರೂಪಿಸುವ  ವಲಸಿಗರ ಅನುಭವ, ಕೊರಿಯಾ-ಜಪಾನ್ ನ ಯುದ್ಧದಲ್ಲಿ ನಡುವೆ ಸಿಲುಕಿದ ಕುಟುಂಬವೊಂದರ ಕತೆ, ಇವೆಲ್ಲ ಎಳೆಗಳನ್ನೂ ಅತ್ಯಂತ ನಾಜೂಕಾಗಿ ಹೆಣೆದಿರುವ ಬಗೆ  ಇವೆಲ್ಲದರಿಂದ ಇಷ್ಟವಾಗುತ್ತದೆ. ಇನ್ನುಳಿದ ನಾಲ್ಕರಲ್ಲಿ ಒಂದು ಕಾದಂಬರಿ ಈ ವರ್ಷದ ಬೂಕರ್ ಗದ್ದುಗೆ ಏರಿದರೂ ನನಗಂತೂ ಬೇಸರವಾಗುವುದಿಲ್ಲ.

ಕಿರಣ್ ದೇಸಾಯಿಯವರು  ತಮ್ಮ ೨೦೦೬ರ ಕೃತಿ 'ಇನ್‌ಹೆರಿಟೆನ್ಸ್ ಆಫ್ ಲಾಸ್" ಗೆ ಬೂಕರ್ ಪ್ರಶಸ್ತಿ ಗಳಿಸಿದ್ದರು  . 'ಇನ್‌ಹೆರಿಟೆನ್ಸ್ ' ನನಗೆ ಬಹಳ ಇಷ್ಟವಾಗಿದ್ದ ಕಾದಂಬರಿ.  ನ್ಯೂಯಾರ್ಕ್ ನಗರ ಮತ್ತು ದಾರ್ಜಿಲಿಂಗ್ ಗಳಲ್ಲಿ ಕೇಂದ್ರಿತವಾಗಿತ್ತು. ವಲಸಿಗರ ಅನುಭವಗಳು  ಹಾಗೂ ಏಕಾಂಗಿತನದ ಅವಸ್ಥೆ ಇವನ್ನು ಮುಖ್ಯ ಕಾಳಜಿಗಳಾಗಿ ಉಳ್ಳ ಕತಾವಸ್ತು ಆ ಕಾದಂಬರಿಯದಾಗಿತ್ತು. ನೆನಪಿಸಿಕೊಂಡಷ್ಟೇ ಈಗಲೂ ಡಾರ್ಜಿಲಿಂಗಿನ ಮಂಜು ಸುರಿಯುವ ಮಬ್ಬುಗತ್ತಲೆಯ ದೃಶ್ಯ ಕಣ್ಣ ಮುಂದೆ ಬರುತ್ತದೆ.

ಕಿರಣ್ ದೇಸಾಯಿ ಅವರ ಹೊಸ ಕಾದಂಬರಿಯು ಹಿಂದಿನ  ಕಾದಂಬರಿಗಿಂತ ಬಹಳ ವಿಸ್ತಾರವಾದ  ಕಾಲ ಹಾಗೂ ಸ್ಥಳಗಳನ್ನು ಒಳಗೊಂಡಿದೆ. ವಿವಿಧ ಪಾತ್ರಗಳ ಜೀವನದ ಸಣ್ಣ ವಿವರಗಳನ್ನು ಒಳಗೊಳ್ಳುತ್ತದೆ. 

600 ಕ್ಕೂ ಹೆಚ್ಚು  ಪುಟಗಳ ಈ ಕಾದಂಬರಿ ಆರಂಭವಾಗುವುದು  ಸೋನಿಯಾ ಶಾ ಮತ್ತು ಸನ್ನಿ  ಭಾಟಿಯಾ ಅವರ ಕುಟುಂಬಗಳ ಮತ್ತು ಅವರ ಪೋಷಕರ ಆಪ್ತ ವಲಯಗಳ ವಿವರಗಳೊಂದಿಗೆ. ವರ್ಗ, ಧರ್ಮ, ಲಿಂಗ ಮತ್ತು ವಲಸೆ ಈ ಎಲ್ಲಾ ಅಂಶಗಳು ಪ್ರತಿ  ಪಾತ್ರದ ಮೇಲೆ ಹೇರುವ ಭಾರ,  ಬೀರುವ ಪ್ರಭಾವ  ಇವು ಪ್ರಕಟವಾಗುವ  ಬಗೆಯು ಕಾದಂಬರಿಯ ಶಕ್ತಿ.  ಬಹುತೇಕ ಎಲ್ಲ ಪಾತ್ರಗಳ ಆಂತರಿಕ ಚಿಂತನೆಗಳಿಗೂ ಅವರ ಕಾದಂಬರಿಗಳಲ್ಲಿ ಜಾಗವಿದೆ. 

90ರ ಮಧ್ಯಭಾಗದಿಂದ 2000 ದ ಆರಂಭದವರೆಗೂ ಕತೆ ಜರುಗುತ್ತದೆ. ಅಮೆರಿಕೆಯ ವರ್ಮಾಂಟ್ ನಲ್ಲಿ ವಿದ್ಯಾರ್ಥಿಯಾಗಿರುವ ಸೋನಿಯಾ  ಬಗ್ಗೆ ಅವಳ ತಂದೆ ದೆಹಲಿಯಿಂದ ತಮ್ಮ  ಪೋಷಕರಿಗೆ (ದಾದಾಜಿ ಮತ್ತು ಬಾ) ಕರೆ ಮಾಡಿ ಅವಳು ಅಮೆರಿಕೆಯಲ್ಲಿ ಏಕಾಕಿತನವನ್ನು ಅನುಭವಿಸುತ್ತಿರುವುದಾಗಿ ಹೇಳುತ್ತಾರೆ. ದಾದಾಜಿ ಅಲಹಾಬಾದ್ನಲ್ಲಿ ತನ್ನ ನೆರೆಹೊರೆಯವರಾದ  ಮತ್ತು ತಮ್ಮೊಂದಿಗೆ ಚೆಸ್ ಆಡುವ ಭಾಟಿಯಾಗೆ ಪತ್ರ  ಬರೆಯುತ್ತಾರೆ. ಭಾಟಿಯಾ ಅವರ  ಮೊಮ್ಮಗ ಸನ್ನಿಗೆ ಸೋನಿಯಾಳೊಂದಿಗೆ  ಮದುವೆಯ  ಪ್ರಸ್ತಾವನೆಯನ್ನು ದಾದಾಜಿ ಮಾಡುತ್ತಾರೆ—ಅವನು  ನ್ಯೂಯಾರ್ಕ್ ನಗರದಲ್ಲಿ ಪತ್ರಕರ್ತನಾಗಿದ್ದು ಆಸೋಸಿಯೇಟೆಡ್ ಪ್ರೆಸ್‌ನಲ್ಲಿ ಕೆಲಸ  ಗಟ್ಟಿ ಮಾಡಿಕೊಳ್ಳುವ  ಪ್ರಯತ್ನದಲ್ಲಿರುತ್ತಾನೆ.

ಸೋನಿಯಾ ಮತ್ತು ಸನ್ನಿ ಮೊದಲು  ಹೇಗೆ ಭೇಟಿಯಾಗುತ್ತಾರೆ ಮತ್ತು ನಂತರ ಮತ್ತೆ ಹೇಗೆ ಭೇಟಿಯಾಗುತ್ತಾರೆ ಎಂಬುದು ಕಥೆಯೊಳಗಿನ ಎಳೆ. ಸೋನಿಯಾ ತನ್ನ ಒಂಟಿತನವನ್ನು ಕಳೆಯಲು ಮೊದಲು ಭೇಟಿಯಾಗುವುದು  ಸನ್ನಿಯನ್ನಲ್ಲ.  ಯಶಸ್ವಿ   ಚಿತ್ರಕಲಾವಿದನಾದರೂ ತುಂಬ ಸ್ವಾರ್ಥಿಯಾದ  ಇಲಾನ್‌ನನ್ನು ಅವಳು ಭೇಟಿಯಾಗುತ್ತಾಳೆ. ಅವನು  ಅವಳನ್ನು  ತನ್ನ ಸಂಗಾತಿಯಾಗಿಸಿಕೊಳ್ಳುತ್ತಾನೆ.  ಆದರೆ ಅದು ಆರೋಗ್ಯಕರವಾದ  ಸಂಬಂಧವಾಗಿರುವುದಿಲ್ಲ ಮತ್ತು  ಕೆಟ್ಟದಾಗಿ  ಕೊನೆಗೊಳ್ಳುತ್ತದೆ.

ಸೋನಿಯಾ  ಭಾರತಕ್ಕೆ ವಾಪಸ್ಸಾಗುತ್ತಾಳೆ, ಅಲ್ಲಿ ಮಹಿಳೆಯಾಗಿ, ಭಾರತೀಯಳಾಗಿ, ತನ್ನ ಮೇಲಿನ ಶತಮಾನಗಳ ಪ್ರಭಾವ ಮತ್ತು ಪೂರ್ವಾಗ್ರಹಗಳನ್ನು  ಅರಿತುಕೊಳ್ಳುವ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ, ಮತ್ತು ಕಲಾವಿದಳಾಗಿ ತನ್ನ ಧ್ವನಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ತನ್ನ ಸ್ವಂತದ  ಇಷ್ಟದಂತೆ ಬದುಕಲು ಕಲಿಯುತ್ತಾಳೆ. ದೆಹಲಿ, ವರ್ಮಾಂಟ್, ಅಲಹಾಬಾದ್,  ಮೆಕ್ಸಿಕೊ, ಗೋವಾ,  ಇಟಲಿ  ಹೀಗೆ ಕತೆಯ ಹಂದರ  ಹಲವು ಸ್ಥಳಗಳನ್ನು ವ್ಯಾಪಿಸಿದೆ.     

ದೇಸಾಯಿ ಎರಡು ದಶಕಗಳ ಕಾಲ "The Loneliness of Sonia and Sunny" ಮೇಲೆ ಕೆಲಸ ಮಾಡಿದ್ದಾರೆ. ವಿಭಿನ್ನ ಪಾತ್ರಗಳ ಒಳತೋಟಿಗಳು, ಒಬ್ಬಂಟಿತನ ಎಲ್ಲವನ್ನೂ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.   ಹಿಂದಿನ  ಕಾದಂಬರಿಯಂತೇ ಇಲ್ಲೂ  ಅನೇಕ ರಾಜಕೀಯದ ವಿಚಾರಗಳೂ ಕತಾ ನಿರೂಪಣೆಯ ಭಾಗವಾಗಿ ಸೂಕ್ತವಾಗಿ ಮತ್ತು ಮಾರ್ಮಿಕವಾಗಿ ಪ್ರಸ್ತಾಪಿಸಲ್ಪಟ್ಟಿವೆ. ದೆಹಲಿಯಲ್ಲಿ ಸಿಖ್ ಜನರ  ಹತ್ಯೆ, ಅಯೋಧ್ಯೆಯ ಬಾಬರಿ ಮಸೀದಿಯ ಧ್ವಂಸ, ನ್ಯೂಯಾರ್ಕ್ ನ  9/11,  ಹೀಗೆ ಅನೇಕ ಘಟನೆಗಳು ಕತೆಯ ಭಾಗವಾಗಿವೆ. 

ಒಂದು ಉತ್ತಮ ಕಾದಂಬರಿಯನ್ನು ಓದುವುದೆಂದರೆ ನಮ್ಮನ್ನೇ ಮತ್ತು ನಮ್ಮ ಸುತ್ತಲಿನ ಜಗತ್ತನ್ನೇ ಇನ್ನೊಂದು ಕೋನದಿಂದ ನೋಡಿದಂತೆ. ಸಂವೇದನೆ ಮತ್ತು ಸೂಕ್ಷ್ಮತೆ ಬೆರೆತ ದೃಷ್ಟಿ ಕೃತಿಕಾರರದ್ದಾದರೆ ನಮ್ಮ ಗ್ರಹಿಕೆಗೆ ಸಿಕ್ಕಿರದ ಎಷ್ಟೋ ವಿವರಗಳನ್ನು ಪಡೆದಂತೆ.    

Thursday, November 06, 2025

ಕನ್ನಡವೆಂದರೆ ಬರಿ ನುಡಿಯಲ್ಲ

"ಕರ್ನಾಟಕವೆನ್ನುವುದು ಸಮಾನತೆ, ಸೌಹಾರ್ದತೆಗಳ ಪರಂಪರೆಯುಳ್ಳ ನಾಡು. 'ಕನ್ನಡವಾಗಿರುವುದು' ಮತ್ತು 'ಕನ್ನಡತನ' ಹೊಂದಿರುವುದೆಂದರೆ, ಭಾಷೆಯ ಜೊತೆಗೆ ಈ ಪರಂಪರೆಯನ್ನು ಹೃದಯಸ್ಥ ಮಾಡಿಕೊಂಡು ಬೆಳೆಸಬೇಕು. ಇಲ್ಲದಿದ್ದರೆ, ಕನ್ನಡಪರ ಪ್ರತಿಪಾದನೆಯು ಅಪೂರ್ಣವಾಗುತ್ತದೆ."  (ಕನ್ನಡ ರಾಜ್ಯೋತ್ಸವ ದಿನದಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಬರಗೂರು ರಾಮಚಂದ್ರಪ್ಪನವರ "ಕನ್ನಡವಾಗಿರುವುದು ಎಂದರೆ..." ಎಂಬ ಲೇಖನದ ಸಾಲುಗಳು.)

ಕುವೆಂಪು ಅವರ ಎರಡು ಕವನಗಳ ಸಾಲುಗಳಲ್ಲಿ ಕನ್ನಡದ ಪರಂಪರೆ  ಬಿಂಬಿತವಾಗಿರುವುದನ್ನು ಲೇಖಕರು ಪ್ರಸ್ತಾಪಿಸುತ್ತಾರೆ. 

ಕನ್ನಡದ ಐಡೆಂಟಿಟಿಯ ಪರಿಕಲ್ಪನೆಯಲ್ಲೇ ಭಿನ್ನ ಅಭಿಪ್ರಾಯಗಳು ಇರಬಹುದು. 

ಡಿ. ಆರ್ . ನಾಗರಾಜ್ ಅವರ 'ಸಾಹಿತ್ಯ ಕಥನ' (ಲೇಖನ ಸಂಗ್ರಹ)ದಲ್ಲಿ 'ಕನ್ನಡ ರಾಷ್ಟ್ರೀಯತೆಯ ಸ್ವರೂಪ' ಎಂಬ  ಲೇಖನದಲ್ಲಿ 'ಕನ್ನಡತ್ವ ಮತ್ತು ಕರ್ನಾಟಕತ್ವ'ಗಳ  ಪರಿಕಲ್ಪನೆಯಲ್ಲೇ ಭಿನ್ನ ಚಿಂತನೆಗಳು ಇರುವುದನ್ನು ಗುರುತಿಸಲಾಗಿದೆ. ಒಂದೆಡೆ, ಡಾ. ಎಂ. ಚಿದಾನಂದ ಮೂರ್ತಿಯವರು ತಮ್ಮ  'ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ" ಎಂಬ ಕೃತಿಯಲ್ಲಿ  ಪ್ರತಿಪಾದಿಸುವ  'ಅನ್ಯರಿಂದ ಕನ್ನಡಿಗ ನಾಶವಾಗುತ್ತಿದ್ದಾನೆ; ಅನ್ಯರಿಂದ ಕನ್ನಡ ಭಾಷೆ ನಿರ್ನಾಮವಾಗುತ್ತಿದೆ' ಎಂಬ ಆತಂಕ (ಇದನ್ನು ನಾಗರಾಜ್ 'ಆತಂಕಕೇಂದ್ರಿತ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ); ಇನ್ನೊಂದೆಡೆ ಆಲೂರು ವೆಂಕಟರಾಯರ 'ಕರ್ನಾಟಕತ್ವದ ವಿಕಾಸ' ಕೃತಿಯಲ್ಲಿ  ಕನ್ನಡ ರಾಷ್ಟ್ರೀಯತೆ ಮತ್ತು 'ಹಿಂದುತ್ವ'ದ ನಡುವಿನ ಸಂಬಂಧದ ಸ್ಪಷ್ಟ ಉಲ್ಲೇಖ ( ನಾಗರಾಜ್  ಇದನ್ನು 'ಆಧ್ಯಾತ್ಮಿಕ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ). ಕನ್ನಡ ಸಂಸ್ಕೃತಿಗೆ ಹಿಂದುಯೇತರ ಜನಾಂಗಗಳ ಕೊಡುಗೆಯ ಪ್ರಸ್ತಾಪ ಆಲೂರರಲ್ಲೂ, ಚಿದಾನಂದ ಮೂರ್ತಿ ಅವರಲ್ಲೂ ಇಲ್ಲದೇ ಇರುವುದನ್ನು ನಾಗರಾಜ್ ಗುರುತಿಸುತ್ತಾರೆ. ಕನ್ನಡ ರಾಷ್ಟ್ರೀಯತೆಯು ಹಲವು ಗುರುತುಗಳನ್ನು (multiple identities) ಒಳಗೊಂಡಿರಬೇಕು ಎಂದು ಡಿ. ಆರ್. ನಾಗರಾಜ್ ಅವರು ಪ್ರತಿಪಾದಿಸುತ್ತಾರೆ.  

ಮತ್ತೆ ಬರಗೂರರ ಲೇಖನಕ್ಕೆ ಹಿಂದಿರುಗುವುದಾದರೆ, ಅವರು ಪ್ರಸ್ತಾಪಿಸುವ ಕುವೆಂಪು ರವರ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸಾಲಾಗಲೀ, 'ಕವಿರಾಜಮಾರ್ಗ'ದಲ್ಲಿ ಪ್ರತಿಪಾದಿಸಿರುವ 'ಪರವಿಚಾರ ಮತ್ತು ಪರಧರ್ಮವನ್ನು ಸಹಿಸುವುದೇ ನಿಜವಾದ ಬಂಗಾರ' ಎನ್ನುವುದಾಗಲೀ , ಆದಿಕವಿ ಪಂಪನ 'ಮಾನವ ಜಾತಿ ತಾನೊಂದೆ ವಲಂ' ಸಾಲಾಗಲೀ...  ಇವೆಲ್ಲವೂ ಪ್ರಬಲವಾಗಿ  ಪ್ರತಿಪಾದಿಸುವುದು ಈ ನೆಲದ ಒಳಗೊಳ್ಳುವಿಕೆ ಮತ್ತು ಸೌಹಾರ್ದತೆಗಳನ್ನೇ. 

ಕುವೆಂಪು ಅವರ  ಇನ್ನೊಂದು ಕವನದಲ್ಲಿ ಈ ಸಾಲುಗಳಿವೆ-
ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ


ಕನ್ನಡವಾಗಿರುವುದು ಎಂದರೆ ಇದೇ ಅಲ್ಲವೇ.  

Wednesday, October 29, 2025

ಮುಸೋಲಿನಿ : ನಿರಂಕುಶಾಧಿಕಾರದ ಕರಾಳ ಮುಖ

 "ಪ್ರಜಾಪ್ರಭುತ್ವವು ಸುಂದರವಾಗಿದೆ. ಅದು ನಿಮಗೆ ಸಾಕಷ್ಟು ಸ್ವಾತಂತ್ರ್ಯಗಳನ್ನು ನೀಡುತ್ತದೆ. ಅದನ್ನು ನಾಶಮಾಡುವ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ" - ಮುಬಿ  ಓಟಿಟಿ ವೇದಿಕೆಯಲ್ಲಿ ಕಳೆದ ಎಂಟು ವಾರಗಳಿಂದ ಸ್ಟ್ರೀಮ್ ಆದ "ಮುಸೋಲಿನಿ: ಸನ್ ಆಫ್ ದಿ ಸೆಂಚುರಿ" ಎಂಬ ವೆಬ್ ಸರಣಿಯಲ್ಲಿ ಒಂದು ಎಪಿಸೋಡ್ ನಲ್ಲಿ ಮುಸೋಲಿನಿ ಹೇಳುವ ಮಾತಿದು. 2018 ರಲ್ಲಿ ಪ್ರಕಟವಾದ  ಆಂಟೋನಿಯೊ ಸ್ಕುರಾಟಿ  ಬರೆದ ಇದೇ ಹೆಸರಿನ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಸರಣಿಯಾದರೂ ನಿರ್ದೇಶಕ ಜೋ ರೈಟ್ ಇದನ್ನು ಒಂದು ಸಾಮಾನ್ಯ ನಾಟಕವನ್ನು ಮೀರಿದ ಕೃತಿಯನ್ನಾಗಿಸಲು ಕೆಲವು ತಂತ್ರಗಳನ್ನು ಬಳಸಿದ್ದಾರೆ. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ ಮುಖ್ಯ ಪಾತ್ರವಾದ ಮುಸೋಲಿನಿ ಗುಂಪಿನಲ್ಲಿ ಬೇರೆ ಜನರೊಡನೆ ಓಡಾಡುತ್ತಿರುವಾಗಲೇ ವೀಕ್ಷಕರೊಡನೆ (ಅಂದರೆ ನಮ್ಮೊಡನೆ) ನೇರವಾಗಿ ಮಾತನಾಡುವುದು ಅಂತಹ ಒಂದು ತಂತ್ರ. ಒಂದು ದೀರ್ಘವಾದ ಸ್ವಗತದಲ್ಲಿ ತನ್ನ ಬಗ್ಗೆ ಆತ ಹೇಳಿಕೊಳ್ಳುವುದು ಅವನ ಮಾನಸಿಕತೆಯನ್ನು ಅರಿಯಲು ಸಹಾ ಮಾಡುತ್ತದೆ. 

ಈ ಸರಣಿಯು 1920 ರಿಂದ 1945ರ ನಡುವೆ ಇಟಲಿಯಲ್ಲಿ ನಡೆದ ವಿದ್ಯಮಾನಗಳ  ರಕ್ತಸಿಕ್ತ ಇತಿಹಾಸದ  ನಾಟಕವಷ್ಟೇ  ಅಲ್ಲ , ಇದು ನಿರಂಕುಶಾಧಿಕಾರದ (authoritarianism) ಆಕರ್ಷಕ ಶಕ್ತಿಯ ಕುರಿತಾದ ಎಚ್ಚರಿಕೆಯ ಕಥೆಯೂ  ಆಗಿದೆ. ಲೂಕಾ ಮೆರಿನೆಲ್ಲಿ  ಎಂಬ ಇಟಾಲಿಯನ್  ನಟ ಮುಸೋಲಿನಿಯ   ಪಾತ್ರವನ್ನು ಅದ್ಭುತವಾಗಿ  ನಿರ್ವಹಿಸಿದ್ದಾರೆ. 

ಈ ಸರಣಿಗೆ ಆಧಾರವಾಗಿರುವ ಪುಸ್ತಕದ ಕರ್ತೃ ಸ್ಕುರಾಟಿ  ಪುಸ್ತಕವನ್ನು ಐತಿಹಾಸಿಕ ಸಾಕ್ಷ್ಯಚಿತ್ರ ಎಂದು ವಿವರಿಸುತ್ತಾರೆ, ಐತಿಹಾಸಿಕ ಕಾದಂಬರಿ ಎಂದಲ್ಲ. ಅಂದರೆ ಇದರಲ್ಲಿರುವ ಬಹುಪಾಲು ಘಟನೆಗಳು ವಾಸ್ತವದಲ್ಲಿ ನಡೆದ ಘಟನೆಗಳೇ ಆಗಿವೆ. 

ಮುಸೊಲಿನಿ ತನ್ನ ಫ್ಯಾಸಿಸ್ಟ್ ಆಡಳಿತವನ್ನು ಸ್ಥಾಪಿಸುವ ಮೂಲಕ ಇಟಲಿಯಲ್ಲಿದ್ದ ಸಂಸದೀಯ ಪ್ರಜಾಪ್ರಭುತ್ವವನ್ನು ಹೇಗೆ ದುರ್ಬಲಗೊಳಿಸಿದ ಎಂಬುದನ್ನು ಸರಣಿಯು ವಿವರವಾಗಿ ತೋರಿಸುತ್ತದೆ. 

1914-1918 ರ ಮೊದಲನೇ ಜಾಗತಿಕ ಮಹಾಯುದ್ಧವಾದ ಮೇಲೆ ಇಟಲಿಯಲ್ಲಿ ಬಡತನ, ನಿರುದ್ಯೋಗ, ಹತಾಶೆ ತುಂಬಿದ್ದವು. ಇದನ್ನು ಬಳಸಿಕೊಂಡು ಗದ್ದುಗೆಗೆ ಏರಲು ಮುಸೋಲಿನಿ ಯೋಜನೆ ರೂಪಿಸುತ್ತಾನೆ.  ಅವನಂತೆಯೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕೆಲವರನ್ನು ಸೇರಿಸಿ ಒಂದು ಗೂಂಡಾ ಪಡೆಯನ್ನು ಸೃಷ್ಟಿಸಿ ವಿರೋಧಿಗಳನ್ನು ಅಂಗವಿಕಲಗೊಳಿಸಲು, ಕೊಲ್ಲಲು ಮತ್ತು ಬೆದರಿಸಲು ಬಳಸುತ್ತಾನೆ. 'ಇಟಾಲಿಯನ್ ಫಾಸ್ಸಿಸ್ ಆಫ್ ಕಾಂಬ್ಯಾಟ್' (Italian Fasces of Combat) ಎಂಬ ಹೆಸರಿನ ಈ ಗುಂಪು  ಚರ್ಚ್, ರಾಜಪ್ರಭುತ್ವ, ಅಂದಿನ ಇಟಾಲಿಯನ್ ರಾಜ್ಯ ಮತ್ತು ಚುನಾವಣೆಗಳ ಪರಿಕಲ್ಪನೆಯ ವಿರುದ್ಧ ನಿಲ್ಲುತ್ತದೆ ಎಂದು ಮುಸೊಲಿನಿ ಘೋಷಿಸುತ್ತಾನೆ. 1921 ರಲ್ಲಿ ಡೆಪ್ಯೂಟಿಗಳ ಚೇಂಬರ್‌ಗೆ ಚುನಾಯಿತರಾಗಲು, ಅವರು ಭೂಮಾಲೀಕರು ಮತ್ತು ವ್ಯಾಪಾರಸ್ಥರಂತಹ ಬೂರ್ಜ್ವಾ ಸಮಾಜದ ಅಂಶಗಳೊಂದಿಗೆ ಕೈಜೋಡಿಸುತ್ತಾರೆ.

ಮುಸೊಲಿನಿಯ ಅಧಿಕಾರದ ಏರಿಕೆಗೆ ಆಳುವ ವರ್ಗಗಳ ನ್ಯೂನತೆಗಳು ಕಾರಣ ಎಂದು ಸರಣಿಯು ಒತ್ತಿಹೇಳುತ್ತದೆ. 1922 ರ 'ಮಾರ್ಚ್ ಆನ್ ರೋಮ್' (March on Rome) ಒಂದು ಸಾಮೂಹಿಕ ಪ್ರದರ್ಶನವಾಗಿದ್ದರೂ, ಅದರ ಹಿಂದಿನ ಶಕ್ತಿ ಅಷ್ಟೇನೂ  ಪ್ರಬಲವಾಗಿರುವುದಿಲ್ಲ; ಮುಸೊಲಿನಿ ವಾಸ್ತವವಾಗಿ ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಸಿದ್ಧನಾಗಿರುತ್ತಾನೆ. ಆದರೂ, ರಾಜ ವಿಕ್ಟರ್ ಎಮ್ಯಾನುಯೆಲ್ III ಯು   ಪ್ರಧಾನ ಮಂತ್ರಿ ಲೂಯಿಗಿ ಫ್ಯಾಕ್ಟಾ ನ  ಮಾರ್ಷಲ್ ಲಾ (martial law) ಘೋಷಣೆಗೆ ಸಹಿ ಹಾಕಲು ನಿರಾಕರಿಸುತ್ತಾನೆ. ಜನರಲ್ ಗಳು ತನ್ನ ವಿರುದ್ಧ ಬಂಡೇಳಬಹುದು ಎನ್ನುವ ಭಯ ಅವನಿಗಿರುತ್ತದೆ. ನಂತರ ರಾಜನು ಮುಸೊಲಿನಿಯನ್ನು ಪ್ರಧಾನ ಮಂತ್ರಿಯಾಗಿ ನೇಮಿಸುತ್ತಾನೆ, ಫ್ಯಾಸಿಸ್ಟರು ಸಂಸತ್ತಿನಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹ. ಈ ನಡುವೆ ಪ್ರಜಾಪ್ರಭುತ್ವದ ಸಮರ್ಥಕ ಮ್ಯಾಟಿಯೊಟಿ ಎನ್ನುವವನನ್ನು ಫ್ಯಾಸಿಸ್ಟರ ಗುಂಪು ಬರ್ಬರವಾಗಿ ಹತ್ಯೆಗೈಯುತ್ತದೆ. ಆದಾಗ್ಯೂ ಕೆಲವೇ ವಾರಗಳಲ್ಲಿ, ಸಂಸತ್ತು ಮುಸೊಲಿನಿಗೆ ಸರ್ವಾಧಿಕಾರಿ ಅಧಿಕಾರವನ್ನು ನೀಡಲು ಮತ ಹಾಕುತ್ತದೆ. 

ಈ ಸರಣಿಯನ್ನು ನೋಡುವಾಗ ಹಿಂದೆ ಓದಿದ್ದ ವಿಲಿಯಮ್ ಶೈರರ್  ಬರೆದ  'ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಖ್' (The Rise and Fall of the Third Reiche) ಕೃತಿ ನೆನಪಿಗೆ ಬಂತು. ಆರಂಭದಲ್ಲಿ ಹಿಟ್ಲರ್ ಸಹ ಇಟಲಿಯಲ್ಲಿ ಮುಸೋಲಿನಿ ಅಧಿಕಾರಕ್ಕೆ ಬಂದ ಮಾದರಿಯನ್ನು ಮೆಚ್ಚಿದ್ದನು ಎಂದು ಈ ಪುಸ್ತಕದಲ್ಲಿ ಓದಿದ್ದು ನೆನಪಿದೆ. 

ಹಾಗೆಯೇ, ಮ್ಯಾಡೆಲಿನ್ ಆಲ್ ಬ್ರೈಟ್ ಬರೆದ  'ಫ್ಯಾಸಿಸಂ: ಎ ವಾರ್ನಿಂಗ್ ' (Fascism: A Warning) ಸಹ ಅನೇಕ ದೇಶಗಳಲ್ಲಿ  ಜನತಂತ್ರ ವ್ಯವಸ್ಥೆ ಎದುರಿಸುವ ಅಪಾಯಗಳು, ಯಾವುದೇ ಉತ್ತಮ ಪರ್ಯಾಯವನ್ನೂ ಒದಗಿಸದೆಯೇ ಅಸ್ತಿತ್ವದಲ್ಲಿರುವ ಜನತಂತ್ರದ ಸಂಸ್ಥೆಗಳು ಮತ್ತು ತತ್ವಗಳನ್ನು ಹಾಳುಗೆಡವುವ ಅಹಂಕಾರಿ ನಾಯಕರುಗಳು ಮುಂತಾದ ವಿಚಾರಗಳನ್ನು ಚರ್ಚಿಸುತ್ತದೆ.  ರಾಜಕೀಯ ಸಹಭಾಗಿತ್ವ, ಸಂವಾದ, ವೈಚಾರಿಕತೆ, ಸತ್ಯ, ಇವೆಲ್ಲವುಗಳೂ ಮಾಯವಾಗುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ. ನಾವು ಅವಮಾನಪಡಬೇಕಾದ ಮುಸೋಲಿನಿ, ಹಿಟ್ಲರ್, ಸ್ಟಾಲಿನ್, ಮಿಲೋಸೆವಿಚ್, ಪುಟಿನ್ ಮುಂತಾದ ನಿರಂಕುಶಾಧಿಕಾರಿಗಳ ಬಗ್ಗೆ ಮತ್ತು ನಾವು ನೆನೆಯಬೇಕಾದ ಲಿಂಕನ್, ಕಿಂಗ್, ಗಾಂಧಿ, ಮಂಡೇಲಾ ರಂತಹ ಶ್ರೇಷ್ಟ ನಾಯಕರ ಬಗ್ಗೆಯೂ ಪುಸ್ತಕದಲ್ಲಿದೆ. 

'ಮುಸೋಲಿನಿ' ಸರಣಿಯಾಗಲಿ, ಮೇಲೆ ಪ್ರಸ್ತಾಪಿಸಿದ ಪುಸ್ತಕಗಳಾಗಲಿ, ಇವತ್ತಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಕೆಲವರನ್ನು ಹೊರಗಿಡುವ (exclusionary), ಕಿರಿದಾದ, ಅಸಹಿಷ್ಣುತೆಯ ದೇಶಭಕ್ತಿಯ ಪರಿಕಲ್ಪನೆಯನ್ನು ವಿರೋಧಿಸಲು, ರಾಷ್ಟ್ರೀಯತಾವಾದಿ ಮತಾಂಧತೆಯನ್ನು ಎದುರಿಸಲು, ಬಹುತ್ವವಾದಿ ದೇಶಭಕ್ತಿಯ ಪರ್ಯಾಯ ಪರಿಕಲ್ಪನೆಯನ್ನು ಮುಂದಿಡಬೇಕಾಗಿದೆ.  ಆಗ ಮಾತ್ರ ಮತಾಂಧತೆ ಮತ್ತು ಫ್ಯಾಸಿಸಂನಿಂದ ರಾಷ್ಟ್ರವನ್ನು ಉಳಿಸಬಹುದು  

ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮುಸೋಲಿನಿಯ ಇಟಲಿ, ಹಿಟ್ಲರ ನ ಜರ್ಮನಿಗಳ ಉದಾಹರಣೆಗಳು ಇದ್ದೇ ಇವೆ.    

Monday, October 13, 2025

ಧಡಕ್ 2 - ಬಾಲಿವುಡ್ ನಲ್ಲೊಂದು ಡಿಫರೆಂಟ್ ಸಿನಿಮಾ

ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿ, ಜಾತಿ (caste) ಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವುದು ಬಹಳ ಕಡಿಮೆ. ಸಮಕಾಲೀನ ಹಿಂದಿ ಸಿನಿಮಾಗಳನ್ನು ಮಾತ್ರ ನೋಡಿದರೆ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ "ಮುಗಿದುಹೋಗಿದೆ" ಎಂದುಕೊಳ್ಳುವಷ್ಟು ಅದರ ಅವಗಣನೆ ಕಾಣುತ್ತದೆ. "ಮಸಾನ್" ನಂತಹ ಚಿತ್ರ ಬಂದು ಹೋಗಿ ಹತ್ತು ವರ್ಷಗಳ ಕಾಲವೇ ಆಗಿದೆ. ಇದೀಗ ಮತ್ತೊಮ್ಮೆ ಅದೇ ನೀರಜ್ ಗೈವಾನ್  ಅವರ ನಿರ್ದೇಶನದ  "ಹೋಂಬೌನ್ಡ್ " ಎಂಬ ಚಿತ್ರ ಸಹ ಜಾತಿ ಸಮಸ್ಯೆಯ ಕುರಿತಾಗಿದ್ದು ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿ ಇದೀಗ ಚಿತ್ರ ಮಂದಿರಗಳಲ್ಲಿ ಬಂದಿದೆ. ಕೆಲವೇ ದಿನಗಳಲ್ಲಿ ಓಟಿಟಿ ಗೂ ಬರಲಿದೆ. 

ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ "ಧಡಕ್ 2" ಚಿತ್ರವು  ಭಾರತೀಯ ಸಮಾಜದ ಅತಿರೇಕದ ಜಾತಿ ವಿಭಜಿತ ಮನಸ್ಥಿತಿಯ ವಿಕಾರವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದೆ.  ಬಾಲಿವುಡ್ ನ ಅತಿರಂಜಿತ ಕಥಾವಸ್ತುಗಳ ಚಿತ್ರಗಳ ನಡುವೆ, ಅಂತರ-ಜಾತಿ ಸಂಬಂಧದ  ಈ ಚಿತ್ರವು  ವಾಸ್ತವಿಕ  ಚಿತ್ರವಾಗಿ ಮೂಡಿಬಂದಿದೆ. ಶಜಿಯಾ ಇಕ್ಬಾಲ್ ಅವರ ಚೊಚ್ಚಲ ನಿರ್ದೇಶನದ  ಈ ಚಿತ್ರವು 2018 ರ ತಮಿಳು ಭಾಷೆಯ ಚಲನಚಿತ್ರವಾದ Pariyerum Perumal (ಪರಿಯೇರುಮ್ ಪೆರುಮಾಳ್) ನ ರಿಮೇಕ್ ಆಗಿದೆ, ಇದು ಜಾತಿ ಹಿಂಸಾಚಾರ ಮತ್ತು ಪೂರ್ವಾಗ್ರಹದ ಕಥೆಯನ್ನು ತಮಿಳುನಾಡಿನಿಂದ ಹಿಂದಿಯ  ಹೃದಯಭಾಗಕ್ಕೆ ಕೊಂಡೊಯ್ದಿದೆ.

ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಮೇಲ್ಜಾತಿಯ  ಮಹಿಳೆ ವಿಧಿಶಾ ಭಾರದ್ವಾಜ್ ಮತ್ತು ದಲಿತ ನೀಲೇಶ್ ಅಹಿರ್ವಾರ್ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ಚಿತ್ರ ಅನ್ವೇಷಿಸುತ್ತದೆ. ನೀಲೇಶ್ ಮತ್ತು ವಿಧಿ ಒಂದು ಮದುವೆಯಲ್ಲಿ ಭೇಟಿಯಾಗುತ್ತಾರೆ. ನೀಲೇಶ್  ಬ್ಯಾಂಡ್‌ ಒಂದರಲ್ಲಿ ಡ್ರಮ್ಮರ್ ಆಗಿರುತ್ತಾನೆ.  ಕಾಲೇಜಿನಲ್ಲಿ, ನೀಲೇಶ್ ಭಾರತದ ಮೀಸಲಾತಿ  ವ್ಯವಸ್ಥೆಯ ಮೂಲಕ ತನ್ನ ಸೀಟು ಪಡೆದಿರುತ್ತಾನೆ. ಮತ್ತು ಆ  ಕಾರಣಕ್ಕಾಗಿ ತನ್ನ ಸುತ್ತಲಿರುವ ಹೆಚ್ಚಿನ ಮೇಲ್ಜಾತಿಯ ಸಹಪಾಠಿಗಳಿಂದ ಅವಮಾನವನ್ನು ಎದುರಿಸುತ್ತಿರುತ್ತಾನೆ.  ಸಂಯಮದಿಂದ ವರ್ತಿಸುವ  ನೀಲೇಶ್ ನ  ಸ್ನೇಹವನ್ನು  ಬಯಸಿ ವಿಧಿ ಅವನನ್ನು ಹಿಂಬಾಲಿಸುತ್ತಾಳೆ.

ನೀಲೇಶ್ ಮತ್ತು ವಿಧಿ ಇಬ್ಬರ ನಿಕಟತೆಯು ವಿಧಿಯ ಕುಟುಂಬದ ಕೋಪಕ್ಕೆ ಕಾರಣವಾಗುತ್ತದೆ. ವಿಧಿ ತನ್ನ ಕುಟುಂಬದ ಆಳವಾದ ಪೂರ್ವಾಗ್ರಹದ ಬಗ್ಗೆ ಅರಿವಿಲ್ಲದೆ ನೀಲೇಶ್‌ನನ್ನು ಕುಟುಂಬದ ಮದುವೆಗೆ ಆಹ್ವಾನಿಸುತ್ತಾಳೆ, ಅಲ್ಲಿ ಆಕೆಯ ಕುಟುಂಬವು ನೀಲೇಶ್‌ನನ್ನು ಅವಮಾನಿಸಿ ತೀವ್ರವಾಗಿ ಥಳಿಸುತ್ತದೆ.

ಈ ಪ್ರೀತಿಯ ಸಂಬಂಧವು ನೀಲೇಶ್‌ಗೆ ಅಪಾಯಕಾರಿಯಾಗಿರುತ್ತದೆ. ಮೇಲ್ನೋಟಕ್ಕೆ ಅತ್ಯಾಧುನಿಕವಾಗಿ ಕಂಡರೂ ವಿಧಿ ಯ  ಕುಟುಂಬದವರು ಈ  ಅಂತರ-ಜಾತಿ ಸಂಬಂಧದಿಂದ ಕುಟುಂಬದ ಹೆಸರಿಗೆ ಅಪಮಾನವಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಇದು  ಸೃಷ್ಟಿಸುವ ಸ್ಫೋಟಕ  ಸನ್ನಿವೇಶವನ್ನು ಚಿತ್ರಿಸಿರುವುದು  ಪರಿಣಾಮಕಾರಿಯಾಗಿದೆ. ಸಂಭಾಷಣೆಗಳು ಸಹ ಚೆನ್ನಾಗಿವೆ. ಚಿತ್ರದ ಅಂತ್ಯ ಸಹ ಸ್ವಲ್ಪ ವಿಭಿನ್ನವಾಗಿದೆ. 

ಚಿತ್ರದಲ್ಲಿ ಒಂದೆಡೆ ವಿಧಿ ಹೇಳುತ್ತಾಳೆ - 'ಇದೆಲ್ಲ (ಜಾತಿವಾದ) ಮುಗಿದು ಹೋದ ವಿಚಾರ ಎಂದು ನಾನೆಣಿಸಿದ್ದೆ'. ಅದಕ್ಕೆ ನೀಲೇಶ್‌ ಹೇಳುತ್ತಾನೆ- "ಅದನ್ನು ಅನುಭವಿಸದವರಿಗೆ ಹಾಗೆ ಅನಿಸುತ್ತದೆ". ಚಿತ್ರೋದ್ಯಮವನ್ನು ನಿಯಂತ್ರಿಸುವವರೂ ಜಾತಿವಾದದ ಸಂಕಷ್ಟವನ್ನು ಸ್ವಯಂ ಅನುಭವಿಸದ ಕಾರಣಕ್ಕೇ  ಇಂತಹ ಕಥಾವಸ್ತುಗಳ ಆಯ್ಕೆಯಲ್ಲಿ ಹಿಂಜರಿಯುತ್ತಿರಬಹುದೇನೋ.   ಅಥವಾ ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರ  ಅಸಮಾಧಾನಕ್ಕೆ ಗುರಿಯಾಗುವ ಭಯವೂ ಇರಬಹುದೇನೋ. 

ಜಾತಿವಾದವು ಸ್ವಾತಂತ್ರ್ಯ ಬಂದ ಮೇಲಿನ ಏಳು ದಶಕಗಳ ನಂತರವೂ ಹಾಗೆಯೇ ಮುಂದುವರೆದಿದೆ. ಕನ್ನಡದ ವಿಶಿಷ್ಟ ಲೇಖಕ, ಪತ್ರಕರ್ತ ಲಂಕೇಶ್ ಅವರು ಜಾತೀಯತೆಯ ಬಗ್ಗೆ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆಯುತ್ತಾರೆ- "ನಮ್ಮ  ದೇಶದ ಜಾತೀಯತೆಯ ಜೊತೆಗೆ ಎಲ್ಲ ದೇಶಗಳ ಜಾತೀಯತೆಯ ಸಣ್ಣತನ, ಕೇಡಿತನ, ನನ್ನನ್ನು ಚಿಂತೆಗೀಡುಮಾಡಿದೆ. ನಾವು ಬೆಳೆದಂತೆಲ್ಲ, ಸುಶಿಕ್ಷಿತರಾದಂತೆಲ್ಲ ಯಾಕೆ ಮಾನವೀಯತೆ, ಜಾತ್ಯತೀತತೆ, ವಿನೋದ, ವ್ಯಾಮೋಹ ವೃದ್ಧಿಯಾಗುವುದಿಲ್ಲ ಎಂದು ಕೇಳಿಕೊಳ್ಳುತ್ತಿದ್ದೇನೆ..." ಅವರು ಇದನ್ನು ಬರೆದಿದ್ದು 1995 ರಲ್ಲಿ. ನಂತರದ ಈ ಮೂವತ್ತು ವರ್ಷಗಳಲ್ಲಿ ಬದಲಾವಣೆಯೇನೂ ಆದಂತೆ ಅನಿಸುವುದಿಲ್ಲ. 

ಅದೇನೇ ಇರಲಿ, ಕೇವಲ ಸಿದ್ಧ ಸೂತ್ರಗಳನ್ನು ಅವಲಂಬಿಸಿದ ಚಿತ್ರಗಳನ್ನೇ ನಿರ್ಮಿಸದೆ, ಸಾಮಾಜಿಕ ಪ್ರಸ್ತುತತೆಯಿರುವ ಕಥೆಗಳತ್ತಲೂ ಬಾಲಿವುಡ್ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ.